51
ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಬಾಬೆಲಿನ ಮೇಲೂ, ಲೇಬ್ ಕಾಮೈ* ದೇಶದವರ ಮೇಲೂ ನಾಶನದ ಗಾಳಿಯನ್ನು ಬೀಸಮಾಡುವೆನು.
ಅನ್ಯಜನರನ್ನು ಬಾಬಿಲೋನಿಗೆ ಕಳುಹಿಸುವೆನು, ಅವರು ಅದನ್ನು ತೂರುವರು.
ಆ ದೇಶವನ್ನು ಬಟ್ಟಬರಿದು ಮಾಡುವರು; ನಿಯಮಿತ ವಿಪತ್ಕಾಲದಲ್ಲಿ ಅದನ್ನು ಮುತ್ತುವರಷ್ಟೆ.
ಧನುರ್ಧಾರಿಗಳಿಗೂ, ಕವಚಸನ್ನದ್ಧರಿಗೂ ಬಿಲ್ಲುಗಾರರು ಬಾಣವನ್ನೆಸೆಯಲಿ.
ಬಾಬೆಲಿನ ಯುವಕರನ್ನು ಉಳಿಸದಿರಿ; ಅದರ ಸೈನ್ಯವನ್ನೆಲ್ಲಾ ನಿಶ್ಶೇಷಮಾಡಿರಿ.
ಕಸ್ದೀಯರು ತಮ್ಮ ದೇಶದಲ್ಲಿ ಹತರಾಗಿ ಬೀಳುವರು, ಬಾಬೆಲಿನ ಬೀದಿಗಳಲ್ಲಿ ಇರಿಯಲ್ಪಟ್ಟು ಮಣ್ಣುಪಾಲಾಗುವರು.
ಇಸ್ರಾಯೇಲರ ಸದಮಲಸ್ವಾಮಿಗೆ ಆತನ ಜನರು ಮಾಡಿದ ಅಪರಾಧವು ತಮ್ಮ ದೇಶದಲ್ಲಿ ತುಂಬಿದ್ದರೂ,
ಸೇನಾಧೀಶ್ವರನಾದ ಯೆಹೋವನೆಂಬ ದೇವರು ಇಸ್ರಾಯೇಲನ್ನಾಗಲಿ ಅಥವಾ ಯೆಹೂದವನ್ನಾಗಲಿ ತ್ಯಜಿಸಲಿಲ್ಲ.
ನೀವು ಬಾಬೆಲಿನೊಳಗಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ; ಅದಕ್ಕೆ ಉಂಟಾಗುವ ದಂಡನೆಗೆ ಒಳಗಾಗಬೇಡಿರಿ.
ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ; ಆತನು ಬಾಬಿಲೋನಿಗೆ ಪ್ರತಿಕಾರ ಮಾಡುವನು.
ಬಾಬೆಲು ಯೆಹೋವನ ಕೈಯಲ್ಲಿನ ಹೊನ್ನಿನ ಪಾತ್ರೆಯ ಹಾಗಿತ್ತು; ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು;
ಜನಾಂಗಗಳು ಅದರಲ್ಲಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.
ಬಾಬೆಲ್ ತಟ್ಟನೆ ಬಿದ್ದು ಹಾಳಾಯಿತು! ಅದಕ್ಕಾಗಿ ಗೋಳಾಡಿರಿ;
ಅದರ ನೋವನ್ನು ನೀಗಿಸುವುದಕ್ಕೆ ಔಷಧವನ್ನು ಸಂಪಾದಿಸಿರಿ, ಗುಣವಾದೀತು.
ಬಾಬೆಲನ್ನು ಸ್ವಸ್ಥಮಾಡುವುದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ;
ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ;
ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ.
10 ಯೆಹೋವನು ನಮ್ಮ ನ್ಯಾಯವನ್ನು ವ್ಯಕ್ತಪಡಿಸಿದ್ದಾನೆ;
ನಮ್ಮ ದೇವರಾದ ಯೆಹೋವನು ನಡೆಸಿದ ಕಾರ್ಯವನ್ನು ಚೀಯೋನಿನಲ್ಲಿ ಪ್ರಕಟಿಸೋಣ ಬನ್ನಿರಿ!
11 ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ,
ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರೇಪಿಸಿದ್ದಾನೆ.
ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತಿಕಾರವೇ;
ಮೇದ್ಯರೇ, ಬಾಣಗಳನ್ನು ಮಸೆಯಿರಿ, ಗುರಾಣಿಗಳನ್ನು ಸನ್ನದ್ಧ ಮಾಡಿರಿ!
12 ಬಾಬೆಲ್ ಕೋಟೆಗೆ ಎದುರಾಗಿ ಧ್ವಜವನ್ನೆತ್ತಿರಿ, ಪಹರೆಯನ್ನು ಬಲಪಡಿಸಿರಿ,
ಕಾವಲುಗಾರರನ್ನು ನಿಲ್ಲಿಸಿರಿ, ಹೊಂಚುಗಾರರನ್ನು ಗೊತ್ತುಮಾಡಿರಿ;
ಯೆಹೋವನು ಬಾಬೆಲಿನವರ ವಿಷಯದಲ್ಲಿ ನುಡಿದದ್ದನ್ನು ನೆನಪಿಸಿಕೊಂಡು ನೆರವೇರಿಸಿದ್ದಾನೆ.
13 ಆಹಾ, ಬಹುಜಲಾಶ್ರಯಗಳ ಮಧ್ಯೆ ನಿವಾಸಿನಿಯಾಗಿರುವ ನಗರವೇ, ಧನಭರಿತಪುರವೇ,
ನಿನ್ನ ಅಂತ್ಯವು ಬಂದಿದೆ, ನೀನು ಸೂರೆಮಾಡಿದ್ದು ಸಾಕು.
14 ಸೇನಾಧೀಶ್ವರನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು,
‘ಖಂಡಿತವಾಗಿ ನಾನು ನಿನ್ನನ್ನು ಮಿಡತೆಗಳಷ್ಟು ಅಸಂಖ್ಯ ಜನರಿಂದ ತುಂಬಿಸುವೆನು, ಅವರು ನಿನ್ನ ಮೇಲೆ ಜಯಘೋಷಮಾಡುವರು.
ಯೆಹೋವನಿಗೆ ಸ್ತುತಿಗೀತೆ
15 ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ
ತನ್ನ ವಿವೇಕದಿಂದ ಆಕಾಶಮಂಡಲವನ್ನು ವಿಸ್ತರಿಸಿದ್ದಾನೆ.
16 ಆತನ ಗರ್ಜನೆಗೆ ಆಕಾಶದಿಂದ ನೀರು ಬೋರ್ಗರೆದು ಸುರಿಯುತ್ತದೆ;
ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ;
ಮಳೆಗೋಸ್ಕರ ಮಿಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.
17 ಎಲ್ಲರೂ ತಿಳಿವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ;
ತಾನು ಕೆತ್ತಿದ ವಿಗ್ರಹದ ನಿಮಿತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು;
ಅವನು ಎರಕಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ.
18 ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ;
ದಂಡನೆಯಾಗುವಾಗ ಅಳಿದುಹೋಗುವವು.
19 ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು;
ಇಸ್ರಾಯೇಲು ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ಹೆಸರು.
20 ಬಾಬೆಲೇ, ನೀನು ನನಗೆ ಗದೆಯು ಮತ್ತು ಶಸ್ತ್ರವು,
ನಾನು ನಿನ್ನಿಂದ ಜನಾಂಗಗಳನ್ನು ಒಡೆದುಬಿಡುತ್ತೇನೆ;
