12
ಯೇಸುವನ್ನೇ ಅನುಸರಿಸಿರಿ
ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು. ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.
ದೇವರು ತಂದೆಯಂತಿದ್ದಾನೆ
ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:
 
“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.” ಜ್ಞಾನೋಕ್ತಿಗಳು 3:11-12
 
ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.
ಯೋಗ್ಯ ಮಾರ್ಗದಲ್ಲಿ ಜೀವಿಸಿರಿ
12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.
14 ಎಲ್ಲಾ ಜನರೊಂದಿಗೆ ಸಮಾಧಾನದಿಂದಲೂ ಪರಿಶುದ್ಧರಾಗಿಯೂ ಜೀವಿಸಲು ಪ್ರಯತ್ನಿಸಿರಿ. ಯಾವನ ಜೀವಿತವು ಪರಿಶುದ್ಧವಾಗಿರುವುದಿಲ್ಲವೋ ಅವನೆಂದಿಗೂ ಪ್ರಭುವನ್ನು ನೋಡುವುದಿಲ್ಲ. 15 ನಿಮ್ಮಲ್ಲಿ ಯಾರೂ ದೇವರ ಕೃಪೆಯನ್ನು ಕಳೆದುಕೊಳ್ಳದಂತೆ ಎಚ್ಚರದಿಂದಿರಿ. ನಿಮ್ಮಲ್ಲಿ ಯಾವನೂ ಚಿಗುರಿ ಬೆಳೆಯುವ ವಿಷದ ಬೇರಿನಂತಾಗದಂತೆ ಎಚ್ಚರಿಕೆಯಿಂದಿರಿ. ಅಂಥವನಿಂದ ನಿಮ್ಮ ಇಡೀ ಗುಂಪೇ ಹಾಳಾಗುವುದು. 16 ನಿಮ್ಮಲ್ಲಿ ಯಾರೂ ಮಾಡದಂತೆ ಜಾಗ್ರತೆಯಿಂದಿರಿ; ಪ್ರಾಪಂಚಿಕನಾದ ಏಸಾವನಂತೆ ಆಗದಿರಲು ಎಚ್ಚರದಿಂದಿರಿ. ಹಿರಿಯ ಮಗನಾದ ಏಸಾವನು ತನ್ನ ತಂದೆಯ ಸಮಸ್ತಕ್ಕೂ ವಾರಸುದಾರನಾಗುತ್ತಿದ್ದನು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಎಲ್ಲವನ್ನೂ ಮಾರಿದನು. 17 ನಿಮಗೇ ತಿಳಿದಿರುವಂತೆ, ಆ ಬಳಿಕ ಅವನು ತನ್ನ ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಹಳವಾಗಿ ಗೋಳಾಡಿದನು. ಏಸಾವನು ತಾನು ಮಾಡಿದ್ದನ್ನು ಬದಲಾಯಿಸಲಾಗದ್ದರಿಂದ ತಂದೆಯ ಆಶೀರ್ವಾದವು ಅವನಿಗೆ ದೊರೆಯಲಿಲ್ಲ.
18 ನೀವು ಒಂದು ಹೊಸ ಸ್ಥಳಕ್ಕೆ ಬಂದಿರುವಿರಿ. ಅದು ಇಸ್ರೇಲಿನ ಜನರು ಬಂದ ಬೆಟ್ಟದ ಸ್ಥಳವಲ್ಲ. ಮುಟ್ಟುವುದಕ್ಕೆ ಸಾಧ್ಯವಾಗುವಂತಹ ಮತ್ತು ಬೆಂಕಿ ಹತ್ತಿಕೊಂಡಿರುವಂತಹ ಬೆಟ್ಟದ ಬಳಿಗೆ ನೀವು ಬಂದಿಲ್ಲ. ನೀವು ಕಗ್ಗತ್ತಲೆ, ದುಃಖ ಮತ್ತು ಬಿರಗಾಳಿಯ ಬಳಿಗೆ ಬಂದಿಲ್ಲ. 19 ನೀವು ತುತೂರಿಯ ಧ್ವನಿಯ ಬಳಿಗಾಗಲಿ ಅಥವಾ ನಿಮ್ಮೊಂದಿಗೆ ಮಾತನಾಡುವ ಸ್ವರದ ಬಳಿಗಾಗಲಿ ಬಂದಿಲ್ಲ. ಜನರು ಆ ಧ್ವನಿಯನ್ನು ಕೇಳಿದಾಗ, ಮತ್ತೊಂದು ಮಾತನ್ನು ತಮಗೆ ಹೇಳಬಾರದೆಂದು ಬೇಡಿಕೊಂಡರು. 20 “ಆ ಬೆಟ್ಟವನ್ನು ಮುಟ್ಟುವ ಏನನ್ನಾದರೂ ಸರಿ, ಅದು ಒಂದು ಪ್ರಾಣಿಯಾಗಿದ್ದರೂ ಅದನ್ನು ಕಲ್ಲೆಸೆದು ಕೊಂದುಹಾಕಿರಿ” ಎಂಬ ಆಜ್ಞೆಯನ್ನು ಕೇಳಲು ಅವರು ಇಷ್ಟಪಡಲಿಲ್ಲ. 21 ಆ ಜನರು ಅಂದು ಕಂಡದ್ದು ಭಯಂಕರವಾಗಿದ್ದುದರಿಂದ ಮೋಶೆಯು, “ನಾನು ಭಯದಿಂದ ನಡುಗುತ್ತಿದ್ದೇನೆ” ಎಂದು ಹೇಳಿದನು.
