20
ಇಸ್ರೇಲರಿಗೂ ಮತ್ತು ಬೆನ್ಯಾಮೀನ್ಯರಿಗೂ ಯುದ್ಧ
ಇಸ್ರೇಲಿನ ಜನರೆಲ್ಲರೂ ಒಟ್ಟುಗೂಡಿದರು. ಮಿಚ್ಛೆ ನಗರದಲ್ಲಿ ಯೆಹೋವನ ಎದುರಿಗೆ ನಿಲ್ಲುವುದಕ್ಕಾಗಿ ಅವರು ಒಂದು ಕಡೆ ಸೇರಿದ್ದರು. ಇಸ್ರೇಲಿನ ಎಲ್ಲ ಕಡೆಯಿಂದಲೂ ಜನರು ಬಂದರು. ಗಿಲ್ಯಾದಿನಲ್ಲಿದ್ದ ಇಸ್ರೇಲರು ಸಹ ಅಲ್ಲಿ ಬಂದಿದ್ದರು. ಇಸ್ರೇಲಿನ ಎಲ್ಲ ಕುಲಾಧಿಪತಿಗಳು ಅಲ್ಲಿದ್ದರು. ಅವರು ದೈವಭಕ್ತರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಯುದ್ಧ ಸನ್ನದ್ಧರಾದ ನಾಲ್ಕು ಲಕ್ಷ ಜನರು ಅಲ್ಲಿದ್ದರು. ಮಿಚ್ಛೆಯಲ್ಲಿ ಎಲ್ಲಾ ಇಸ್ರೇಲರು ಒಟ್ಟುಗೂಡುತ್ತಿದ್ದಾರೆ ಎಂಬ ಸಮಾಚಾರ ಬೆನ್ಯಾಮೀನ್ಯರಿಗೆ ತಿಳಿಯಿತು. ಇಸ್ರೇಲರು, “ಈ ಭಯಾನಕ ಕೃತ್ಯ ಹೇಗೆ ನಡೆಯಿತು. ಎಂಬುದನ್ನು ನಮಗೆ ಹೇಳು” ಎಂದು ಕೇಳಿದರು.
ಆಗ, ಕೊಲೆಗೀಡಾದ ಆ ಸ್ತ್ರೀಯ ಗಂಡನಾದ ಲೇವಿಯನು ನಡೆದ ಕಥೆಯನ್ನು ಹೇಳಿದನು. ಅವನು, “ನಾನೂ ನನ್ನ ಉಪಪತ್ನಿಯೂ ಬೆನ್ಯಾಮೀನ್ಯರ ಪ್ರದೇಶವಾದ ಗಿಬೆಯ ನಗರಕ್ಕೆ ಬಂದೆವು. ಅಲ್ಲಿ ಆ ರಾತ್ರಿ ಇಳಿದುಕೊಂಡೆವು. ಆದರೆ ರಾತ್ರಿ ಸಮಯದಲ್ಲಿ ಗಿಬೆಯ ನಗರದ ಮುಖಂಡರು ಬಂದು ನಾವು ಇಳಿದುಕೊಂಡ ಮನೆಗೆ ಮುತ್ತಿಗೆ ಹಾಕಿದರು. ಅವರು ನನ್ನನ್ನು ಕೊಲ್ಲಬೇಕೆಂದಿದ್ದರು. ಅವರು ನನ್ನ ಉಪಪತ್ನಿಯ ಮೇಲೆ ಬಲಾತ್ಕಾರ ಮಾಡಿದರು; ಆಗ ಅವಳು ಸತ್ತುಹೋದಳು. ಬಳಿಕ ನಾನು ನನ್ನ ಉಪಪತ್ನಿಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಇಸ್ರೇಲರ ಪ್ರತಿಯೊಂದು ಕುಲಕ್ಕೂ ಒಂದು ತುಂಡನ್ನು ಕಳುಹಿಸಿದೆ. ಹೀಗೆ ನಾವು ಪಡೆದುಕೊಂಡ ಪ್ರದೇಶಗಳಿಗೆ ಹನ್ನೆರಡು ತುಂಡುಗಳನ್ನು ಕಳುಹಿಸಿದೆ. ಇಸ್ರೇಲಿನಲ್ಲಿ ಬೆನ್ಯಾಮೀನ್ಯರು ಇಂಥ ಭಯಾನಕ ಕೃತ್ಯವನ್ನು ಮಾಡಿದ್ದಕ್ಕಾಗಿ ನಾನು ಇದನ್ನು ಮಾಡಿದೆ. ಈಗ ಇಸ್ರೇಲಿನ ಜನರಾದ ನೀವೆಲ್ಲರು ಮಾತನಾಡಿರಿ. ನಾವು ಏನು ಮಾಡಬೇಕೆಂಬುದರ ಬಗ್ಗೆ ನಿಮ್ಮ ನಿರ್ಧಾರವನ್ನು ತಿಳಿಸಿರಿ” ಎಂದು ಕೇಳಿದನು.
