3
ಯೋಬನು ತನ್ನ ಜನ್ಮದಿನವನ್ನು ಶಪಿಸುವನು
ಬಳಿಕ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ ಹೀಗೆಂದನು:
 
“ನಾನು ಹುಟ್ಟಿದ ದಿನವು ಹಾಳಾಗಲಿ,
‘ಗಂಡು ಮಗುವು ಗರ್ಭಧರಿಸಿತು’ ಎಂದು ಹೇಳಿದ ಆ ರಾತ್ರಿಯು ನಾಶವಾಗಲಿ.
ಆ ದಿನವು ಕತ್ತಲೆಯಾಗಲಿ.
ಆ ದಿನದ ಬಗ್ಗೆ ಮೇಲಿನ ಲೋಕದ ದೇವರು ಯೋಚಿಸದಿರಲಿ.
ಆ ದಿನದ ಮೇಲೆ ಬೆಳಕು ಬೆಳಗದಿರಲಿ.
ಆ ದಿನವನ್ನು ಕತ್ತಲೆಯೂ ಮರಣದ ನೆರಳೂ ವಶಪಡಿಸಿಕೊಳ್ಳಲಿ.
ಆ ದಿನವನ್ನು ಮೋಡವು ಕವಿದುಕೊಳ್ಳಲಿ.
ನಾನು ಹುಟ್ಟಿದ ದಿನದ ಹಗಲನ್ನು ಗ್ರಹಣಗಳು ಭಯಪಡಿಸಲಿ.
ಕಾರ್ಗತ್ತಲೆಯು ಆ ರಾತ್ರಿಯನ್ನು ಆವರಿಸಿಕೊಳ್ಳಲಿ.
ಆ ರಾತ್ರಿಯು ವರ್ಷದ ದಿನಗಳಲ್ಲಿ ಒಂದು ದಿನವೆಂದು ಲೆಕ್ಕಿಸಲ್ಪಡದಿರಲಿ;
ಅದು ಯಾವ ತಿಂಗಳುಗಳಲ್ಲೂ ಸೇರಿಸಲ್ಪಡದಿರಲಿ.
ಆ ರಾತ್ರಿಯು ಬಂಜೆಯಾಗಲಿ;
ಅದರಲ್ಲಿ ಯಾವ ಉತ್ಸಾಹಧ್ವನಿಯೂ ಕೇಳದಿರಲಿ.
ಲೆವ್ಯಾತಾನನನ್ನು ಎಬ್ಬಿಸಬಲ್ಲ ಹಾಗೂ ದಿನಗಳನ್ನು ಶಪಿಸುವ ಮಾಂತ್ರಿಕರು
ನಾನು ಹುಟ್ಟಿದ ರಾತ್ರಿಯನ್ನು ಶಪಿಸಲಿ.
ಆ ದಿನದ ಮುಂಜಾನೆಯ ನಕ್ಷತ್ರಗಳು ಕತ್ತಲಾಗಲಿ.
ಅದು ಮುಂಜಾನೆಯ ಬೆಳಕಿಗಾಗಿ ಎದುರುನೋಡಿದರೂ ಹೊಂದದಿರಲಿ.
ಅದು ಸೂರ್ಯೋದಯದ ಕಿರಣಗಳನ್ನು ನೋಡದಿರಲಿ.
10 ಯಾಕೆಂದರೆ ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ
ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲ.
11 ನಾನು ಹುಟ್ಟಿದಾಗಲೇ ಯಾಕೆ ಸಾಯಲಿಲ್ಲ?
ತಾಯಿಯ ಗರ್ಭದಿಂದ ಬರುತ್ತಿರುವಾಗಲೇ ನಾನೇಕೆ ಸಾಯಲಿಲ್ಲ?
12 ತಾಯಿಯು ತನ್ನ ಮಡಿಲಲ್ಲಿ ನನ್ನನ್ನು ಹೊತ್ತುಕೊಂಡದ್ದೇಕೆ?
ಆಕೆಯ ಸ್ತನಗಳು ನನಗೆ ಹಾಲು ಕುಡಿಯಕೊಟ್ಟದ್ದೇಕೆ?
13 ನಾನು ಹುಟ್ಟಿದಾಗಲೇ ಸತ್ತುಹೋಗಿದ್ದರೆ,
ಸಮಾಧಾನದಿಂದ ನಿದ್ರೆಮಾಡುತ್ತಿದ್ದೆನು.
