ಯೆಹೋಶುವನು
ಗ್ರಂಥಕರ್ತೃತ್ವ
ಯೆಹೋಶುವನ ಪುಸ್ತಕದ ಗ್ರಂಥಕರ್ತ ಯಾರೆಂಬುದನ್ನು ಈ ಪುಸ್ತಕವು ಸ್ಪಷ್ಟವಾಗಿ ಹೆಸರಿಸುವುದಿಲ್ಲ. ಇಸ್ರಾಯೇಲಿನ ನಾಯಕನು ಮೋಶೆಯ ಉತ್ತರಾಧಿಕಾರಿಯು ಆದ ನೂನನ ಮಗನಾದ ಯೆಹೋಶುವನು ಈ ಪುಸ್ತಕದ ಹೆಚ್ಚಿನ ಭಾಗವನ್ನು ಬರೆದಿರುವ ಸಾಧ್ಯತೆಯಿದೆ. ಪುಸ್ತಕದ ಕೊನೆಯ ಭಾಗವನ್ನು ಯೆಹೋಶುವನ ಮರಣದ ನಂತರ ಕನಿಷ್ಠ ಪಕ್ಷ ಮತ್ತೊಬ್ಬ ವ್ಯಕ್ತಿಯು ಬರೆದಿರಬಹುದು. ಯೆಹೋಶುವನ ಮರಣದ ನಂತರ ಹಲವಾರು ಭಾಗಗಳನ್ನು ಪರಿಷ್ಕರಿಸಿ/ಸಂಕಲಿಸಿರುವ ಸಾಧ್ಯತೆಯಿದೆ. ಮೋಶೆಯ ಮರಣದಿಂದ ಯೆಹೋಶುವನ ನೇತೃತ್ವದಲ್ಲಿ ವಾಗ್ದತ್ತ ದೇಶವನ್ನು ಜಯಿಸುವವರೆಗಿನ ಕಾಲಾವಧಿಯನ್ನು ಈ ಪುಸ್ತಕವು ಒಳಗೊಂಡಿರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,405 - 1,385 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಹುಶಃ ಈ ಪುಸ್ತಕವನ್ನು ಯೆಹೋಶುವನು ಜಯಿಸಿದ್ದ ದೇಶವಾದ ಕಾನಾನಿನಲ್ಲಿ ರಚಿಸಿರುವ ಸಾಧ್ಯತೆಯಿದೆ.
ಸ್ವೀಕೃತದಾರರು
ಯೆಹೋಶುವನು ಇದನ್ನು ಇಸ್ರಾಯೇಲ್ ಜನರಿಗೆ ಮತ್ತು ಸತ್ಯವೇದದ ಮುಂದಿನ ಎಲ್ಲಾ ಓದುಗರಿಗೆ ಬರೆದನು.
ಉದ್ದೇಶ
ಯೆಹೋಶುವನ ಪುಸ್ತಕವು ದೇವರು ವಾಗ್ದಾನ ಮಾಡಿದ ದೇಶವನ್ನು ಜಯಿಸಲು ಮಾಡಿದ ಸೇನಾ ಕಾರ್ಯಾಚರಣೆಗಳ ಪಕ್ಷಿನೋಟವನ್ನು ನೀಡುತ್ತದೆ. ಐಗುಪ್ತದ ಬಿಡುಗಡೆಯ ನಂತರ ಮತ್ತು ನಲವತ್ತು ವರ್ಷಗಳ ಅರಣ್ಯದಲ್ಲಿನ ಅಲೆದಾಟಗಳ ನಂತರ, ಹೊಸದಾಗಿ ರೂಪುಗೊಂಡ ಜನಾಂಗವು ಈಗ ವಾಗ್ದತ್ತ ದೇಶವನ್ನು ಪ್ರವೇಶಿಸಲು, ಅದರ ನಿವಾಸಿಗಳನ್ನು ಜಯಿಸಲು ಮತ್ತು ಪ್ರದೇಶವನ್ನು ವಶಪಡಿಸಿಕೊಳ್ಳಲು ಸನ್ನದ್ಧವಾಗಿದೆ. ದೇವರು ಆದುಕೊಂಡ ಜನಾಂಗವು ಅದರ ವಾಗ್ದತ್ತ ದೇಶದಲ್ಲಿ ಒಡಂಬಡಿಕೆಯ ಅಡಿಯಲ್ಲಿ ಹೇಗೆ ನೆಲೆಗೊಂಡಿತ್ತು ಎಂಬುದನ್ನು ತೋರಿಸುವುದನ್ನು ಯೆಹೋಶುವನ ಪುಸ್ತಕವು ಮುಂದುವರಿಸುತ್ತದೆ. ಪೂರ್ವಿಕರೊಂದಿಗಿನ ಮತ್ತು ಸೀನಾಯಿಯಲ್ಲಿ ಮೊದಲು ಮಾತುಕೊಟ್ಟ ಆ ಜನಾಂಗದೊಂದಿಗಿನ ಆತನ ಒಡಂಬಡಿಕೆಗಳೊಟ್ಟಿಗಿರುವ ಯೆಹೋವನ ನಂಬಿಗಸ್ತಿಕೆಯ ಪುರಾವೆಯನ್ನು ಇಲ್ಲಿ ಕಾಣುತ್ತೇವೆ. ಈ ಪವಿತ್ರಶಾಸ್ತ್ರವು ಭವಿಷ್ಯದ ಪೀಳಿಗೆಗಳಲ್ಲಿ ಒಡಂಬಡಿಕೆಗೆ ಅನುಗುಣವಾದ ನಿಷ್ಠೆ ಮತ್ತು ಐಕ್ಯತೆ ಮತ್ತು ಉತ್ಕೃಷ್ಟ ನೈತಿಕತೆ ಉಳ್ಳವರಾಗಿರುವಂತೆ ದೇವರ ಜನರನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ನೀಡಲು ಇರುವಂಥದ್ದಾಗಿದೆ.
