8
ಜ್ಞಾನ ಮತ್ತು ಶಕ್ತಿ
ಜ್ಞಾನಿಯು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ವಿವರಿಸುವಂತೆ ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು ಮತ್ತು ವಿವರಿಸಲಾರರು. ಜ್ಞಾನಿಯ ಮುಖವು ಜ್ಞಾನದಿಂದ ಪ್ರಕಾಶಮಾನವಾಗಿರುವುದು; ಅದು ವ್ಯಸನದ ಮುಖವನ್ನು ಸಂತೋಷದ ಮುಖವನ್ನಾಗಿ ಮಾರ್ಪಡಿಸುವುದು.
ನೀವು ದೇವರ ಮೇಲೆ ಆಣೆಯಿಟ್ಟಿರುವುದರಿಂದ ರಾಜನ ಆಜ್ಞೆಗೆ ವಿಧೇಯರಾಗಿರಬೇಕು. ರಾಜನಿಗೆ ನಿಮ್ಮ ಆಲೋಚನೆಗಳನ್ನು ತಿಳಿಸಲು ಭಯಪಡಬಾರದು; ನೀವು ಯಾವ ತಪ್ಪಿಗೂ ಬೆಂಬಲ ಕೊಡಬಾರದು. ಆದರೆ ರಾಜನು ತನಗೆ ಇಷ್ಟಬಂದಂತೆ ಆಜ್ಞೆಗಳನ್ನು ಕೊಡುತ್ತಾನೆಂಬುದು ಜ್ಞಾಪಕದಲ್ಲಿರಲಿ. ಆಜ್ಞೆಗಳನ್ನು ಕೊಡಲು ರಾಜನಿಗೆ ಅಧಿಕಾರವಿದೆ. ಅವನನ್ನು ಬಲವಂತ ಮಾಡಲು ಯಾರಿಗೂ ಸಾಧ್ಯವಿಲ್ಲ. ರಾಜನ ಆಜ್ಞೆಗೆ ವಿಧೇಯನಾಗುವವನು ಸುರಕ್ಷಿತವಾಗಿರುವನು. ಆದರೆ ಜ್ಞಾನಿಯು ಸೂಕ್ತ ಸಮಯದಲ್ಲಿ ಸೂಕ್ತ ಕಾರ್ಯವನ್ನು ಮಾಡಲು ತಿಳಿದಿದ್ದಾನೆ.
ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವೂ ಸೂಕ್ತ ಮಾರ್ಗವೂ ಮನುಷ್ಯನಿಗೆ ಇವೆ. ಮನುಷ್ಯನು ತನ್ನ ಅನೇಕ ತೊಂದರೆಗಳಲ್ಲಿಯೂ ಅವುಗಳಿಗೆ ತಕ್ಕಂತೆ ನಿರ್ಧಾರವನ್ನು ಕೈಕೊಳ್ಳಬೇಕು. ಯಾಕೆಂದರೆ ಮುಂದೆ ಏನಾಗುವುದೋ ಅವನಿಗೆ ತಿಳಿಯದು. ಮುಂದೆ ಅದು ಹೇಗೆ ಆಗುವುದೋ ಎಂದು ಅವನಿಗೆ ತಿಳಿಸುವವರು ಯಾರು ಇಲ್ಲ.
ಯಾರಿಗೂ ತಮ್ಮ ಆತ್ಮವನ್ನು ತಡೆದು ನಿಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಯಾರಿಗೂ ತಮ್ಮ ಮರಣವನ್ನು ತಡೆದು ನಿಲ್ಲಿಸುವ ಶಕ್ತಿಯಿಲ್ಲ. ಯುದ್ಧಕಾಲದಲ್ಲಿ ಸೈನಿಕರಿಗೆ ರಜೆ ದೊರೆಯುವುದಿಲ್ಲ. ಅದೇ ರೀತಿಯಲ್ಲಿ, ಪಾಪವು ಪಾಪಿಯನ್ನು ಬಿಟ್ಟು ಹೋಗುವುದಿಲ್ಲ.
ನಾನು ಇವುಗಳನ್ನೆಲ್ಲಾ ನೋಡಿ ಈ ಲೋಕದ ಕಾರ್ಯಗಳನ್ನು ಪರಿಶೀಲಿಸಿದೆನು. ಮನುಷ್ಯರು ಇನ್ನೊಬ್ಬರ ಮೇಲೆ ಅಧಿಪತಿಗಳಾಗಿರಲು ಪ್ರಯಾಸಪಡುತ್ತಾರೆ. ಇದು ಅವರಿಗೆ ಹಾನಿಕರ.
