13
ಇಸ್ರೇಲ್ ತನ್ನನ್ನು ತಾನೇ ನಾಶಮಾಡಿಕೊಂಡಿತು
“ಎಫ್ರಾಯೀಮ್ ಇಸ್ರೇಲರೊಳಗೆ ತನ್ನನ್ನು ತಾನೇ ಮುಖ್ಯಸ್ಥನನ್ನಾಗಿ ಮಾಡಿಕೊಂಡನು. ಎಫ್ರಾಯೀಮನು ಮಾತನಾಡಿದಾಗ ಜನರು ಹೆದರಿ ನಡುಗಿದರು. ಆದರೆ ಅವನು ಪಾಪದಲ್ಲಿ ಬಿದ್ದನು. ಬಾಳನನ್ನು ಪೂಜಿಸಲು ಪ್ರಾರಂಭಿಸಿದನು. ಈಗ ಇಸ್ರೇಲರು ಹೆಚ್ಚೆಚ್ಚಾಗಿ ಪಾಪ ಮಾಡುತ್ತಿರುತ್ತಾರೆ. ತಮಗಾಗಿ ವಿಗ್ರಹಗಳನ್ನು ಮಾಡಿಕೊಳ್ಳುತ್ತಾರೆ. ಅಕ್ಕಸಾಲಿಗರು ಬೆಳ್ಳಿಯಿಂದ ವಿಗ್ರಹಗಳನ್ನು ಮಾಡುವರು. ತಾವು ಮಾಡಿದ ಮೂರ್ತಿಗಳೊಂದಿಗೆ ಮಾತನಾಡುವರು. ಆ ವಿಗ್ರಹಗಳಿಗೆ ಯಜ್ಞವನ್ನರ್ಪಿಸುವರು. ಬಂಗಾರದ ಬಸವನ ವಿಗ್ರಹಕ್ಕೆ ಮುದ್ದು ಕೊಡುವರು. ಆದ್ದರಿಂದ ಆ ಜನರು ಬೇಗನೇ ಕಣ್ಮರೆಯಾಗುವರು. ಅವರು ಬೆಳಗಿನ ಜಾವದ ಇಬ್ಬನಿಯಂತೆ ಬೇಗನೇ ಮಾಯವಾಗುವರು. ಇಸ್ರೇಲರು ಕಣದಲ್ಲಿರುವ ಹೊಟ್ಟಿನಂತೆ ಗಾಳಿಯಲ್ಲಿ ಹೊಡೆದುಕೊಂಡು ಹೋಗುವರು. ಇಸ್ರೇಲರು ಮನೆಯೊಳಗಿಂದ ಮೇಲಕ್ಕೆ ಹೊರಟು ಆಮೇಲೆ ಕಾಣದೆಹೋಗುವ ಹೊಗೆಯಂತಿದ್ದಾರೆ.
“ನೀವು ಈಜಿಪ್ಟಿನಲ್ಲಿದ್ದ ದಿವಸಗಳಿಂದ ನಾನೇ ನಿಮ್ಮ ಯೆಹೋವನಾಗಿದ್ದೇನೆ. ನನ್ನ ಹೊರತು ಬೇರೆ ಯಾವ ದೇವರನ್ನೂ ನೀವು ತಿಳಿದಿರಲಿಲ್ಲ. ನನ್ನ ಹೊರತು ಬೇರೆ ಯಾವ ರಕ್ಷಕನೂ ಇಲ್ಲ. ಮರುಭೂಮಿಯಲ್ಲಿ ನಿಮ್ಮನ್ನು ತಿಳಿದುಕೊಂಡಿದ್ದೆನು. ಆ ಒಣಭೂಮಿಯಲ್ಲಿ ನಾನು ನಿಮ್ಮನ್ನು ಬಲ್ಲೆನು. ನಾನು ಇಸ್ರೇಲರಿಗೆ ಆಹಾರ ಒದಗಿಸಿದೆನು. ಅವರು ಆ ಆಹಾರವನ್ನು ಉಂಡು ತಿಂದು ತೃಪ್ತರಾಗಿ ಕೊಬ್ಬೇರಿದ್ದರಿಂದ ನನ್ನನ್ನು ಮರೆತರು.
“ಆದ್ದರಿಂದಲೇ ನಾನು ಅವರಿಗೆ ಸಿಂಹದಂತಿರುವೆನು. ದಾರಿ ಬದಿಯಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು. ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲರಗಿ ಅವರನ್ನು ಗಾಯಗೊಳಿಸಿ ಅವರ ಎದೆಯನ್ನು ಸೀಳಿ ಬಿಡುವೆನು. ನಾನು ಸಿಂಹದಂತೆಯೂ ಕ್ರೂರ ಮೃಗದಂತೆಯೂ ಅವರನ್ನು ಸೀಳಿ ತಿಂದುಬಿಡುವೆನು.”
