2
“ಸುಖವು” ನೀತಿಮಾರ್ಗಕ್ಕೆ ನಡೆಸುವುದೇ?
ನಾನು ನನ್ನ ಹೃದಯದಲ್ಲಿ, “ಬಾ, ನಿನ್ನನ್ನು ಸುಖದ ಮೂಲಕ ಪರೀಕ್ಷಿಸುವೆನು; ಆಗ ನೀನು ನೀತಿಮಾರ್ಗವನ್ನು ಕಲಿತುಕೊಳ್ಳುವೆ” ಎಂದುಕೊಂಡೆನು. ಆದರೆ ಇದು ಸಹ ವ್ಯರ್ಥವೆಂದು ಕಂಡುಕೊಂಡೆನು. ನಗೆಯು ಹುಚ್ಚುತನ. ಸುಖದಿಂದ ಪ್ರಯೋಜನವೇನು? ಅಂದುಕೊಂಡೆನು.
ಮನುಷ್ಯರು ತಮ್ಮ ಕ್ಷಣಿಕ ಜೀವಮಾನದಲ್ಲಿ ಮಾಡತಕ್ಕ ಒಳ್ಳೆಯದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸನ್ನು ಜ್ಞಾನದಿಂದ ತುಂಬಿಸಿದೆ; ದೇಹವನ್ನು ದ್ರಾಕ್ಷಾರಸದಿಂದ ತುಂಬಿಸಿದೆ; ಮೂಢತನವನ್ನು ಅವಲಂಭಿಸಿಕೊಂಡೆ.
ದುಡಿಮೆಯಿಂದ ಸಂತೋಷವಾಗುವುದೇ?
ದೊಡ್ಡಕಾರ್ಯಗಳನ್ನು ಮಾಡಲಾರಂಭಿಸಿದೆ; ನನಗೋಸ್ಕರ ಮನೆಗಳನ್ನು ಕಟ್ಟಿಸಿದೆ; ದ್ರಾಕ್ಷಿತೋಟಗಳನ್ನು ಮಾಡಿಸಿದೆ; ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿದೆ; ಎಲ್ಲಾ ಬಗೆಯ ಹಣ್ಣಿನ ಮರಗಳನ್ನು ನೆಡಿಸಿದೆ. ನೀರಿನ ಕೊಳಗಳನ್ನು ಮಾಡಿಸಿ ಮರಗಳಿಗೆ ನೀರನ್ನು ಹಾಯಿಸಿದೆ. ಪುರುಷರನ್ನೂ ಸ್ತ್ರೀಯರನ್ನೂ ಗುಲಾಮರನ್ನಾಗಿ ಕೊಂಡುಕೊಂಡೆ. ನನ್ನ ಮನೆಯಲ್ಲೇ ಹುಟ್ಟಿದ ಗುಲಾಮರೂ ನನಗಿದ್ದರು. ನನಗೆ ದನದ ಹಿಂಡುಗಳೂ ಕುರಿಮಂದೆಗಳೂ ಇದ್ದವು. ಜೆರುಸಲೇಮಿನಲ್ಲಿ ಇದ್ದವರೆಲ್ಲರಿಗಿಂತಲೂ ಹೆಚ್ಚು ವಸ್ತುಗಳನ್ನು ನಾನು ಪಡೆದಿದ್ದೆ.
ಇದಲ್ಲದೆ ಬೆಳ್ಳಿಬಂಗಾರಗಳನ್ನು ನನಗೋಸ್ಕರ ಸಂಗ್ರಹಿಸಿದೆ; ರಾಜರುಗಳಿಂದಲೂ ಅವರ ದೇಶಗಳಿಂದಲೂ ಭಂಡಾರಗಳನ್ನು ತೆಗೆದುಕೊಂಡೆ. ನನಗೋಸ್ಕರ ಹಾಡಲು ಗಾಯಕಗಾಯಕಿಯರಿದ್ದರು. ನನ್ನನ್ನು ಸಂತೋಷಪಡಿಸಲು ಅನೇಕ ಉಪಪತ್ನಿಯರಿದ್ದರು. ಮನುಷ್ಯನು ಬಯಸಬಹುದಾದ ಪ್ರತಿಯೊಂದನ್ನೂ ನಾನು ಪಡೆದಿದ್ದೆ.