ಮುಖ್ಯಾಂಶ
ವಿಜಯ
ಪರಿವಿಡಿ
1. ವಾಗ್ದತ್ತ ದೇಶಕ್ಕೆ ಪ್ರವೇಶ — 1:1-5:12
2. ದೇಶದ ವಶೀಕರಣ — 5:13-12:24
3. ದೇಶದ ವಿಭಜನೆ — 13:1-21:45
4. ಕುಲಗಳ ಐಕ್ಯತೆ ಮತ್ತು ಕರ್ತನಿಗೆ ನಿಷ್ಠೆ — 22:1-24:33
1
ಹೊಳೆದಾಟುವುದಕ್ಕೆ ಸಿದ್ಧರಾಗಬೇಕೆಂಬ ಅಪ್ಪಣೆ
ಯೆಹೋವನ ಸೇವಕನಾದ ಮೋಶೆಯ ಮರಣದ ನಂತರ ಯೆಹೋವನು ಮೋಶೆಯ ಸೇವಕನಾದ ನೂನನ ಮಗನಾದ ಯೆಹೋಶುವನಿಗೆ “ನನ್ನ ಸೇವಕನಾದ ಮೋಶೆ ಸತ್ತನು; ನೀನು ಈಗ ಹೊರಟು ಸಮಸ್ತ ಇಸ್ರಾಯೇಲ್ ಜನರೊಂದಿಗೆ ಈ ಯೊರ್ದನ್ ನದಿಯನ್ನು ದಾಟಿ, ನಾನು ಅವರಿಗೆ ಕೊಡುವ ದೇಶಕ್ಕೆ ಹೋಗು. ನಾನು ಮೋಶೆಗೆ ವಾಗ್ದಾನ ಮಾಡಿದಂತೆ ನೀವು ಕಾಲಿಡುವ ಸ್ಥಳಗಳನ್ನೆಲ್ಲಾ ನಿಮಗೆ ಕೊಟ್ಟಿದ್ದೇನೆ. ಅರಣ್ಯಗಳು ಹಾಗೂ ಈ ಲೆಬನೋನ್ ಪರ್ವತದಿಂದ ಮೊದಲುಗೊಂಡು ಯೂಫ್ರೆಟಿಸ್ ಮಹಾನದಿಯ ವರೆಗಿರುವ ಹಿತ್ತಿಯರ ದೇಶವೆಲ್ಲಾ ನಿಮ್ಮದಾಗುವುದು; ನಿಮ್ಮ ಸೀಮೆಯು ಪಶ್ಚಿಮದಿಕ್ಕಿನ * 1:4 ಮೆಡಿಟೇರಿಯನ್ ಸಮುದ್ರ.ಮಹಾಸಾಗರದ ವರೆಗೆ ವಿಸ್ತರಿಸಿಕೊಳ್ಳುವುದು. ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರುವೆನು. ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ, ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರ ಪೂರ್ವಿಕರಿಗೆ ವಾಗ್ದಾನಮಾಡಿದ ದೇಶವನ್ನು ಇವರಿಗಾಗಿ ನೀನೇ ಸ್ವಾಧೀನಮಾಡಿಕೊಡಬೇಕು. ನನ್ನ ಸೇವಕನಾದ ಮೋಶೆಯು ನಿನಗೆ ಬೋಧಿಸಿ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವುದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ, ಆಗ ನೀನು ಸಫಲನಾಗುವಿ. ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವುದನ್ನೆಲ್ಲಾ ಕೈಕೊಂಡು ನಡೆ. ಆಗ ನಿನ್ನ ಕಾರ್ಯವೆಲ್ಲವೂ, ನೀನು ಹೋಗುವ ಮಾರ್ಗಗಳು ಸಫಲವಾಗುವುದು. ನೀನು ಚುರುಕು ಬುದ್ಧಿಯ ವ್ಯಕ್ತಿಯಾಗಿ ರೂಪಾಂತರ ಹೊಂದುವಿ. ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವನು” ಎಂದು ಹೇಳಿದನು.
