14
ಬಳಿಕ ಯೆಹೋವನು ಮೋಶೆಗೆ, “ಪೀಹಹೀರೋತಿನ ಪೂರ್ವಕಡೆಯಲ್ಲಿ ಪ್ರಯಾಣ ಮಾಡಿ ಬಾಳ್ಚೆಫೋನಿಗೆ ಸಮೀಪದಲ್ಲಿರುವ ಮಿಗ್ದೋಲ್ ಮತ್ತು ಕೆಂಪು ಸಮುದ್ರದ ನಡುವೆ ಇಳಿದುಕೊಳ್ಳಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಇಸ್ರೇಲರು ಅರಣ್ಯದಲ್ಲಿ ದಾರಿ ತಪ್ಪಿದರು; ಅವರಿಗೆ ಹೋಗಲು ಯಾವ ಸ್ಥಳವೂ ಇರುವುದಿಲ್ಲ ಎಂದು ಫರೋಹನು ಭಾವಿಸುವನು. ನಾನು ಫರೋಹನ ಹೃದಯವನ್ನು ಕಠಿಣಪಡಿಸುವುದರಿಂದ ಅವನು ನಿಮ್ಮನ್ನು ಬೆನ್ನಟ್ಟುವನು. ಆದರೆ ನಾನು ಫರೋಹನನ್ನು ಮತ್ತು ಅವನ ಸೈನ್ಯವನ್ನು ಸೋಲಿಸುವೆನು. ಇದು ನನಗೆ ಗೌರವವನ್ನು ತರುವುದು. ಆಗ ನಾನೇ ಯೆಹೋವನೆಂದು ಈಜಿಪ್ಟಿನ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು. ಇಸ್ರೇಲರು ದೇವರಿಗೆ ವಿಧೇಯರಾಗಿ ಆತನು ಹೇಳಿದ್ದನ್ನು ಮಾಡಿದರು.
ಫರೋಹನು ಇಸ್ರೇಲರನ್ನು ಬೆನ್ನಟ್ಟಿದ್ದು
ಇಸ್ರೇಲರು ತಪ್ಪಿಸಿಕೊಂಡರೆಂಬ ವರದಿಯನ್ನು ಕೇಳಿದಾಗ, ಫರೋಹನ ಮತ್ತು ಅವನ ಅಧಿಕಾರಿಗಳ ಮನಸ್ಸುಗಳು ಬದಲಾದವು. ಫರೋಹನು, “ಇಸ್ರೇಲರನ್ನು ನಾವು ಯಾಕೆ ಹೋಗಲು ಬಿಟ್ಟೆವು? ಅಯ್ಯೋ, ನಾವೀಗ ನಮ್ಮ ಗುಲಾಮರನ್ನು ಕಳೆದುಕೊಂಡೆವಲ್ಲಾ!” ಎಂದು ಹೇಳಿದನು.
ಆದ್ದರಿಂದ ಫರೋಹನು ತನ್ನ ರಥವನ್ನು ಸಿದ್ಧಮಾಡಿಕೊಂಡು ತನ್ನೊಡನೆ ತನ್ನ ಜನರನ್ನು ಕರೆದುಕೊಂಡನು. ಫರೋಹನು ತನ್ನ ಆರುನೂರು ರಥಗಳನ್ನೂ ಅವುಗಳ ಚಾಲಕರನ್ನೂ ಮತ್ತು ಅವುಗಳೊಡನೆ ಈಜಿಪ್ಟಿನ ಇತರ ರಥಗಳನ್ನೂ ತೆಗೆದುಕೊಂಡನು. ಪ್ರತಿಯೊಂದು ರಥದಲ್ಲಿ ಒಬ್ಬ ದಳಪತಿ ಇದ್ದನು. ಇಸ್ರೇಲರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ಧೈರ್ಯದಿಂದ ಹೋಗುತ್ತಿದ್ದರು. ಆದರೆ ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವನು ಕಠಿಣಗೊಳಿಸಿದ್ದರಿಂದ ಅವನು ಇಸ್ರೇಲರನ್ನು ಬೆನ್ನಟ್ಟಿದನು.