22 ಆದರೆ ನೀವು ಅಂಥ ಸ್ಥಳಕ್ಕೆ ಬಂದಿಲ್ಲ. ನೀವು ಬಂದಿರುವ ಹೊಸ ಸ್ಥಳ ಚೀಯೋನ್ ಬೆಟ್ಟ, ಜೀವಸ್ವರೂಪನಾದ ದೇವರು ವಾಸವಾಗಿರುವ ಪರಲೋಕದ ಜೆರುಸಲೇಮಿಗೂ ಸಹಸ್ರಾರು ದೇವದೂತರು ಸಂತೋಷದಿಂದ ಒಟ್ಟುಗೂಡಿರುವ ಸ್ಥಳಕ್ಕೂ ಬಂದಿರುವಿರಿ. 23 ದೇವರ ಚೊಚ್ಚಲು ಮಕ್ಕಳ ಸಭೆಗೆ ನೀವು ಬಂದಿರುವಿರಿ. ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆಯಲಾಗಿದೆ. ನೀವು ಜನರಿಗೆಲ್ಲ ತೀರ್ಪು ನೀಡುವ ದೇವರ ಬಳಿಗೂ ಪರಿಪೂರ್ಣರನ್ನಾಗಿ ಮಾಡಲ್ಪಟ್ಟ ಒಳ್ಳೆಯ ಜನರ ಆತ್ಮಗಳ ಬಳಿಗೂ ಬಂದಿರುವಿರಿ. 24 ದೇವರಿಂದ ಹೊಸ ಒಡಂಬಡಿಕೆಯನ್ನು ತಂದಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮ ಸಂಗತಿಗಳನ್ನು ನಮಗೆ ತಿಳಿಸುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25 ದೇವರು ಮಾತನಾಡುವಾಗ ಆಲಿಸದೆ ಇರಬೇಡಿ. ಆತನು ಇಸ್ರೇಲರಿಗೆ ಈ ಲೋಕದಲ್ಲಿ ಎಚ್ಚರಿಕೆ ನೀಡಿದಾಗ, ಅವರು ಆತನ ಮಾತನ್ನು ಕೇಳಲಿಲ್ಲ. ಆದರೆ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಈಗ ದೇವರು ಪರಲೋಕದಿಂದ ಮಾತಾಡುತ್ತಿದ್ದಾನೆ. ಆತನ ಮಾತನ್ನು ಆಲಿಸದ ಜನರು ಹೇಗೆ ತಪ್ಪಿಸಿಕೊಳ್ಳಲಾದೀತು? 26 ಆತನು ಮುಂಚೆ ಮಾತನಾಡಿದಾಗ, ಆತನ ಧ್ವನಿಯು ಭೂಮಿಯನ್ನು ನಡುಗಿಸಿತು. ಆದರೆ ಈಗ ಆತನು, “ಮತ್ತೊಂದು ಸಾರಿ ನಾನು ಭೂಮಿಯನ್ನು ನಡುಗಿಸುತ್ತೇನೆ, ಪರಲೋಕವನ್ನೂ ನಡುಗಿಸುತ್ತೇನೆ” ಎಂದು ವಾಗ್ದಾನ ಮಾಡಿದ್ದಾನೆ. 27 “ಮತ್ತೊಂದು ಸಾರಿ” ಎಂಬ ಮಾತುಗಳು ಸೃಷ್ಟಿಗೊಂಡ ಎಲ್ಲವೂ ನಾಶವಾಗುತ್ತವೆ ಎಂಬುದನ್ನು ನಮಗೆ ಸ್ಪಷ್ಟಪಡಿಸುತ್ತವೆ. ಅವುಗಳನ್ನು ನಡುಗಿಸಲು ಸಾಧ್ಯ. ನಡುಗಿಸಲಾಗದಂಥವುಗಳು ಮಾತ್ರ ಸ್ಥಿರವಾಗಿರುತ್ತವೆ.
28 ಆದ್ದರಿಂದ, ನಡುಗಿಸಲಾಗದಿರುವ ರಾಜ್ಯವನ್ನು ನಾವು ಹೊಂದಿರುವುದರಿಂದ ದೇವರಿಗೆ ಕೃತಜ್ಞತೆಯಿಂದಿರಬೇಕು. ಆತನಿಗೆ ಮೆಚ್ಚಿಕೆಕರವಾದ ಆರಾಧನೆಯನ್ನು ಭಯಭಕ್ತಿಯಿಂದ ಮಾಡಬೇಕು. 29 ಏಕೆಂದರೆ ನಮ್ಮ ದೇವರು ನಾಶಮಾಡುವ ಬೆಂಕಿಯಂತಿದ್ದಾನೆ.
12:20 ಉಲ್ಲೇಖನ: ವಿಮೋಚನ. 19:12,13. 12:21 ಉಲ್ಲೇಖನ: ಧರ್ಮೋಪದೇಶ. 9:19. 12:26 ಉಲ್ಲೇಖನ: ಹಗ್ಗಾಯ 2:6.