21 ನಿನ್ನಿಂದ ರಾಜ್ಯಗಳನ್ನು ಅಳಿಸುತ್ತೇನೆ; ನಿನ್ನಿಂದ ಕುದುರೆಯನ್ನೂ ಮತ್ತು ಸವಾರನನ್ನೂ ಅಳಿಸಿಬಿಡುತ್ತೇನೆ;
ನಿನ್ನಿಂದ ರಥವನ್ನೂ, ಸಾರಥಿಯನ್ನೂ ನಾಶಮಾಡುತ್ತೇನೆ;
22 ನಿನ್ನಿಂದ ಸ್ತ್ರೀಪುರುಷರನ್ನು ನಾಶಮಾಡುತ್ತೇನೆ; ನಿನ್ನಿಂದ ಬಾಲಕರನ್ನು ಮತ್ತು ವೃದ್ಧರನ್ನು ನಾಶ ಮಾಡುತ್ತೇನೆ;
ನಿನ್ನಿಂದ ಯುವತೀ ಮತ್ತು ಯುವಕರನ್ನು ನಾಶಮಾಡುವೆನು;
23 ನಿನ್ನಿಂದ ಕುರುಬನನ್ನೂ ಹಾಗು ಹಿಂಡನ್ನೂ ನಾಶಮಾಡುತ್ತೇನೆ;
ನಿನ್ನಿಂದ ರೈತನನ್ನೂ ಹಾಗೂ ನೊಗದ ಎತ್ತುಗಳನ್ನೂ ನಾಶಮಾಡುವೆನು;
ನಿನ್ನಿಂದ ದೇಶಾಧಿಪತಿಗಳನ್ನೂ ಮತ್ತು ನಾಡ ಒಡೆಯರನ್ನೂ ನಾಶಮಾಡುವೆನು;
24 ಆದರೆ ಕಸ್ದೀಯರೂ ಚೀಯೋನಿನಲ್ಲಿ ಮಾಡಿದ ಎಲ್ಲಾ ಹಾನಿಗೆ ಪ್ರತಿಯಾಗಿ,
ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಬಾಬಿಲೋನಿಗೆ ಮುಯ್ಯಿತೀರಿಸುವೆನು’ ” ಎಂದು ಯೆಹೋವನು ಅನ್ನುತ್ತಾನೆ.
25 ಯೆಹೋವನು ಇಂತೆನ್ನುತ್ತಾನೆ, “ಆಹಾ, ಲೋಕವನ್ನೆಲ್ಲಾ ಹಾಳುಮಾಡುವ ನಾಶಕರ ಪರ್ವತವೇ, ನಾನು ನಿನ್ನ ವಿರುದ್ಧನಾಗಿದ್ದೇನೆ;
ನಾನು ನಿನ್ನ ಮೇಲೆ ಕೈಮಾಡಿ ನಿನ್ನನ್ನು ಮೇಲಿನಿಂದ ಕೆಳಕ್ಕೆ ಉರುಳಿಸುವೆನು, ಸುಟ್ಟ ಬೆಟ್ಟವನ್ನಾಗಿ ಮಾಡುವೆನು.
26 ಮೂಲೆಗಲ್ಲಿಗಾಗಲಿ ಅಥವಾ ಅಸ್ತಿವಾರಕ್ಕಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು,
ನೀನು ನಿತ್ಯನಾಶಕ್ಕೆ ಗುರಿಯಾಗುವಿ, ಇದು ಯೆಹೋವನ ನುಡಿ” ಎಂಬುದೇ.
27 “ದೇಶದಲ್ಲಿ ಧ್ವಜವನ್ನೆತ್ತಿರಿ, ರಾಜ್ಯಗಳಲ್ಲೆಲ್ಲಾ ಕೊಂಬೂದಿರಿ, ಜನಾಂಗಗಳನ್ನು ಸಿದ್ಧಮಾಡಿರಿ,
ಬಾಬೆಲಿನ ಮೇಲೆ ಬೀಳಲಿಕ್ಕೆ ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿರಿ,
ಸೋಲಿಸಲು ಸೇನಾಧಿಪತಿಯನ್ನು ನೇಮಿಸಿರಿ, ಅಶ್ವಬಲವನ್ನು ಬಿರುಸಾದ ಮಿಡತೆಯ ದಂಡಿನೋಪಾದಿಯಲ್ಲಿ ಬರಮಾಡಿರಿ.
28 ಜನಾಂಗಗಳು, ಮೇದ್ಯರ ಅರಸರು, ಅಧಿಪತಿಗಳು, ಅಧಿಕಾರಿಗಳು, ಅವರ ಅಧೀನದಲ್ಲಿರುವ ಸಂಪೂರ್ಣ ದೇಶದವರು,
ಇವರೆಲ್ಲರನ್ನೂ ಅದರ ವಿರುದ್ಧವಾಗಿ ಎಬ್ಬಿಸಿರಿ.
29 ದೇಶವೆಲ್ಲಾ ನೊಂದು ನಡುಗುತ್ತದೆ;
ಏಕೆಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ.
