61
ಯೆಹೋವನ ಸ್ವಾತಂತ್ರ್ಯ ಸಂದೇಶ
ಯೆಹೋವನ ಸೇವಕನು ಹೇಳುವುದೇನೆಂದರೆ, “ಒಡೆಯನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ. ಬಡವರಿಗೆ ಸುವಾರ್ತೆಯನ್ನು ತಿಳಿಸಲೂ ದುಃಖಿಸುವವರನ್ನು ಸಂತೈಸಲೂ ಆತನು ನನ್ನನ್ನು ಆರಿಸಿರುತ್ತಾನೆ. ಸೆರೆಹಿಡಿಯಲ್ಪಟ್ಟಿರುವವರನ್ನು ಸ್ವತಂತ್ರರಾದರೆಂದು ಹೇಳಲೂ ಕೈದಿಗಳನ್ನು ಬಿಡುಗಡೆ ಮಾಡಲ್ಪಟ್ಟವರೆಂದು ಹೇಳಲೂ ದೇವರು ನನ್ನನ್ನು ಕಳುಹಿಸಿದನು. ಯೆಹೋವನು ತಾನು ಕರುಣೆ ತೋರುವ ಸಮಯದ ಕುರಿತಾಗಿ ಸಾರುವಂತೆ ನನ್ನನ್ನು ಕಳುಹಿಸಿದನು. ದುಷ್ಟರನ್ನು ಶಿಕ್ಷಿಸುವ ಸಮಯವನ್ನು ಸಾರಲು ದೇವರು ನನ್ನನ್ನು ಕಳುಹಿಸಿದನು. ದುಃಖಪಡುವ ಜನರನ್ನು ಸಂತೈಸಲು ದೇವರು ನನ್ನನ್ನು ಕಳುಹಿಸಿದನು. ಚೀಯೋನಿನಲ್ಲಿ ದುಃಖಿಸುವ ಜನರ ಬಳಿಗೆ ನನ್ನನ್ನು ಕಳುಹಿಸಿದನು. ನಾನು ಅವರನ್ನು ಉತ್ಸವಕ್ಕಾಗಿ ಸಿದ್ಧಪಡಿಸುವೆನು. ಅವರ ತಲೆಯ ಮೇಲಿರುವ ಬೂದಿಯನ್ನು ತೆಗೆದುಹಾಕಿ ಅದರ ಬದಲಾಗಿ ಕಿರೀಟವನ್ನು ತೊಡಿಸುವೆನು. ಅವರ ದುಃಖವನ್ನು ತೆಗೆದುಹಾಕಿ ಅವರಿಗೆ ತೈಲವೆಂಬ ಸಂತೋಷವನ್ನು ಅನುಗ್ರಹಿಸುವೆನು. ಅವರ ದುಃಖವನ್ನೆಲ್ಲಾ ನಿವಾರಿಸಿ ಉತ್ಸವಕ್ಕಾಗಿ ಅವರಿಗೆ ಬಟ್ಟೆಯನ್ನು ತೊಡಿಸುವೆನು. ಅವರನ್ನು ಒಳ್ಳೆಯ ಮರಗಳೆಂತಲೂ ದೇವರ ಆಶ್ಚರ್ಯಕರವಾದ ಸಸಿಯೆಂತಲೂ ಕರೆಯುವದಕ್ಕಾಗಿ ದೇವರೇ ನನ್ನನ್ನು ಕಳುಹಿಸಿದನು.”
ಆ ಸಮಯದಲ್ಲಿ ಹಾಳುಬಿದ್ದ ಹಳೇ ಪಟ್ಟಣಗಳು ಮತ್ತೆ ಕಟ್ಟಲ್ಪಡುವವು. ಅವುಗಳು ಮುಂಚೆ ಹೇಗಿದ್ದವೋ ಹಾಗೆಯೇ ಹೊಸದಾಗಿ ಕಾಣಿಸುವವು. ಹಲವು ವರ್ಷಗಳ ಕಾಲ ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳು ಹೊಸದಾಗಿ ಕಾಣಿಸುವವು.
ಆಗ ನಿಮ್ಮ ವೈರಿಗಳು ನಿಮ್ಮ ಬಳಿಗೆ ಬಂದು ನಿಮ್ಮ ಕುರಿಮಂದೆಯನ್ನು ಮೇಯಿಸುವರು. ನಿಮ್ಮ ವೈರಿಗಳ ಮಕ್ಕಳು ನಿಮ್ಮ ಹೊಲಗದ್ದೆಗಳಲ್ಲಿಯೂ ತೋಟಗಳಲ್ಲಿಯೂ ಕೆಲಸ ಮಾಡುವರು. ಆಗ ನಿಮ್ಮನ್ನು “ಯೆಹೋವನ ಯಾಜಕರು” ಎಂತಲೂ “ದೇವರ ಸಹಾಯಕರು” ಎಂತಲೂ ಕರೆಯುವರು. ಭೂಲೋಕದ ಎಲ್ಲಾ ದೇಶಗಳ ಐಶ್ವರ್ಯವು ನಿಮ್ಮ ಕೈಸೇರುವುದರಿಂದ ನೀವು ಹೆಚ್ಚಳಪಡುವಿರಿ.