ಆಗ ಎಲ್ಲಾ ಜನರು ಏಕಕಾಲದಲ್ಲಿ ಎದ್ದುನಿಂತರು. ಅವರೆಲ್ಲರು ಒಟ್ಟಾಗಿ, “ನಮ್ಮಲ್ಲಿ ಯಾರೂ ನಮ್ಮ ಸ್ಥಳಗಳಿಗೆ ಹಿಂದಿರುಗಿ ಹೋಗುವುದಿಲ್ಲ. ನಮ್ಮಲ್ಲಿ ಒಬ್ಬನಾದರೂ ತನ್ನ ಮನೆಗೆ ಹಿಂದಿರುಗಿ ಹೋಗುವುದಿಲ್ಲ. ಈಗ ಗಿಬೆಯ ನಗರದ ಬಗ್ಗೆ ನಾವು ಚೀಟು ಹಾಕೋಣ. ಆ ಜನರಿಗೆ ಏನು ಮಾಡಬೇಕೆಂಬುದನ್ನು ದೇವರೇ ನಮಗೆ ತೋರಿಸಿಕೊಡಲಿ. 10 ನಾವು ಇಸ್ರೇಲಿನ ಎಲ್ಲ ಕುಲಗಳಲ್ಲಿ ಪ್ರತಿ ನೂರು ಮಂದಿಗೆ ಹತ್ತು ಮಂದಿಯನ್ನು ಆರಿಸಿಕೊಳ್ಳೋಣ. ಪ್ರತಿ ಸಾವಿರ ಮಂದಿಗೆ ನೂರು ಮಂದಿಯನ್ನು ಆರಿಸಿಕೊಳ್ಳೋಣ. ಪ್ರತಿ ಹತ್ತು ಸಾವಿರ ಮಂದಿಗೆ ಒಂದು ಸಾವಿರ ಮಂದಿಯನ್ನು ಆರಿಸಿಕೊಳ್ಳೋಣ. ಹೀಗೆ, ನಾವು ಆರಿಸಿಕೊಂಡ ಜನರು ಸೈನ್ಯಕ್ಕೆ ಆಹಾರ ಸರಬರಾಜು ಮಾಡಲಿ. ಆಮೇಲೆ ಬೆನ್ಯಾಮೀನ್ಯರ ಪ್ರದೇಶದಲ್ಲಿರುವ ಗಿಬೆಯಕ್ಕೆ ಸೈನ್ಯ ಕಳುಹಿಸೋಣ. ಇಸ್ರೇಲರಿಗೆ ಹೀಗೆ ನಿಂದೆಗೆ ಗುರಿಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ದೊರಕಲಿ” ಎಂದು ಹೇಳಿದರು.
