39
ಮನುಷ್ಯನ ಅಸ್ಥಿರತೆಯನ್ನು ದೇವರ ಮುಂದೆ ಅರಿಕೆಮಾಡುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದೂತೂನನ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಕೀರ್ತನೆ.
“ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು,
ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕಡಿವಾಣ ಹಾಕಿಕೊಂಡಿರುವೆನು” ಅಂದುಕೊಂಡೆನು.
ನಾನು ಮೌನವಾಗಿದ್ದೆನು;
ಒಳ್ಳೆಯದನ್ನಾದರೂ ಆಡದೆ ಸುಮ್ಮನಿದ್ದೆನು;
ಆದರೆ ನನ್ನ ಸಂಕಟವು ಹೆಚ್ಚಿತು.
ನನ್ನ ಹೃದಯವು ಆತಂಕದಿಂದ ಕೂಡಿತ್ತು;
ನಾನು ಹೆಚ್ಚಾಗಿ ಯೋಚಿಸುತ್ತಿರುವಲ್ಲಿ ತಾಪ ಹೆಚ್ಚಿತು.
ಆಗ ನಾನು ಬಾಯಿ ಬಿಟ್ಟು,
“ಯೆಹೋವನೇ, ನನಗೆ ಅವಸಾನವುಂಟೆಂದೂ,
ನನ್ನ ಜೀವಮಾನವು ಅತ್ಯಲ್ಪವೆಂದೂ,
ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು.
ನನ್ನ ಆಯುಷನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ;
ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ” ಅಂದೆನು.
ಮನುಷ್ಯನೆಂಬವನು ಎಷ್ಟು ಸ್ಥಿರನೆಂದು ಕಂಡರೂ ಬರಿ ಉಸಿರೇ.
ಸೆಲಾ
ನರರು ಮಾಯಾರೂಪವಾದ ನೆರಳಿನಂತೆ ಸಂಚರಿಸುವವರು;
ಅವರು ಸುಮ್ಮಸುಮ್ಮನೆ ಗಡಿಬಿಡಿಮಾಡುವವರು;
ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತಾರೆ,
ಆದರೆ ಅದು ಯಾರ ಪಾಲಾಗುವುದೋ ತಾವೇ ತಿಳಿಯರು.
“ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವುದಕ್ಕೆ ಕಾದುಕೊಳ್ಳಲಿ?
ನೀನೇ ನನ್ನ ನಿರೀಕ್ಷೆ.
ಎಲ್ಲಾ ದ್ರೋಹಗಳಿಂದ ನನ್ನನ್ನು ಬಿಡುಗಡೆಮಾಡು;
ಮೂರ್ಖರ ನಿಂದೆಗೆ ಗುರಿಮಾಡಬೇಡ.
ನೀನೇ ಇದನ್ನು ಬರಮಾಡಿದ್ದರಿಂದ
ನಾನು ಏನೂ ಹೇಳದೆ ಮೌನವಾಗಿರುವೆನು.
10 ನಿನ್ನ ದಂಡನೆಯನ್ನು ತೊಲಗಿಸು;
ನಿನ್ನ ಕೈಹೊಡೆತದಿಂದ ಸಾಯುವ ಹಾಗಿದ್ದೇನಲ್ಲಾ.
11 ನೀನು ನರನನ್ನು ಪಾಪದ ನಿಮಿತ್ತ ಗದರಿಸಿ ಶಿಕ್ಷಿಸುವಾಗ,
ಅವನ ಚೆಲುವಿಕೆಯು ನುಸಿ ಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ.
ಮನುಷ್ಯನೆಂಬವನು ಬರಿ ಉಸಿರೇ.
ಸೆಲಾ
12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಲಾಲಿಸು;
ನನ್ನ ಮೊರೆಗೆ ಕಿವಿಗೊಡು. ನನ್ನ ಕಣ್ಣೀರನ್ನು ನೋಡು, ಸುಮ್ಮನಿರಬೇಡ.
ನನ್ನ ಪೂರ್ವಿಕರಂತೆಯೇ ನಾನು ನಿನ್ನ ಮರೆಹೊಕ್ಕಿರುವ ಪ್ರವಾಸಿಯೂ,
ಪರದೇಶದವನೂ ಆಗಿದ್ದೇನಲ್ಲಾ.
13 ನಾನು ಅಗಲಿ ಹೋಗಿ ಇಲ್ಲವಾಗುವುದಕ್ಕೆ ಮೊದಲು,
ಸ್ವಲ್ಪ ಸಂತೋಷಪಡುವಂತೆ ನಿನ್ನ ಕೋಪದೃಷ್ಟಿಯನ್ನು
ನನ್ನ ಕಡೆಯಿಂದ ತಿರುಗಿಸಿಕೊಳ್ಳಬೇಕು, ದೇವಾ.”