30 ಬಾಬೆಲಿನ ಶೂರರು ಯುದ್ಧಕ್ಕೆ ಹಿಂದೆಗೆದು ಹೆಂಗಸರಂತೆ ಬಲಹೀನರಾಗಿ ತಮ್ಮ ಕೋಟೆಗಳಲ್ಲಿ ನಿಂತಿದ್ದಾರೆ;
ಅದರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ, ಅವರ ಅಗುಳಿಗಳು ಮುರಿದುಹೋಗಿವೆ.
31 ಮುಂದೂತನು ಮತ್ತು ದೂತರೂ ಓಡಿ ಓಡಿ ಒಬ್ಬರಿಗೊಬ್ಬರು ಎದುರುಬದುರಾಗಿ,
ಅರಸನ ಬಳಿ ಬಂದು, ‘ರಾಜಧಾನಿಯನ್ನು ಎಲ್ಲಾ ಕಡೆಯಲ್ಲಿಯೂ ಆಕ್ರಮಿಸಿದ್ದಾರೆ,
32 ಹಾಯ್ಗಡಗಳನ್ನು ಹಿಡಿದಿದ್ದಾರೆ, ಜೊಂಡು ಹುಲ್ಲನ್ನು ಸುಟ್ಟುಬಿಟ್ಟಿದ್ದಾರೆ, ರಣವೀರರು ಬೆಚ್ಚಿಬಿದ್ದಿದ್ದಾರೆ’ ಎಂದು ತಿಳಿಸುವರು.”
33 ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ,
“ಬಾಬೆಲ್ ಪುರಿಯು ತುಳಿದು ತುಳಿದು ಸರಿಮಾಡುತ್ತಿರುವ ಕಣದಂತಿದೆ;
ಸ್ವಲ್ಪ ಕಾಲವಾದ ಮೇಲೆ ಒಕ್ಕುವ ಸಮಯವು ಅದಕ್ಕೆ ಸಂಭವಿಸುವುದು.
34 ಯೆಹೂದವು ಹೀಗೆ ಪ್ರಲಾಪಿಸುತ್ತದೆ, ‘ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ತಿಂದುಹಾಕಿದ್ದಾನೆ,
ಒಡೆದುಬಿಟ್ಟಿದ್ದಾನೆ, ಬರಿಪಾತ್ರೆಯನ್ನಾಗಿ ಕುಕ್ಕಿದ್ದಾನೆ, ಘಟಸರ್ಪದ ಹಾಗೆ ನನ್ನನ್ನು ನುಂಗಿದ್ದಾನೆ,
ನನ್ನ ರುಚಿಪದಾರ್ಥಗಳಿಂದ ಹೊಟ್ಟೆತುಂಬಿಸಿಕೊಂಡಿದ್ದಾನೆ, ನನ್ನನ್ನು ಗಂಗಾಳದಂತೆ ತೊಳೆದುಬಿಟ್ಟಿದ್ದಾನೆ.
35 ನಮ್ಮ ಪ್ರಾಣವನ್ನು ಹಿಂಸಿಸಿದ ದೋಷ ಬಾಬಿಲೋನಿಗೆ ತಟ್ಟಲಿ’ ಎಂದು ಚೀಯೋನಿನವರು ಅನ್ನುತ್ತಾರೆ;
‘ನಮ್ಮ ರಕ್ತವನ್ನು ಸುರಿಸಿದ ಅಪರಾಧವು ಕಸ್ದೀಯರಿಗೆ ಬಡಿಯಲಿ’ ಎಂದು ಯೆರೂಸಲೇಮಿನವರು ಹೇಳುತ್ತಾರೆ.”
ಬಾಬಿಲೋನಿಗೆ ಪ್ರತಿಕಾರ
36 ಆದ್ದರಿಂದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನು ನಿನ್ನ ಪರವಾಗಿ ವ್ಯಾಜ್ಯವಾಡಿ, ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು;
ಅದರ ಸರೋವರವು ಬತ್ತುವಂತೆಯೂ, ಅದರ ಪ್ರವಾಹವು ಒಣಗುವಂತೆಯೂ ಮಾಡುವೆನು.
37 ಆಗ ಬಾಬೆಲ್ ಹಾಳುದಿಬ್ಬಗಳಿಂದ ತುಂಬುವುದು ಮತ್ತು ನರಿಗಳ ಬೀಡಾಗಿರುವುದು;
ಅದು ನಿರ್ಜನವಾಗಿ ಪರಿಹಾಸ್ಯಕ್ಕೆ ಗುರಿಯಾಗುವುದು.