ಈಜಿಪ್ಟಿನ ಸೈನ್ಯದಲ್ಲಿ ಅನೇಕ ರಾಹುತರು ಇದ್ದರು; ರಥಗಳೂ ಇದ್ದವು. ಅವರು ಇಸ್ರೇಲರನ್ನು ಬೆನ್ನಟ್ಟಿದರು. ಇಸ್ರೇಲರು ಪೀಹಹೀರೋತಿನ ಹತ್ತಿರವಿರುವ ಬಾಳ್ಚೆಫೋನಿನ ಎದುರಾಗಿ ಸಮುದ್ರತೀರದಲ್ಲಿ ಇಳಿದುಕೊಳ್ಳುವಾಗಲೇ ಈಜಿಪ್ಟಿನ ಸೈನ್ಯದವರು ಅವರ ಹತ್ತಿರಕ್ಕೆ ಬಂದರು.
10 ಫರೋಹನೂ ಅವನ ಸೈನ್ಯವೂ ತಮ್ಮ ಕಡೆಗೆ ಬರುತ್ತಿರುವುದನ್ನು ಇಸ್ರೇಲರು ಕಂಡು ಬಹಳ ಭಯಪಟ್ಟರು. ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. 11 ಅವರು ಮೋಶೆಗೆ, “ನೀನು ಯಾಕೆ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆ? ನಮ್ಮನ್ನು ಅರಣ್ಯದಲ್ಲಿ ಸಾಯಿಸುವುದಕ್ಕೆ ನೀನು ನಮ್ಮನ್ನು ಕರೆದುಕೊಂಡು ಬಂದೆಯಾ? ನಾವು ಈಜಿಪ್ಟಿನಲ್ಲಿಯೇ ಸಮಾಧಾನದಿಂದ ಸಾಯಬಹುದಾಗಿತ್ತಲ್ಲವೆ? ಈಜಿಪ್ಟಿನಲ್ಲಿ ಸಾಕಷ್ಟು ಸಮಾಧಿಗಳಿದ್ದವು. 12 ನಾವು ನಿನಗೆ ಈಜಿಪ್ಟಿನಲ್ಲೇ, ‘ದಯಮಾಡಿ ನಮ್ಮ ಗೊಡವೆಗೆ ಬರಬೇಡ. ನಾವು ಇಲ್ಲಿದ್ದುಕೊಂಡು ಈಜಿಪ್ಟಿನವರ ಸೇವೆಮಾಡಲು ಬಿಡು’ ಎಂದು ಹೇಳಿದ್ದೆವು. ನಾವು ಇಲ್ಲಿಗೆ ಬಂದು ಅರಣ್ಯದಲ್ಲಿ ಸಾಯುವುದಕ್ಕಿಂತ, ಅಲ್ಲೇ ಗುಲಾಮರಾಗಿ ಇದ್ದಿದ್ದರೆ ಒಳ್ಳೆಯದಾಗಿರುತ್ತಿತ್ತು” ಎಂದು ಹೇಳಿದರು.
13 ಆದರೆ ಮೋಶೆ ಆ ಜನರಿಗೆ, “ಭಯಪಡಬೇಡಿರಿ! ಓಡಿಹೋಗಬೇಡಿರಿ! ಇಲ್ಲೇ ಇದ್ದು ಯೆಹೋವನು ಈ ದಿನ ನಿಮ್ಮನ್ನು ರಕ್ಷಿಸುವುದನ್ನು ನೋಡಿರಿ. ಈ ದಿನದ ನಂತರ ನೀವು ಇನ್ನೆಂದಿಗೂ ಈ ಈಜಿಪ್ಟಿನವರನ್ನು ನೋಡುವುದಿಲ್ಲ. 14 ಯೆಹೋವನು ನಿಮಗೋಸ್ಕರ ಯುದ್ಧಮಾಡುವನು. ಆದ್ದರಿಂದ ನೀವು ಸುಮ್ಮನೆ ಇರಿ” ಎಂದು ಹೇಳಿದನು.
