11
ಗಿಲ್ಯಾದಿನವರ ನಾಯಕನಾದ ಯೆಫ್ತಾಹ
ಗಿಲ್ಯಾದ್ಯನಾದ *ಯೆಪ್ತಾಹನು ಮಹಾಪರಾಕ್ರಮಿಯಾಗಿದ್ದನು. ಅವನು ಗಿಲ್ಯಾದನಿಂದ ಒಬ್ಬ ವೇಶ್ಯೆಗೆ ಹುಟ್ಟಿದವನು. ಗಿಲ್ಯಾದನಿಗೆ ಹೆಂಡತಿಗೂ ಮಕ್ಕಳು ಹುಟ್ಟಿದ್ದರು. ಇವರು ದೊಡ್ಡವರಾದ ಮೇಲೆ ಯೆಪ್ತಾಹನಿಗೆ, “ನೀನು ಪರಸ್ತ್ರೀಯಿಂದ ಹುಟ್ಟಿದವನು; ಆದುದರಿಂದ ನಿನಗೆ ನಮ್ಮ ತಂದೆಯ ಮನೆಯಲ್ಲಿ ಬಾಧ್ಯತೆ ಸಿಕ್ಕಲಾರದು” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. ಅವನು ತನ್ನ ಸಹೋದರರನ್ನು ಬಿಟ್ಟು ಟೋಬ್ ದೇಶಕ್ಕೆ ಹೋಗಲು ಅಲ್ಲಿನ ಕಾಕಪೋಕರು ಕೂಡಿ ಅವನನ್ನು ಹಿಂಬಾಲಿಸಿದರು.
ಸ್ವಲ್ಪಕಾಲದ ನಂತರ ಇಸ್ರಾಯೇಲರಿಗೆ ವಿರೋಧವಾಗಿ ಬಂದ ಅಮ್ಮೋನಿಯರು ಅವರ ಮೇಲೆ ಯುದ್ಧವನ್ನು ಪ್ರಾರಂಭಿಸಿದರು. ಆಗ ಗಿಲ್ಯಾದಿನ ಹಿರಿಯರು ಯೆಪ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರುವುದಕ್ಕಾಗಿ ಅಲ್ಲಿಗೆ ಹೋದರು. ಅವರು ಅವನಿಗೆ, “ನಾವು ಅಮ್ಮೋನಿಯರೊಡನೆ ಯುದ್ಧಮಾಡುವ ಹಾಗೆ ನೀನು ಬಂದು ನಮ್ಮ ನಾಯಕನಾಗು” ಎಂದು ಬೇಡಿಕೊಂಡರು. ಅವನು ಅವರಿಗೆ, “ನನ್ನನ್ನು ಹಗೆಮಾಡಿ, ನನ್ನ ತಂದೆಯ ಮನೆಯಿಂದ ಓಡಿಸಿಬಿಟ್ಟವರು ನೀವೇ ಅಲ್ಲವೋ? ನಿಮಗೆ ಕಷ್ಟ ಬಂದಾಗ ನನ್ನ ಬಳಿಗೆ ಯಾಕೆ ಬಂದಿರಿ?” ಎನ್ನಲು ಅವರು, “ಆದುದರಿಂದಲೇ ಈಗ ತಿರುಗಿ ನಿನ್ನ ಬಳಿಗೆ ಬಂದಿದ್ದೇವೆ; ನಮ್ಮ ಸಂಗಡ ಬಂದು ಅಮ್ಮೋನಿಯರೊಡನೆ ಯುದ್ಧಮಾಡುವುದಾದರೆ ಗಿಲ್ಯಾದಿನವರಿಗೆಲ್ಲಾ ನೀನೇ ನಾಯಕನಾಗಿರುವಿ” ಎಂದು ಹೇಳಿದರು. ಆಗ ಯೆಪ್ತಾಹನು ಅವರಿಗೆ, “ನೀವು ನನ್ನನ್ನು ಅಮ್ಮೋನಿಯರೊಡನೆ ಯುದ್ಧಮಾಡುವುದಕ್ಕೋಸ್ಕರ ಕರೆದುಕೊಂಡು ಹೋಗುವಲ್ಲಿ ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟರೆ ನಿಜವಾಗಿ ನನ್ನನ್ನು ಅಧಿಪತಿಯನ್ನಾಗಿ ಮಾಡುವಿರೋ?” ಎಂದು ಕೇಳಲು 10 ಅವರು ಅವನಿಗೆ, “ಹಾಗೆಯೇ ಮಾಡುವೆವು; ನಮ್ಮಿಬ್ಬರ ಈ ಮಾತುಗಳಿಗೆ ಯೆಹೋವನೇ ಸಾಕ್ಷಿ” ಎಂದು ಉತ್ತರಕೊಟ್ಟರು. 11 ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಜನರು ಅವನನ್ನು ಅಧಿಪತಿಯನ್ನಾಗಿಯೂ, ನಾಯಕನನ್ನಾಗಿಯೂ ನೇಮಿಸಿದರು. ಮತ್ತು ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು.