38 ಆ ದೇಶದವರು ಪ್ರಾಯದ ಸಿಂಹಗಳಂತೆ ಒಟ್ಟಿಗೆ ಗರ್ಜಿಸುತ್ತಿದ್ದಾರೆ, ಸಿಂಹದ ಮರಿಗಳ ಹಾಗೆ ಗುರುಗುಟ್ಟುತ್ತಿದ್ದಾರೆ.
39 ಅವರು ಹೊಟ್ಟೆಬಾಕರು, ನಾನು ಅವರಿಗೆ ಔತಣವನ್ನು ಸಿದ್ಧಪಡಿಸುವೇನು,
ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ
ದೀರ್ಘನಿದ್ರೆಮಾಡುವಂತೆ ತಲೆಗೇರುವ ಮಟ್ಟಿಗೆ ಕುಡಿಸುವೆನು. ಇದು ಯೆಹೋವನ ನುಡಿ” ಎಂಬುದೇ.
40 “ನಾನು ಅವರನ್ನು ಕುರಿ, ಟಗರು ಮತ್ತು ಹೋತಗಳ ಹಾಗೆ ವಧ್ಯಸ್ಥಾನಕ್ಕೆ ಬರಮಾಡುವೆನು.
41 ಆಹಾ, ಶೇಷಕ್ ಶತ್ರುವಶವಾಯಿತು, ಲೋಕಪ್ರಸಿದ್ಧವಾದ ಪಟ್ಟಣವು ಹಿಡಿಯಲ್ಪಟ್ಟಿದೆ, ಬಾಬೆಲ್ ಜನಾಂಗಗಳ ಬೆರಗಿಗೆ ಈಡಾಗಿದೆ!
42 ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
43 ಅದರ ಪಟ್ಟಣಗಳು ಕಾಡು, ಕಗ್ಗಾಡು, ಬೆಗ್ಗಾಡೂ ಆಗಿವೆ.
ಆ ದೇಶದಲ್ಲಿ ಯಾರೂ ವಾಸಿಸರು, ಯಾವ ಮನುಷ್ಯನೂ ಹಾದು ಹೋಗನು.
44 ನಾನು ಬಾಬೆಲಿನಲ್ಲಿ ಬೇಲ್ ದೇವತೆಯನ್ನು ದಂಡಿಸಿ,
ಅದು ನುಂಗಿದ್ದನ್ನು ಅದರ ಬಾಯೊಳಗಿಂದ ಕಕ್ಕಿಸುವೆನು;
ಪ್ರವಾಹಪ್ರವಾಹವಾಗಿ ಬಾಬಿಲೋನಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಮೇಲೆ ಬರುವುದಿಲ್ಲ;
ಇದಲ್ಲದೆ ಬಾಬೆಲಿನ ಪೌಳಿಗೋಡೆಯು ಬಿದ್ದುಹೋಗುವುದು.
ಸೆರೆವಾಸಿಗಳಿಗೆ ಸಂದೇಶ
45 ನನ್ನ ಜನರೇ, ನೀವೆಲ್ಲರೂ ಬಾಬೆಲಿನೊಳಗಿಂದ ಹೊರಟು ಯೆಹೋವನ ರೋಷಾಗ್ನಿಯಿಂದ ತಪ್ಪಿಸಿಕೊಳ್ಳಿರಿ.
46 ನಿಮ್ಮ ಎದೆಯು ಕುಂದದಿರಲಿ, ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಯು ನಿಮ್ಮನ್ನು ಹೆದರಿಸದಿರಲಿ;
ಒಂದು ವರ್ಷ ಒಂದು ಸುದ್ದಿಯು, ಮತ್ತೊಂದು ವರ್ಷ ಮತ್ತೊಂದು ಸುದ್ದಿಯು ಹರಡುತ್ತಿರುವವು;
ಬಲಾತ್ಕಾರವು ದೇಶದಲ್ಲಿ ಪ್ರಬಲವಾಗುವುದು, ಅಧಿಕಾರಿಯು ಅಧಿಕಾರಿಗೆ ವಿರೋಧಿಯಾಗುವನು.
47 ಇದರಿಂದ ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ ಎಂದು ತಿಳಿದುಕೊಳ್ಳಿರಿ.