15 ಆಗ ಯೆಹೋವನು ಮೋಶೆಗೆ, “ನೀನು ನನಗೆ ಮೊರೆಯಿಡುತ್ತಿರುವುದೇಕೆ? ಇಸ್ರೇಲರಿಗೆ ಮುಂದೆ ಹೋಗಲು ಆಜ್ಞಾಪಿಸು. 16 ನಿನ್ನ ಕೈಯಲ್ಲಿರುವ ಊರುಗೋಲನ್ನು ಕೆಂಪುಸಮುದ್ರದ ಮೇಲೆ ಚಾಚು. ಆಗ ಸಮುದ್ರವು ಇಬ್ಭಾಗವಾಗುವುದು. ಜನರು ಒಣನೆಲದ ಮೇಲೆ ಸಮುದ್ರವನ್ನು ದಾಟಬಹುದು. 17 ಈಜಿಪ್ಟಿನವರು ನಿಮ್ಮನ್ನು ಬೆನ್ನಟ್ಟುವಂತೆ ನಾನು ಅವರ ಹೃದಯಗಳನ್ನು ಕಠಿಣಗೊಳಿಸುವುದರಿಂದ ನಾನು ಫರೋಹನಿಗಿಂತಲೂ ಅವನ ಎಲ್ಲಾ ರಾಹುತರುಗಳಿಗಿಂತಲೂ ರಥಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ನಿಮಗೆ ತೋರಿಸುವೆನು. 18 ಆಗ ನಾನೇ ಯೆಹೋವನೆಂದು ಈಜಿಪ್ಟಿಗೆ ತಿಳಿಯುವುದು. ನಾನು ಫರೋಹನನ್ನೂ ಅವನ ರಾಹುತರನ್ನೂ ರಥಗಳನ್ನೂ ಸೋಲಿಸಿದಾಗ ಅವರು ನನ್ನನ್ನು ಸನ್ಮಾನಿಸುವರು” ಎಂದು ಹೇಳಿದನು.
ಯೆಹೋವನು ಈಜಿಪ್ಟಿನ ಸೈನ್ಯವನ್ನು ಸೋಲಿಸಿದನು
19 ಆ ಸಮಯದಲ್ಲಿ ಯೆಹೋವನ ದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಆದ್ದರಿಂದ ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅವರ ಹಿಂಭಾಗಕ್ಕೆ ಹೋಯಿತು. 20 ಹೀಗೆ ಮೋಡವು ಈಜಿಪ್ಟಿನವರಿಗೂ ಇಸ್ರೇಲರಿಗೂ ನಡುವೆ ನಿಂತಿತು. ಅಲ್ಲಿ ಇಸ್ರೇಲರಿಗೆ ಬೆಳಕಿತ್ತು. ಆದರೆ ಈಜಿಪ್ಟಿನವರಿಗೆ ಕತ್ತಲಿತ್ತು. ಆದ್ದರಿಂದ ಈಜಿಪ್ಟಿನವರು ಆ ರಾತ್ರಿ ಇಸ್ರೇಲರ ಸಮೀಪಕ್ಕೆ ಬರಲಿಲ್ಲ.
21 ಮೋಶೆಯು ತನ್ನ ಕೈಯನ್ನು ಕೆಂಪುಸಮುದ್ರದ ಮೇಲೆ ಚಾಚಿದನು; ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿಯನ್ನು ಬೀಸುವಂತೆ ಮಾಡಿದನು. ಗಾಳಿಯು ರಾತ್ರಿಯೆಲ್ಲಾ ಬೀಸಿತು. ಸಮುದ್ರವು ಇಬ್ಭಾಗವಾಗಿ ಮಧ್ಯದಲ್ಲಿ ಒಣನೆಲವಾಯಿತು. 22 ಇಸ್ರೇಲರು ಒಣನೆಲದ ಮೇಲೆ ಸಮುದ್ರವನ್ನು ದಾಟಿದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತು. 23 ಆಗ ಫರೋಹನು ತನ್ನ ಎಲ್ಲಾ ರಥಗಳೊಡನೆ ಮತ್ತು ರಾಹುತರೊಡನೆ ಅವರನ್ನು ಹಿಂಬಾಲಿಸಿ ಸಮುದ್ರದೊಳಕ್ಕೆ ಹೋದನು. 