11
ಸಮಾಧಾನದ ಅರಸನು ಬರುವನು
ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು. ಯೆಹೋವನ ಆತ್ಮವು ಆತನಲ್ಲಿದ್ದು, ಜ್ಞಾನ, ತಿಳುವಳಿಕೆ, ಮಾರ್ಗದರ್ಶನ ಮತ್ತು ಸಾಮರ್ಥ್ಯವನ್ನು ದಯಪಾಲಿಸುವದು; ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಗೌರವಿಸಲು ಆ ಮಗುವಿಗೆ ಸಹಾಯಿಸುವುದು. ಆತನು ಯೆಹೋವನನ್ನು ಸನ್ಮಾನಿಸುತ್ತಾ ಸಂತೋಷಿಸುವನು.
ಆತನು ಜನರಿಗೆ ನ್ಯಾಯತೀರಿಸುವುದು ಹೊರತೋರಿಕೆಯ ಆಧಾರದ ಮೇಲಲ್ಲ; ಕೇಳಿಕೊಂಡದ್ದರ ಆಧಾರದ ಮೇಲೂ ಅಲ್ಲ. 4-5 ಆತನು ಬಡಜನರಿಗೆ ಅನ್ಯಾಯಮಾಡದೆ ನ್ಯಾಯವಾದ ತೀರ್ಪನ್ನು ಕೊಡುವನು, ದೇಶದ ಬಡಜನರಿಗೋಸ್ಕರವಾಗಿ ಮಾಡುವ ಆಲೋಚನೆಯನ್ನು ಪಕ್ಷಪಾತವಿಲ್ಲದೆ ಮಾಡುವನು. ಆತನು ಜನರಿಗೆ ಶಿಕ್ಷೆ ಕೊಡಬೇಕೆಂದು ತೀರ್ಮಾನಿಸಿದರೆ ಅದನ್ನು ಆಜ್ಞಾಪಿಸಿ ಶಿಕ್ಷಿಸುವನು. ದುಷ್ಟರಿಗೆ ಮರಣದಂಡನೆಯಾಗಬೇಕೆಂದು ಆತನು ತೀರ್ಮಾನಿಸಿದರೆ, ಆತನು ಆಜ್ಞಾಪಿಸಿ ಕೊಲ್ಲಿಸುವನು. ನ್ಯಾಯವೇ ಆತನಿಗೆ ನಡುಕಟ್ಟು, ಒಳ್ಳೆಯತನವೇ ಆತನಿಗೆ ಸೊಂಟಪಟ್ಟಿಯಾಗಿವೆ.
ಆ ಸಮಯದಲ್ಲಿ ತೋಳಗಳು ಕುರಿಮರಿಯೊಂದಿಗೆ ಸಮಾಧಾನದಿಂದ ಒಟ್ಟಾಗಿ ವಾಸಿಸುವವು. ಚಿರತೆಯು ಆಡಿನ ಮರಿಗಳೊಂದಿಗೆ ಮಲಗಿಕೊಳ್ಳುವದು. ಕರುಗಳು, ಪ್ರಾಯದ ಸಿಂಹಗಳು, ಹೋರಿಗಳು ಒಟ್ಟಾಗಿ ಸಮಾಧಾನದಿಂದ ಜೀವಿಸುವವು. ಒಂದು ಚಿಕ್ಕಮಗು ಅವುಗಳನ್ನು ನಡಿಸುವುದು. ದನಗಳೂ ಕರಡಿಗಳೂ ಜೊತೆಯಾಗಿರುವವು. ಅವುಗಳ ಮರಿಗಳೆಲ್ಲಾ ಒಂದಕ್ಕೊಂದು ಹಾನಿಮಾಡದೆ ಒಟ್ಟಾಗಿ ಮಲಗಿಕೊಳ್ಳುವವು. ಸಿಂಹಗಳು ದನಗಳಂತೆ ಹುಲ್ಲು ತಿನ್ನುವವು. ಹಾವುಗಳು ಸಹ ಜನರಿಗೆ ಹಾನಿ ಮಾಡುವದಿಲ್ಲ. ಮಗುವು ನಾಗರಹಾವಿನ ಹುತ್ತದ ಬಳಿ ಆಡುತ್ತಾ ಹುತ್ತದೊಳಗೆ ಕೈಹಾಕುವದು.
ಯಾರೂ ಪರಸ್ಪರ ಹಾನಿಮಾಡುವದಿಲ್ಲ. ನನ್ನ ಪವಿತ್ರ ಪರ್ವತದಲ್ಲಿನ ಜನರು ವಸ್ತುಗಳನ್ನು ನಾಶಮಾಡಲು ಇಷ್ಟಪಡುವದಿಲ್ಲ. ಯಾಕೆಂದರೆ ಆಗ ಜನರು ನಿಜವಾಗಿಯೂ ಯೆಹೋವನನ್ನು ಅರಿತಿರುವರು. ಸಾಗರದಲ್ಲಿ ನೀರು ತುಂಬಿದಂತೆ ಲೋಕವೆಲ್ಲಾ ಆತನ ವಿಷಯವೆಂಬ ಜ್ಞಾನದಿಂದ ತುಂಬುವದು.