ಆ ದೇಶವೆಲ್ಲಾ ನಾಚಿಕೆಪಡುವುದು; ಅದರ ಪ್ರಜೆಗಳು ಅದರೊಳಗೆ ಹತರಾಗಿ ಬೀಳುವರು.
48 ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶವನ್ನು ನೋಡಿ ಹರ್ಷಧ್ವನಿಗೈಯುವವು;
ಏಕೆಂದರೆ ಹಾಳುಮಾಡುವವರು ಉತ್ತರ ದಿಕ್ಕಿನಿಂದ ಬಂದು ಅದರ ಮೇಲೆ ಬೀಳುವರು; ಇದು ಯೆಹೋವನ ನುಡಿ.”
49 “ಹತರಾದ ಇಸ್ರಾಯೇಲರೇ, ಬಾಬೆಲಿನ ಹಿತಕ್ಕಾಗಿ ಲೋಕದಲ್ಲೆಲ್ಲಾ ಬಹು ಜನರು ಹೇಗೆ ಹತರಾದರೋ,
ಹಾಗೆಯೇ ಬಾಬೆಲೂ ಹತವಾಗುವುದು.
50 ಖಡ್ಗಕ್ಕೆ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ;
ದೂರದಲ್ಲಿಯೂ ಯೆಹೋವನನ್ನು ಸ್ಮರಿಸಿರಿ, ಯೆರೂಸಲೇಮಿನ ಹಂಬಲ ನಿಮ್ಮ ಮನಸ್ಸಿನಲ್ಲಿ ಹುಟ್ಟಲಿ.
51 ನಾವು ನಿಂದೆಯನ್ನು ಕೇಳಿ ನಾಚಿಕೆಗೊಂಡೆವು,
‘ಯೆಹೋವನ ಆಲಯದ ಪವಿತ್ರಸ್ಥಾನಗಳನ್ನು ಮ್ಲೇಚ್ಛರು ಪ್ರವೇಶಿಸಿದ್ದರಿಂದ
ಅವಮಾನವು ನಮ್ಮ ಮುಖವನ್ನು ಮುಚ್ಚಿಕೊಂಡಿದೆ’ ಎಂಬುದಾಗಿ ಅಂದುಕೊಳ್ಳುತ್ತಿರೋ?
52 ಹೀಗಿರಲು ಯೆಹೋವನು ಇಂತೆನ್ನುತ್ತಾನೆ, ‘ಇಗೋ, ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ;
ಆಗ ಆ ದೇಶದಲ್ಲೆಲ್ಲಾ ಗಾಯಪಟ್ಟವರು ನರಳಾಡುವರು.
53 ಬಾಬೆಲ್ ಆಕಾಶದ ತನಕ ಬೆಳೆದು ಎತ್ತರವಾಗಿಯೂ ಮತ್ತು ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ,
ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು.’ ಇದು ಯೆಹೋವನ ನುಡಿ.”
ಬಾಬೆಲಿನ ಸಂಪೂರ್ಣ ವಿನಾಶ
54 “ಆಹಾ, ಬಾಬೆಲಿನಿಂದ ಮೊರೆಯೂ, ಕಸ್ದೀಯರ ದೇಶದಿಂದ ಮಹಾನಾಶದ ಶಬ್ದವೂ ಕೇಳಿ ಬರುತ್ತದೆ!
55 ಯೆಹೋವನು ಬಾಬೆಲನ್ನು ಹಾಳುಮಾಡುತ್ತಿದ್ದಾನಲ್ಲಾ, ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತಾನೆ;
ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ತರಂಗತರಂಗವಾಗಿ ಬಂದ ಶತ್ರುಗಳು ಘೋಷಿಸುತ್ತಾರೆ, ಕೂಗಿ ಆರ್ಭಟಿಸುತ್ತಾರೆ;
56 ಹಾಳುಮಾಡುವವನು ಬಾಬೆಲಿನ ಮೇಲೆ ಬಿದ್ದಿದ್ದಾನೆ, ಅದರ ಶೂರರು ಸೆರೆಯಾಗಿದ್ದಾರೆ,
ಅವರ ಬಿಲ್ಲುಗಳು ಮುರಿದುಹೋಗಿವೆ; ಏಕೆಂದರೆ ಯೆಹೋವನು ಮುಯ್ಯಿತೀರಿಸುವ ದೇವರು,
ಆತನು ಪ್ರತಿಕ್ರಿಯಿಸದೆ ಬಿಡುವುದಿಲ್ಲ.
