20
ಯುದ್ಧ ಕ್ರಮಗಳು
“ನೀವು ನಿಮಗಿಂತ ಬಲಿಷ್ಠರಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಗಿಂತಲೂ ಹೆಚ್ಚಾದ ಸೈನ್ಯಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ತಂದವನು ಆತನೇ.
“ನೀವು ಯುದ್ಧಕ್ಕೆ ಹೊರಟುನಿಂತಾಗ ಯಾಜಕನು ಸೈನಿಕರ ಬಳಿಗೆ ಹೋಗಿ ಹೀಗೆ ಹೇಳಬೇಕು: ‘ಇಸ್ರೇಲ್ ಜನರೇ, ನನ್ನ ಮಾತನ್ನು ಆಲಿಸಿರಿ. ಈ ದಿವಸ ನಿಮ್ಮ ವೈರಿಗಳೊಂದಿಗೆ ಕಾದಾಡಲು ಹೋಗುತ್ತಿದ್ದೀರಿ. ನೀವು ಅಧೈರ್ಯಗೊಳ್ಳಬೇಡಿರಿ. ಗಲಿಬಿಲಿಗೆ ಸಿಕ್ಕಿಕೊಳ್ಳಬೇಡಿ; ವೈರಿಗಳಿಗೆ ಭಯಪಡಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ಹೋಗುವನು. ವೈರಿಗಳೊಂದಿಗೆ ಯುದ್ಧಮಾಡಲು ಆತನು ನಿಮಗೆ ಸಹಾಯ ಮಾಡುವನು ಮತ್ತು ನಿಮಗೆ ಜಯವನ್ನು ಕೊಡುವನು.’
“ಆ ಲೇವಿಯ ಅಧಿಕಾರಿಗಳು ಸೈನಿಕರಿಗೆ, ‘ನಿಮ್ಮಲ್ಲಿ ಯಾರಾದರೂ ಹೊಸಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿರದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನೆಗೆ ಸೇರಿಕೊಳ್ಳಬಹುದು. ನಿಮ್ಮಲ್ಲಿ ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಫಲವನ್ನು ಕೂಡಿಸಿಲ್ಲದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನು ರಣರಂಗದಲ್ಲಿ ಮಡಿದರೆ ಅವನ ದ್ರಾಕ್ಷಿತೋಟದ ಫಲಗಳು ಬೇರೊಬ್ಬನ ಪಾಲಾಗುವುದು. ನಿಮ್ಮಲ್ಲಿ ಯಾರಾದರೂ ಮದುವೆಯಾಗಲು ಹೆಣ್ಣನ್ನು ನಿಶ್ಚಯಿಸಿದ್ದರೆ ಅವನು ತನ್ನ ಮನೆಗೆ ಹಿಂತಿರುಗಿಹೋಗಲಿ; ಯಾಕೆಂದರೆ ಅವನು ರಣರಂಗದಲ್ಲಿ ಮಡಿದರೆ ಅವನಿಗೆ ನಿಶ್ಚಯವಾದ ಹೆಣ್ಣನ್ನು ಇನ್ನೊಬ್ಬನು ಮದುವೆ ಮಾಡಿಕೊಳ್ಳಬಹುದು’ ಎಂದು ಹೇಳುವರು.
“ಆ ಲೇವಿಯ ಅಧಿಕಾರಿಗಳು ಹೇಳಬೇಕಾದದ್ದೇನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನಿಂದಾಗಿ ಇತರ ಸೈನಿಕರೂ ತಮ್ಮ ಧೈರ್ಯವನ್ನು ಕಳೆದುಕೊಳ್ಳಬಹುದು.’ ಲೇವಿಯ ಅಧಿಕಾರಿಗಳು ಸೈನಿಕರೊಂದಿಗೆ ಮಾತಾಡುವುದನ್ನು ನಿಲ್ಲಿಸಿದ ಬಳಿಕ ಅವರು ತಮಗೆ ಸೈನ್ಯಾಧಿಕಾರಿಗಳನ್ನು ನೇಮಿಸಬೇಕು.