11 ಇಸ್ರೇಲಿನ ಎಲ್ಲಾ ಜನರು ಗಿಬೆಯದಲ್ಲಿ ಸೇರಿದರು. ಅವರು ಏನು ಮಾಡಬೇಕೆಂಬುದನ್ನು ಒಮ್ಮತದಿಂದ ನಿರ್ಧರಿಸಿದರು. 12 ಇಸ್ರೇಲ್ ಕುಲದವರು ಬೆನ್ಯಾಮೀನ್ ಕುಲದವರಿಗೆ ಒಂದು ಸಂದೇಶವನ್ನು ದೂತನ ಮೂಲಕ ಕಳುಹಿಸಿದರು. ಆ ಸಂದೇಶ ಹೀಗಿತ್ತು: “ನಿಮ್ಮವರಾದ ಕೆಲವು ಜನರು ಮಾಡಿದ ಈ ದುಷ್ಕೃತ್ಯದ ಬಗ್ಗೆ ಏನು ಹೇಳುತ್ತೀರಿ. 13 ಆ ನೀಚರನ್ನು ಗಿಬೆಯದಿಂದ ನಮ್ಮಲ್ಲಿಗೆ ಕಳುಹಿಸಿಕೊಡಿ; ಅವರನ್ನು ನಮಗೆ ಒಪ್ಪಿಸಿರಿ. ನಾವು ಅವರನ್ನು ಕೊಲ್ಲಬೇಕು; ಇಸ್ರೇಲರ ಮಧ್ಯದಲ್ಲಿರುವ ಈ ಪಾಪಿಗಳನ್ನು ನಿರ್ಮೂಲ ಮಾಡಬೇಕು.”
ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳಾದ ಇಸ್ರೇಲರ ಸಂದೇಶವನ್ನು ಕೇಳಲಿಲ್ಲ. 14 ಬೆನ್ಯಾಮೀನ್ಯರು ತಮ್ಮ ನಗರಗಳನ್ನು ಬಿಟ್ಟು ಇಸ್ರೇಲಿನ ಬೇರೆ ಕುಲಗಳ ಜನರೊಂದಿಗೆ ಯುದ್ಧಮಾಡಲು ಗಿಬೆಯ ನಗರಕ್ಕೆ ಹೋದರು. 15 ಬೆನ್ಯಾಮೀನ್ ಕುಲದವರು ಇಪ್ಪತ್ತಾರು ಸಾವಿರ ಸೈನಿಕರನ್ನು ಒಟ್ಟುಗೂಡಿಸಿದರು. ಆ ಸೈನಿಕರೆಲ್ಲರು ಯುದ್ಧದ ತರಬೇತಿಯನ್ನು ಪಡೆದವರಾಗಿದ್ದರು. ಗಿಬೆಯ ನಗರದಲ್ಲಿಯೂ ಏಳುನೂರು ಜನರು ತರಬೇತಿ ಪಡೆದ ಸೈನಿಕರಾಗಿದ್ದರು. 16 ಇದಲ್ಲದೆ ಎಡಚರಾಗಿದ್ದ ಏಳುನೂರು ಮಂದಿ ಸೈನಿಕರು ಸಹ ಅಲ್ಲಿದ್ದರು. ಅವರು ಸಹ ತರಬೇತಿ ಪಡೆದವರಾಗಿದ್ದರು. ಅವರಲ್ಲಿ ಪ್ರತಿಯೊಬ್ಬನೂ ಕೂದಲೆಳೆಯಷ್ಟೂ ಗುರಿತಪ್ಪದೆ ಕವಣೆಯನ್ನು ಹೊಡೆಯುವದರಲ್ಲಿ ನಿಪುಣನಾಗಿದ್ದನು.
17 ಬೆನ್ಯಾಮೀನ್ಯರನ್ನು ಬಿಟ್ಟು ಉಳಿದೆಲ್ಲ ಇಸ್ರೇಲ್ ಕುಲಗಳವರು ಸೇರಿದ್ದರು. ಅವರಲ್ಲಿ ನಾಲ್ಕು ಲಕ್ಷ ಸೈನಿಕರಿದ್ದರು. ಈ ನಾಲ್ಕು ಲಕ್ಷ ಜನರ ಹತ್ತಿರ ಕತ್ತಿಗಳಿದ್ದವು. ಅವರಲ್ಲಿ ಪ್ರತಿಯೊಬ್ಬನು ತರಬೇತಿ ಪಡೆದ ಸೈನಿಕನಾಗಿದ್ದನು. 18 ಇಸ್ರೇಲಿನ ಜನರು ಬೇತೇಲಿಗೆ ಹೋದರು. ಬೇತೇಲಿನಲ್ಲಿ ಅವರು “ಯಾವ ಕುಲದವರು ಮೊದಲು ಬೆನ್ಯಾಮೀನ್ಯರ ಮೇಲೆ ಧಾಳಿಮಾಡಬೇಕು” ಎಂದು ಯೆಹೋವನನ್ನು ಕೇಳಿದರು.
