3
ನಾನು ಹೇಳುವದನ್ನೆಲ್ಲಾ ಮನದಟ್ಟುಮಾಡಿಕೊಳ್ಳಿರಿ: ನಮ್ಮ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಯೆಹೂದ ಮತ್ತು ಇಸ್ರೇಲಿನ ಆಧಾರಗಳನ್ನೆಲ್ಲಾ ತೆಗೆದುಬಿಡುವನು. ಆತನು ಅವರ ಎಲ್ಲಾ ಆಹಾರವನ್ನೂ ನೀರನ್ನೂ ತೆಗೆದುಬಿಡುವನು. ಆತನು ಎಲ್ಲಾ ವೀರರನ್ನೂ ಮಹಾಸೈನಿಕರನ್ನೂ ತೆಗೆದುಬಿಡುವನು. ದೇವರು ಎಲ್ಲಾ ನ್ಯಾಯಾಧೀಶರನ್ನೂ ಪ್ರವಾದಿಗಳನ್ನೂ ಹಿರಿಯರನ್ನೂ ಇಂದ್ರಜಾಲಗಾರರನ್ನು ತೆಗೆದುಬಿಡುವನು. ದೇವರು ಸೇನಾಪತಿಗಳನ್ನೂ ಸರ್ಕಾರದ ಅಧಿಪತಿಗಳನ್ನೂ ತೆಗೆದುಬಿಡುವನು. ಆತನು ಉತ್ತಮ ಸಲಹೆಗಾರರನ್ನೂ ಮಾಂತ್ರಿಕರನ್ನೂ ಭವಿಷ್ಯ ಹೇಳುವವರನ್ನೂ ತೊಲಗಿಸುವನು.
ಯೆಹೋವನು ಹೇಳುವುದೇನೆಂದರೆ: “ನಾನು ಬಾಲಕರನ್ನು ನಿಮ್ಮ ನಾಯಕರನ್ನಾಗಿ ಮಾಡುವೆನು. ಪ್ರಜೆಗಳು ಒಬ್ಬರಿಗೊಬ್ಬರು ವಿರೋಧಿಗಳಾಗುವರು; ಬಾಲಕರು ಹಿರಿಯರನ್ನು ಗೌರವಿಸರು. ಸಾಮಾನ್ಯರು ಗಣ್ಯವ್ಯಕ್ತಿಗಳನ್ನು ಸನ್ಮಾನಿಸರು.”
ಆ ಸಮಯದಲ್ಲಿ ಒಬ್ಬನು ತನ್ನ ಸ್ವಂತ ಕುಟುಂಬದ ಸಹೋದರನನ್ನು ಹಿಡಿದು, “ನಿನಗೆ ನಿಲುವಂಗಿಯದೆ. ಆದ್ದರಿಂದ ನೀನು ನಮಗೆ ನಾಯಕನಾಗು. ಈ ಅವಶೇಷಗಳೆಲ್ಲಾ ನಿನಗೆ ಅಧೀನವಾಗಿರಲಿ” ಎಂದು ಹೇಳುವರು.
ಆದರೆ ಆ ಸಹೋದರನು ಎದ್ದುನಿಂತು, “ನನ್ನಿಂದ ಆಗುವುದಿಲ್ಲ, ನನ್ನ ಮನೆಯಲ್ಲಿ ಸಾಕಷ್ಟು ಧಾನ್ಯವಾಗಲಿ ಬಟ್ಟೆಯಾಗಲಿ ಇಲ್ಲ. ನನ್ನನ್ನು ನಾಯಕನನ್ನಾಗಿ ಮಾಡಬೇಡಿ” ಎಂದು ಹೇಳುವನು.
ಜೆರುಸಲೇಮ್ ಮುಗ್ಗರಿಸಿಬಿದ್ದು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಹೀಗಾಗುವದು. ಯೆಹೂದವು ಪಾಪದಲ್ಲಿ ಬಿದ್ದು ದೇವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿಯದೆ. ಅವರಾಡುವ ಮಾತುಗಳು, ಮಾಡುವ ಕ್ರಿಯೆಗಳು ಯೆಹೋವನಿಗೆ ವಿರುದ್ಧವಾಗಿವೆ. ಯೆಹೋವನ ಮಹಿಮಾಶಕ್ತಿಯಿಂದ ಕೂಡಿದ ಕಣ್ಣುಗಳು ಇವೆಲ್ಲವನ್ನು ನೋಡುವವು.