12 ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಏನು ಕಾರಣ?” ಎಂದು ಕೇಳಿದನು. 13 ಆ ಅರಸನು ದೂತರಿಗೆ, “§ಇಸ್ರಾಯೇಲರು ಐಗುಪ್ತದಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್ ಮತ್ತು ಯೊರ್ದನ್ ಹೊಳೆಗಳವರೆಗೂ ಇದ್ದ ನನ್ನ ದೇಶವನ್ನು ವಶಪಡಿಸಿಕೊಂಡರಲ್ಲಾ; ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು” ಎಂದು ಹೇಳಿ ಕಳುಹಿಸಿದನು. 14 ಯೆಪ್ತಾಹನು ಇನ್ನೊಂದು ಸಾರಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, 15 “ಯೆಪ್ತಾಹನಾದ ನನ್ನ ಮಾತನ್ನು ಕೇಳು; *ಇಸ್ರಾಯೇಲರು ಮೋವಾಬ್ಯರ ಮತ್ತು ಅಮ್ಮೋನಿಯರ ದೇಶವನ್ನು ತೆಗೆದುಕೊಳ್ಳಲೇ ಇಲ್ಲ. 16 ಅವರು ಐಗುಪ್ತವನ್ನು ಬಿಟ್ಟನಂತರ ಅರಣ್ಯದಲ್ಲಿ ಸಂಚರಿಸಿ, ಕೆಂಪು ಸಮುದ್ರಕ್ಕೂ ಅನಂತರ ಕಾದೇಶಿಗೂ ಬಂದರು. 17 ಅವರು ಅಲ್ಲಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಬೇಡಿಕೊಳ್ಳಲು ಅವನು ಒಪ್ಪಿಕೊಳ್ಳಲಿಲ್ಲ. ತರುವಾಯ ಮೋವಾಬ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಲು ಅವನೂ ಒಪ್ಪಿಕೊಳ್ಳಲಿಲ್ಲ; ಆದುದರಿಂದ ಅವರು ಕಾದೇಶಿನಲ್ಲಿಯೇ ಉಳಿದುಕೊಂಡರು. 18 ಅನಂತರ ಅವರು ಅರಣ್ಯದಲ್ಲಿ ಪ್ರಯಾಣಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್‍ ದೇಶದ ಪೂರ್ವದಿಕ್ಕಿಗೆ ಬಂದು, ಅದರ ಮೇರೆಯಾಗಿರುವ ಅರ್ನೋನ್ ಹೊಳೆಯ ಆಚೆಯಲ್ಲಿ ಇಳಿದುಕೊಂಡರು. ಮೋವಾಬ್ಯರ ಮೇರೆಯೊಳಗೆ ಕಾಲಿಡಲಿಲ್ಲ. 19 ತರುವಾಯ ಅವರು ಹೆಷ್ಬೋನನ್ನು ರಾಜಧಾನಿ ಮಾಡಿಕೊಂಡಿದ್ದ ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ದೇಶವನ್ನು ದಾಟಿ ನಮ್ಮ ದೇಶಕ್ಕೆ ಹೋಗುವುದಕ್ಕೆ ಅಪ್ಪಣೆಕೊಡು’ ಎಂದು ಅವನನ್ನು ಬೇಡಿಕೊಂಡರು. 20 ಆದರೆ ಸೀಹೋನನು ಅವರನ್ನು ನಂಬದೆ ತನ್ನ ಸೀಮೆಯನ್ನು ದಾಟಿಹೋಗುವುದಕ್ಕೆ ಅಪ್ಪಣೆಕೊಡದೆ ತನ್ನ ಜನರನ್ನು ಕೂಡಿಸಿಕೊಂಡು ಯಹಚಕ್ಕೆ ಬಂದು ಅವರೊಡನೆ ಯುದ್ಧಮಾಡಿದನು. 21 ಇಸ್ರಾಯೇಲರ ದೇವರಾದ ಯೆಹೋವನು ಸೀಹೋನನನ್ನೂ, ಅವನ ಜನರೆಲ್ಲರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು, ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. 22 ಹೀಗೆ ಇಸ್ರಾಯೇಲರು ಅರ್ನೋನಿನಿಂದ ಯಬ್ಬೋಕಿನವರೆಗೂ, ಅರಣ್ಯದಿಂದ ಯೊರ್ದನಿನವರೆಗೂ ಇದ್ದ ಅಮೋರಿಯರ ಪ್ರಾಂತ್ಯವನ್ನೆಲ್ಲಾ ವಶಮಾಡಿಕೊಂಡರು. 