9
ಪೌಲನು ಉಪಯೋಗಿಸಿಲ್ಲದ ಹಕ್ಕುಗಳು
ನಾನು ಸ್ವತಂತ್ರನಾಗಿದ್ದೇನೆ; ಅಪೊಸ್ತಲನಾಗಿದ್ದೇನೆ; ನಮ್ಮ ಪ್ರಭುವಾದ ಯೇಸುವನ್ನು ನೋಡಿದ್ದೇನೆ. ನಾನು ಪ್ರಭುವಿನಲ್ಲಿ ಮಾಡಿದ ಸೇವೆಯ ಫಲವು ನೀವೇ ಆಗಿದ್ದೀರಿ. ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.
ಕೆಲವು ಜನರು ನಮ್ಮನ್ನು ವಿಚಾರಣೆ ಮಾಡಲು ಬಯಸುತ್ತಾರೆ. ನಾನು ಅವರಿಗೆ ಕೊಡುವ ಉತ್ತರ ಇಂತಿದೆ: ಊಟಮಾಡುವುದಕ್ಕೆ ಮತ್ತು ಪಾನೀಯಗಳನ್ನು ಕುಡಿಯುವುದಕ್ಕೆ ನಮಗೆ ಹಕ್ಕಿಲ್ಲವೇ? ಕ್ರಿಸ್ತ ವಿಶ್ವಾಸಿಯಾದ ಹೆಂಡತಿಯನ್ನು ನಮ್ಮೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಲು ಉಳಿದ ಅಪೊಸ್ತಲರಂತೆ, ಪ್ರಭುವಿನ ಸಹೋದರರಂತೆ ಮತ್ತು ಕೇಫನಂತೆ ನಮಗೆ ಹಕ್ಕಿಲ್ಲವೇ? ಬಾರ್ನಬನು ಮತ್ತು ನಾನು ಮಾತ್ರ ನಮ್ಮ ಜೀವನಕ್ಕೆ ಬೇಕಾದದ್ದನ್ನು ದುಡಿದು ಸಂಪಾದಿಸಿಕೊಳ್ಳಬೇಕೇ? ಸೈನ್ಯದಲ್ಲಿ ಸೇವೆಮಾಡುವ ಯಾವ ಸೈನಿಕನಾದರೂ ತನಗೆ ತಾನೇ ಸಂಬಳವನ್ನು ಕೊಡುವುದಿಲ್ಲ. ಯಾವ ದ್ರಾಕ್ಷಿತೋಟಗಾರನಾಗಲಿ ತಾನು ಬೆಳೆದ ಹಣ್ಣಿನಲ್ಲಿ ಸ್ವಲ್ಪವನ್ನು ತಿನ್ನದೆ ಇರುವುದಿಲ್ಲ. ಹಸುಗಳನ್ನು ಸಾಕಿದ ಯಾವನೇ ಆಗಲಿ ಅವುಗಳ ಹಾಲಿನಲ್ಲಿ ಸ್ವಲ್ಪವನ್ನು ಕುಡಿಯದೆ ಇರುವುದಿಲ್ಲ.
