12
ದ್ರಾಕ್ಷಿಯ ತೋಟದ ಸಾಮ್ಯ
ಆಗ ಯೇಸು ಅವರೊಂದಿಗೆ *ಸಾಮ್ಯಗಳಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು, “ಒಬ್ಬ ಮನುಷ್ಯನುಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಿಯ ಆಲೆಗಾಗಿ ಒಂದು ಗುಂಡಿಯನ್ನು ತೆಗೆಸಿಕಾವಲು ಗೋಪುರವನ್ನು ಕಟ್ಟಿಸಿದನು. ಬಳಿಕ ಆ ತೋಟವನ್ನು ದ್ರಾಕ್ಷಿಯ ತೋಟಗಾರರಿಗೆ ಗುತ್ತಿಗೆಗೆ ಕೊಟ್ಟು, ಹೊರದೇಶಕ್ಕೆ ಹೊರಟು ಹೋದನು. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಸೇವಕನನ್ನು ಗುತ್ತಿಗೆದಾರರ ಬಳಿಗೆ ಕಳುಹಿಸಿದನು. ಆದರೆ ಅವರು ಅವನನ್ನು ಹಿಡಿದುಕೊಂಡು ಹೊಡೆದು ಏನೂ ಕೊಡದೆ ಬರಿಗೈಯಲ್ಲಿ ಕಳುಹಿಸಿಬಿಟ್ಟರು. ಆ ತೋಟದ ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಲು ಅವರು ಅವನ ತಲೆಯ ಮೇಲೆ ಹೊಡೆದು ಗಾಯಗೊಳಿಸಿ ಅಪಮಾನಮಾಡಿ ಕಳುಹಿಸಿಬಿಟ್ಟರು. ಆದರೂ ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ಇವನನ್ನು ಅವರು ಕೊಂದು ಹಾಕಿದರು. ಇನ್ನೂ ಅನೇಕರಿಗೆ ಅವರು ಹಾಗೆಯೇ ಮಾಡಿ, ಅವರಲ್ಲಿ ಕೆಲವರನ್ನು ಹೊಡೆದರು ಮತ್ತು ಕೆಲವರನ್ನು ಕೊಂದು ಹಾಕಿದರು. ಅವನಿಗೆ ಕಳುಹಿಸಲು ಇನ್ನು ಒಬ್ಬನಿದ್ದನು. ಯಾರೆಂದರೆ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನು. ತನ್ನ ಮಗನಿಗೆ ಅವರು ಮರ್ಯಾದೆ ಕೊಡಬಹುದೆಂದು ಯಜಮಾನನು ಕೊನೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗುತ್ತಿಗೆದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು’ ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡು, ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷಿಯ ತೋಟದಿಂದ ಹೊರಗೆ ಬಿಸಾಡಿದರು. ಹಾಗಾದರೆ ಆ ದ್ರಾಕ್ಷಾ ತೋಟದ ಯಜಮಾನನು ಏನು ಮಾಡುವನು? ಅವನು ಬಂದು ಆ ಗುತ್ತಿಗೆದಾರರನ್ನು ಸಂಹರಿಸಿ ತನ್ನ ದ್ರಾಕ್ಷಾತೋಟವನ್ನು ಬೇರೆಯವರಿಗೆ ಒಪ್ಪಿಸುವನು.
10  §“ ‘ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು.
11  ಇದು ಕರ್ತನಿಂದಲೇ ಆಯಿತು,
ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಶಾಸ್ತ್ರವಚನಗಳನ್ನೂ ನೀವು ಓದಲಿಲ್ಲವೇ?’ ” ಎಂದನು.
12 ಯೇಸು ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದ್ದಾನೆ ಎಂದು ಅವರು ತಿಳಿದುಕೊಂಡು ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರಿಗೆ ಭಯಪಟ್ಟು ಆತನನ್ನು ಬಿಟ್ಟುಹೋದರು.
ಕೈಸರನಿಗೆ ತೆರಿಗೆ ಕೊಡುವ ವಿಷಯ
ಮತ್ತಾ 22:15-46; ಲೂಕ 20:20-44
13 ಆ ಮೇಲೆ ಅವರು ಯೇಸುವನ್ನು ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ, ಹೆರೋದ್ಯರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು. 14 ಇವರು ಬಂದು, “ಬೋಧಕನೇ ನೀನು ಸತ್ಯವಂತನು, ಯಾವ ಮನುಷ್ಯನನ್ನು ಲಕ್ಷಿಸದವನೂ, ಮುಖದಾಕ್ಷಿಣ್ಯ ತೋರಿಸದವನೂ, ಸತ್ಯಕ್ಕನುಸಾರವಾಗಿ ದೈವಮಾರ್ಗವನ್ನು ಬೋಧಿಸುವವನೂ ಎಂದು ನಾವು ಬಲ್ಲೆವು. *ಕೈಸರನಿಗೆ ಸುಂಕ ಕೊಡುವುದು ಧರ್ಮಸಮ್ಮತವೋ? ಅಲ್ಲವೋ? ನಾವದನ್ನು ಕೊಡಬೇಕೋ ಬೇಡವೋ?” ಎಂದು ಆತನನ್ನು ಕೇಳಿದರು. 15 ಆದರೆ ಯೇಸು ಅವರ ಕಪಟತನವನ್ನು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತಂದು ನನಗೆ ತೋರಿಸಿರಿ ನಾನು ಅದನ್ನು ನೋಡುತ್ತೇನೆ” ಎಂದು ಹೇಳಲು ಅವರು ತಂದರು. 16 ಆಗ ಆತನು ಇದರ “ಮೇಲಿರುವುದು ಯಾರ ಮುಖಮುದ್ರೆ? ಮತ್ತು ಯಾರ ಲಿಪಿ?” ಎಂದು ಕೇಳಿದ್ದಕ್ಕೆ ಅವರು ಕೈಸರನದು ಅಂದರು. 17 ಯೇಸು, “ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ” ಎಂದು ಹೇಳಿದನು. ಅದಕ್ಕೆ ಅವರು ಆತನ ವಿಷಯವಾಗಿ ಬಹು ಆಶ್ಚರ್ಯಪಟ್ಟರು.
