ಜ್ಞಾನೋಕ್ತಿಗಳು
ಗ್ರಂಥಕರ್ತೃತ್ವ
ಅರಸನಾದ ಸೊಲೊಮೋನನು ಜ್ಞಾನೋಕ್ತಿಗಳ ಪ್ರಧಾನ ಗ್ರಂಥಕರ್ತನು. ಸೊಲೊಮೋನನ ಹೆಸರು 1:1, 10:1, ಮತ್ತು 25:1 ರಲ್ಲಿ ಕಾಣಿಸಿಕೊಳ್ಳುತ್ತದೆ. “ಜ್ಞಾನಿಗಳು” ಎಂದು ಕರೆಯಲ್ಪಡುವ ಪುರುಷರ ಗುಂಪು, ಆಗೂರನು ಮತ್ತು ಅರಸನಾದ ಲೆಮೂವೇಲನಂತಹ ಇತರ ಲೇಖನದಾತರು ಇದರಲ್ಲಿ ಒಳಗೊಂಡಿದ್ದಾರೆ. ಸತ್ಯವೇದದ ಉಳಿದ ಭಾಗದಂತೆಯೇ, ಜ್ಞಾನೋಕ್ತಿಗಳು ದೇವರ ರಕ್ಷಣೆಯ ಯೋಜನೆಯನ್ನು ಸೂಚಿಸುತ್ತದೆ, ಆದರೆ ಇದು ಬಹುಶಃ ಹೆಚ್ಚು ಸೂಕ್ಷ್ಮವಾಗಿ ಸೂಚಿಸುತ್ತದೆ. ಈ ಪುಸ್ತಕವು ಇಸ್ರಾಯೇಲ್ಯರಿಗೆ ಜೀವಿಸಲು ಸರಿಯಾದ ಮಾರ್ಗವಾದ ದೇವರ ಮಾರ್ಗವನ್ನು ತೋರಿಸಿತು. ತನ್ನ ಜೀವಿತಾವಧಿಯಲ್ಲಿ ಅವನು ಪ್ರಭಾವಕ್ಕೆ ಒಳಗಾಗಿರುವ ಜ್ಞಾನದ ನುಡಿಗಳ ಆಧಾರದ ಮೇಲೆ ಈ ಭಾಗವನ್ನು ಉಲ್ಲೇಖಿಸಲು ದೇವರು ಸೊಲೊಮೋನನನ್ನು ಪ್ರೇರೇಪಿಸಿರುವ ಸಾಧ್ಯತೆಯಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿಪೂ. 971-686 ರ ನಡುವಿನ ಸಮಯ.
ಜ್ಞಾನೋಕ್ತಿಗಳು ಸೊಲೊಮೋನನ ಆಳ್ವಿಕೆಯ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿ ಬರೆಯಲ್ಪಟ್ಟವು, ಇದರ ಜ್ಞಾನವು ಪ್ರತಿಯೊಂದು ಸ್ಥಳದಲ್ಲಿ, ಪ್ರತಿಯೊಂದು ಸಂಸ್ಕೃತಿಗೂ ಅನ್ವಯಿಸಲ್ಪಡುತ್ತದೆ.
ಸ್ವೀಕೃತದಾರರು
ಜ್ಞಾನೋಕ್ತಿಗಳಿಗೆ ಹಲವಾರು ಪ್ರೇಕ್ಷಕರು ಇರುತ್ತಾರೆ. ಇದು ತಮ್ಮ ಮಕ್ಕಳಿಗೆ ಉಪದೇಶಿಸುವಂತೆ ಪೋಷಕರಿಗೆ ಸಂಬೋಧಿಸಲಾಗಿದೆ. ಜ್ಞಾನವನ್ನು ಅನ್ವೇಷಿಸುತ್ತಿರುವ ಯುವಕರಿಗೂ ಮತ್ತು ಯುವತಿಯರಿಗೂ ಈ ಪುಸ್ತಕವು ಅನ್ವಯಿಸಲ್ಪಡುತ್ತದೆ ಮತ್ತು ಇದು ಅಂತಿಮವಾಗಿ, ಭಕ್ತಿಪೂರ್ವಕವಾದ ಜೀವನವನ್ನು ಪಡೆಯಲು ಇಚ್ಛಿಸುವ ಇಂದಿನ ಸತ್ಯವೇದದ ಓದುಗಾರರಿಗೆ ಪ್ರಾಯೋಗಿಕವಾದ ಸಲಹೆ ನೀಡುತ್ತದೆ.
