ದಾನಿಯೇಲನು
ಗ್ರಂಥಕರ್ತೃತ್ವ
ಗ್ರಂಥಕರ್ತನ ಹೆಸರಿಗೆ ಅನುಗುಣವಾಗಿ ಈ ಪುಸ್ತಕಕ್ಕೆ ಹೆಸರಿಡಲಾಗಿದೆ, ದಾನಿಯೇಲನ ಪುಸ್ತಕವು ಯೆಹೂದ್ಯರ ಸೆರೆವಾಸಿಯಾಗಿ ಇಸ್ರಾಯೇಲಿನಿಂದ ಬಂದು ಬಾಬೆಲಿನಲ್ಲಿದ್ದ ಅವನ ಸಮಯದ ಉತ್ಪನ್ನವಾಗಿದೆ. “ದೇವರು ನನ್ನ ನ್ಯಾಯಾಧಿಪತಿ” ಎಂಬುದು “ದಾನಿಯೇಲನ” ಹೆಸರಿನ ಅರ್ಥವಾಗಿದೆ. ಪುಸ್ತಕವು ದಾನಿಯೇಲನು ತನ್ನ ಗ್ರಂಥಕರ್ತನು ಎಂದು 9:2; 10:2 ರಂತಹ ಹಲವಾರು ವಾಕ್ಯಭಾಗಗಳಲ್ಲಿ ಸೂಚಿಸುತ್ತದೆ. ಬಾಬಿಲೋನಿನ ರಾಜಧಾನಿಯಲ್ಲಿ, ರಾಜನಿಗೆ ಅವನು ಮಾಡುತ್ತಿದ್ದ ಸೇವೆಯು ಸಮಾಜದ ಅತ್ಯುನ್ನತ ಹಂತಗಳಿಗೆ ಪ್ರವೇಶಿಸುವಂಥ ಭಾಗ್ಯವನ್ನು ಅವನಿಗೆ ನೀಡಿತು, ಅಂತಹ ಸಮಯದಲ್ಲಿ ಯೆಹೂದ್ಯ ಸೆರೆವಾಸಿಗಳಿಗಾಗಿ ದಾನಿಯೇಲನು ತನ್ನ ಅನುಭವಗಳನ್ನು ಮತ್ತು ಪ್ರವಾದನೆಗಳನ್ನು ಬರೆದಿಟ್ಟನು. ಅವನ ಸ್ವಂತ ದೇಶ ಮತ್ತು ಸಂಸ್ಕೃತಿ ಅಲ್ಲದ ಕಡೆಯಲ್ಲಿ ದೇವರೊಂದಿಗಿನ ಅವನ ನಂಬಿಗಸ್ತಿಕೆಯ ಸೇವೆಯು ಅವನನ್ನು ಪವಿತ್ರಗ್ರಂಥದ ಎಲ್ಲಾ ಜನರಿಗಿಂತಲೂ ಅತ್ಯಂತ ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಡಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 605-530 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಸ್ವೀಕೃತದಾರರು
ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆವಾಸಿಗಳು ಮತ್ತು ಸತ್ಯವೇದದ ಮುಂದಿನ ಓದುಗಾರರು.
ಉದ್ದೇಶ
ದಾನಿಯೇಲನ ಪುಸ್ತಕವು ಪ್ರವಾದಿಯಾದ ದಾನಿಯೇಲನ ಕ್ರಿಯೆಗಳನ್ನು, ಪ್ರವಾದನೆಗಳನ್ನು ಮತ್ತು ದರ್ಶನಗಳನ್ನು ದಾಖಲಿಸುತ್ತದೆ. ದೇವರು ತನ್ನ ಹಿಂಬಾಲಕರಿಗೆ ನಂಬಿಗಸ್ತನಾಗಿದ್ದಾನೆಂದು ಪುಸ್ತಕವು ಬೋಧಿಸುತ್ತದೆ. ಪ್ರಲೋಭನೆ ಮತ್ತು ದಬ್ಬಾಳಿಕೆಯ ನಡುವೆಯೂ, ವಿಶ್ವಾಸಿಗಳು ತಮ್ಮ ಭೌತಿಕ ಕರ್ತವ್ಯಗಳನ್ನು ಮಾಡುತ್ತಿರುವ ಸಮಯದಲ್ಲಿಯೂ ದೇವರಿಗೆ ನಂಬಿಗಸ್ತರಾಗಿರಬೇಕು.