ಪುನರುತ್ಥಾನದ ಕುರಿತಾದ ಪ್ರಶ್ನೆ
18 ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು, 19 ಆತನನ್ನು ಪ್ರಶ್ನೆಮಾಡಿದ್ದೇನಂದರೆ, “ಬೋಧಕನೇ, ‘ಅಣ್ಣನಾದವನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಆಕೆಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು’ ಮೋಶೆಯು ನಮಗಾಗಿ ಬರೆದಿಟ್ಟಿದ್ದಾನಲ್ಲವೇ.
20 “ಒಮ್ಮೆ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. 21 ಎರಡನೆಯವನೂ ಆಕೆಯನ್ನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಅದರಂತೆ ಮೂರನೆಯವನು. 22 ಇದೇ ಪ್ರಕಾರ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತರು. ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 23 ಪುನರುತ್ಥಾನದಲ್ಲಿ ಅವರು ಎದ್ದುಬರುವಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ” ಎಂದರು. 24 ಅದಕ್ಕೆ ಯೇಸು, “ನೀವು ಶಾಸ್ತ್ರವಚನಗಳನ್ನಾದರೂ, ದೇವರ ಶಕ್ತಿಯನ್ನಾದರೂ ತಿಳಿಯದೆ ಇರುವುದರಿಂದಲೇ ತಪ್ಪುವವರಾಗಿದ್ದೀರಿ? 25  ಸತ್ತವರು ಬದುಕಿ ಎದ್ದಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 26  ಆದರೆ ಸತ್ತವರು ಬದುಕಿ ಬರುತ್ತಾರೆಂಬುದನ್ನು ಕುರಿತು ಹೇಳಬೇಕಾದರೆ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಮಾತನಾಡಿದನೆಂದು ನೀವು ಮೋಶೆಯ ಗ್ರಂಥದಲ್ಲಿ ಓದಲಿಲ್ಲವೋ?’ 27  ಆತನು ಜೀವಂತರಿಗೆ ದೇವರಾಗಿದ್ದಾನೆ ಹೊರತು ಸತ್ತವರಿಗಲ್ಲ. ಈ ವಿಷಯದಲ್ಲಿ ನೀವು ಬಹು ತಪ್ಪಾದ ಅಭಿಪ್ರಾಯವುಳ್ಳವರಾಗಿದ್ದಿರಿ” ಎಂದು ಹೇಳಿದನು.
ಮುಖ್ಯವಾದ ಆಜ್ಞೆ
28 ಶಾಸ್ತ್ರಿಗಳಲ್ಲಿ ಒಬ್ಬನು ಅವರ ವಾದವನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರ ಕೊಟ್ಟನೆಂದು ತಿಳಿದು ಆತನ ಹತ್ತಿರಕ್ಕೆ ಬಂದು, “ಎಲ್ಲಾ ಆಜ್ಞೆಗಳಲ್ಲಿ ಮುಖ್ಯವಾದ್ದದು ಯಾವುದು?” ಎಂದು ಆತನನ್ನು ಕೇಳಿದರು. 29 ಅದಕ್ಕೆ ಯೇಸು, §“ ‘ಇಸ್ರಾಯೇಲ್ ಜನರೇ ಕೇಳಿ, ನಮ್ಮ ದೇವರಾದ ಕರ್ತನು*ಒಬ್ಬನೇ ದೇವರು. 30  ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು’ ಎಂಬುದೇ ಮುಖ್ಯವಾದ ಆಜ್ಞೆ. 31  ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರ ಕೊಟ್ಟನು. 32 ಆಗ ಆ ಶಾಸ್ತ್ರಿಯು, “ಬೋಧಕನೇ, ನೀನು ಚೆನ್ನಾಗಿ ಹೇಳಿದೆ. ಸತ್ಯವನ್ನೇ ಹೇಳಿದಿ ದೇವರು ಒಬ್ಬನೇ, ಆತನ ಹೊರತು ಬೇರೊಬ್ಬ ದೇವರಿಲ್ಲ ಎಂದು ಹೇಳಿದನು. 33 ಆತನನ್ನು ಪೂರ್ಣಹೃದಯದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವುದು ಇವೆರಡೂ §ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಮೇಲಾದುವು” ಅಂದನು.