ಉದ್ದೇಶ
ಜ್ಞಾನೋಕ್ತಿಗಳ ಪುಸ್ತಕದಲ್ಲಿ, ಸೊಲೊಮೋನನು ದೇವರ ಮನಸ್ಸನ್ನು ಉನ್ನತ ಮತ್ತು ಉದಾತ್ತವಾದ ಮತ್ತು ಹುದುವಾದ, ಸಾಧಾರಣವಾದ ವಿಷಯಗಳಲ್ಲಿ, ದಿನನಿತ್ಯದ ಸನ್ನಿವೇಶಗಳಲ್ಲಿಯೂ ಕೂಡಾ ತಿಳಿಸಿಕೊಡುತ್ತಾನೆ. ಅರಸನಾದ ಸೊಲೊಮೋನನ ಗಮನದಿಂದ ಯಾವ ವಿಚಾರವು ತಪ್ಪಿಹೋಗಿಲ್ಲ ಎಂದು ಕಂಡುಬರುತ್ತದೆ. ವೈಯುಕ್ತಿಕ ನಡವಳಿಕೆ, ಲೈಂಗಿಕ ಸಂಬಂಧಗಳು, ವ್ಯಾಪಾರ, ಸಂಪತ್ತು, ದಾನ, ಮಹತ್ವಾಕಾಂಕ್ಷೆ, ಶಿಸ್ತು, ಸಾಲ, ಮಗು-ಪಾಲನೆ, ಸ್ವಭಾವ, ಮದ್ಯಪಾನ, ರಾಜಕೀಯ, ಪ್ರತಿಕಾರ ಮತ್ತು ದೈವಭಕ್ತಿಗೆ ಸಂಬಂಧಿಸಿದ ವಿಷಯಗಳು ಜ್ಞಾನೋಕ್ತಿಗಳೆನ್ನುವ ಈ ಉತ್ತಮ ಸಂಕಲನದಲ್ಲಿ ಅನೇಕ ವಿಚಾರಗಳು ಒಳಗೊಂಡಿರುತ್ತವೆ.
ಮುಖ್ಯಾಂಶ
ಜ್ಞಾನ
ಪರಿವಿಡಿ
1. ಜ್ಞಾನದ ಸದ್ಗುಣಗಳು — 1:1-9:18
2. ಸೊಲೊಮೋನನ ಜ್ಞಾನೋಕ್ತಿಗಳು — 10:1-22:16
3. ಜ್ಞಾನಿಗಳ ನುಡಿಗಳು — 22:17-29:37
4. ಆಗೂರನ ಮಾತುಗಳು — 30:1-33
5. ಲೆಮೂವೇಲನ ಮಾತುಗಳು — 31:1-31
1
ಪೀಠಿಕೆ: ಜ್ಞಾನೋಕ್ತಿಗಳ ಉದ್ದೇಶ
ಇಸ್ರಾಯೇಲರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು.
ಇವುಗಳಿಂದ ಜನರು ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದು,
ಬುದ್ಧಿವಾದಗಳನ್ನು ಗ್ರಹಿಸಿಕೊಳ್ಳುವರು.
ಅವರು ವಿವೇಕಮಾರ್ಗದಲ್ಲಿ ಅಂದರೆ ನೀತಿ,
ನ್ಯಾಯ ಮತ್ತು ಧರ್ಮಮಾರ್ಗಗಳಲ್ಲಿ ಶಿಕ್ಷಿತರಾಗುವರು.
ಈ ನುಡಿಗಳು ಮೂಢರಿಗೆ ಜಾಣತನವನ್ನೂ,
ಯೌವನಸ್ಥರಿಗೆ ತಿಳಿವಳಿಕೆಯನ್ನು ಮತ್ತು ಬುದ್ಧಿಯನ್ನು ಉಂಟುಮಾಡುವವು.
ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು,
ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.
ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.
ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು,
ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.
ಪಾಪಿಗಳ ಕುರಿತು ಎಚ್ಚರಿಕೆಗಳು
ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು,
ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.
ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ,
ಕೊರಳಿಗೆ ಹಾರದಂತಿರುವುದು.
10 ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.
11 ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ,
ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.
12 ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ,
ನಾವೂ ಇವರನ್ನು ಜೀವದೊಡನೆ ನುಂಗಿಬಿಡೋಣ.
13 ಸಕಲವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು,
ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬಿಕೊಳ್ಳೋಣ.
14 ನಮ್ಮ ಸಂಗಡ ಚೀಟು ಹಾಕು;
ನಮ್ಮೆಲ್ಲರ ಹಣದ ಚೀಲ ಒಂದೇ ಆಗಿರಲಿ” ಎಂದು ಹೇಳಿದರೆ,
15 ಮಗನೇ, ಅವರೊಡನೆ ದಾರಿಯಲ್ಲಿ ನಡೆಯಬಾರದು,
ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ.