ಅದಕ್ಕೆ ಯೆಹೋವನು, “ಯೆಹೂದ ಕುಲದವರು ಮೊದಲು ಹೋಗಬೇಕು” ಎಂದು ಉತ್ತರಿಸಿದನು.
19 ಮರುದಿನ ಬೆಳಿಗ್ಗೆ ಇಸ್ರೇಲರು ಎದ್ದು ಗಿಬೆಯ ನಗರದ ಹತ್ತಿರ ಪಾಳೆಯ ಮಾಡಿಕೊಂಡರು. 20 ಇಸ್ರೇಲರ ಸೈನ್ಯವು ಬೆನ್ಯಾಮೀನ್ಯರ ಸೈನ್ಯದೊಂದಿಗೆ ಯುದ್ಧಮಾಡಲು ಹೋಯಿತು. ಗಿಬೆಯದಲ್ಲಿ ಇಸ್ರೇಲರ ಸೈನ್ಯವು ಬೆನ್ಯಾಮೀನ್ಯರ ಸೈನ್ಯದೊಂದಿಗೆ ಯುದ್ಧಮಾಡಲು ಸಿದ್ಧವಾಯಿತು. 21 ಆಗ ಬೆನ್ಯಾಮೀನ್ಯರ ಸೈನ್ಯವು ಗಿಬೆಯ ನಗರದಿಂದ ಹೊರಗೆ ಬಂದಿತು. ಆ ದಿನದ ಯುದ್ಧದಲ್ಲಿ ಬೆನ್ಯಾಮೀನ್ಯರ ಸೈನ್ಯವು ಇಸ್ರೇಲ್ ಸೈನ್ಯದ ಇಪ್ಪತ್ತೆರಡು ಸಾವಿರ ಜನರನ್ನು ಕೊಂದುಹಾಕಿತು.
22-23 ಇಸ್ರೇಲರು ಯೆಹೋವನ ಬಳಿಗೆ ಹೋಗಿ ಸಾಯಂಕಾಲದವರೆಗೂ ಮೊರೆಯಿಟ್ಟರು. “ನಾವು ಮತ್ತೆ ಬೆನ್ಯಾಮೀನ್ಯರೊಡನೆ ಯುದ್ಧ ಮಾಡಲು ಹೋಗಬೇಕೇ? ಅವರು ನಮ್ಮ ಬಂಧುಗಳು” ಎಂದು ಅವರು ಯೆಹೋವನನ್ನು ಕೇಳಿದರು.
ಅದಕ್ಕೆ ಯೆಹೋವನು, “ಹೋಗಿರಿ, ಅವರ ವಿರುದ್ಧ ಯುದ್ಧ ಮಾಡಿರಿ” ಎಂದು ಉತ್ತರಿಸಿದನು. ಇಸ್ರೇಲರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿದರು. ಮೊದಲನೇ ದಿನದಂತೆ ಅವರು ಮತ್ತೊಮ್ಮೆ ಯುದ್ಧಕ್ಕೆ ಹೋದರು.
24 ಆಗ ಇಸ್ರೇಲರ ಸೈನ್ಯವು ಬೆನ್ಯಾಮೀನ್ಯರ ಸೈನ್ಯದ ಹತ್ತಿರಕ್ಕೆ ಬಂದಿತು. ಇದು ಯುದ್ಧದ ಎರಡನೆಯ ದಿನವಾಗಿತ್ತು. 25 ಎರಡನೆಯ ದಿನವೂ ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಸೈನ್ಯದ ಮೇಲೆ ಧಾಳಿಮಾಡಲು ಗಿಬೆಯ ಪಟ್ಟಣದಿಂದ ಹೊರಗೆ ಬಂತು. ಈ ಸಲ ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಹದಿನೆಂಟು ಸಾವಿರ ಜನರನ್ನು ಕೊಂದುಹಾಕಿತು. ಇಸ್ರೇಲ್ ಸೈನ್ಯದ ಆ ಜನರೆಲ್ಲಾ ತರಬೇತಿ ಪಡೆದ ಸೈನಿಕರಾಗಿದ್ದರು.