ಜನರ ಮುಖಭಾವವೇ ಅವರ ದುಷ್ಕೃತ್ಯಗಳನ್ನು ಎತ್ತಿತೋರಿಸುವವು. ಅವರು ತಮ್ಮ ಪಾಪಗಳಿಗಾಗಿ ಹೆಚ್ಚಳಪಡುವರು. ಅವರು ಸೊದೋಮಿನ ಜನರಂತಿದ್ದಾರೆ. ತಮ್ಮ ಪಾಪಗಳನ್ನು ಯಾರು ನೋಡಿದರೂ ಅವರಿಗೆ ಚಿಂತೆಯಿಲ್ಲ. ಇದು ನಿಜವಾಗಿಯೂ ಭಯಂಕರವಾದದ್ದು. ಅವರು ತಮಗೆ ಬಹಳ ಸಂಕಟಗಳನ್ನು ಬರಮಾಡಿಕೊಂಡಿದ್ದಾರೆ.
10 ಒಳ್ಳೆಯವರಿಗೆ ಒಳ್ಳೆಯವುಗಳೇ ಸಂಭವಿಸುತ್ತವೆ ಎಂಬುದಾಗಿ ತಿಳಿಸು. ಅವರು ಮಾಡುವ ಒಳ್ಳೆಯ ಕಾರ್ಯಗಳಿಗಾಗಿ ಅವರಿಗೆ ಬಹುಮಾನ ದೊರೆಯುವುದು. 11 ಆದರೆ ದುಷ್ಟರ ಗತಿಯನ್ನು ಏನು ಹೇಳಲಿ. ದುಷ್ಟರಿಗೆ ಕೆಡುಕು ಸಂಭವಿಸುವದು. ಅವರಿಗೆ ಬಹಳ ಸಂಕಟಗಳು ಬಂದೊದಗುವವು. ಅವರು ಮಾಡಿರುವ ಎಲ್ಲಾ ದುಷ್ಟಕ್ರಿಯೆಗಳಿಗೆ ಶಿಕ್ಷೆ ಕೊಡಲ್ಪಡುವದು. 12 ಮಕ್ಕಳು ನನ್ನ ಜನರನ್ನು ಸೋಲಿಸಿಬಿಡುವರು. ಸ್ತ್ರೀಯರು ನನ್ನ ಜನರನ್ನು ಆಳುವರು.
ನನ್ನ ಜನರೇ, ನಿಮ್ಮ ಮಾರ್ಗದರ್ಶಕರು ನಿಮ್ಮನ್ನು ತಪ್ಪುದಾರಿಯಲ್ಲಿ ನಡಿಸುವರು; ಸರಿಯಾದ ದಾರಿಯಿಂದ ನಿಮ್ಮನ್ನು ಅಡ್ಡದಾರಿಗೆ ನಡಿಸುವರು.
ದೇವರು ತನ್ನ ಜನರ ಬಗ್ಗೆ ಮಾಡಿದ ತೀರ್ಮಾನ
13 ಯೆಹೋವನು ತನ್ನ ಜನರಿಗೆ ನ್ಯಾಯತೀರಿಸಲು ಎದ್ದುನಿಂತಿದ್ದಾನೆ. 14 ನಾಯಕರಿಗೂ ಹಿರಿಯರಿಗೂ ಅವರು ಮಾಡಿದ ಕಾರ್ಯಗಳ ವಿರುದ್ಧವಾಗಿ ಆತನು ನ್ಯಾಯತೀರಿಸುವನು.
ಯೆಹೋವನು ಹೇಳುವುದೇನೆಂದರೆ, “ನೀವು ದಾಕ್ಷಾತೋಟವನ್ನು (ಯೆಹೂದವನ್ನು) ಸುಟ್ಟುಹಾಕಿದ್ದೀರಿ; ಬಡಜನರಿಂದ ನೀವು ಕಿತ್ತುಕೊಂಡ ವಸ್ತುಗಳನ್ನು ಈಗಲೂ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದೀರಿ. 15 ನನ್ನ ಜನರನ್ನು ಕುಗ್ಗಿಸಲು ನಿಮಗೆ ಯಾವ ಅಧಿಕಾರವಿದೆ? ಬಡಜನರ ಮುಖವನ್ನು ಧೂಳಿನಲ್ಲಿ ಹಾಕಿ ಉಜ್ಜಲು ನಿಮಗೆ ಯಾವ ಅಧಿಕಾರವಿದೆ?” ಇದು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನ ನುಡಿಗಳು.
16 ಯೆಹೋವನು ಹೇಳುವುದೇನೆಂದರೆ; “ಚೀಯೋನಿನ ಸ್ತ್ರೀಯರು ವಯ್ಯಾರದಿಂದ ತಲೆಯಾಡಿಸುತ್ತಾ, ಕುಡಿನೋಟ ಬೀರುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆಯನ್ನು ಝಣಝಣಿಸುತ್ತಾ ನಡೆಯುತ್ತಾರೆ.”
