6
ಯೋಬನ ವಾದ
1-2 ಆಗ ಯೋಬನು ಹೀಗೆ ಉತ್ತರಿಸಿದನು:
 
“ನನ್ನ ಸಂಕಟವನ್ನು ತೂಕಮಾಡುವುದಕ್ಕೂ
ನನ್ನ ಕಷ್ಟವನ್ನೆಲ್ಲಾ ತಕ್ಕಡಿಯ ಮೇಲಿಡುವುದಕ್ಕೂ ಸಾಧ್ಯವಿದ್ದರೆ,
ನನ್ನ ದುಃಖವನ್ನು ನೀನು ಅರ್ಥಮಾಡಿಕೊಳ್ಳುವಿ!
ನನ್ನ ದುಃಖವು ಸಮುದ್ರದ ಮರಳಿಗಿಂತಲೂ ಭಾರವಾಗಿದೆ.
ಆದ್ದರಿಂದಲೇ ನನ್ನ ಮಾತುಗಳು ಮೂರ್ಖತನದಂತೆ ಕಾಣುತ್ತಿವೆ.
ಸರ್ವಶಕ್ತನಾದ ದೇವರ ಬಾಣಗಳು ನನಗೆ ನಾಟಿಕೊಂಡಿವೆ.
ನನ್ನ ಪ್ರಾಣವು ಅವುಗಳ ವಿಷವನ್ನು ಕುಡಿಯುತ್ತಿದೆ.
ದೇವರು ಕಳುಹಿಸಿದ ಅಪಾಯಗಳು ನನಗೆ ವಿರೋಧವಾಗಿ ವ್ಯೂಹಕಟ್ಟಿವೆ.
ಕಾಡುಕತ್ತೆಗೆ ತಿನ್ನಲು ಹುಲ್ಲಿದ್ದರೆ ಅರಚುವುದೇ?
ಎತ್ತಿಗೆ ಆಹಾರವಿದ್ದರೆ ಕೂಗುವುದೇ?
ಊಟವನ್ನು ಉಪ್ಪಿಲ್ಲದೆ ತಿನ್ನುವರೇ?
ಮೊಟ್ಟೆಯ ಲೋಳೆಗೆ ರುಚಿಯಿದೆಯೇ?
ಇಂಥಾ ಊಟವು ನನಗೆ ಅಸಹ್ಯ;
ನಾನು ಅದನ್ನು ಮುಟ್ಟಲಾರೆ.
 
“ಅಯ್ಯೋ! ನಾನು ಕೇಳಿಕೊಂಡದ್ದು ನನಗೆ ದೊರೆಯುವುದಿಲ್ಲವೇ?
ನಾನು ಬಯಸಿದ್ದನ್ನು ದೇವರು ನನಗೆ ಕೊಡುವುದಿಲ್ಲವೇ?
ನನ್ನನ್ನು ಜಜ್ಜಿಹಾಕಲು ದೇವರು ಇಚ್ಫಿಸುವುದಾಗಿದ್ದರೆ,
ಆತನು ನನ್ನನ್ನು ಕೊಲ್ಲಲಿ!
10 ಆಗ ನನಗೆ ಆದರಣೆಯಾಗುವುದು.
ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು;
ಪವಿತ್ರವಾಗಿರುವಾತನ ಆಜ್ಞೆಗಳಿಗೆ ನಾನು ಅವಿಧೇಯನಾಗಲೇ ಇಲ್ಲ.
 
11 “ನನ್ನ ಬಲವು ಕುಗ್ಗಿಹೋಗಿದೆ; ಬದುಕುವ ನಿರೀಕ್ಷೆಯೇ ನನಗಿಲ್ಲ.
ಕೊನೆಯಲ್ಲಿ ನನಗೇನಾಗುವುದೋ ತಿಳಿಯದು, ಆದ್ದರಿಂದ ನಾನು ತಾಳ್ಮೆಯಿಂದಿರುವುದೇಕೇ?
12 ನಾನು ಬಂಡೆಯಂತೆ ಬಲಿಷ್ಠನಲ್ಲ.
ನನ್ನ ದೇಹವು ತಾಮ್ರದಿಂದ ಮಾಡಿದ್ದಲ್ಲ.
13 ಈಗ ನನಗೇ ಸಹಾಯಮಾಡಿಕೊಳ್ಳಲು ನನ್ನಲ್ಲಿ ಶಕ್ತಿಯಿಲ್ಲ.
ಸಹಾಯಮಾಡವವರೂ ನನಗೆ ಯಾರೂ ಇಲ್ಲ.
 