26 ಆಗ ಇಸ್ರೇಲಿನ ಜನರೆಲ್ಲರು ಬೇತೇಲಿಗೆ ಹೋದರು. ಅಲ್ಲಿ ಅವರು ಕುಳಿತುಕೊಂಡು ಯೆಹೋವನಿಗೆ ಮೊರೆಯಿಟ್ಟರು. ಅವರು ಸಾಯಂಕಾಲದವರೆಗೆ ಏನೂ ತಿನ್ನಲಿಲ್ಲ. ಇದಲ್ಲದೆ ಅವರು ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. 27 ಇಸ್ರೇಲರು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಿದರು. (ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಬೇತೇಲಿನಲ್ಲಿತ್ತು. 28 ಫೀನೆಹಾಸನು ಅಲ್ಲಿ ದೇವರ ಸೇವೆ ಮಾಡುವ ಯಾಜಕನಾಗಿದ್ದನು. ಫೀನೆಹಾಸನು ಎಲ್ಲಾಜಾರನ ಮಗನಾಗಿದ್ದನು. ಎಲ್ಲಾಜಾರನು ಆರೋನನ ಮಗನಾಗಿದ್ದನು.) ಇಸ್ರೇಲರು, “ಬೆನ್ಯಾಮೀನ್ಯರು ನಮ್ಮ ಬಂಧುಗಳು. ನಾವು ಅವರ ವಿರುದ್ಧ ಯುದ್ಧ ಮಾಡುವುದಕ್ಕೆ ಮತ್ತೆ ಹೋಗಬೇಕೇ? ಅಥವಾ ನಾವು ಯುದ್ಧ ಮಾಡುವುದನ್ನು ನಿಲ್ಲಿಸಿ ಬಿಡಬೇಕೇ?” ಎಂದು ಯೆಹೋವನನ್ನು ಕೇಳಿದರು.
“ಹೋಗಿರಿ, ನಾಳೆ ಅವರನ್ನು ಸೋಲಿಸಲು ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು ಯೆಹೋವನು ಉತ್ತರಕೊಟ್ಟನು.
29 ಆಗ ಇಸ್ರೇಲಿನ ಸೈನಿಕರು ಕೆಲವರನ್ನು ಗಿಬೆಯದ ಸುತ್ತಲೂ ಅಡಗಿಸಿಟ್ಟರು. 30 ಇಸ್ರೇಲಿನ ಸೈನಿಕರು ಮೂರನೆಯ ದಿನ ಗಿಬೆಯ ನಗರದವರ ವಿರುದ್ಧ ಯುದ್ಧಮಾಡಲು ಹೋದರು. ಅವರು ಮುಂಚಿನಂತೆ ಯುದ್ಧಕ್ಕೆ ಸಿದ್ಧರಾದರು. 31 ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಲು ಗಿಬೆಯ ನಗರದಿಂದ ಹೊರಗೆ ಬಂದಿತು. ಇಸ್ರೇಲಿನ ಸೈನಿಕರು ಹಿಮ್ಮೆಟ್ಟಿದರು; ಬೆನ್ಯಾಮೀನ್ಯರು ಅವರನ್ನು ಬೆನ್ನಟ್ಟಿದರು. ಈ ರೀತಿ ಬೆನ್ಯಾಮೀನ್ಯರ ಸೈನ್ಯವು ನಗರವನ್ನು ಬಿಟ್ಟು ಬಹಳ ದೂರಹೋಗುವಂತೆ ಮಾಡಿದರು.