ನಾನು ಬಹು ಐಶ್ವರ್ಯವಂತನಾದೆ; ಪ್ರಸಿದ್ಧನಾದೆ. ನನಗಿಂತ ಮೊದಲು ಜೆರುಸಲೇಮಿನಲ್ಲಿದ್ದ ಎಲ್ಲರಿಗಿಂತಲೂ ನಾನು ದೊಡ್ಡವನಾದೆ. ನನಗೆ ಸಹಾಯಕ್ಕಾಗಿ ಯಾವಾಗಲೂ ನನ್ನಲ್ಲಿ ಜ್ಞಾನವಿತ್ತು. 10 ನನ್ನ ಕಣ್ಣುಗಳು ಬಯಸಿದ್ದನ್ನೆಲ್ಲ ನನಗೋಸ್ಕರ ಪಡೆದುಕೊಂಡೆನು. ಯಾವುದೇ ಸುಖದಿಂದಾಗಲಿ ನನ್ನ ಹೃದಯವನ್ನು ನಾನು ತಡೆಹಿಡಿಯಲಿಲ್ಲ; ಯಾಕೆಂದರೆ ನನ್ನ ಕಾರ್ಯಗಳಲ್ಲಿ ನನ್ನ ಹೃದಯವು ಸಂತೋಷಗೊಂಡಿತ್ತು. ನನ್ನ ಪ್ರಯಾಸದ ಫಲವು ಅದೊಂದೇ.
11 ನನ್ನ ಕಾರ್ಯಗಳನ್ನೂ ನನ್ನ ಪ್ರಯಾಸವನ್ನೂ ಆಲೋಚಿಸಿದೆ. ಗಾಳಿಯನ್ನು ಹಿಂದಟ್ಟಿದ ಹಾಗೆ ಅದೆಲ್ಲಾ ವ್ಯರ್ಥವೆಂದು ಕಂಡುಕೊಂಡೆ. ನಮ್ಮ ಈ ಜೀವಮಾನದ ಯಾವ ಕೆಲಸಗಳಿಂದಲೂ ಲಾಭವಿಲ್ಲ.
ಜ್ಞಾನಿಗೂ ಅಜ್ಞಾನಿಗೂ ವ್ಯತ್ಯಾಸವೇನು?
12 ರಾಜನಿಗಿಂತ ಹೆಚ್ಚಾಗಿ ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ. ನೀನು ಮಾಡಬೇಕೆನ್ನುವುದನ್ನು ನಿನಗಿಂತ ಮೊದಲೇ ಬೇರೊಬ್ಬ ರಾಜನು ಮಾಡಿರುತ್ತಾನೆ; ಆದ್ದರಿಂದ ರಾಜನ ಕಾರ್ಯಗಳು ಸಹ ವ್ಯರ್ಥವೆಂದು ಕಂಡುಕೊಂಡೆನು. ಆದ್ದರಿಂದ ನಾನು ಜ್ಞಾನವನ್ನೂ ಮೂಢತನವನ್ನೂ ಬುದ್ಧಿಹೀನತೆಯನ್ನೂ ಮತ್ತೆ ಮತ್ತೆ ಆಲೋಚಿಸಿದೆನು. 13 ಆಗ ಬೆಳಕು ಕತ್ತಲೆಗಿಂತ ಉತ್ತಮವಾಗಿರುವಂತೆ ಜ್ಞಾನವು ಮೂಢತನಕ್ಕಿಂತ ಉತ್ತಮವಾಗಿದೆ ಎಂಬುದನ್ನು ಅರಿತುಕೊಂಡೆನು. 14 ಅದು ಈ ರೀತಿಯಿದೆ: ಜ್ಞಾನಿಯು ತನ್ನ ಮಾರ್ಗವನ್ನು ತಿಳಿದುಕೊಳ್ಳಲು ತನ್ನ ಮನಸ್ಸನ್ನು ಕಣ್ಣುಗಳಂತೆ ಉಪಯೋಗಿಸುವನು. ಮೂಢನಾದರೋ ಕತ್ತಲೆಯಲ್ಲಿ ನಡೆದುಹೋಗುವನು.
ಆದರೆ ಜ್ಞಾನಿಗೂ ಮೂಢನಿಗೂ ಒಂದೇ ಗತಿಯೆಂದು ಕಂಡುಕೊಂಡೆನು; ಅವರಿಬ್ಬರೂ ಸಾಯುವರು. 15 ನಾನು ನನ್ನೊಳಗೆ, “ಮೂಢನಿಗೆ ಸಂಭವಿಸುವ ಗತಿಯು ನನಗೂ ಸಂಭವಿಸುವುದು. ಹೀಗಿರಲು ಜ್ಞಾನಿಯಾಗಲು ನಾನೇಕೆ ಪ್ರಯಾಸಪಡಬೇಕು? ಇದೂ ವ್ಯರ್ಥವಲ್ಲವೇ?” ಅಂದುಕೊಂಡೆನು. 16 ಯಾಕೆಂದರೆ ಮೂಢನು ಸಾಯುವಂತೆ ಜ್ಞಾನಿಯೂ ಸಾಯುವುದರಿಂದ ಜನರು ಜ್ಞಾನಿಯನ್ನಾಗಲಿ ಮೂಢನನ್ನಾಗಲಿ ಸದಾಕಾಲ ಜ್ಞಾಪಿಸಿಕೊಳ್ಳುವುದಿಲ್ಲ. ಅವರ ಕಾರ್ಯಗಳನ್ನು ಮುಂದಿನ ಕಾಲದ ಜನರು ಮರೆತುಬಿಡುವರು. ಆದ್ದರಿಂದ ಜ್ಞಾನಿಗೂ ಮೂಢನಿಗೂ ಯಾವ ವ್ಯತ್ಯಾಸವೂ ಇಲ್ಲ.