10 ಇದಲ್ಲದೆ ದುಷ್ಟರಿಗೆ ಶವಸಂಸ್ಕಾರವನ್ನು ವೈಭವದಿಂದ ಮಾಡುವುದನ್ನು ನಾನು ನೋಡಿದ್ದೇನೆ. ಶವಸಂಸ್ಕಾರವಾದ ಮೇಲೆ ಜನರು ಸತ್ತುಹೋದ ದುಷ್ಟರನ್ನು ಹೊಗಳುತ್ತಾ ತಮ್ಮ ಮನೆಗಳಿಗೆ ಹೋದರು; ನೀತಿವಂತರಾದರೋ ಪರಿಶುದ್ಧ ಸ್ಥಾನದಿಂದ ತೊಲಗಬೇಕಾಯಿತು. ನಗರದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು. ಇದು ಸಹ ವ್ಯರ್ಥ.
ನ್ಯಾಯ, ಪ್ರತಿಫಲ ಮತ್ತು ದಂಡನೆ
11 ಜನರ ಅಪರಾಧಗಳಿಗೆ ದಂಡನೆಯು ಕೂಡಲೇ ಬರದಿರುವುದರಿಂದ ದುಷ್ಕೃತ್ಯಗಳನ್ನು ಮಾಡಲು ಇತರರು ಸಹ ಪ್ರೇರಿತರಾಗುತ್ತಾರೆ.
12 ಒಬ್ಬ ಪಾಪಿಯು ನೂರು ದುಷ್ಕೃತ್ಯಗಳನ್ನು ಮಾಡಿ ಬಹುಕಾಲ ಬದುಕಬಹುದು. ಆದರೆ ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಅದಕ್ಕಿಂತಲೂ ಮೇಲೇ ಆಗುವುದು. 13 ದುಷ್ಟರಿಗೆ ದೇವರಲ್ಲಿ ಭಯಭಕ್ತಿಯಿಲ್ಲದಿರುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ; ಅವರ ಜೀವಿತವು ಸಾಯಂಕಾಲದ ನೆರಳಿನಂತೆ ಇಲ್ಲವಾಗುವುದು.
14 ಲೋಕದಲ್ಲಿ ಮತ್ತೊಂದು ಅನ್ಯಾಯವಿದೆ. ದುಷ್ಟರಿಗೆ ಕೇಡಾಗಬೇಕು, ಕೆಟ್ಟವುಗಳು ಕೆಟ್ಟ ಜನರಿಗೆ ಆಗಬೇಕು. ನೀತಿವಂತರಿಗೆ ಒಳ್ಳೆಯದಾಗಬೇಕು. ಆದರೆ ಕೆಲವು ಸಲ ನೀತಿವಂತರಿಗೆ ಕೇಡಾಗುತ್ತದೆ. ದುಷ್ಟರಿಗೆ ಒಳ್ಳೆಯದಾಗುತ್ತದೆ. ಅದು ನ್ಯಾಯವಲ್ಲ. 15 ಆದ್ದರಿಂದ ಜೀವನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವುದೇ ಉತ್ತಮವೆಂದು ನಿರ್ಧರಿಸಿದೆನು. ಯಾಕೆಂದರೆ ದೇವರು ಮನುಷ್ಯನಿಗೆ ಈ ಲೋಕದಲ್ಲಿ ಅನುಗ್ರಹಿಸಿರುವ ಪ್ರಯಾಸಕರ ಕೆಲಸಗಳಲ್ಲಿಯೂ ಮನುಷ್ಯನು ಸಂತೋಷವಾಗಿರಬೇಕು.
ದೇವರ ಕಾರ್ಯ ಗ್ರಹಿಕೆಗೆ ಮೀರಿದೆ
16 ಈ ಲೋಕದಲ್ಲಿ ಜನರ ಕಾರ್ಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದೆ. ಅವರು ಹಗಲುರಾತ್ರಿ ಕೆಲಸ ಮಾಡುವರು; ಕೆಲವೊಮ್ಮೆ ನಿದ್ರೆಯನ್ನೂ ಮಾಡುವುದಿಲ್ಲ. 17 ಇದಲ್ಲದೆ ದೇವರ ಅನೇಕ ಕಾರ್ಯಗಳನ್ನು ಸಹ ನಾನು ನೋಡಿದ್ದೇನೆ. ಭೂಮಿಯ ಮೇಲೆ ದೇವರು ಮಾಡುವ ಕಾರ್ಯಗಳನ್ನೆಲ್ಲಾ ಜನರು ಅರ್ಥಮಾಡಿಕೊಳ್ಳಲಾರರು. ಒಬ್ಬನು ಅರ್ಥಮಾಡಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವನು ಅರ್ಥಮಾಡಿಕೊಳ್ಳಲಾರನು. ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲೆನೆಂದು ಜ್ಞಾನಿಯು ಹೇಳಿಕೊಂಡರೂ ಅದು ಸತ್ಯವಲ್ಲ. ಅವುಗಳನ್ನೆಲ್ಲ ಯಾರೂ ಅರ್ಥಮಾಡಿಕೊಳ್ಳಲಾರರು.