ಬೆನ್ಯಾಮೀನ್ಯರ ಸೈನಿಕರು ಮುಂಚಿನಂತೆ ಕೆಲವು ಜನ ಇಸ್ರೇಲಿ ಸೈನಿಕರನ್ನು ಕೊಲ್ಲಲು ಆರಂಭಿಸಿದರು. ಅವರು ಸುಮಾರು ಮೂವತ್ತು ಜನ ಇಸ್ರೇಲರನ್ನು ಕೊಂದರು. ಅವರಲ್ಲಿ ಕೆಲವರನ್ನು ಹೊಲಗಳಲ್ಲಿ ಕೊಂದರು. ಒಂದು ದಾರಿ ಬೇತೇಲ್ ನಗರಕ್ಕೆ ಹೋಗುತ್ತಿತ್ತು. ಇನ್ನೊಂದು ದಾರಿ ಗಿಬೆಯಕ್ಕೆ ಹೋಗುತ್ತಿತ್ತು. 32 ಬೆನ್ಯಾಮೀನ್ಯರು, “ಮುಂಚಿನಂತೆ ನಾವು ಗೆಲ್ಲುತ್ತಿದ್ದೇವೆ” ಎಂದು ಭಾವಿಸಿದ್ದರು.
ಇಸ್ರೇಲಿನ ಜನರು ಓಡಿಹೋಗುತ್ತಿದ್ದರು. ಆದರೆ ಇದೊಂದು ತಂತ್ರವಾಗಿತ್ತು. ಅವರು ಬೆನ್ಯಾಮೀನ್ಯರನ್ನು ನಗರದಿಂದ ಬಹುದೂರ ಕರೆದುಕೊಂಡು ಹೋಗಬೇಕೆಂದಿದ್ದರು. 33 ಆದ್ದರಿಂದ ಎಲ್ಲರೂ ಓಡಿಹೋದರು. ಅವರು ಬಾಳ್‌ತಾಮರ್ ಎಂಬ ಸ್ಥಳದಲ್ಲಿ ನಿಂತರು. ಇಸ್ರೇಲಿನ ಕೆಲವು ಜನರು ಗಿಬೆಯದ ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಅವರು ತಾವು ಅಡಗಿದ್ದ ಸ್ಥಳಗಳಿಂದ ಓಡಿಹೋಗಿ ಗಿಬೆಯದ ಮೇಲೆ ಧಾಳಿಮಾಡಿದರು. 34 ಇಸ್ರೇಲಿನ ಹತ್ತು ಸಾವಿರ ಸೈನಿಕರು ಅಂದರೆ ತರಬೇತಿ ಪಡೆದ ಸೈನಿಕರು ಗಿಬೆಯ ನಗರದ ಮೇಲೆ ಧಾಳಿಮಾಡಿದರು. ಘೋರವಾದ ಯುದ್ಧ ನಡೆಯಿತು. ಆದರೆ ಇಂಥ ಭೀಕರ ಪರಿಸ್ಥಿತಿ ಉಂಟಾಗಬಹುದೆಂಬುದು ಬೆನ್ಯಾಮೀನ್ಯರಿಗೆ ತಿಳಿದಿರಲಿಲ್ಲ.
35 ಯೆಹೋವನು ಇಸ್ರೇಲಿನ ಸೈನ್ಯದಿಂದ ಬೆನ್ಯಾಮೀನ್ಯರ ಸೈನ್ಯವನ್ನು ಸೋಲಿಸಿದನು. ಆ ದಿನ ಇಸ್ರೇಲಿ ಸೈನಿಕರು ಬೆನ್ಯಾಮೀನ್ಯರ ಇಪ್ಪತೈದು ಸಾವಿರದ ನೂರು ಸೈನಿಕರನ್ನು ಕೊಂದುಹಾಕಿದರು. ಆ ಸೈನಿಕರೆಲ್ಲಾ ಯುದ್ಧದ ತರಬೇತಿ ಪಡೆದವರಾಗಿದ್ದರು. 36 ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು.