10 “ನೀವು ಒಂದು ಪಟ್ಟಣವನ್ನು ಆಕ್ರಮಿಸಲು ಹೋದಾಗ, ಅಲ್ಲಿಯ ಜನರಿಗೆ ‘ಶಾಂತಿಸಂಧಾನಕ್ಕೆ’ ಕರೆಯನ್ನು ಕೊಡಬೇಕು. 11 ಅವರು ನಿಮ್ಮ ಸಂಧಾನವನ್ನು ಸ್ವೀಕರಿಸಿ ನಿಮಗೆ ತಮ್ಮ ಬಾಗಿಲುಗಳನ್ನು ತೆರೆದುಕೊಟ್ಟರೆ ಆ ಪಟ್ಟಣದಲ್ಲಿರುವವರೆಲ್ಲರೂ ನಿಮಗೆ ಗುಲಾಮರಾಗುವರು. ಅವರು ನಿಮ್ಮ ಕೆಲಸಗಳನ್ನು ಮಾಡಲೇಬೇಕು. 12 ಆದರೆ ಆ ಪಟ್ಟಣದವರು ನಿಮ್ಮೊಂದಿಗೆ ಶಾಂತಿಸಂಧಾನ ಮಾಡಲು ಒಪ್ಪದಿದ್ದರೆ ಮತ್ತು ನಿಮ್ಮೊಂದಿಗೆ ಕಾದಾಡಲು ಬಂದರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು. 13 ನಿಮ್ಮ ದೇವರಾದ ಯೆಹೋವನು ಆ ಪಟ್ಟಣವನ್ನು ಸ್ವಾಧೀನ ಮಾಡಲು ಸಹಾಯಮಾಡಿದಾಗ ನೀವು ಆ ಪಟ್ಟಣದೊಳಗಿದ್ದ ಗಂಡಸರನ್ನೆಲ್ಲಾ ಕೊಂದುಬಿಡಬೇಕು. 14 ಹೆಂಗಸರನ್ನು, ಮಕ್ಕಳನ್ನು, ದನಕುರಿಗಳನ್ನು ಮತ್ತು ಪಟ್ಟಣದೊಳಗಿದ್ದವುಗಳನ್ನೆಲ್ಲಾ ನಿಮ್ಮ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ಅವುಗಳನ್ನು ನಿಮಗೆ ಕೊಟ್ಟಿದ್ದಾನೆ. 15 ನಿಮ್ಮಿಂದ ಬಹುದೂರವಿರುವ ಪಟ್ಟಣಗಳಿಗೆ ಅಂದರೆ ನೀವು ವಾಸಿಸಲಿರುವ ದೇಶದಿಂದ ದೂರವಿರುವ ಪಟ್ಟಣಗಳಿಗೆ ನೀವು ಆ ರೀತಿಯಾಗಿ ಮಾಡಬೇಕು.
16 “ಆದರೆ ನಿಮಗೆ ವಾಗ್ದಾನ ಮಾಡಿದ ದೇಶದ ಪಟ್ಟಣಗಳನ್ನು ಸ್ವಾಧೀನ ಮಾಡುವಾಗ ನೀವು ಪಟ್ಟಣದಲ್ಲಿರುವವರೆಲ್ಲರನ್ನು ಕೊಲ್ಲಬೇಕು. 17 ನೀವು ಹಿತ್ತಿಯರನ್ನು, ಅಮೋರಿಯರನ್ನು, ಕಾನಾನ್ಯರನ್ನು, ಪೆರಿಜ್ಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ಸಂಪೂರ್ಣವಾಗಿ ಹತ್ಯೆ ಮಾಡಬೇಕು. ಇದು ನಿಮ್ಮ ದೇವರಾದ ಯೆಹೋವನ ಅಪ್ಪಣೆ. 18 ಯಾಕೆಂದರೆ ಆಗ ಅವರು ನಿಮ್ಮ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ; ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಮಾಡುವ ಭಯಂಕರ ಕೃತ್ಯಗಳನ್ನು ಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ.
19 “ನೀವು ಒಂದು ಪಟ್ಟಣವನ್ನು ಬಹುಕಾಲದಿಂದ ಮುತ್ತಿಗೆ ಹಾಕಿದರೆ ಸುತ್ತಮುತ್ತಲಿರುವ ಮರಗಳನ್ನು ಕಡಿದುಹಾಕಬಾರದು. ಅವುಗಳ ಫಲಗಳನ್ನು ತಿನ್ನಬಹುದು; ಆದರೆ ಕಡಿಯಬಾರದು. ಅವು ನಿಮ್ಮ ವೈರಿಗಳಲ್ಲವಲ್ಲಾ? ಅವು ನಿಮ್ಮೊಂದಿಗೆ ಯುದ್ಧ ಮಾಡುವುದಿಲ್ಲವಲ್ಲಾ? 20 ಹಣ್ಣುಗಳನ್ನು ಕೊಡದ ಮರಗಳನ್ನು ಕಡಿಯಬಹುದು. ಆ ಮರಗಳಿಂದ ಆಯುಧಗಳನ್ನು ತಯಾರಿಸಿ* ಆ ಪಟ್ಟಣದ ಜನರೊಂದಿಗೆ ಯುದ್ಧ ಮಾಡಬಹುದು. ಆ ಪಟ್ಟಣವು ನಿಮ್ಮ ಕೈವಶವಾಗುವ ತನಕ ನೀವು ಅದನ್ನು ಉಪಯೋಗಿಸಬಹುದು.
* 20:20 ಆಯುಧಗಳನ್ನು ತಯಾರಿಸಿ ಅಕ್ಷರಶಃ, “ಪಟ್ಟಣಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ಬೇಕಾದ ಮರದ ಉಪಕರಣಗಳನ್ನು ಶೇಖರಿಸಿಟ್ಟುಕೊಳ್ಳಬಹುದು.”