ಮುಖ್ಯಾಂಶ
ದೇವರ ಸಾರ್ವಭೌಮತ್ವ
ಪರಿವಿಡಿ
1. ದೊಡ್ಡ ಪ್ರತಿಮೆಯ ಕನಸಿನ ಬಗ್ಗೆ ದಾನಿಯೇಲನ ವ್ಯಾಖ್ಯಾನ — 1:1-2:49
2. ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವರನ್ನು ಉರಿಯುತ್ತಿರುವ ಕುಲುಮೆಯಿಂದ ರಕ್ಷಿಸಿದ್ದು — 3:1-30
3. ನೆಬೂಕದ್ನೆಚ್ಚರನ ಕನಸು — 4:1-37
4. ಗೋಡೆಯ ಮೇಲೆ ಬೆರಳು ಬರೆದದ್ದು ಮತ್ತು ದಾನಿಯೇಲನ ನಾಶನದ ಬಗ್ಗೆ ಪ್ರವಾದಿಸಿದ್ದು — 5:1-31
5. ದಾನಿಯೇಲನು ಸಿಂಹದ ಗವಿಯಲ್ಲಿ — 6:1-28
6. ನಾಲ್ಕು ಪ್ರಾಣಿಗಳ ದರ್ಶನ — 7:1-28
7. ಟಗರು, ಹೋತ ಮತ್ತು ಸಣ್ಣ ಕೊಂಬಿನ ದರ್ಶನ — 8:1-27
8. 70 ವರ್ಷಗಳ ಕುರಿತಾದ ದಾನಿಯೇಲನ ಪ್ರಾರ್ಥನೆಗೆ ಉತ್ತರ — 9:1-27
9. ಅಂತಿಮ ಮಹಾ ಯುದ್ಧದ ಕುರಿತಾದ ದಾನಿಯೇಲನ ದರ್ಶನ — 10:1-12:13
1
ನೆಬೂಕದ್ನೆಚರನ ಆಸ್ಥಾನದಲ್ಲಿ ಇಬ್ರಿಯ ಯುವಕರು
ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು. ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನೂ, ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ ಕೊಡಲು ಅವನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.
ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, “ನೀನು ಇಸ್ರಾಯೇಲರಲ್ಲಿ ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಅಂಗದೋಷವಿಲ್ಲದವರೂ, ಸುಂದರರೂ, ಸಮಸ್ತ ಶಾಸ್ತ್ರಜ್ಞರೂ, ಪಂಡಿತರೂ, ವಿದ್ಯಾನಿಪುಣರೂ, ರಾಜಾಲಯದಲ್ಲಿ ಸನ್ನಿಧಿ ಸೇವೆಮಾಡಲು ಸಮರ್ಥರೂ ಆದ ಕೆಲವು ಯುವಕರನ್ನು ಇಲ್ಲಿಗೆ ಕರೆದುತಂದು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನೂ, ಶಾಸ್ತ್ರಗಳನ್ನೂ ಕಲಿಸಬೇಕು” ಎಂಬುದಾಗಿ ಅಪ್ಪಣೆಕೊಟ್ಟನು. ಇದಲ್ಲದೆ, “ಇನ್ನು ಮುಂದೆ ಅವರು ಸನ್ನಿಧಿಸೇವಕರಾಗಲೆಂದು ತನ್ನ ಭೋಜನ ಪದಾರ್ಥಗಳನ್ನೂ, ರಾಜನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು” ಎಂದು ಆಜ್ಞಾಪಿಸಿದನು.
ಆರಿಸಲ್ಪಟ್ಟ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬ ಯೆಹೂದ್ಯರು ಸೇರಿದ್ದರು. ಕಂಚುಕಿಯರ ಅಧ್ಯಕ್ಷನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ಬೇಲ್ತೆಶಚ್ಚರ್, ಹನನ್ಯನಿಗೆ ಶದ್ರಕ್, ಮೀಶಾಯೇಲನಿಗೆ ಮೇಶಕ್, ಅಜರ್ಯನಿಗೆ ಅಬೇದ್ನೆಗೋ ಎಂಬ ಹೆಸರಿಟ್ಟನು.
ಆದರೆ ದಾನಿಯೇಲನು ರಾಜನ ಭೋಜನ ಪದಾರ್ಥಗಳನ್ನು ತಿಂದು ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿ ಕಂಚುಕಿಯರ ಅಧ್ಯಕ್ಷನಿಗೆ, “ನಾನು ಅಶುದ್ಧನಾಗಲಾರೆ, ಕ್ಷಮಿಸು” ಎಂದು ವಿಜ್ಞಾಪಿಸಿದನು. ದೇವರು ಕಂಚುಕಿಯರ ಅಧ್ಯಕ್ಷನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ, ದಯೆಯನ್ನೂ ಹುಟ್ಟಿಸಿದನು. 10 ಆ ವಿಜ್ಞಾಪನೆಯನ್ನು ಕೇಳಿ ಕಂಚುಕಿಯರ ಅಧ್ಯಕ್ಷನು ದಾನಿಯೇಲನಿಗೆ, “ನಿಮಗೆ ಆಹಾರ ಮತ್ತು ಪಾನಗಳನ್ನು ಏರ್ಪಡಿಸಿದ್ದ ನನ್ನ ಒಡೆಯನಾದ ರಾಜನು ನಿಮ್ಮಂತೆ ಆರಿಸಲ್ಪಟ್ಟ ಯುವಕರ ಮುಖಕ್ಕಿಂತ ನಿಮ್ಮ ಮುಖವು ಬಾಡಿರುವುದನ್ನು ನೋಡಿ, ರಾಜನು ನನ್ನ ತಲೆಯನ್ನು ತೆಗೆಯಿಸಲು ನೀವು ಕಾರಣರಾಗುವಿರಿ” ಎಂದು ಭಯ ವ್ಯಕ್ತಪಡಿಸಿದನು.