ಇಸ್ರೇಲರ ಸೈನಿಕರು ಹಿಮ್ಮೆಟ್ಟಿದ್ದರು. ಗಿಬೆಯದ ಹತ್ತಿರ ಅಡಗಿಕೊಂಡಿದ್ದ ತಮ್ಮ ಜನರು ಹಠಾತ್ ಧಾಳಿಮಾಡುವರೆಂದು ನಂಬಿ ಅವರು ಹಿಮ್ಮೆಟ್ಟಿದ್ದರು. 37 ಆಗ ಅಡಗಿಕೊಂಡಿದ್ದ ಜನರು ಗಿಬೆಯದ ನಗರಕ್ಕೆ ನುಗ್ಗಿದರು. ಅವರು ನಗರದ ಎಲ್ಲ ಕಡೆಗೂ ಹರಡಿ ಎಲ್ಲರನ್ನು ತಮ್ಮ ಕತ್ತಿಗಳಿಂದ ಕೊಂದುಹಾಕಿದರು. 38 ಇಸ್ರೇಲರು ಅಡಗಿಕೊಂಡಿದ್ದ ಜನರಿಗೆ ಒಂದು ಸಂಕೇತ ಕೊಡಬೇಕೆಂದು ತಿಳಿಸಿದ್ದರು. ಅಡಗಿಕೊಂಡಿದ್ದವರು ಬೆಂಕಿಹಚ್ಚಿ ಆಕಾಶಕ್ಕೆ ಹೊಗೆ ಏರುವಂತೆ ಮಾಡುವುದೇ ಆ ಸಂಕೇತ.
39-41 ಬೆನ್ಯಾಮೀನ್ಯರ ಸೈನಿಕರು ಸುಮಾರು ಮೂವತ್ತು ಜನ ಇಸ್ರೇಲಿ ಸೈನಿಕರನ್ನು ಕೊಂದುಹಾಕಿದ್ದರು. ಆದ್ದರಿಂದ ಬೆನ್ಯಾಮೀನ್ಯರು, “ನಾವು ಮುಂಚಿನಂತೆ ಗೆಲ್ಲುತ್ತಿದ್ದೇವೆ” ಎಂದು ಭಾವಿಸಿದ್ದರು. ಆಗ ನಗರದಿಂದ ಹೊಗೆಯು ಸ್ತಂಭದೋಪಾದಿಯಲ್ಲಿ ಮೇಲೇರುತ್ತಿತ್ತು. ಬೆನ್ಯಾಮೀನ್ಯರು ಹಿಂತಿರುಗಿ ನೋಡಿದಾಗ ಅವರಿಗೆ ಹೊಗೆ ಕಾಣಿಸಿತು. ಇಡೀ ನಗರವು ಉರಿಯುತ್ತಿತ್ತು. ಆಗ ಇಸ್ರೇಲರ ಸೈನಿಕರು ಓಡಿಹೋಗುವುದನ್ನು ನಿಲ್ಲಿಸಿ ಯುದ್ಧ ಮಾಡುವುದಕ್ಕೆ ಪ್ರಾರಂಭಿಸಿದರು. ಬೆನ್ಯಾಮೀನ್ಯರು ಅಂಜಿದರು. ಎಂಥ ಭಯಾನಕ ಪರಿಸ್ಥಿತಿ ಉಂಟಾಗಿದೆ ಎಂಬುದು ಈಗ ಅವರಿಗೆ ಗೊತ್ತಾಯಿತು.