ಜೀವನದಲ್ಲಿ ನಿಜ ಸಂತೋಷವಿದೆಯೇ?
17 ಈ ಲೋಕದ ಕಾರ್ಯಗಳೆಲ್ಲಾ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ನನಗೆ ಕಂಡುಬಂದದ್ದರಿಂದ ಜೀವನವೇ ನನಗೆ ಅಸಹ್ಯವಾಯಿತು.
18 ನನ್ನ ಪ್ರಯಾಸದ ಫಲವನ್ನು ನನ್ನ ತರುವಾಯ ಬೇರೆಯವರು ಪಡೆದುಕೊಳ್ಳುವುದರಿಂದ ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆ ಬೇಸರಗೊಂಡೆನು. 19 ನಾನು ಜ್ಞಾನವನ್ನೂ ಪ್ರಯಾಸವನ್ನೂ ಯಾವುದರಲ್ಲಿ ವಿನಿಯೋಗಿಸಿದ್ದೇನೋ ಅದರ ಮೇಲೆ ಬೇರೊಬ್ಬನು ದೊರೆತನ ಮಾಡುವನು. ಅವನು ಜ್ಞಾನಿಯೋ ಮೂಢನೋ ನನಗೆ ಗೊತ್ತಿಲ್ಲ. ಇದೂ ವ್ಯರ್ಥವೇ.
20 ಆದ್ದರಿಂದ, ನಾನು ಈ ಲೋಕದಲ್ಲಿ ಪ್ರಯಾಸಪಟ್ಟ ಕೆಲಸಗಳ ಬಗ್ಗೆ ವ್ಯಸನಗೊಂಡೆನು. 21 ಒಬ್ಬನು ತನ್ನ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ಕಾರ್ಯವನ್ನು ಸಫಲಗೊಳಿಸಿದ ಮೇಲೆ ಅದರ ಫಲವನ್ನು ಪ್ರಯಾಸಪಡದ ಬೇರೊಬ್ಬನಿಗೆ ಬಿಟ್ಟು ಹೋಗಬೇಕಾಗುವುದು. ಇದೂ ವ್ಯರ್ಥವೂ ಅನ್ಯಾಯವೂ ಆಗಿದೆ.
22 ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಪ್ರಯೋಜನವೇನು? 23 ಅವನ ಜೀವಮಾನವೆಲ್ಲಾ ಅವನಿಗೆ ವ್ಯಸನವಿರುವುದು; ಕೆಲಸದಲ್ಲೆಲ್ಲಾ ಕಷ್ಟವಿರುವುದು; ರಾತ್ರಿಯಲ್ಲಿಯೂ ಮನಸ್ಸಿಗೆ ವಿಶ್ರಾಂತಿಯಿರದು. ಇದೂ ವ್ಯರ್ಥವೇ.
24-25 ಜೀವನದಲ್ಲಿ ಸುಖಪಡಲು ನನಗಿಂತಲೂ ಹೆಚ್ಚಾಗಿ ಯಾರಾದರೂ ಪ್ರಯತ್ನಿಸಿರುವರೇ? ಇಲ್ಲ! ಅನುಭವದಿಂದ ಹೇಳುವುದೇನೆಂದರೆ, ಅನ್ನಪಾನಗಳನ್ನು ತೆಗೆದುಕೊಂಡು ಪ್ರಯಾಸದಲ್ಲಿಯೂ ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯನಿಗಿಲ್ಲ. ಇದು ಸಹ ದೇವರಿಂದ ಬಂದ ಭಾಗ್ಯವೆಂದು ಕಂಡುಕೊಂಡೆನು. 26 ದೇವರು ತಾನು ಮೆಚ್ಚಿಕೊಂಡವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ಕೊಡುವನು. ಪಾಪಿಗಾದರೋ ಪ್ರಯಾಸದಿಂದ ಸಂಪಾದಿಸುವ ಮತ್ತು ಕೂಡಿಸಿಡುವ ಕೆಲಸವನ್ನು ಕೊಡುವನು. ಅವನು ಕೂಡಿಸಿಟ್ಟವುಗಳನ್ನು ದೇವರು ತನ್ನ ಮೆಚ್ಚಿಕೆಗೆ ಪಾತ್ರನಾದವನಿಗೆ ಕೊಡುವನು. ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.