23 ಇಸ್ರಾಯೇಲರ ದೇವರಾದ ಯೆಹೋವನು ಈ ದೇಶವನ್ನು ಅಮೋರಿಯರಿಂದ ತೆಗೆದು ತನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಕೊಟ್ಟ ಮೇಲೆ ನೀನು ಅದನ್ನು ತೆಗೆದುಕೊಳ್ಳುವುದು ಹೇಗೆ? 24 ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವನು ನಮಗೆ ಒಪ್ಪಿಸಿಕೊಡುವುದನ್ನು ನಾವು ಸ್ವಾಧೀನಪಡಿಸಿಕೊಳ್ಳುವುದು ನ್ಯಾಯವಾಗಿದೆ. 25 ಚಿಪ್ಪೋರನ ಮಗನೂ ಮೋವಾಬ್ಯರ ಅರಸನೂ ಆದ ಬಾಲಾಕನಿಗಿಂತ ನೀನು ಹೆಚ್ಚಿನವನೋ? ಅವನು ಇಸ್ರಾಯೇಲರೊಡನೆ ಎಂದಾದರೂ ವಿವಾದಮಾಡಿದನೋ? ಅಥವಾ ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೋ? 26 ಇಸ್ರಾಯೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲಿಯೂ, ಅವುಗಳ ಗ್ರಾಮಗಳಲ್ಲಿಯೂ, ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲಿಯೂ ವಾಸಿಸುತ್ತಿದ್ದಾರಲ್ಲಾ. ಇಷ್ಟು ದಿನಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ? 27 ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯ ಮಾಡಿದ ಹಾಗಾಯಿತು. ನ್ಯಾಯಸ್ಥಾಪಕನಾದ ಯೆಹೋವನೇ ಈ ಹೊತ್ತು ಇಸ್ರಾಯೇಲರ ಮತ್ತು ಅಮ್ಮೋನಿಯರ ಮಧ್ಯದಲ್ಲಿ ನ್ಯಾಯತೀರಿಸಲಿ” ಎಂದು ಹೇಳಿಸಿದನು. 28 ಆದರೆ ಯೆಪ್ತಾಹನು ಹೇಳಿಕಳುಹಿಸಿದ ಮಾತುಗಳಿಗೆ ಅಮ್ಮೋನಿಯರ ಅರಸನು ಕಿವಿಗೊಡಲಿಲ್ಲ.
ಯೆಪ್ತಾಹನು ಅಮ್ಮೋನಿಯರನ್ನು ಸೋಲಿಸಿದ್ದು
29 ಆಗ ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ದೇಶ ಇವುಗಳಲ್ಲಿ ಸಂಚರಿಸಿ ತಿರುಗಿ ಗಿಲ್ಯಾದಿನ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು. 30  §ಇದಲ್ಲದೆ ಅವನು ಯೆಹೋವನಿಗೆ, “ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ 31 ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು *ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು. 32 ಯೆಪ್ತಾಹನು ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಲು ಯೆಹೋವನು ಅವರನ್ನು ಅವನ ಕೈಗೆ ಒಪ್ಪಿಸಿದನು. 33 ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿಬಿಟ್ಟನು. ಹೀಗೆ ದೊಡ್ಡ ಜಯವಾಗಿ ಅಮ್ಮೋನಿಯರು ಇಸ್ರಾಯೇಲರ ಮುಂದೆ ತಗ್ಗಿಸಲ್ಪಟ್ಟರು.