24 ಬೆಳಗಿನ ಜಾವ ಇನ್ನೂ ಮೊಬ್ಬಿರುವಾಗ, ಯೆಹೋವನು ಎತ್ತರವಾದ ಮೇಘಸ್ತಂಭದಿಂದ ಮತ್ತು ಅಗ್ನಿಸ್ತಂಭದಿಂದ ಈಜಿಪ್ಟಿನ ಸೈನ್ಯವನ್ನು ದೃಷ್ಟಿಸಿದನು. ಆಗ ಯೆಹೋವನು ಅವರ ಮೇಲೆ ಧಾಳಿಮಾಡಿ ಅವರ ಪಾಳೆಯದಲ್ಲಿ ಗಲಿಬಿಲಿಮಾಡಿದನು. 25 ರಥಗಳ ಚಕ್ರಗಳು ನೆಲಕ್ಕೆ ಅಂಟಿಕೊಂಡವು. ರಥಗಳನ್ನು ನಡಿಸುವುದು ಬಹುಕಷ್ಟವಾಗಿತ್ತು. ಈಜಿಪ್ಟಿನವರು “ನಾವು ಇಲ್ಲಿಂದ ಹೋಗೋಣ. ಯೆಹೋವನು ಈಜಿಪ್ಟಿನ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾನೆ. ಯೆಹೋವನು ಇಸ್ರೇಲರಿಗಾಗಿ ಯುದ್ಧ ಮಾಡುತ್ತಿದ್ದಾನೆ” ಎಂದು ಕೂಗಿಕೊಂಡರು.
26 ಆಗ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚು; ನೀರು ಈಜಿಪ್ಟಿನವರ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಕೊಳ್ಳುವುದು” ಎಂದು ಹೇಳಿದನು.
27 ಆದ್ದರಿಂದ ಹಗಲಿನ ಬೆಳಕು ಪ್ರಕಾಶಿಸುವುದಕ್ಕಿಂತ ಸ್ವಲ್ಪ ಮೊದಲು, ಮೋಶೆಯು ತನ್ನ ಕೈಯನ್ನು ಸಮುದ್ರದ ಮೇಲೆ ಚಾಚಿದನು. ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿತು. ಈಜಿಪ್ಟಿನವರು ನೀರಿನಿಂದ ಓಡಿಹೋಗಲು ಬಹಳವಾಗಿ ಪ್ರಯತ್ನಿಸಿದರು. ಆದರೆ ಯೆಹೋವನು ಈಜಿಪ್ಟಿನವರನ್ನು ಸಮುದ್ರದಲ್ಲಿ ಕೆಡವಿಬಿಟ್ಟನು. 28 ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಬಿಟ್ಟಿತು. ಸಮುದ್ರದೊಳಗೆ ಹೋಗಿದ್ದ ಇಸ್ರೇಲರನ್ನು ಬೆನ್ನಟ್ಟಿದ ಫರೋಹನ ಸೈನ್ಯವೆಲ್ಲಾ ನಾಶವಾಯಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.
29 ಆದರೆ ಇಸ್ರೇಲರು ಒಣನೆಲದಲ್ಲಿ ಸಮುದ್ರವನ್ನು ದಾಟಿದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತು. 30 ಆದ್ದರಿಂದ ಆ ದಿನ ಯೆಹೋವನು ಇಸ್ರೇಲರನ್ನು ಈಜಿಪ್ಟಿನವರಿಂದ ರಕ್ಷಿಸಿದನು. ಇಸ್ರೇಲರು ಕೆಂಪುಸಮುದ್ರದ ದಡದಲ್ಲಿ ಬಿದ್ದಿದ್ದ ಈಜಿಪ್ಟಿನವರ ಹೆಣಗಳನ್ನು ನೋಡಿದರು. 31 ಈಜಿಪ್ಟಿನವರನ್ನು ಯೆಹೋವನು ಸೋಲಿಸಿದಾಗ ಇಸ್ರೇಲರು ಆತನ ಮಹಾಶಕ್ತಿಯನ್ನು ನೋಡಿದರು. ಆದ್ದರಿಂದ ಜನರು ಯೆಹೋವನನ್ನು ಸನ್ಮಾನಿಸಿ ಆತನ ಸೇವಕನಾದ ಮೋಶೆಯಲ್ಲಿ ಭರವಸವಿಟ್ಟರು.