14 “ಕಷ್ಟದಲ್ಲಿರುವವನಿಗೆ ಅವನ ಸ್ನೇಹಿತನು ದಯೆತೋರಬೇಕು;
ಒಂದುವೇಳೆ ಅವನು ಸರ್ವಶಕ್ತನಾದ ದೇವರಿಗೆ ವಿಮುಖನಾಗಿದ್ದರೂ
ಅವನ ಸ್ನೇಹಿತನು ನಂಬಿಗಸ್ತನಾಗಿರಬೇಕು.
15 ಆದರೆ ನನ್ನ ಸಹೋದರರಾದ ನೀವು ನಂಬಿಗಸ್ತರಲ್ಲ.
ನಾನು ನಿಮ್ಮನ್ನು ಆಶ್ರಯಿಸಿಕೊಳ್ಳಲಾರೆ. ಕೆಲವೊಮ್ಮೆ ಹರಿಯುವ, ಕೆಲವೊಮ್ಮೆ ಹರಿಯದಿರುವ
ತೊರೆಗಳಂತೆ ನೀವು ದ್ರೋಹಿಗಳಾಗಿದ್ದೀರಿ.
16 ಮಂಜಿನಿಂದಲೂ ಕರಗುವ ಹಿಮದಿಂದಲೂ ತುಂಬಿ ಹರಿಯುವ ತೊರೆಗಳಂತೆ ನೀವಿದ್ದೀರಿ.
17 ಆದರೆ ಆ ತೊರೆಗಳು ಬೇಸಿಗೆಕಾಲದಲ್ಲಿ ಇದ್ದಕ್ಕಿದ್ದಂತೆ ಹರಿಯದೆ ನಿಂತುಹೋಗುತ್ತವೆ.
ಬೇಸಿಗೆ ಕಾಲದ ಕಾವಿಗೆ ನೀರು ಬತ್ತಿಹೋಗುತ್ತದೆ; ತೊರೆಗಳು ಇಲ್ಲವಾಗುತ್ತವೆ.
18 ವರ್ತಕರ ತಂಡಗಳು ಅವುಗಳ ದಾರಿಗಳಿಂದ ಬೇರೆ ಕಡೆಗೆ ತಿರುಗಿಕೊಳ್ಳುವರು.
ಅವರು ಅಲೆಯುತ್ತಾ ಮರುಭೂಮಿಗೆ ಹೋಗಿ ಕಾಣದಂತಾಗುವರು.
19 ತೇಮದ ವರ್ತಕರ ತಂಡಗಳು ನೀರಿಗಾಗಿ ನೋಡುವರು.
ಶೆಬದ ಪ್ರಯಾಣಿಕರು ನಿರೀಕ್ಷೆಯಿಂದ ನೋಡುವರು.
20 ನೀರು ಸಿಗುವುದೆಂದು ಅವರು ನಂಬಿಕೊಂಡಿದ್ದರೂ
ಅವರಿಗೆ ನಿರಾಶೆಯಾಯಿತು.
21 ನೀವು ಸಹ ಆ ತೊರೆಗಳಂತಿದ್ದೀರಿ.
ನೀವು ನನ್ನ ಕಷ್ಟಗಳನ್ನು ನೋಡಿ ಭಯಗೊಂಡಿದ್ದೀರಿ.
22 ‘ನನಗೆ ಏನಾದರೂ ಕೊಡಿ’ ಎಂದಾಗಲಿ
‘ನನಗೋಸ್ಕರವಾಗಿ ನಿಮ್ಮ ಐಶ್ವರ್ಯದಿಂದ ಇಂಥವನಿಗೆ ಲಂಚಕೊಡಿ’ ಎಂದಾಗಲಿ
ನಾನೆಂದೂ ಕೇಳಲಿಲ್ಲ.
23 ‘ಶತ್ರುವಿನ ಶಕ್ತಿಯಿಂದ ನನ್ನನ್ನು ರಕ್ಷಿಸಿರಿ.
ವೈರಿಯಿಂದ ನನ್ನನ್ನು ರಕ್ಷಿಸಲು ಪ್ರಾಯಶ್ಚಿತ್ತ ಕೊಡಿರಿ’ ಎಂದಾಗಲಿ ನಾನೆಂದೂ ಕೇಳಲಿಲ್ಲ.
 
24 “ಈಗ ನನಗೆ ಉಪದೇಶಿಸಿ ನನ್ನ ತಪ್ಪನ್ನು ತಿಳಿಸಿರಿ;
ನಾನು ಮೌನವಾಗಿರುವೆನು.
25 ಯಥಾರ್ಥಾವಾದ ನುಡಿಗಳು ಶಕ್ತಿಯುತವಾಗಿವೆ.
ಆದರೆ ನಿಮ್ಮ ವಾದಗಳು ಏನನ್ನೂ ನಿರೂಪಿಸುವುದಿಲ್ಲ.
26 ನನ್ನನ್ನು ಟೀಕೆ ಮಾಡಬೇಕೆಂದಿದ್ದೀರೋ?
ಇನ್ನೂ ಕಟುವಾದ ಮಾತುಗಳನ್ನು ಆಡಬೇಕೆಂದಿದ್ದೀರೋ?
27 ಹೌದು, ನೀವು ಚೀಟುಹಾಕಿ ಅನಾಥರಿಗೆ ಸೇರಿದ ವಸ್ತುಗಳನ್ನು ತೆಗೆದುಕೊಳ್ಳುವವರಾಗಿದ್ದೀರಿ.
ನೀವು ನಿಮ್ಮ ಸ್ನೇಹಿತನನ್ನು ಮಾರಾಟ ಮಾಡುವವರಾಗಿದ್ದೀರಿ.
28 ಆದರೆ ಈಗ ದಯವಿಟ್ಟು ನನ್ನ ಮುಖವನ್ನು ನೋಡಿರಿ.
ನಾನು ನಿಮಗೆ ಸುಳ್ಳು ಹೇಳುವುದಿಲ್ಲ.
29 ಆದ್ದರಿಂದ ಈಗ ನಿಮ್ಮ ಮನಸ್ಸನ್ನು ಬದಲಾಯಿಸಿರಿ, ಅನ್ಯಾಯಸ್ಥರಾಗಿರಬೇಡಿ.
ಹೌದು, ಮತ್ತೊಮ್ಮೆ ಯೋಚಿಸಿರಿ. ನಾನೇನೂ ತಪ್ಪು ಮಾಡಿಲ್ಲ.
30 ನಾನು ಸುಳ್ಳು ಹೇಳುತ್ತಿಲ್ಲ.
ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನನಗೆ ಗೊತ್ತಿದೆ.