ನಹೂಮನು
ಗ್ರಂಥಕರ್ತೃತ್ವ
ನಹೂಮ ಪುಸ್ತಕದ ಗ್ರಂಥಕರ್ತನು ತನ್ನನ್ನು ಎಲ್ಕೋಷ್ ಊರಿನವನಾದ ನಹೂಮನೆಂದು (ಹೀಬ್ರೂ ಭಾಷೆಯಲ್ಲಿ “ಸಾಂತ್ವನಪಡಿಸುವವನು” ಅಥವಾ “ಸಂತೈಸುವವನು”) ಗುರುತಿಸಿಕೊಳ್ಳುತ್ತಾನೆ (1:1). ಅಶ್ಶೂರದ ಜನರಲ್ಲಿ, ನಿರ್ದಿಷ್ಟವಾಗಿ ಅವರ ರಾಜಧಾನಿಯಾದ ನಿನೆವೆಯಲ್ಲಿ ಪಶ್ಚಾತ್ತಾಪಡುವಂತೆ ಅವರಿಗೆ ಕರೆ ನೀಡಲು ಪ್ರವಾದಿಯಾದ ನಹೂಮನು ಕಳುಹಿಸಲ್ಪಟ್ಟನು. ನಿನವೆಯವರು ಪಶ್ಚಾತ್ತಾಪಪಡುವಂತೆ ಮಾಡಿದ ಯೋನನ ಸಂದೇಶದ 150 ವರ್ಷಗಳ ನಂತರ ಇದು ಸಂಭವಿಸಿತು, ಆದ್ದರಿಂದ ಅವರು ತಮ್ಮ ಹಿಂದಿನ ವಿಗ್ರಹಗಳ ಬಳಿಗೆ ಹಿಂದಿರುಗಿ ಹೋದರು ಎಂಬುದು ಸ್ಪಷ್ಟವಾಗಿ ಕಾಣಬರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 620-612 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ನಹೂಮ ಪುಸ್ತಕದ ದಿನಾಂಕವನ್ನು ನಿರ್ದುಷ್ಟವಾಗಿಯೂ ಸರಳವಾಗಿಯೂ ನಿರ್ಣಯಿಸಬಹುದು, ಏಕೆಂದರೆ ಇದು ಸ್ಪಷ್ಟವಾಗಿ ಎರಡು ಪ್ರಸಿದ್ಧ ಐತಿಹಾಸಿಕ ಘಟನೆಗಳ ನಡುವೆ ನಡೆದಿತ್ತು: ತೇಬೆಸ್ಸಿನ (ಆಮೋನಿನ) ಪತನ ಮತ್ತು ನಿನವೆಯ ಪತನ.
ಸ್ವೀಕೃತದಾರರು
ನಹೂಮನ ಪ್ರವಾದನೆಯನ್ನು ಉತ್ತರ ರಾಜ್ಯದ ಹತ್ತು ಕುಲಗಳನ್ನು ಸೆರೆಹಿಡಿದು ಕೊಂಡೊಯ್ಯಲಾದ ಅಶ್ಶೂರ್ಯದವರಿಗೂ, ಮತ್ತು ಅದೇ ರೀತಿಯಲ್ಲಿ ತಮಗೂ ಸಂಭವಿಸಬಹುದೆಂದು ಭಯಪಟ್ಟ ದಕ್ಷಿಣ ರಾಜ್ಯವಾದ ಯೆಹೂದದವರಿಗೂ ಸಹ ನುಡಿಯಲಾಯಿತು.