ಇವುಗಳು ಕೇವಲ ಮಾನುಷ ಉದಾಹರಣೆಗಳಲ್ಲ. ದೇವರ ಧರ್ಮಶಾಸ್ತ್ರವೂ ಈ ಸಂಗತಿಗಳನ್ನು ತಿಳಿಸುತ್ತದೆ. “ಕಣ ತುಳಿಯುವ ಎತ್ತು ಧಾನ್ಯ ತಿನ್ನದಂತೆ ಅದರ ಬಾಯನ್ನು ಕಟ್ಟಬೇಡಿ” ಎಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಹೀಗೆ ಹೇಳಿದಾಗ, ಕಣತುಳಿಯುವ ಎತ್ತಿನ ಬಗ್ಗೆ ಮಾತ್ರ ಆತನು ಆಲೋಚಿಸುತ್ತಿದ್ದನೇ? ಇಲ್ಲ! 10 ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ. 11 ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ. 12 ತಮಗೆ ಅಗತ್ಯವಾದುವುಗಳನ್ನು ನಿಮ್ಮಿಂದ ಪಡೆದುಕೊಳ್ಳಲು ಇತರರಿಗೆ ಹಕ್ಕಿದೆ. ಆದ್ದರಿಂದ ಖಂಡಿತವಾಗಿ ನಮಗೂ ಈ ಹಕ್ಕಿದೆ. ಆದರೆ ನಾವು ಈ ಹಕ್ಕನ್ನು ಉಪಯೋಗಿಸುವುದಿಲ್ಲ. ಕ್ರಿಸ್ತನ ಸುವಾರ್ತೆಗೆ ವಿಧೇಯರಾಗಲು ಯಾರಿಗೂ ತೊಂದರೆ ಆಗಕೂಡದೆಂದು ನಾವು ಪ್ರತಿಯೊಂದನ್ನು ಸಹಿಸಿಕೊಳ್ಳುತ್ತೇವೆ. 13 ದೇವಾಲಯದಲ್ಲಿ ಸೇವೆಮಾಡುವ ಜನರು ದೇವಾಲಯದಿಂದಲೇ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಯಜ್ಞವೇದಿಕೆಯ ಬಳಿ ಸೇವೆ ಮಾಡುವವರು ಯಜ್ಞವೇದಿಕೆಯ ಮೇಲೆ ಅರ್ಪಿತವಾದದ್ದರಲ್ಲಿ ಸ್ವಲ್ಪಭಾಗವನ್ನು ಪಡೆದುಕೊಳ್ಳುವರು. 14 ಸುವಾರ್ತೆಯನ್ನು ಬೋಧಿಸುವ ಜನರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸುವಾರ್ತೆಯನ್ನು ಬೋಧಿಸುವವರು ತಮಗೆ ಅಗತ್ಯವಾದುವುಗಳನ್ನು ಈ ಸೇವೆಯ ಮೂಲಕ ಪಡೆದುಕೊಳ್ಳಬೇಕೆಂದು ಪ್ರಭುವು ಆಜ್ಞಾಪಿಸಿದ್ದಾನೆ.
15 ಆದರೆ ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಉಪಯೋಗಿಸಲಿಲ್ಲ. ನನಗೆ ಅಗತ್ಯವಾದುವುಗಳನ್ನು ಪಡೆದುಕೊಳ್ಳುವುದಕ್ಕಾಗಿಯೂ ನಾನು ಪ್ರಯತ್ನಿಸುತ್ತಿಲ್ಲ. ನಿಮಗೆ ಇದನ್ನು ಬರೆಯುತ್ತಿರುವ ಉದ್ದೇಶವೂ ಅದಲ್ಲ. ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ನನಗೆ ಲೇಸು. 16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ! 17 ನಾನು ನನ್ನ ಸ್ವಂತ ಇಷ್ಟದಿಂದ ಸುವಾರ್ತೆಯನ್ನು ಬೋಧಿಸುವುದಾಗಿದ್ದರೆ, ಬಹುಮಾನಕ್ಕೆ ಅರ್ಹನಾಗಿದ್ದೇನೆ. ಆದರೆ ಬೇರೊಂದನ್ನು ಆರಿಸಿಕೊಳ್ಳಲು ನನಗೆ ಅವಕಾಶವೇ ಇಲ್ಲ. ನಾನು ಸುವಾರ್ತೆಯನ್ನು ಸಾರಲೇಬೇಕು. ಇದು ನನಗೆ ಕೊಡಲ್ಪಟ್ಟಿರುವ ಕರ್ತವ್ಯವಷ್ಟೆ. 18 ಹೀಗಿರಲು, ನನಗೆ ಯಾವ ಬಹುಮಾನ ಸಿಕ್ಕುವುದು? ಸುವಾರ್ತೆಯನ್ನು ಉಚಿತವಾಗಿ ಬೋಧಿಸುವುದೊಂದೇ ನನಗೆ ದೊರೆಯುವ ಬಹುಮಾನವಾಗಿದೆ. ಆದ್ದರಿಂದ ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳುವುದಿಲ್ಲ.
