ಮೀಕನು
ಗ್ರಂಥಕರ್ತೃತ್ವ
ಮೀಕ ಪುಸ್ತಕದ ಗ್ರಂಥಕರ್ತನು ಪ್ರವಾದಿಯಾದ ಮೀಕನಾಗಿದ್ದಾನೆ (ಮೀಕ 1:1). ಮೀಕನು ಗ್ರಾಮೀಣ ಪ್ರವಾದಿಯಾಗಿದ್ದು, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅನ್ಯಾಯ ಮತ್ತು ವಿಗ್ರಹಾರಾಧನೆಯ ಪರಿಣಾಮವಾಗಿ ಉಂಟಾದ ದೇವರ ಸನ್ನಿಹಿತವಾದ ನ್ಯಾಯತೀರ್ಪಿನ ಸಂದೇಶವನ್ನು ರವಾನಿಸಲು ನಗರ ಭಾಗಕ್ಕೆ ಕಳುಹಿಸಲ್ಪಟ್ಟನು. ದೇಶದ ಅತಿದೊಡ್ಡ ಕೃಷಿ ಭಾಗದಲ್ಲಿ ನೆಲೆಸಿದ ಮೀಕನು, ತನ್ನ ದೇಶದಲ್ಲಿರುವ ಸರ್ಕಾರದ ಅಧಿಕಾರದ ಕೇಂದ್ರಗಳ ಹೊರಗಡೆ ವಾಸಿಸುತ್ತಿದ್ದನು, ಇದು ಸಮಾಜದ ದೀನ ಮತ್ತು ನಿರ್ಗತಿಕರಾದ ಊನರಾದವರ, ತಳ್ಳಲ್ಪಟ್ಟವರ ಮತ್ತು ಬಾಧೆಗೊಳಗಾದವರ ಬಗೆಗಿನ (ಮೀಕ 4:6) ಅವನ ಬಲವಾದ ಕಾಳಜಿಗೆ ಕಾರಣವಾಯಿತು. ಇಡೀ ಹಳೆಯ ಒಡಂಬಡಿಕೆಯಲ್ಲಿಯೇ ಯೇಸುಕ್ರಿಸ್ತನ ಜನನದ ಕುರಿತಾದ ಅತ್ಯಂತ ಮಹತ್ವಪೂರ್ಣವಾದ ಪ್ರವಾದನೆಗಳಲ್ಲಿ ಒಂದನ್ನು ಮೀಕನ ಪುಸ್ತಕವು ಒದಗಿಸಿಕೊಡುತ್ತದೆ. ಕ್ರಿಸ್ತನ ಜನನಕ್ಕಿಂತ ಏಳು ನೂರು ವರ್ಷಗಳ ಮುಂಚೆಯೇ, ಆತನ ಜನ್ಮಸ್ಥಳವಾದ ಬೇತ್ಲೆಹೇಮನ್ನು ಮತ್ತು ಆತನ ಶಾಶ್ವತ ಸ್ವರೂಪವನ್ನು ಸೂಚಿಸಲಾಗಿದೆ (ಮೀಕ 5:2).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 730-650 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಇಸ್ರಾಯೇಲಿನ ಉತ್ತರ ಸಾಮ್ರಾಜ್ಯದ ಪತನಕ್ಕಿಂತ ಮುಂಚೆಯೇ (1:2-7) ಮೀಕನ ಆರಂಭದ ಮಾತುಗಳು ನುಡಿಯಲ್ಪಟ್ಟವು ಎಂದು ತೋರುತ್ತದೆ. ಮೀಕ ಪುಸ್ತಕದ ಇತರ ಭಾಗಗಳು ಬಾಬಿಲೋನಿಯಾದ ಸೆರೆವಾಸದ ಸಮಯದಲ್ಲಿ ಮತ್ತು ಕೆಲವರು ಸೆರೆವಾಸದಿಂದ ಸ್ವದೇಶಕ್ಕೆ ಮರಳಿದ ನಂತರದ ಸಮಯದಲ್ಲಿ ಬರೆಯಲ್ಪಟ್ಟಿವೆ ಎಂದು ಕಂಡುಬರುತ್ತದೆ.
ಸ್ವೀಕೃತದಾರರು
ಉತ್ತರ ಇಸ್ರಾಯೇಲ್ ಉತ್ತರ ಸಾಮ್ರಾಜ್ಯ ಮತ್ತು ದಕ್ಷಿಣದ ಯೆಹೂದದ ಸಾಮ್ರಾಜ್ಯಕ್ಕೆ ಮೀಕನು ಬರೆದನು.