34 ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
ದಾವೀದಕುಮಾರನ ಕುರಿತಾದ ಪ್ರಶ್ನೆ
35 ಯೇಸು ದೇವಾಲಯದಲ್ಲಿ ಉಪದೇಶಮಾಡುತ್ತಿರಲಾಗಿ ಆತನು ಅವರನ್ನು, “ಶಾಸ್ತ್ರಿಗಳು ಕ್ರಿಸ್ತನನ್ನು ದಾವೀದನ ಮಗನೆಂದು ಹೇಳುತ್ತಾರಲ್ಲಾ ಅದು ಹೇಗೆ?
36  *“ ‘ನಾನು ನಿನ್ನ ಶತ್ರುಗಳನ್ನು ನಿನ್ನ ಪಾದದಡಿ ಹಾಕುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು
ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದ್ದಾನೆ.
37  ದಾವೀದನೇ ಆತನನ್ನು ‘ಕರ್ತನೆಂದು’ ಹೇಳಿರುವಲ್ಲಿ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಪ್ರಶ್ನಿಸಿದನು. ಜನರ ದೊಡ್ಡ ಸಮೂಹವು ಆತನ ಮಾತನ್ನು ಸಂತೋಷದಿಂದ ಕೇಳುತ್ತಿತ್ತು.
ಯೇಸು ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆ ಹೇಳಿದ್ದು
ಮತ್ತಾ 23; ಲೂಕ 20:45-47
38 ಆತನು ಉಪದೇಶಮಾಡಿ ಹೇಳಿದ್ದೇನಂದರೆ, “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿಲುವಂಗಿಯನ್ನು ಧರಿಸಿಕೊಂಡು ತಿರುಗಾಡುತ್ತಾ, 39  ಸಂತೆಯ ಬೀದಿಗಳಲ್ಲಿ ನಮಸ್ಕಾರಗಳನ್ನೂ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ, ಔತಣಗಳಲ್ಲಿ ಪ್ರಥಮ ಸ್ಥಾನಗಳನ್ನೂ ಅವರು ಇಷ್ಟಪಡುವವರಾಗಿದ್ದಾರೆ. 40  ಇವರು ವಿಧವೆಯರ ಮನೆಗಳನ್ನು ದೋಚಿ ತೋರಿಕೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಿನ ದಂಡನೆಯನ್ನು ಹೊಂದುವರು” ಎಂದನು.
ವಿಧವೆಯ ಕಾಣಿಕೆ ಹಾಗು ದೇವರಿಗೆ ಪ್ರಿಯವಾದ ಕಾಣಿಕೆಯ ಬಗ್ಗೆ
ಲೂಕ 21:1-4
41 ಯೇಸು ದೇವಾಲಯದ ಆವರಣದಲ್ಲಿ ಕಾಣಿಕೆ ಪೆಟ್ಟಿಗೆಯ ಎದುರಿಗೆ ಕುಳಿತುಕೊಂಡು ಜನರು ಅದರಲ್ಲಿ ಹಣ ಹಾಕುವುದನ್ನು ಗಮನಿಸುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಹೆಚ್ಚೆಚ್ಚು ಹಣ ಹಾಕುತ್ತಿದ್ದರು. 42 ಒಬ್ಬ ಬಡ ವಿಧವೆಯು ಬಂದು, ಎರಡು ಕಾಸು ಬೆಲೆಯುಳ್ಳ ಒಂದು ದುಗ್ಗಾಣಿ ಹಾಕಿದಳು. 43 ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತಲೂ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 44  ಹೇಗೆಂದರೆ, ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈ ವಿಧವೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದ ಎಲ್ಲವನ್ನೂ ಕಾಣಿಕೆಯಾಗಿ ಹಾಕಿದ್ದಾಳೆ” ಎಂದನು.
* 12:1 12:1 ಮಾರ್ಕ 4:2. 12:1 12:1 ಯೆಶಾ 5:1, 2 12:1 12:1 ಕಾವಲು ಗೋಪುರವನ್ನು § 12:10 12:10 ಕೀರ್ತ 118:22, 23 * 12:14 12:14 ಅಂದರೆ, ರೋಮ್ ಸಾಮ್ರಾಜ್ಯದ ಚಕ್ರವರ್ತಿಗೆ. 12:19 12:19 ಧರ್ಮೋ 25:5. 12:26 12:26 ವಿಮೋ 3:6. § 12:29 12:29 ಧರ್ಮೋ 6:4, 5: * 12:29 12:29 ಅಥವಾ: ಅದ್ವಿತೀಯನು. ಮೂಲ: ಒಬ್ಬನೇ ಕರ್ತನು. 12:31 12:31 ಯಾಜ 19:18. 12:32 12:32 ಧರ್ಮೋ 4:35. § 12:33 12:33 1 ಸಮು 15:22. * 12:36 12:36 ಕೀರ್ತ 110:1.