11 ದಾನಿಯೇಲನು ತನ್ನನ್ನೂ, ಹನನ್ಯ, ಮೀಶಾಯೇಲ, ಅಜರ್ಯ, ಇವರನ್ನೂ ನೋಡಿಕೊಳ್ಳುವುದಕ್ಕೆ ಕಂಚುಕಿಯರ ಅಧ್ಯಕ್ಷನು 12 ನೇಮಿಸಿದ್ದ ವಿಚಾರಕನಿಗೆ, “ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಿನ್ನ ಸೇವಕರಾದ ನಮ್ಮನ್ನು ಪರೀಕ್ಷಿಸು; ಆಹಾರಕ್ಕೆ ಕಾಯಿಪಲ್ಯ ಮತ್ತು ಪಾನಕ್ಕೆ ನೀರು ನಮಗೆ ಒದಗಲಿ. 13 ಆ ಮೇಲೆ ನಮ್ಮ ಮುಖಗಳನ್ನೂ ರಾಜನ ಆಹಾರವನ್ನು ಉಣ್ಣುವ ಯುವಕರ ಮುಖಗಳನ್ನೂ, ಹೋಲಿಸಿನೋಡು; ನೋಡಿದ್ದಕ್ಕೆ ತಕ್ಕ ಹಾಗೆ ನಿನ್ನ ಸೇವಕರನ್ನು ನಡೆಸು” ಎಂದು ಬಿನ್ನವಿಸಿದನು.
14 ಅವನು ಅವರ ಬಿನ್ನಹಕ್ಕೆ ಒಪ್ಪಿ ಹತ್ತು ದಿನ ಪರೀಕ್ಷಿಸಿದನು. 15 ಅವರು ಹತ್ತು ದಿನಗಳ ನಂತರ ರಾಜನ ಆಹಾರವನ್ನು ಉಣ್ಣುತ್ತಿದ್ದ ಸಕಲ ಯುವಕರಿಗಿಂತ ಸುಂದರರಾಗಿಯೂ, ಪುಷ್ಟರಾಗಿಯೂ ಕಾಣಿಸಿದರು. 16 ಅಂದಿನಿಂದ ವಿಚಾರಕನು ಅವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ, ಅವರು ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದಿಟ್ಟು ಕಾಯಿಪಲ್ಯಗಳನ್ನು ಕೊಡುತ್ತಾ ಬಂದನು.
17 ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲಿಯೂ, ವಿದ್ಯೆಗಳಲ್ಲಿಯೂ, ಜ್ಞಾನವಿವೇಕಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ, ದಿವ್ಯದರ್ಶನಗಳನ್ನೂ ಗ್ರಹಿಸುವುದರಲ್ಲಿ ಪ್ರವೀಣನಾದನು. 18 ರಾಜನು ನೇಮಿಸಿದ ಕಾಲವು ಕಳೆದು ಯುವಕರನ್ನು ಸನ್ನಿಧಿಗೆ ತರತಕ್ಕ ಸಮಯವು ಬಂದಾಗ, ಕಂಚುಕಿಯರ ಅಧ್ಯಕ್ಷನು ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು.
19 ರಾಜನು ಅವರ ಸಂಗಡ ಮಾತನಾಡುವಾಗ ಆ ಸಮಸ್ತ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರ ಹಾಗೆ ಯಾರೂ ಕಂಡುಬರಲಿಲ್ಲ; ಆದಕಾರಣ ಅವರು ರಾಜನ ಸನ್ನಿಧಿಸೇವಕರಾದರು. 20 ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಸರ್ವವಿಷಯಗಳಲ್ಲಿ ಅವರನ್ನು ವಿಚಾರಮಾಡಲು ಅವನ ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ, ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು. 21 ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದ ತನಕ ಸನ್ನಿಧಿ ಸೇವಕನಾಗಿಯೇ ಇದ್ದನು.