ಉದ್ದೇಶ
ದೇವರ ನ್ಯಾಯವು ಯಾವಾಗಲೂ ಸರಿಯಾಗಿರುತ್ತದೆ ಮತ್ತು ಯಾವಾಗಲೂ ನಂಬಲರ್ಹವಾಗಿರುತ್ತದೆ. ಆತನು ಒಂದು ಬಾರಿಗೆ ಕರುಣೆಯನ್ನು ದಯಪಾಲಿಸಲು ಆರಿಸಿಕೊಳ್ಳಬೇಕೇ, ಆ ಉತ್ತಮ ದಾನವು ಅಂತ್ಯದಲ್ಲಿ ಎಲ್ಲರಿಗೋಸ್ಕರವಾಗಿರುವ ಕರ್ತನ ನ್ಯಾಯದ ಪರಮ ತಿಳುವಳಿಕೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ದುರ್ಮಾರ್ಗಗಳಲ್ಲಿಯೇ ಮುಂದುವರೆಯುವುದಾದರೆ ಅವರಿಗೆ ಏನು ಸಂಭವಿಸಬಹುದು ಎಂಬ ತನ್ನ ವಾಗ್ದಾನದೊಂದಿಗೆ ದೇವರು ತನ್ನ ಪ್ರವಾದಿಯಾದ ಯೋನನನ್ನು 150 ವರ್ಷಗಳ ಹಿಂದೆಯೇ ಅವರ ಬಳಿಗೆ ಕಳುಹಿಸಿದ್ದನು. ಆ ಸಮಯದಲ್ಲಿ ಜನರು ಪಶ್ಚಾತ್ತಾಪಪಟ್ಟಿದ್ದರು ಆದರೆ ಈಗ ಹಿಂದೆ ಮಾಡುತ್ತಿದ್ದಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿ ಜೀವಿಸುತ್ತಿದ್ದರು. ಅಶ್ಶೂರ್ಯದವರು ತಮ್ಮ ವಿಜಯಗಳಲ್ಲಿ ಸಂಪೂರ್ಣವಾಗಿ ಕ್ರೂರರಾಗಿದ್ದರು. ಈಗ ನಹೂಮನು ಯೆಹೂದದ ಜನರಿಗೆ ಹತಾಶರಾಗಬೇಡಿರಿ ಏಕೆಂದರೆ ದೇವರು ನ್ಯಾಯತೀರ್ಪನ್ನು ಉಚ್ಚರಿಸಿದ್ದಾನೆ ಮತ್ತು ಅಶ್ಶೂರ್ಯದವರು ತಾವು ಅರ್ಹರಾಗಿರುವಂಥದ್ದನ್ನು ಶೀಘ್ರದಲ್ಲಿಯೇ ಹೊಂದಿಕೊಳ್ಳುತ್ತಾರೆ ಎಂದು ಹೇಳಿದನು.
ಮುಖ್ಯಾಂಶ
ಸಾಂತ್ವನ
ಪರಿವಿಡಿ
1. ದೇವರ ಪ್ರಭಾವ — 1:1-14
2. ದೇವರ ನ್ಯಾಯತೀರ್ಪು ಮತ್ತು ನಿನವೆ — 1:15-3:19
1
ನಿನವೆ ಪಟ್ಟಣದ ಬಗ್ಗೆ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಎಂಬ ಪ್ರವಾದಿಗೆ ಆದ ದೈವದರ್ಶನದ ಗ್ರಂಥ.
ನಿನವೆಯ ಮೇಲೆ ದೇವರ ಕೋಪ
ಯೆಹೋವನು ಸ್ವಗೌರವವನ್ನು ಕಾಪಾಡಿಕೊಳ್ಳುವ ದೇವರು. ಆತನು ಮುಯ್ಯಿತೀರಿಸುವವನು; ಹೌದು ಯೆಹೋವನು ಮುಯ್ಯಿತೀರಿಸುವವನು, ಕೋಪಭರಿತನು; ಯೆಹೋವನು ತನ್ನ ವಿರೋಧಿಗಳಿಗೆ ಮುಯ್ಯಿತೀರಿಸುತ್ತಾನೆ. ತನ್ನ ಶತ್ರುಗಳ ಮೇಲೆ ದೀರ್ಘರೋಷವಿಡುತ್ತಾನೆ. ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ, ಅಪರಾಧಿಗಳನ್ನು ಶಿಕ್ಷಿಸದೆ ಬಿಡನು; ಯೆಹೋವನು ಬಿರುಗಾಳಿಯಲ್ಲಿಯೂ, ತುಫಾನಿನಲ್ಲಿಯೂ ನಡೆಯುತ್ತಾನೆ; ಮೋಡಗಳು ಆತನ ಹೆಜ್ಜೆಯಿಂದೇಳುವ ಧೂಳು.
ಆತನು ಸಮುದ್ರವನ್ನು ಗದರಿಸಿ ಒಣಗಿಸುತ್ತಾನೆ, ಸಕಲನದಿಗಳನ್ನು ಬತ್ತಿಸುತ್ತಾನೆ; ಬಾಷಾನೂ ಮತ್ತು ಕರ್ಮೆಲ್ ಹೊಲಗಳೂ ಕಂದುತ್ತವೆ. ಲೆಬನೋನಿನ ಚಿಗುರು ಬಾಡುತ್ತದೆ. ಆತನ ಮುಂದೆ ಬೆಟ್ಟಗಳು ಅದರುತ್ತವೆ, ಗುಡ್ಡಗಳು ಕರಗುತ್ತವೆ; ಆತನ ದರ್ಶನಕ್ಕೆ ಭೂಮಿಯು ಕಂಪಿಸುತ್ತದೆ, ಹೌದು, ಲೋಕವೂ ಲೋಕನಿವಾಸಿಗಳೆಲ್ಲರೂ ತಲ್ಲಣಿಸುತ್ತವೆ.