ಗತಿಸಿದ ದಿವಸಗಳಲ್ಲಿ ಜನರು ನಿಮ್ಮನ್ನು ನಾಚಿಕೆಗೆ ಗುರಿಪಡಿಸಿದರು; ಕೆಟ್ಟಮಾತುಗಳನ್ನಾಡಿದರು; ಬೇರೆ ಜನರಿಗಿಂತ ನೀವು ಹೆಚ್ಚಾಗಿ ನಾಚಿಕೆಗೆ ಒಳಗಾದಿರಿ. ಅದಕ್ಕಾಗಿ ನಿಮ್ಮ ಭೂಮಿಯಲ್ಲಿ ಬೇರೆ ಸ್ಥಳಗಳಿಗಿಂತ ಎರಡರಷ್ಟು ಹೆಚ್ಚು ಕೊಯಿಲು ಮಾಡುವಿರಿ. ನೀವು ಶಾಶ್ವತವಾದ ಸಂತೋಷವನ್ನು ಪಡೆದುಕೊಳ್ಳುವಿರಿ. ಯಾಕೆಂದರೆ ನಾನೇ ಯೆಹೋವನು. ನಾನು ನ್ಯಾಯದಲ್ಲಿ ಸಂತೋಷಿಸುವೆನು. ನಾನು ಕದಿಯುವದನ್ನೂ ಎಲ್ಲಾ ದುಷ್ಟತ್ವಗಳನ್ನೂ ದ್ವೇಷಿಸುತ್ತೇನೆ. ಅದಕ್ಕಾಗಿ ನಾನು ಅಂಥಾ ಜನರಿಗೆ ದೊರಕಬೇಕಾದ ಶಿಕ್ಷೆಯನ್ನು ಕೊಡುವೆನು. ನನ್ನ ಜನರೊಂದಿಗೆ ನಿತ್ಯಕಾಲದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಎಲ್ಲಾ ಜನಾಂಗಗಳವರು ನನ್ನ ಜನರನ್ನೂ ನನ್ನ ದೇಶದ ಮಕ್ಕಳನ್ನೂ ತಿಳಿದುಕೊಳ್ಳುವರು. ಅವರನ್ನು ಜನರು ನೋಡಿದಾಗ ಯೆಹೋವನು ಅವರನ್ನು ಆಶೀರ್ವದಿಸುತ್ತಿದ್ದಾನೆ ಎಂದು ತಿಳಿಯುವರು.
ದೇವರ ಸೇವಕನು ರಕ್ಷಣೆಯನ್ನು ತರುತ್ತಾನೆ
10 ಯೆಹೋವನು ನನ್ನನ್ನು ಸಂತೋಷಭರಿತನನ್ನಾಗಿ ಮಾಡುತ್ತಾನೆ.
ನನ್ನ ಸಂಪೂರ್ಣ ವ್ಯಕ್ತಿತ್ವವು ನನ್ನ ದೇವರಲ್ಲಿ ಸಂತೋಷಿಸುತ್ತದೆ.
ಯೆಹೋವನು ರಕ್ಷಣೆಯೆಂಬ ವಸ್ತ್ರವನ್ನು ನನಗೆ ತೊಡಿಸಿದ್ದಾನೆ.
ಮದುವೆಯಲ್ಲಿ ಮದುಮಗನು ಧರಿಸಿಕೊಳ್ಳುವ ಬಟ್ಟೆಯಂತೆ ಅದು ನಯವಾಗಿದೆ.
ಯೆಹೋವನು ನನಗೆ ನೀತಿಯೆಂಬ ನಿಲುವಂಗಿಯನ್ನು ತೊಡಿಸಿರುತ್ತಾನೆ.
ಅದು ಮದುಮಗಳು ಮದುವೆಯಲ್ಲಿ ಧರಿಸಿಕೊಳ್ಳುವ ಬಟ್ಟೆಯಂತಿದೆ.
11 ಭೂಮಿಯು ಸಸಿಗಳನ್ನು ಬೆಳೆಸುತ್ತದೆ.
ಜನರು ತೋಟದಲ್ಲಿ ಬೀಜ ಬಿತ್ತುವರು. ತೋಟವು ಬೀಜವನ್ನು ಬೆಳೆಸುತ್ತದೆ.
ಅದೇ ರೀತಿಯಲ್ಲಿ ಯೆಹೋವನು ಎಲ್ಲಾ ಜನಾಂಗಗಳಲ್ಲಿ ನೀತಿಯನ್ನೂ ಸ್ತೋತ್ರವನ್ನೂ ಬೆಳೆಸುತ್ತಾನೆ.