19 ನಾನು ಸ್ವತಂತ್ರನಾಗಿದ್ದೇನೆ; ಯಾರ ಅಧೀನದಲ್ಲಿಯೂ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಜನರನ್ನು ರಕ್ಷಣಾ ಮಾರ್ಗಕ್ಕೆ ನಡೆಸಲು ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ. 20 ಯೆಹೂದ್ಯರನ್ನು ರಕ್ಷಣಾಮಾರ್ಗಕ್ಕೆ ತರಲು ಅವರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಾಗಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ಅಧೀನರಾಗಿರುವ ಜನರನ್ನು ರಕ್ಷಣಾಮಾರ್ಗಕ್ಕೆ ತರಬೇಕೆಂದು ಧರ್ಮಶಾಸ್ತ್ರಕ್ಕೆ ಅಧೀನನಾದೆನು. 21 ಧರ್ಮಶಾಸ್ತ್ರವಿಲ್ಲದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಧರ್ಮಶಾಸ್ತ್ರವಿಲ್ಲದ ವ್ಯಕ್ತಿಯಂತಾದೆನು. (ಆದರೆ ನಿಜವಾಗಿಯೂ, ನಾನು ಧರ್ಮಶಾಸ್ತ್ರವಿಲ್ಲದವನಲ್ಲ. ನಾನು ಕ್ರಿಸ್ತನ ಧರ್ಮಶಾಸ್ತ್ರಕ್ಕೆ ಅಧೀನನಾಗಿದ್ದೇನೆ.) 22 ಬಲಹೀನರಾದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಬಲಹೀನನಂತಾದೆನು. ಯಾವ ರೀತಿಯಲ್ಲಾದರೂ ರಕ್ಷಣಾ ಮಾರ್ಗಕ್ಕೆ ನಡೆಸಬೇಕೆಂದು ಯಾರ್ಯಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದೆನು. 23 ಇವುಗಳನ್ನೆಲ್ಲ ಮಾಡುವುದು ಸುವಾರ್ತೆಗಾಗಿಯೇ. ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇವುಗಳನ್ನೆಲ್ಲ ಮಾಡುತ್ತೇನೆ.
24 ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ರೀತಿಯಲ್ಲಿ ಓಡಿರಿ; ಗೆಲ್ಲುವುದಕ್ಕಾಗಿ ಓಡಿರಿ. 25 ಪಂದ್ಯಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಪದಕಗಳಿಸಲು ಕಟ್ಟುನಿಟ್ಟಾದ ತರಬೇತಿಯಲ್ಲಿರುತ್ತಾರೆ. ಆದರೆ ಈ ಲೋಕದ ಆ ಪದಕವು ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು. 26 ಆದ್ದರಿಂದ ಗುರಿಯನ್ನು ಹೊಂದಿರುವ ವ್ಯಕ್ತಿಯಂತೆ ಓಡುತ್ತೇನೆ. ಕೇವಲ ಗಾಳಿಯನ್ನು ಗುದ್ದದೆ, ನಿಜವಾಗಿಯೂ ಗುದ್ದಿ ಮುಷ್ಠಿಕಾಳಗ ಮಾಡುವ ವ್ಯಕ್ತಿಯಂತೆ ಹೋರಾಡುತ್ತೇನೆ. 27 ನಾನು ಗುದ್ದುವುದು ನನ್ನ ಸ್ವಂತ ದೇಹವನ್ನೇ. ಇತರ ಜನರಿಗೆ ಬೋಧಿಸಿದ ಮೇಲೆ ಸ್ವತಃ ನಾನೇ ತಿರಸ್ಕೃತನಾಗದಂತೆ ಅದನ್ನು ನನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ.
9:9 ಉಲ್ಲೇಖನ: ಧರ್ಮೋಪದೇಶ. 25:4.