14 ಭೂರಾಜರೊಂದಿಗೂ ಮಂತ್ರಿಗಳೊಂದಿಗೂ ವಿಶ್ರಮಿಸಿಕೊಳ್ಳುತ್ತಿದ್ದೆನು.
ಅವರು ತಮಗಾಗಿ ಕಟ್ಟಿಸಿಕೊಂಡ ಪಟ್ಟಣಗಳು ಈಗ ಹಾಳುಬಿದ್ದಿವೆ.
15 ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿಕೊಂಡ
ಅಧಿಪತಿಗಳೊಡನೆ ನಾನು ವಿಶ್ರಮಿಸಿಕೊಳ್ಳುತ್ತಿದ್ದೆನು.
16 ನಾನು ಮಗುವಾಗಿ ಹುಟ್ಟುವಾಗಲೇ ಸತ್ತು ನೆಲದಲ್ಲಿ ಸಮಾಧಿಯಾಗಲಿಲ್ಲವೇಕೆ?
ಹಗಲಿನ ಬೆಳಕನ್ನು ಎಂದೂ ಕಂಡಿಲ್ಲದ ಮಗುವಿನಂತೆ ನಾನಿರಬೇಕಿತ್ತು.
17 ದುಷ್ಟರು ಸಮಾಧಿಯಲ್ಲಿರುವಾಗ ಕೇಡುಮಾಡುವುದನ್ನು ನಿಲ್ಲಿಸುವರು.
ಆಯಾಸಗೊಂಡಿರುವ ಜನರು ಸಮಾಧಿಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವರು.
18 ಸೆರೆಯಾಳುಗಳು ಸಹ ಸಮಾಧಿಯಲ್ಲಿ ಸುಖವಾಗಿರುವರು;
ಅವರ ಒಡೆಯನ ಧ್ವನಿಯು ಅವರಿಗೆ ಕೇಳಿಸುವುದಿಲ್ಲ.
19 ಸಮಾಧಿಯಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ;
ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.
 
20 “ಬಹು ವ್ಯಥೆಯಿಂದ ಸಂಕಟಪಡುತ್ತಿರುವವನು ಯಾಕೆ ಜೀವಿಸಬೇಕು?
ಮನನೊಂದಿರುವವನಿಗೆ ಜೀವವನ್ನು ಕೊಡುವುದೇಕೆ?
21 ಅವನು ಸಾಯಲು ಬಯಸಿದರೂ ಸಾವು ಬರುವುದಿಲ್ಲ.
ಹೂಳಿಟ್ಟಿರುವ ಭಂಡಾರವನ್ನು ಹುಡುಕುವುದಕ್ಕಿಂತಲೂ ಹೆಚ್ಚಾಗಿ ವ್ಯಥೆಯುಳ್ಳವನು
ಸಾವನ್ನೇ ಹುಡುಕುವನು.
22 ಅವರು ಸಮಾಧಿಗೆ ಸೇರುವಾಗ ಬಹು ಸಂತೋಷಪಡುವರು;
ಆನಂದದಿಂದ ಕೂಗುವರು.
23 ದೇವರು ಯಾರ ಭವಿಷ್ಯವನ್ನು ರಹಸ್ಯವಾಗಿಡುತ್ತಾನೊ,
ಯಾರ ಸುತ್ತಲೂ ಗೋಡೆಯನ್ನು ಕಟ್ಟುತ್ತಾನೊ ಅವರಿಗೆ ಯಾಕೆ ಜೀವವನ್ನು
ಕೊಡುತ್ತಾನೆ?
24 ಊಟದ ಸಮಯದಲ್ಲಿ ನಿಟ್ಟುಸಿರೇ ನನ್ನ ಆಹಾರವಾಗಿದೆ.
ನನ್ನ ನರಾಳಾಟವು ಜಲಧಾರೆಯಂತಿದೆ.
25 ಆಪತ್ತು ಸಂಭವಿಸಬಹುದೆಂದು ನಾನು ಭಯಗೊಂಡಿದ್ದೆನು.
ನಾನು ಯಾವುದಕ್ಕೆ ಹೆದರಿಕೊಂಡಿದ್ದೆನೊ ಅದು ನನಗೆ ಸಂಭವಿಸಿದೆ!
26 ನನಗೆ ಸಮಾಧಾನವಿಲ್ಲ, ವಿಶ್ರಾಂತಿಯೂ ಇಲ್ಲ; ನನಗೆ ಉಪಶಮನವಿಲ್ಲ;
ನನಗಿರುವುದು ಕೇವಲ ಕಷ್ಟವೊಂದೇ!”