ದೈವಕೋಪದಿಂದ ಯಾರೂ ಇಸ್ರೇಲರನ್ನು ರಕ್ಷಿಸಲಾರರು
“ಇಸ್ರೇಲೇ, ನಾನು ನಿನಗೆ ಸಹಾಯ ಮಾಡಿದರೂ ನೀನು ನನಗೆ ವಿರೋಧವಾಗಿ ಎದ್ದಿರುವೆ. ಆದ್ದರಿಂದ ನಾನು ನಿನ್ನನ್ನು ನಾಶಮಾಡುವೆನು. 10 ನಿನ್ನ ಅರಸನೆಲ್ಲಿ? ನಿನ್ನ ಯಾವ ಪಟ್ಟಣದಲ್ಲಿಯಾಗಲಿ ಅವನು ನಿನ್ನನ್ನು ರಕ್ಷಿಸಲಾರ. ನಿನ್ನ ನ್ಯಾಯಾಧೀಶರುಗಳೆಲ್ಲಿ? ನೀನು, ‘ನಮಗೆ ರಾಜನನ್ನೂ ನಾಯಕರನ್ನೂ ಕೊಡು’ ಎಂದು ಕೇಳಿಕೊಂಡೆ. 11 ನಾನು ಕೋಪಗೊಂಡೆನು ಮತ್ತು ಒಬ್ಬ ಅರಸನನ್ನು ಕೊಟ್ಟೆನು. ನಾನು ಹೆಚ್ಚಾಗಿ ಕೋಪಗೊಂಡಾಗ ಅವನನ್ನು ತೆಗೆದುಬಿಟ್ಟೆನು.
 
12 “ಎಫ್ರಾಯೀಮ್ ತನ್ನ ಅಪರಾಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದನು.
ತಾನು ಮಾಡಿದ ಪಾಪಗಳು ಯಾರಿಗೂ ತಿಳಿದಿಲ್ಲವೆಂದು ಅವನು ಭಾವಿಸಿದನು;
ಆದರೆ ಅವನು ಶಿಕ್ಷಿಸಲ್ಪಡುವನು;
13 ಅವನಿಗಾಗುವ ಶಿಕ್ಷೆಯು ಒಬ್ಬ ಸ್ತ್ರೀಯ ಪ್ರಸವವೇದನೆಯಂತಿರುವದು.
ಅವನು ಜಾಣನಾದ ಮಗನಾಗಿರುವದಿಲ್ಲ;
ಹುಟ್ಟುವ ಸಮಯ ಬಂದರೂ
ಅವನು ಜೀವಿಸುವದಿಲ್ಲ.
 
14 “ಸಮಾಧಿಯಿಂದ ಅವರನ್ನು ರಕ್ಷಿಸುವೆನು;
ಮರಣದಿಂದ ಅವರನ್ನು ಪಾರುಮಾಡುವೆನು.
ಮರಣವೇ, ನಿನ್ನ ವ್ಯಾಧಿಗಳೆಲ್ಲಿ?
ಸಮಾಧಿಯೇ, ನಿನ್ನ ಶಕ್ತಿ ಎಲ್ಲಿ?
ನಾನು ಪ್ರತಿಕಾರ ಸಲ್ಲಿಸುವದಿಲ್ಲ.
15 ಇಸ್ರೇಲ್ ತನ್ನ ಸಹೋದರರ ಮಧ್ಯದಲ್ಲಿ ಬೆಳೆಯುವನು.
ಒಂದು ಬಲವಾದ ಪೂರ್ವದಿಕ್ಕಿನ ಗಾಳಿಯು ಬರುವದು. ಯೆಹೋವನ ಗಾಳಿಯು ಮರುಭೂಮಿಯಿಂದ ಬೀಸುವದು.
ಅವನ ನೀರಿನ ಒರತೆಯು ಒಣಗಿಹೋಗುವದು,
ಆ ಗಾಳಿಯು ಇಸ್ರೇಲರ ಐಶ್ವರ್ಯವನ್ನೆಲ್ಲಾ ಎತ್ತಿಕೊಂಡು ಹೋಗಿಬಿಡುವದು.
16 ಸಮಾರ್ಯವು ಶಿಕ್ಷಿಸಲ್ಪಡಬೇಕು.
ಯಾಕೆಂದರೆ ಆಕೆಯು ತನ್ನ ದೇವರಿಗೆ ವಿರುದ್ಧವಾಗಿ ನಡೆದಳು.
ಇಸ್ರೇಲರು ಖಡ್ಗದಿಂದ ಸಾಯುವರು.
ಅವರ ಮಕ್ಕಳು ಹರಿಯಲ್ಪಟ್ಟು ಚೂರುಚೂರಾಗುವರು.
ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವರು.”