23
ಲೆಬನೋನಿಗೆ ದೇವರ ಸಂದೇಶ
ತೂರಿನ ವಿಷಯವಾಗಿ ದುಃಖಕರವಾದ ಸಂದೇಶ:
 
“ತಾರ್ಷೀಷಿನ ಹಡಗುಗಳೇ, ದುಃಖಿಸಿರಿ!
ನಿಮ್ಮ ರೇವು ಕೆಡವಲ್ಪಟ್ಟಿದೆ.”
ಕಿತ್ತಿಮಿನಿಂದ ಹೊರಟ ಹಡಗುಗಳಿಗೆ ಈ ವಾರ್ತೆಯು ತಲುಪಿತು.
 
ಸಮುದ್ರ ತೀರದಲ್ಲಿ ವಾಸಿಸುವ ಜನರೇ, ನೀವು ಸ್ತಬ್ಧರಾಗಿದ್ದು ದುಃಖಿಸಿರಿ.
ತೂರು “ಚೀದೋನಿನ ವ್ಯಾಪಾರಿ” ಆಗಿತ್ತು. ಆ ನಗರವು ವರ್ತಕರನ್ನು ಸಮುದ್ರದಾಚೆ ಕಳುಹಿಸಿತು.
ಆ ಜನರು ನಿನ್ನನ್ನು ಐಶ್ವರ್ಯಗಳಿಂದ ತುಂಬಿಸಿದರು.
ಅವರು ಸಮುದ್ರ ಪ್ರಯಾಣ ಮಾಡುತ್ತಾ ಧಾನ್ಯಕ್ಕಾಗಿ ಹುಡುಕುತ್ತಿದ್ದಾರೆ.
ತೂರಿನ ಜನರು ನೈಲ್ ನದಿಯ ಬದಿಗಳಲ್ಲಿ ಬೆಳೆಸುವ ಧಾನ್ಯವನ್ನು ಕೊಂಡುಕೊಂಡು
ಇತರ ದೇಶಗಳಿಗೆ ಮಾರುವರು.
 
ಚೀದೋನೇ, ನೀನು ತುಂಬಾ ದುಃಖದಿಂದಿರಬೇಕು.
ಯಾಕೆಂದರೆ ಸಮುದ್ರವೂ ಸಮುದ್ರದ ಕೋಟೆಯೂ ಹೇಳುವುದೇನೆಂದರೆ,
“ನನಗೆ ಮಕ್ಕಳಿಲ್ಲ, ನಾನು ಪ್ರಸವವೇದನೆ ಅನುಭವಿಸಲಿಲ್ಲ.
ನಾನು ಮಕ್ಕಳನ್ನು ಹೆರಲಿಲ್ಲ.
ನಾನು ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಬೆಳೆಸಲಿಲ್ಲ.”
 
ತೂರಿನ ವಿಷಯವಾದ ವಾರ್ತೆಯನ್ನು ಈಜಿಪ್ಟ್ ಕೇಳಿಸಿಕೊಳ್ಳುವದು.
ಆ ವರ್ತಮಾನವು ಈಜಿಪ್ಟನ್ನು ದುಃಖದಲ್ಲಿ ಮುಳುಗಿಸುವದು.
ಹಡಗುಗಳೇ, ನೀವು ತಾರ್ಷೀಷಿಗೆ ಹಿಂದಿರುಗಿರಿ!
ಸಮುದ್ರ ತೀರದಲ್ಲಿ ವಾಸಿಸುವವರಾದ ನೀವು ದುಃಖಿಸಬೇಕು!
ಹಿಂದಿನ ಕಾಲದಲ್ಲಿ ನೀವು ತೂರ್ ನಗರದಲ್ಲಿ ಉಲ್ಲಾಸಿಸಿದಿರಿ.
ಪ್ರಾರಂಭದಿಂದಲೇ ಆ ನಗರವು ಅಭಿವೃದ್ಧಿಹೊಂದುತ್ತಿತ್ತು. ಆ ನಗರದ ಜನರು ಬಹುದೂರ ಪ್ರಯಾಣಮಾಡಿ ನೆಲೆಸಿರುವರು.
ತೂರ್ ಪಟ್ಟಣವು ಅನೇಕ ಗಣ್ಯವ್ಯಕ್ತಿಗಳನ್ನು ಕೊಟ್ಟಿರುತ್ತದೆ.
ಅಲ್ಲಿಯ ವರ್ತಕರಿಗೆ ಪ್ರಪಂಚದ ಎಲ್ಲಾ ಕಡೆಯೂ ಗೌರವವಿದೆ.
ಆದ್ದರಿಂದ ಇಂಥ ತೂರ್ ವಿರುದ್ಧ ಯೋಜನೆ ಮಾಡಿದವರಾರು?
ಸರ್ವಶಕ್ತನಾದ ಯೆಹೋವನೇ.
ಅದು ಪ್ರಾಮುಖ್ಯವಾಗದಂತೆ ಆತನೇ ತೀರ್ಮಾನಿಸಿದ್ದಾನೆ.
ಆತನು ಗೌರವಿಸಲ್ಪಡುವ ಜನರನ್ನು ಅವಮಾನಪಡಿಸಬೇಕೆಂತಲೂ ಮಾಡಿದ್ದಾನೆ.
10 ತಾರ್ಷೀಷಿನ ಹಡಗಿನವರೇ, ನೀವು ಊರಿಗೆ ಹಿಂತಿರುಗಿರಿ.
ಸಮುದ್ರವನ್ನು ಸಣ್ಣ ನದಿಯೋ ಎಂಬಂತೆ ದಾಟಿರಿ.
ಯಾರೂ ನಿಮ್ಮನ್ನು ನಿಲ್ಲಿಸಲಾರರು.
11 ಯೆಹೋವನು ಸಮುದ್ರದ ಮೇಲೆ ತನ್ನ ಕೈಯನ್ನು ಚಾಚಿದ್ದಾನೆ.
ಆತನು ತೂರಿಗೆ ವಿರುದ್ಧವಾಗಿ ಯುದ್ಧಮಾಡಲು ರಾಜ್ಯಗಳನ್ನು ಒಟ್ಟುಗೂಡಿಸುತ್ತಾನೆ.
ಯೆಹೋವನು ಕಾನಾನಿಗೆ ತೂರಿನ ಆಶ್ರಯಸ್ಥಳಗಳನ್ನು ನಾಶಮಾಡಲು ಆಜ್ಞಾಪಿಸುತ್ತಾನೆ.
12 ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ;
ಎಂದಿಗೂ ನೀನು ಹರ್ಷಿಸುವದಿಲ್ಲ.
ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ.
ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.”
13 ಆಗ ತೂರಿನ ಜನರು ಹೀಗೆನ್ನುವರು: “ಬಾಬಿಲೋನಿನವರು ನಮಗೆ ಸಹಾಯಮಾಡುವರು.” ಆದರೆ ಕಸ್ದೀಯರ ದೇಶವನ್ನು ನೋಡಿ.
ಬಾಬಿಲೋನ್ ಈಗ ದೇಶವಲ್ಲ.
ಬಾಬಿಲೋನನ್ನು ಅಶ್ಶೂರವು ವಶಪಡಿಸಿಕೊಂಡು ಅದರ ಸುತ್ತಲೂ ಕಾವಲು ಬುರುಜುಗಳನ್ನು ಕಟ್ಟಿಸಿದೆ.
ಅಲ್ಲಿದ್ದ ಸುಂದರ ಮನೆಗಳಿಂದ ಸೈನಿಕರು ಎಲ್ಲವನ್ನು ದೋಚಿರುತ್ತಾರೆ.
ಅಶ್ಶೂರ ಬಾಬಿಲೋನನ್ನು ಕಾಡುಪ್ರಾಣಿಗಳ ವಾಸಸ್ಥಳವನ್ನಾಗಿ ಮಾಡಿದೆ.
ಅವರು ಬಾಬಿಲೋನನ್ನು ಪಾಳುಬಿದ್ದ ಅವಶೇಷವನ್ನಾಗಿ ಮಾಡಿದ್ದಾರೆ.
14 ಆದ್ದರಿಂದ ತಾರ್ಷೀಷಿನ ಹಡಗುಗಳವರೇ, ದುಃಖಿಸಿರಿ!
ನಿಮ್ಮ ಆಶ್ರಯದ ರೇವು ನಾಶವಾಗಿದೆ.
 