ಆತನ ಸಿಟ್ಟಿಗೆ ಯಾರು ಎದುರು ನಿಲ್ಲಲು ಸಾಧ್ಯ? ಆತನ ರೋಷಾಗ್ನಿಯ ಎದುರು ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ. ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
ಯೆಹೋವನು ತನ್ನ ಪ್ರಜೆಯನ್ನು ಬಾಧಿಸುವವರಿಗೆ ಮಾಡುವ ದಂಡನೆ
ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮೊರೆಹೊಕ್ಕವರನ್ನು ಬಲ್ಲನು. ಆದರೆ ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ ನಿನವೆಯ ಸ್ಥಾನವನ್ನು ತೀರಾ ಹಾಳುಮಾಡಿ ತನ್ನ ವಿರೋಧಿಗಳನ್ನು* 1:8 ತನ್ನ ವಿರೋಧಿಗಳನ್ನು ನಿನವೆ ಪಟ್ಟಣ. ಹಿಂದಟ್ಟಿ ಅಂಧಕಾರಕ್ಕೆ ತಳ್ಳುವನು.
ನೀವು ಯೆಹೋವನಿಗೆ ವಿರುದ್ಧವಾಗಿ ಯಾವರೀತಿಯ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಸಂಪೂರ್ಣವಾಗಿ ಹಾಳುಮಾಡುವನು; ಎರಡನೆಯ ಸಾರಿ ಅಪಾಯವು ತಲೆ ಎತ್ತದಂತೆ ಪೂರ್ಣವಾಗಿ ನಿಮ್ಮನ್ನು ನಾಶಮಾಡುವನು. 10 ಆತನ ವೈರಿಗಳು ಮುಳ್ಳುಗಳಂತೆ ಹೆಣೆದುಕೊಂಡಿದ್ದರೂ, ಮಧ್ಯಪಾನದಲ್ಲೇ ಮತ್ತರಾಗಿ ಮುಳುಗಿಹೋಗಿದ್ದರೂ, ಒಣಗಿದ ಹುಲ್ಲಂತೆ ಬೆಂಕಿಗೆ ತುತ್ತಾಗುವರು. 11 ನಿನವೆಯೇ, ಯೆಹೋವನಿಗೆ ವಿರುದ್ಧವಾಗಿ ದುಷ್ಟ ಆಲೋಚನೆ ಮಾಡಿ ಕೇಡನ್ನು ಕಲ್ಪಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.
12 ಯೆಹೋವನು ಇಂತೆನ್ನುತ್ತಾನೆ, “ನಿನ್ನ ಶತ್ರುಗಳು ಎಷ್ಟು ಪ್ರಬಲವಾಗಿದ್ದರೂ, ಅವರ ಸಂಖ್ಯೆ ಎಷ್ಟು ಹೆಚ್ಚಿದ್ದರೂ ಅವರು ಕಡಿಯಲ್ಪಡುವರು. ಆ ದುರಾಲೋಚಕನು ಇಲ್ಲವಾಗುವನು. ನಿನ್ನನ್ನು ಬಾಧಿಸಿದ್ದೇನೆ, ಆದರೆ ಇನ್ನು ಬಾಧಿಸೆನು. 13 ಅವನು ಹೇರಿದ ನೊಗವನ್ನು ಈಗ ನಿನ್ನ ಮೇಲಿನಿಂದ ಮುರಿದು ಕಟ್ಟಿದ್ದ ಕಣ್ಣಿಗಳನ್ನು ಕಿತ್ತುಹಾಕುವೆನು.”
14 ಅಶ್ಶೂರವೇ, ನಿನ್ನ ಹೆಸರಿನ ಸಂತಾನ ಬೀಜವು ಇನ್ನು ಬಿತ್ತಲ್ಪಡಬಾರದೆಂದು ಯೆಹೋವನಾದ ನಾನು ಆಜ್ಞಾಪಿಸಿದ್ದೇನೆ; ನಿನ್ನ ದೇವರ ಮಂದಿರದೊಳಗಿಂದ ಕೆತ್ತಿದ ವಿಗ್ರಹವನ್ನೂ, ಎರಕದ ಬೊಂಬೆಯನ್ನೂ ಕಡಿದುಬಿಡುವೆನು; ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು; ನಿನ್ನ ಪಾಪಗಳು ದುರ್ವಾಸನೆ ಬೀರುತ್ತಿವೆ.
15 ನೋಡಿರಿ ಆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪರ್ವತಗಳ ಮೇಲೆ ಸಾರುವ ದೂತನ ಪಾದಗಳು ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ, ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟರು ಇನ್ನು ಮುಂದೆ ನಿನ್ನನ್ನು ಮುತ್ತಿಗೆ ಹಾಕಿ ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ಅವನು ಸಂಪೂರ್ಣ ನಾಶವಾಗಿದ್ದಾನೆ.

*1:8 1:8 ತನ್ನ ವಿರೋಧಿಗಳನ್ನು ನಿನವೆ ಪಟ್ಟಣ.