ಉದ್ದೇಶ
ಮೀಕನ ಪುಸ್ತಕವು ಮಹತ್ವಪೂರ್ಣವಾದ ಎರಡು ಭವಿಷ್ಯವಾಣಿಗಳ ಸುತ್ತ ಸುತ್ತುತ್ತದೆ: ಒಂದು ಇಸ್ರಾಯೇಲ್ ಮತ್ತು ಯೆಹೂದದ ನ್ಯಾಯತೀರ್ಪು (1:1-3:12), ಮತ್ತೊಂದು, ಸಹಸ್ರವರ್ಷದ ರಾಜ್ಯದಲ್ಲಿ ದೇವಜನರ ಪುನಃಸ್ಥಾಪನೆ (4:1-5:15). ದೇವರು ಅವರ ಪರವಾಗಿ ಮಾಡಿದ ತನ್ನ ಒಳ್ಳೆಯ ಕಾರ್ಯಗಳನ್ನು, ಅವರು ತಮ್ಮ ಬಗ್ಗೆ ಮಾತ್ರವೇ ಕಾಳಜಿ ವಹಿಸುತ್ತಿರುವಾಗಲೂ ಆತನು ಅವರ ಬಗ್ಗೆ ಹೇಗೆ ಕಾಳಜಿ ವಹಿಸಿದನು ಎಂಬುದನ್ನು ಜನರಿಗೆ ನೆನಪಿಸುತ್ತಾನೆ.
ಮುಖ್ಯಾಂಶ
ದೈವಿಕ ನ್ಯಾಯತೀರ್ಪು
ಪರಿವಿಡಿ
1. ದೇವರು ನ್ಯಾಯತೀರಿಸುವುದಕ್ಕಾಗಿ ಬರಲಿದ್ದಾನೆ — 1:1-2:13
2. ವಿನಾಶದ ಸಂದೇಶ — 3:1-5:15
3. ಖಂಡನೆಯ ಸಂದೇಶ — 6:1-7:10
4. ಹಿನ್ನುಡಿ — 7:11-20
1
ಯೆಹೂದದ ಅರಸನಾದ ಯೋಥಾಮ, ಆಹಾಜ ಮತ್ತು ಹಿಜ್ಕೀಯ ಇವರ ಕಾಲದಲ್ಲಿ ಸಮಾರ್ಯದ ಮತ್ತು ಯೆರೂಸಲೇಮಿನ ವಿಷಯವಾಗಿ ಮೋರೆಷೆತ್ ಊರಿನವನಾದ ಮೀಕನಿಗೆ ಕೇಳಿ ಬಂದ ಯೆಹೋವನ ವಾಕ್ಯ.
ಸಮಾರ್ಯಕ್ಕೂ ಯೆರೂಸಲೇಮಿಗೂ ಸಂಭವಿಸುವ ನಾಶನ
ಜನಾಂಗಗಳೇ, ನೀವೆಲ್ಲರೂ ಕೇಳಿರಿ.
ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತರೇ, ಕಿವಿಗೊಡಿರಿ,
ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.
ಇಗೋ ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ.
ಭೂಮಿಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ.
ಬೆಂಕಿಗೆ ಎದುರು ಕರಗುವ ಮೇಣದಂತೆಯೂ ಮತ್ತು ಇಳಿಜಾರು ಪ್ರದೇಶದಲ್ಲಿ
ರಭಸವಾಗಿ ಹರಿಯುವ ನೀರಿನಂತೆ ಕಣಿವೆಗಳು, ಪರ್ವತಗಳು ಆತನ ಮುಂದೆ ಸೀಳಿ ಕರಗಿ ಕೊಚ್ಚಿಹೊಗುತ್ತಿವೆ.
ಇದಕ್ಕೆಲ್ಲಾ ಕಾರಣ ಯಾಕೋಬಿನ ದ್ರೋಹ ಮತ್ತು ಇಸ್ರಾಯೇಲ್ ವಂಶದ ಪಾಪಗಳೇ.
ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ!
ಯೆಹೂದದ ಕೆಟ್ಟ ಪೂಜಾಸ್ಥಾನಗಳು ಯಾವುವು?
ಯೆರೂಸಲೇಮಲ್ಲವೇ!
ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ,
ದ್ರಾಕ್ಷಿಯ ತೋಟದ ಮಡಿಗಳನ್ನಾಗಿಯೂ ಮಾಡುವೆನು.
ಅದರ ಕಲ್ಲುಗಳನ್ನು ತಗ್ಗಿಗೆ ಸುರಿದುಬಿಡುವೆನು.
ಅದರ ಅಸ್ತಿವಾರಗಳನ್ನು ಬಯಲನ್ನಾಗಿ ಮಾಡುವೆನು.
ಅದರ ಎರಕದ ಬೊಂಬೆಗಳನ್ನೆಲ್ಲಾ ಪುಡಿಪುಡಿ ಮಾಡುವೆನು.
ಅದರ ಸಮಸ್ತ ಸಂಪಾದನೆಯು ಸುಟ್ಟುಹೋಗುವುದು.
ಅದರ ಸಕಲ ವಿಗ್ರಹಗಳನ್ನು ಹಾಳುಮಾಡುವೆನು.
ಅದು ವೇಶ್ಯಾವಾಟಿಕೆಯಿಂದ ಸಂಪಾದನೆಯಾಗಿ ಕೂಡಿಸಿಟ್ಟುಕೊಂಡವುಗಳು ಹಾಗೂ
ವೇಶ್ಯಾವಾಟಿಕೆಯ ಸಂಪಾದನೆಯಾಗಿಯೇ ಪರರ ಪಾಲಾಗುವವು.
ಗೋಳಾಟ
ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು,
ಬರಿಗಾಲಾಗಿಯೂ, ಬೆತ್ತಲೆಯಾಗಿಯೂ ನಡೆದಾಡುವೆನು.
ನರಿಗಳಂತೆ ಅರಚಿಕೊಳ್ಳುವೆನು.
ಉಷ್ಟ್ರಪಕ್ಷಿಗಳ ಹಾಗೆ ಕಿರಿಚಿಕೊಳ್ಳುವೆನು.
ಸಮಾರ್ಯಕ್ಕೆ ಬಿದ್ದ ಪೆಟ್ಟು ಗುಣಪಡಿಸಲಾಗದು.
ಅದು ಯೆಹೂದಕ್ಕೂ ತಾಕಿದೆ.
ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇಮಿಗೆ ಮುಟ್ಟಿದೆ.
10 ಇದನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ, ಅಳಲೇಬೇಡಿರಿ,
ಬೇತ್ಲೆಯಪ್ರದಲ್ಲಿ ಧೂಳಿನೊಳಗೆ ಹೊರಳಾಡಿರಿ.
11 ಶಾಫೀರಿನವರೇ, ಬೆತ್ತಲೆಯಾಗಿ ಅವಮಾನಪಟ್ಟು ತೊಲಗಿರಿ.
ಚಾನಾನಿನವರು ಹೊರಡರು.
ಬೇತೆಚೇಲಿನ ಗೋಳಾಟವು ಅದರ ಬೆಂಬಲವನ್ನು ನಿಮಗೆ ತಪ್ಪಿಸುವುದು.
12 ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ
ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ
ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.
13 ಲಾಕೀಷಿನವರೇ ಅಶ್ವಗಳನ್ನು ರಥಕ್ಕೆ ಕಟ್ಟಿರಿ.
ನಿಮ್ಮ ಊರೇ ಚೀಯೋನ್ ನಗರಿಯ ಪಾಪಕ್ಕೆ ಮೂಲ,
ಹೌದು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿಬಂದವು.
14 ಆದಕಾರಣ ನೀವು ಮೋರೆಷತ್ ಗತ್ ಊರಿಗೆ ಬಳುವಳಿ ಕೊಡಬೇಕಾಗುವುದು.
ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವುದು.
15 ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು.
ಇಸ್ರಾಯೇಲಿನ ನಾಯಕರು* 1:15 ನಾಯಕರು ಅಥವಾ ಮಹಿಮೆಯು ಅದುಲ್ಲಾಮ್ ಪಟ್ಟಣಕ್ಕೆ ಸೇರುವುದು.
16 ಯೆಹೂದವೇ, ನಿನ್ನಿಂದ ಸೆರೆಹೋಗಿರುವ ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ ಮತ್ತು ತಲೆಬೋಳಿಸಿಕೋ.
ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ.

*1:15 1:15 ನಾಯಕರು ಅಥವಾ ಮಹಿಮೆಯು