17 ನನ್ನ ಒಡೆಯನಾದ ಯೆಹೋವನು ಚೀಯೋನಿನ ಸ್ತ್ರೀಯರ ತಲೆಯ ಮೇಲೆ ಹುಣ್ಣುಗಳನ್ನು ಬರಮಾಡಿ ಅವರ ತಲೆಕೂದಲು ಉದುರಿ ತಲೆಬೋಳಾಗುವಂತೆ ಮಾಡುವನು. 18 ಆ ಸಮಯದಲ್ಲಿ ಆತನು ಅವರ ಎಲ್ಲಾ ವಸ್ತುಗಳನ್ನು ಅವರಿಂದ ತೆಗೆದುಬಿಡುವನು. ಅವರ ಕಾಲುಸರಗಳನ್ನು, ಸೂರ್ಯಚಂದ್ರಾಕಾರದ ಕೊರಳಿನ ಸರಗಳನ್ನು, 19 ಕಿವಿಯೋಲೆಗಳನ್ನು, ಕೈಬಳೆಗಳನ್ನು, ಸೆರಗುವಸ್ತ್ರಗಳನ್ನು, 20 ರುಮಾಲುಗಳನ್ನು, ಸೊಂಟಪಟ್ಟಿಯನ್ನು, ಪರಿಮಳದ್ರವ್ಯವನ್ನು, ತಾಯಿತಿಗಳನ್ನು, 21 ಮುದ್ರೆಯುಂಗುರವನ್ನು ಮತ್ತು ಮೂಗುತಿಗಳನ್ನು ತೆಗೆದುಬಿಡುವನು. 22 ಅವರ ನಯವಾದ ಮೇಲಂಗಿಗಳನ್ನು, ಮೇಲ್ಹೊದಿಕೆಗಳನ್ನು, ಶಾಲುಗಳನ್ನು, ಕೈಚೀಲಗಳನ್ನು, 23 ಕೈಗನ್ನಡಿಗಳನ್ನು, ಪೋಷಾಕುಗಳನ್ನು, ಮುಂಡಾಸಗಳನ್ನು ಮತ್ತು ಉದ್ದವಾದ ಶಾಲುಗಳನ್ನು ಅವರಿಂದ ತೆಗೆದುಬಿಡುವನು.
24 ಆ ಸಮಯದಲ್ಲಿ ಸ್ತ್ರೀಯರ ಪರಿಮಳದ್ರವ್ಯವು ಕೊಳೆತ ವಾಸನೆಯಿಂದ ಕೂಡಿರುವುದು. ಅವರು ಸೊಂಟಪಟ್ಟಿಯ ಬದಲಿಗೆ ಹಗ್ಗ ಕಟ್ಟಿಕೊಳ್ಳುವರು; ತಲೆಕೂದಲನ್ನು ಅಂದವಾಗಿ ಹೆಣೆದುಕೊಳ್ಳುವ ಬದಲು ಬೋಳಿಸಿಕೊಳ್ಳುವರು. ಈಗ ಅವರಿಗೆ ಆಧುನಿಕ ವಸ್ತ್ರಗಳಿರುವವು; ಆದರೆ ಆಗ ಅವರು ಶೋಕವಸ್ತ್ರಗಳನ್ನೇ ಧರಿಸುವರು. ಈಗ ಅವರು ಮುಖಗಳಿಗೆ ಸೌಂದರ್ಯದ ಬೊಟ್ಟುಗಳನ್ನು ಇಟ್ಟುಕೊಳ್ಳುವರು; ಆದರೆ ಆಗ ಅವರ ಚರ್ಮದಲ್ಲಿ ಸುಟ್ಟಕಲೆಗಳೇ ಇರುವವು.
25 ಆ ಸಮಯದಲ್ಲಿ ನಿಮ್ಮ ಗಂಡಸರೆಲ್ಲಾ ಖಡ್ಗದಿಂದ ಹತರಾಗುವರು. ನಿಮ್ಮ ವೀರರೆಲ್ಲರೂ ಯುದ್ಧದಲ್ಲಿ ಮಡಿಯುವರು. 26 ನಗರದ ಹೆಬ್ಬಾಗಿಲ ಬಳಿಯಲ್ಲಿ ಜನರು ಸೇರಿ ಬರುವಾಗ ರೋಧನವೂ ಶೋಕವೂ ಇರುತ್ತವೆ. ಇದ್ದುದನ್ನೆಲ್ಲಾ ಕಳೆದುಕೊಂಡ ಸ್ತ್ರೀಯಂತೆ ಜೆರುಸಲೇಮು ಸರ್ವವನ್ನೂ ಕಳೆದುಕೊಂಡು ನೆಲದ ಮೇಲೆ ಕುಳಿತು ರೋಧಿಸುವಳು.