15 ಎಪ್ಪತ್ತು ವರ್ಷಗಳ ತನಕ ಜನರಿಗೆ ತೂರಿನ ಜ್ಞಾಪಕವಿರುವದಿಲ್ಲ. ಇದು ಒಬ್ಬ ಅರಸನು ಆಳುವ ಕಾಲ. ಎಪ್ಪತ್ತು ವರ್ಷಗಳ ತರುವಾಯ ತೂರ್ ಈ ಹಾಡಿನಲ್ಲಿರುವ ವೇಶ್ಯೆಯಂತಿರುವದು:
 
16 “ಪುರುಷರು ಮರೆತಿರುವ ವೇಶ್ಯೆಯೇ,
ನಿನ್ನ ಕಿನ್ನರಿಯನ್ನು ತೆಗೆದುಕೊಂಡು ಊರೊಳಗೆ ಹೋಗಿ ನಿನ್ನ ಹಾಡನ್ನು ನುಡಿಸು,
ಮತ್ತೆಮತ್ತೆ ಹಾಡು.
ಆಗ ಯಾರಾದರೂ ನಿನ್ನನ್ನು ನೆನಪುಮಾಡಿಕೊಳ್ಳಬಹುದೇನೋ.”
 
17 ಎಪ್ಪತ್ತು ವರ್ಷಗಳ ನಂತರ ಯೆಹೋವನು ತೂರಿನ ಕುರಿತು ಮತ್ತೆ ಆಲೋಚಿಸಿ ತೀರ್ಮಾನಿಸುವನು. ತೂರಿನಲ್ಲಿ ವ್ಯಾಪಾರವು ಮತ್ತೆ ಪ್ರಾರಂಭವಾಗುವದು. ಅದು ಲೋಕದ ಎಲ್ಲಾ ರಾಜ್ಯಗಳಿಗೆ ವೇಶ್ಯೆಯಂತಿದೆ. 18 ಆದರೆ ಆಕೆ ತಾನು ಗಳಿಸಿದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವದಿಲ್ಲ. ತೂರ್ ತನ್ನ ವ್ಯಾಪಾರದಲ್ಲಿ ಗಳಿಸಿದ ಲಾಭವನ್ನು ಯೆಹೋವನಿಗಾಗಿ ಶೇಖರಿಸಿಟ್ಟಿದ್ದಾಳೆ. ಯೆಹೋವನನ್ನು ಸೇವಿಸುವವರಿಗೆ ಆ ಲಾಭವನ್ನು ಮೀಸಲಾಗಿಟ್ಟಿದ್ದಾಳೆ. ಹೀಗೆ ಯೆಹೋವನ ಸೇವಕರು ಹೊಟ್ಟೆತುಂಬ ಊಟಮಾಡುವರು, ಒಳ್ಳೆಯ ಬಟ್ಟೆ ಧರಿಸಿಕೊಳ್ಳುವರು.