16 ಅವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು,
ಅವರು ರಕ್ತವನ್ನು ಸುರಿಸಲು ಆತುರಪಡುವರು.
17 ಪಕ್ಷಿಗಳ ಕಣ್ಣೆದುರಿಗೆ ಬಲೆಯನ್ನೊಡ್ಡುವುದು ವ್ಯರ್ಥ.
18 ಇವರಾದರೋ ಸ್ವರಕ್ತವನ್ನು ಸುರಿಸಿಕೊಳ್ಳುವುದಕ್ಕೆ ಹೊಂಚುಹಾಕುತ್ತಾರೆ,
ಸ್ವಜೀವವನ್ನು ತೆಗೆದುಕೊಳ್ಳುವುದಕ್ಕೆ ಕಾದಿರುತ್ತಾರೆ.
19 ಸೂರೆಮಾಡುವವರೆಲ್ಲರ ದಾರಿಯು ಹೀಗೆಯೇ ಸರಿ;
ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವುದು.
ಜ್ಞಾನವನ್ನು ತಿರಸ್ಕರಿಸಿದರೆ ಎಚ್ಚರ
20 ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ,
ಚೌಕಗಳಲ್ಲಿ ಧ್ವನಿಮಾಡುತ್ತಾಳೆ.
21 ಪೇಟೆಯ ಮುಖ್ಯಸ್ಥಾನದಲ್ಲಿ ಆಕೆ ಕೂಗುತ್ತಾಳೆ,
ಊರ ಬಾಗಿಲಿನಲ್ಲಿ ಆಕೆಯು ನುಡಿಯುವುದೇನೆಂದರೆ,
22 “ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ?
ಧರ್ಮನಿಂದಕರು ನಿಂದಿಸುವುದಕ್ಕೆ ಎಷ್ಟುಕಾಲ ಇಷ್ಟಪಡುವರು?
ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರವರೆಗೆ ಹಗೆಮಾಡುವರು?
23 ನನ್ನ ಗದರಿಕೆಗೆ ಲಕ್ಷ್ಯಕೊಡಿರಿ;
ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ,
ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು.
24 ನಾನು ಕರೆದಾಗ ನೀವು ತಿರಸ್ಕರಿಸಿದಿರಿ.
ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ;
25 ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ, ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ.
26 ಆದಕಾರಣ ಬಿರುಗಾಳಿಯಂತೆ ಅಪಾಯವೂ,
ತುಫಾನಿನಂತೆ ಆಪತ್ತೂ ಬಂದು, ನಿಮಗೆ ಶ್ರಮಸಂಕಟಗಳು ಸಂಭವಿಸುವಾಗ
27 ನಿಮ್ಮ ಅಪಾಯದಲ್ಲಿ ನಾನೂ ನಗುವೆನು;
ನಿಮ್ಮ ಆಪತ್ತಿನಲ್ಲಿ ಪರಿಹಾಸ್ಯ ಮಾಡುವೆನು.
28 ಆಗ ಅವರು ನನಗೆ ಮೊರೆಯಿಟ್ಟರೂ ನಾನು ಉತ್ತರಕೊಡೆನು,
ನನ್ನನ್ನು ಆತುರದಿಂದ ಹುಡುಕಿದರೂ ನಾನು ಕಾಣಿಸೆನು.
29 ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ
ತಿಳಿವಳಿಕೆಯನ್ನು ಹಗೆಮಾಡಿದರು.
30 ನನ್ನ ಬೋಧನೆಯನ್ನು ಕೇಳಲೊಲ್ಲದೆ,
ನನ್ನ ಗದರಿಕೆಯನ್ನೆಲ್ಲಾ ತಾತ್ಸಾರಮಾಡಿದರು.
31 ಆದುದರಿಂದ ಅವರು ತಮ್ಮ ನಡತೆಯ ಫಲವನ್ನು ಅನುಭವಿಸಿ,
ಸ್ವಂತ ಕುಯುಕ್ತಿಗಳನ್ನೇ ಹೊಟ್ಟೆತುಂಬಾ ಉಣ್ಣಬೇಕಾಗುವುದು.
32 ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು,
ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು.
33 ನನ್ನ ಮಾತಿಗೆ ಕಿವಿಗೊಡುವವನಾದರೋ ಸುರಕ್ಷಿತನಾಗಿದ್ದು,
ಯಾವ ಕೇಡಿಗೂ ಭಯಪಡದೆ ನೆಮ್ಮದಿಯಾಗಿ ಬಾಳುವನು” ಎಂಬುದೇ.