10 ಆ ಸಮಯದಲ್ಲಿ ಇಷಯನ ವಂಶದಿಂದ ಒಬ್ಬ ವಿಶೇಷ ವ್ಯಕ್ತಿಯು ಹುಟ್ಟುವನು. ಆತನು ಒಂದು ಧ್ಜಜದಂತಿರುವನು. ಎಲ್ಲಾ ಜನಾಂಗಗಳು ಆತನ ಸುತ್ತಲೂ ಸೇರಿಬರಬೇಕೆಂದು ಈ ಧ್ವಜವು ತೋರಿಸುವುದು. ಆ ಜನಾಂಗಗಳು ತಾವು ಏನು ಮಾಡಬೇಕೆಂದು ಕೇಳುವರು. ಆತನಿರುವ ಸ್ಥಳವು ಮಹಿಮೆಯಿಂದ ತುಂಬುವದು
11 ಆ ಸಮಯದಲ್ಲಿ ನನ್ನ ಒಡೆಯನು ಎರಡನೆ ಸಾರಿ ಕೈಚಾಚಿ, ಉಳಿದ ತನ್ನ ಜನರನ್ನು ತೆಗೆದುಕೊಳ್ಳುವನು. ಇವರು ಅಶ್ಶೂರ, ಉತ್ತರ ಈಜಿಪ್ಟ್, ದಕ್ಷಿಣ ಈಜಿಪ್ಟ್, ಇಥಿಯೋಪ್ಯ, ಏಲಾಮ್, ಬಾಬಿಲೋನಿಯ, ಹಮಾಥ್ ಮತ್ತು ಕರಾವಳಿ ಪ್ರದೇಶಗಳಲ್ಲಿರುವ ಎಲ್ಲಾ ಜನಾಂಗಗಳವರು. 12 ದೇವರು ಜನಾಂಗಗಳಿಗೆ ಒಂದು ಗುರುತಾಗಿ ಧ್ವಜವನ್ನೆತ್ತುವನು. ಇಸ್ರೇಲ್ ಮತ್ತು ಯೆಹೂದದ ಜನರು ತಮ್ಮ ಸ್ಥಳಗಳಿಂದ ಕಡ್ಡಾಯವಾಗಿ ತೆಗೆದುಹಾಕಲ್ಪಡುವರು. ಆ ಜನರು ಪ್ರಪಂಚದ ಬಹುದೂರದ ಸ್ಥಳಗಳಿಗೆ ಚದರಿ ಹೋಗುವರು. ಆದರೆ ದೇವರು ಅವರನ್ನು ಒಟ್ಟಾಗಿ ಸೇರಿಸುವನು.
13 ಆ ಸಮಯದಲ್ಲಿ ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚುಪಡುವುದಿಲ್ಲ. ಯೆಹೂದಕ್ಕೆ ವೈರಿಗಳಿರುವದಿಲ್ಲ ಮತ್ತು ಎಫ್ರಾಯೀಮನಿಗೆ ಯೆಹೂದವು ತೊಂದರೆಯನ್ನು ಮಾಡುವದಿಲ್ಲ. 14 ಆದರೆ ಎಫ್ರಾಯೀಮ್ಯರು ಮತ್ತು ಯೆಹೂದ್ಯರು ಒಟ್ಟುಸೇರಿ ಫಿಲಿಷ್ಟಿಯರನ್ನು ಎದುರಿಸುವರು. ನೆಲದ ಮೇಲೆ ಇರುವ ಸಣ್ಣ ಪ್ರಾಣಿಯನ್ನು ಹಿಡಿಯಲು ಆಕಾಶದಿಂದ ಬರುವ ಹಕ್ಕಿಗಳಂತೆ ಈ ಎರಡು ರಾಷ್ಟ್ರಗಳಿರುವವು. ಅವರು ಒಟ್ಟಾಗಿ ಪೂರ್ವದ ಜನರ ಐಶ್ವರ್ಯವನ್ನು ಕಿತ್ತುಕೊಳ್ಳುವರು. ಎಫ್ರಾಯೀಮ್ ಮತ್ತು ಯೆಹೂದಗಳು ಏದೋಮನ್ನು, ಮೋವಾಬನ್ನು ಮತ್ತು ಅಮ್ಮೋನನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವವು.
15 ಯೆಹೋವನು ಸಿಟ್ಟುಗೊಂಡು ಈಜಿಪ್ಟಿನ ಸಮುದ್ರವನ್ನು ವಿಂಗಡಿಸಿದನು. ಅದೇ ರೀತಿಯಲ್ಲಿ ಯೂಫ್ರೇಟೀಸ್ ನದಿಯ ಮೇಲೆ ತನ್ನ ಕೈಯನ್ನು ಚಾಚುವನು. ಆತನು ನದಿಯ ನೀರಿಗೆ ಹೊಡೆಯುವನು. ಆಗ ಅದು ಏಳು ಚಿಕ್ಕ ನದಿಗಳಾಗಿ ಹರಿಯುವುದು. ಆ ನದಿಗಳು ಆಳವಾಗಿರುವದಿಲ್ಲ. ಜನರು ತಮ್ಮ ಕೆರಗಳೊಂದಿಗೆ ದಾಟಬಹುದು. 16 ಅಳಿದುಳಿದ ದೇವಜನರು ಅಶ್ಶೂರ ದೇಶವನ್ನು ಬಿಡಲು ಒಂದು ಮಾರ್ಗವಿರುವದು. ಅದು ದೇವರು ತನ್ನ ಜನರನ್ನು ಈಜಿಪ್ಟಿನಿಂದ ಬಿಡಿಸಿದ ಕಾಲದಂತಿರುವುದು.