ಯೆಹೋಶುವನು ಜನರಿಗೆ ಕೊಟ್ಟ ಆದೇಶ
10 ಆಗ ಯೆಹೋಶುವನು ಜನರ ಅಧಿಕಾರಿಗಳಿಗೆ 11 “ನೀವು ಪಾಳೆಯದ ಎಲ್ಲೆಡೆಗೆ ಹೋಗಿ ನಿಮ್ಮ ಜನರಿಗೆ ‘ನೀವು ಇನ್ನು ಮೂರು ದಿನಗಳಲ್ಲಿ ಈ ಯೊರ್ದನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವತ್ತಾಗಿ ಕೊಡುವ ದೇಶವನ್ನು ವಶಪಡಿಸಿಕೊಳ್ಳಲು ಹೋಗಬೇಕು. ಆದುದರಿಂದ ನಿಮಗೆ ಬೇಕಾದ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ’ ಎಂದು ತಿಳಿಸಿರಿ” ಅಂದನು.
12 ಬಳಿಕ ಯೆಹೋಶುವನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆ ಕುಲದ ಅರ್ಧ ಜನರಿಗೂ ಹೇಳಿದ್ದೇನಂದರೆ 13 “ಯೆಹೋವನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟು ವಿಶ್ರಾಂತಿ ನೀಡಿದ್ದಾನೆ. 14 ನಿಮ್ಮ ಹೆಂಡತಿ ಮಕ್ಕಳು, ನಿಮ್ಮ ದನಕುರಿಗಳೂ ಮೋಶೆಯು ನಿಮಗೆ ಯೊರ್ದನಿನ ಆಚೆಯಲ್ಲಿ ಕೊಟ್ಟ ದೇಶದಲ್ಲೇ ವಾಸವಾಗಿರಲಿ. ಆದರೆ ನಿಮ್ಮ ಭಟರೆಲ್ಲರೂ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಿಗೆ ಮುಂದಾಗಿ ಹೊರಟು, ಹೊಳೆದಾಟಿ ಅವರಿಗೆ ಸಹಾಯಮಾಡಬೇಕು. 15 ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ನಿಮ್ಮ ಸಹೋದರರು ಸ್ವಾಧೀನಮಾಡಿಕೊಂಡು ಅವರೂ ನಿಮ್ಮಂತೆ ವಿಶ್ರಾಂತಿ ಹೊಂದಿದ ನಂತರ ನಿಮ್ಮ ಸ್ವಂತ ದೇಶಕ್ಕೆ ಹಿಂತಿರುಗಿ, ಮೋಶೆಯು ನಿಮಗೆ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಸ್ವತ್ತಾಗಿ ಕೊಟ್ಟ ದೇಶವನ್ನು ಸ್ವಾಧೀನಪಡಿಸಿಕೊಂಡು ಅದನ್ನು ಅನುಭವಿಸುವಿರಿ” ಎಂದನು. 16 ಆಗ ಅವರು ಯೆಹೋಶುವನಿಗೆ ಉತ್ತರವಾಗಿ “ನೀನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತೇವೆ; ಎಲ್ಲಿಗೆ ಕಳುಹಿಸಿದರೂ ಹೋಗುತ್ತೇವೆ. 17 ನಾವು ಮೋಶೆಯ ಎಲ್ಲಾ ಮಾತುಗಳಿಗೆ ವಿಧೇಯರಾದ ಹಾಗೆ ನಿನ್ನ ಮಾತುಗಳಿಗೂ ವಿಧೇಯರಾಗುವೆವು. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ. 18 ನಿನ್ನ ಆಜ್ಞೆಗಳಲ್ಲಿ ಒಂದನ್ನಾದರೂ ಅಲಕ್ಷ್ಯ ಮಾಡಿದರೆ ನಿನ್ನ ವಿಧಿಗಳಿಗೆ ವಿರುದ್ಧವಾಗಿ ನಡೆದರೆ ಮರಣದಂಡನೆಗೆ ಗುರಿಯಾಗತಕ್ಕವನು; ಆದುದರಿಂದ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು” ಎಂದು ಹೇಳಿದರು.

*1:4 1:4 ಮೆಡಿಟೇರಿಯನ್ ಸಮುದ್ರ.