27
ಗಂಡಾಂತರದಲ್ಲಿ ಭಕ್ತನ ನಂಬಿಕೆ
ದಾವೀದನ ಕೀರ್ತನೆ.
ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ;
ನಾನು ಯಾರಿಗೆ ಭಯಪಟ್ಟೆನು?
ಯೆಹೋವನು ನನ್ನ ಪ್ರಾಣದ ಆಧಾರವು;
ನಾನು ಯಾರಿಗೆ ಹೆದರೇನು?
ನನ್ನನ್ನು ಬಾಧಿಸುತ್ತಿರುವ ದುರ್ವೈರಿಗಳು
ನನ್ನನ್ನು ನುಂಗಿಬಿಡಬೇಕೆಂದು ಬಂದು,
ತಾವೇ ನೆಲಕ್ಕೆ ಬಿದ್ದುಹೋದರು.
ನನಗೆ ವಿರುದ್ಧವಾಗಿ ದಂಡು ಬಂದಿಳಿದರೂ ನನಗೇನೂ ಭಯವಿಲ್ಲ;
ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ,
ಭರವಸವುಳ್ಳವನಾಗಿಯೇ ಇರುವೆನು.
ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ,
ಆತನ ಪ್ರಸನ್ನತೆಯನ್ನು ನೋಡುವುದಕ್ಕೂ,
ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ
ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು
ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು.
ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು;
ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು;
ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು.
ಹೀಗಿರುವುದರಿಂದ ನನ್ನ ಸುತ್ತಲಿರುವ ವೈರಿಗಳ ಮೇಲೆ,
ನನ್ನ ತಲೆ ಎತ್ತಲ್ಪಟ್ಟಿರುವುದು;
ನಾನು ಯೆಹೋವನ ಗುಡಾರದಲ್ಲಿ,
ಉತ್ಸಾಹಧ್ವನಿಯೊಡನೆ ಯಜ್ಞಗಳನ್ನು ಸಮರ್ಪಿಸುವೆನು.
ಆತನನ್ನು ಹಾಡುತ್ತಾ ವಾದ್ಯಬಾರಿಸುವೆನು.
ಯೆಹೋವನೇ, ನಿನಗೆ ಗಟ್ಟಿಯಾಗಿ ಮೊರೆಯಿಡುತ್ತೇನೆ;
ನನ್ನನ್ನು ಕರುಣಿಸಿ, ಸದುತ್ತರವನ್ನು ದಯಪಾಲಿಸು.
“ನನ್ನ ಸಾನ್ನಿಧ್ಯಕ್ಕೆ ಬಾ” ಎಂಬ ನಿನ್ನ ಮಾತಿಗೆ,
ನಾನು, “ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು” ಎಂದು ಉತ್ತರಕೊಟ್ಟೆನು.
ನನಗೆ ವಿಮುಖನಾಗಿರಬೇಡ;
ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ.
ನೀನು ನನಗೆ ಸಹಾಯಕನಾಗಿಯೇ ಇದ್ದೆಯಲ್ಲವೇ;
ನನ್ನನ್ನು ರಕ್ಷಿಸಿದ ದೇವರೇ, ಕೈಬಿಡಬೇಡ, ತೊರೆದುಬಿಡಬೇಡ.
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು;
ಹೊಂಚುಹಾಕಿರುವವರಿಗೆ ಸಿಕ್ಕದ ಹಾಗೆ ನನ್ನನ್ನು ಸಮವಾದ ದಾರಿಯಲ್ಲಿ ನಡೆಸು.
12 ಸುಳ್ಳುಸಾಕ್ಷಿಗಳೂ ಬೆದರಿಸುವವರೂ ನನಗೆ ವಿರುದ್ಧವಾಗಿ ಎದ್ದಿದ್ದಾರೆ;
ಇಂಥ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡ.
13 ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು
ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ.
14 ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು;
ನಿನ್ನ ಹೃದಯವು ಧೈರ್ಯದಿಂದಿರಲಿ;
ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.