57 ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು,
ಬಲಿಷ್ಠರು, ಇವರೆಲ್ಲರಿಗೂ ತಲೆಗೇರುವ ಮಟ್ಟಿಗೆ ಕುಡಿಸುವೆನು;
ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು
ಸೇನಾಧೀಶ್ವರನಾದ ಯೆಹೋವನೆಂಬ ಹೆಸರಿನ ರಾಜಾಧಿರಾಜನು ಅನ್ನುತ್ತಾನೆ.”
58 ಸೇನಾಧೀಶ್ವರನಾದ ಯೆಹೋವನು,
“ಬಾಬೆಲಿನ ಗಾತ್ರವಾದ ಪೌಳಿಗೋಡೆಯು ಸಂಪೂರ್ಣವಾಗಿ ನೆಲಸಮವಾಗುವುದು.
ಅದರ ಉನ್ನತದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವವು; ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥ,
ಜನಗಳು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವುದು” ಎಂದು ನುಡಿಯುತ್ತಾನೆ.
ಯೆರೆಮೀಯನ ಸಂದೇಶವನ್ನು ಬಾಬಿಲೋನಿಗೆ ಕಳುಹಿಸಿದ್ದು
59 ಮಹ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ
ನಾಲ್ಕನೆಯ ವರ್ಷ ಚಿದ್ಕೀಯನೊಡನೆ ಬಾಬಿಲೋನಿಗೆ ಪ್ರಯಾಣಮಾಡಿದಾಗ ಪ್ರವಾದಿಯಾದ ಯೆರೆಮೀಯನು ಅವನಿಗೆ ಕೊಟ್ಟ ಅಪ್ಪಣೆ. (ಸೆರಾಯನು ಯಾರೆಂದರೆ ಸೇನೆಯ ಪ್ರಧಾನ ಅಧಿಕಾರಿ.)
60 ಯೆರೆಮೀಯನು ಬಾಬಿಲೋನಿಗೆ ಸಂಭವಿಸತಕ್ಕ ಎಲ್ಲಾ ಕೇಡಿನ ವಿಷಯವನ್ನು ಅಂದರೆ ಬಾಬೆಲಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲಾ ಸಂಗತಿಗಳನ್ನು ಒಂದು ಗ್ರಂಥವನ್ನಾಗಿ ಬರೆದನು. 61 ಅವನು ಸೆರಾಯನಿಗೆ ಹೀಗೆ ಹೇಳಿದನು, “ನೋಡು, ನೀನು ಬಾಬಿಲೋನಿಗೆ ಸೇರಿದ ಮೇಲೆ ಈ ಮಾತುಗಳನ್ನೆಲ್ಲಾ ಓದಿ ಹೇಳಿ, 62 ‘ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ, ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ’ ಎಂಬುದಾಗಿ ಅರಿಕೆಮಾಡಬೇಕು. 63 ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಇದಕ್ಕೆ ಕಲ್ಲುಕಟ್ಟಿ, ಯೂಫ್ರೆಟಿಸ್ ನದಿಯ ಮಧ್ಯದೊಳಗೆ ಹಾಕಿ, 64 ಯೆಹೋವನು ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಆ ಪಟ್ಟಣವೂ ಹೀಗೆಯೇ ಮುಳುಗುವುದು, ಮತ್ತೆ ಏಳದು” ಎಂದು ಹೇಳು ಎಂದನು. ಜನರು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವುದು ಎಂಬ ಮಾತಿನವರೆಗೆ ಯೆರೆಮೀಯನ ಪ್ರವಾದನೆಯಾಯಿತು.
* 51:1 51:1 ಲೇಬ್ ಕಾಮೈ ಕಸ್ಧೀಯರ ಅಥವಾ ಕಲ್ದೀಯರ ದೇಶದ ರಹಸ್ಯವಾದ ಹೆಸರು. 51:1 51:1 ನಾಶನದ ಗಾಳಿಯನ್ನು ನಾಶನದ ಆತ್ಮವನ್ನು. 51:11 51:11 ಗುರಾಣಿಗಳನ್ನು ಸನ್ನದ್ಧ ಮಾಡಿರಿ ಗುರಾಣಿಗಳನ್ನು ತೆಗೆದುಕೊಳ್ಳಿರಿ