ಯೆಪ್ತಾಹನು ಮಗಳು
34 ಯೆಪ್ತಾಹನು ಮಿಚ್ಪೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿಬಡಿಯುತ್ತಾ, ನೃತ್ಯಮಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆಯು ಅವನಿಗೆ ಒಬ್ಬಳೇ ಮಗಳಾಗಿದ್ದಳು. ಆಕೆಯ ಹೊರತು ಅವನಿಗೆ ಬೇರೆ ಗಂಡು ಹೆಣ್ಣು ಮಕ್ಕಳೇ ಇರಲಿಲ್ಲ. 35 ಆಕೆಯನ್ನು ಕಾಣುತ್ತಲೇ ಅವನು ತನ್ನ ಬಟ್ಟೆಯನ್ನು ಹರಿದುಕೊಂಡು, “ಅಯ್ಯೋ, ನನ್ನ ಮಗಳೇ, ನೀನು ನನ್ನನ್ನು ಕುಗ್ಗಿಸೇಬಿಟ್ಟೆಯಲ್ಲಾ; ನನಗೆ ಮಹಾಸಂಕಟವನ್ನು ಉಂಟುಮಾಡಿದಿ. ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆನು” ಎಂದು ಕೂಗಿಕೊಳ್ಳಲು 36 ಆಕೆಯು ಅವನಿಗೆ, “ನನ್ನ ತಂದೆಯೇ, ನೀನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ ಮೇಲೆ ಆತನು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿತೀರಿಸಿದ್ದರಿಂದ ನಿನ್ನ ಬಾಯಿಂದ ಹೊರಟದ್ದನ್ನೇ ನೆರವೇರಿಸು” ಎಂದಳು. 37 ಆಕೆಯು ತಿರುಗಿ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಲಾಲಿಸು; ಎರಡು ತಿಂಗಳುಗಳ ಕಾಲ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ, ನನ್ನ ಕನ್ಯಾವಸ್ಥೆಗೋಸ್ಕರ ಗೋಳಾಡುವೆನು” ಎಂದಳು. 38 ಅವನು, “ಎರಡು ತಿಂಗಳ ತನಕ ಹೋಗಿ ಬಾ” ಎಂದು ಕಳುಹಿಸಿದನು. ಆಕೆಯು ಸಖಿಯರ ಸಹಿತವಾಗಿ ಬೆಟ್ಟದ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗೋಸ್ಕರ ಗೋಳಾಡಿದಳು. 39 ಎರಡು ತಿಂಗಳು ಕಳೆದ ನಂತರ ಆಕೆ ಪುನಃ ತಂದೆಯ ಹತ್ತಿರ ಬರಲು ಅವನು ತನ್ನ §ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು. 40 ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿವರ್ಷದಲ್ಲಿಯೂ ನಾಲ್ಕು ದಿನ ಗಿಲ್ಯಾದ್ಯನಾದ ಯೆಪ್ತಾಹನ ಮಗಳನ್ನು ವರ್ಣಿಸುತ್ತಾರೆ. ಇದು ಅವರಲ್ಲಿ ಒಂದು ಪದ್ಧತಿ.
* 11:1 11:1 ಇಬ್ರಿ 11:32. 11:1 11:1 2 ಅರಸು. 5:1. 11:10 11:10 ಯೆರೆ 42:5. § 11:13 11:13 ಅರಣ್ಯ 21:24. * 11:15 11:15 ಧರ್ಮೋ 2:9,19. 11:24 11:24 1 ಅರಸು. 11:7. 11:25 11:25 ಅರಣ್ಯ 22:24. § 11:30 11:30 ಆದಿ 28:20-22. * 11:31 11:31 ಯಾಜಕ. 27:2. 11:34 11:34 ವಿಮೋ 15:20. 11:35 11:35 ಅರಣ್ಯ 30:2. § 11:39 11:39 ಆಕೆಯು ಸಾಯುವ ತನಕ ಕನ್ಯೆಯಾಗಿ ಯೆಹೋವನಿಗೋಸ್ಕರ ಜೀವಿಸಿದಳು.