42 ಬೆನ್ಯಾಮೀನ್ಯರ ಸೈನಿಕರು ಇಸ್ರೇಲ್ ಸೈನಿಕರಿಂದ ತಪ್ಪಿಸಿಕೊಂಡು ಓಡತೊಡಗಿದರು. ಅವರು ಮರುಭೂಮಿಯ ಕಡೆಗೆ ಓಡಿದರು. ಆದರೆ ಯುದ್ಧದಿಂದ ತಪ್ಪಿಸಿಕೊಳ್ಳುವುದು ಅವರಿಂದ ಆಗಲಿಲ್ಲ. ನಗರಗಳಿಂದ ಇಸ್ರೇಲರು ಹೊರಬಂದು ಅವರನ್ನು ಕೊಂದರು. 43 ಇಸ್ರೇಲರು ಬೆನ್ಯಾಮೀನ್ಯರನ್ನು ಮುತ್ತಿ ಅವರನ್ನು ಅಟ್ಟಿಕೊಂಡು ಹೋದರು. ಅವರನ್ನು ವಿಶ್ರಾಂತಿ ಪಡೆಯಲು ಬಿಡಲಿಲ್ಲ. ಅವರನ್ನು ಗಿಬೆಯದ ಪೂರ್ವಪ್ರದೇಶದಲ್ಲಿ ಸೋಲಿಸಿದರು. 44 ಬೆನ್ಯಾಮೀನ್ಯರ ಹದಿನೆಂಟು ಸಾವಿರ ಮಂದಿ ಶೂರ ಸೈನಿಕರು ಕೊಲೆಗೀಡಾದರು.
45 ಬೆನ್ಯಾಮೀನ್ಯರ ಸೈನಿಕರು ಹಿಂತಿರುಗಿ ಮರುಭೂಮಿಯ ಕಡೆಗೆ ಓಡಿದರು. ಅವರು ರಿಮ್ಮೋನ್ ಗಿರಿಯ ಕಡೆಗೆ ಓಡಿಹೋದರು. ಆದರೆ ಇಸ್ರೇಲಿ ಸೈನಿಕರು ದಾರಿಯ ಉದ್ದಕ್ಕೂ ಐದು ಸಾವಿರ ಬೆನ್ಯಾಮೀನ್ ಸೈನಿಕರನ್ನು ಕೊಂದುಹಾಕಿದರು. ಅವರು ಬೆನ್ಯಾಮೀನ್ಯರನ್ನು ಬೆನ್ನಟ್ಟುತ್ತಲೇ ಇದ್ದರು. ಅವರನ್ನು ಗಿದೋಮಿನವರೆಗೆ ಬೆನ್ನಟ್ಟಿಕೊಂಡು ಹೋದರು. ಅಲ್ಲಿ ಇಸ್ರೇಲ್ ಸೈನಿಕರು ಇನ್ನೂ ಎರಡು ಸಾವಿರ ಜನ ಬೆನ್ಯಾಮೀನ್ಯರನ್ನು ಕೊಂದುಹಾಕಿದರು.
46 ಆ ದಿನ ಬೆನ್ಯಾಮೀನ್ಯರ ಇಪ್ಪತ್ತೈದು ಸಾವಿರ ಜನ ಸೈನಿಕರು ಕೊಲ್ಲಲ್ಪಟ್ಟರು. ಅವರೆಲ್ಲರೂ ಕೈಯಲ್ಲಿ ಖಡ್ಗ ಹಿಡಿದು ಬಹಳ ಶೂರತನದಿಂದ ಯುದ್ಧ ಮಾಡಿದರು. 47 ಆದರೆ ಬೆನ್ಯಾಮೀನ್ಯರ ಆರುನೂರು ಜನರು ತಪ್ಪಿಸಿಕೊಂಡು ಮರುಭೂಮಿಗೆ ಓಡಿಹೋದರು. ಅವರು ರಿಮ್ಮೋನ್ ಗಿರಿ ಎಂಬ ಸ್ಥಳಕ್ಕೆ ಓಡಿಹೋದರು. ಅಲ್ಲಿ ಅವರು ನಾಲ್ಕು ತಿಂಗಳುಗಳವರೆಗೆ ಇದ್ದರು. 48 ಇಸ್ರೇಲರು ಬೆನ್ಯಾಮೀನ್ಯರ ಪ್ರದೇಶಕ್ಕೆ ಹಿಂತಿರುಗಿ ಹೋದರು. ಅವರು ಹೋದ ಪ್ರತಿಯೊಂದು ನಗರದಲ್ಲಿ ಅವರ ಎಲ್ಲ ಪಶುಗಳನ್ನು ಸಹ ಕೊಂದರು. ತಮ್ಮ ಕಣ್ಣಿಗೆ ಬಿದ್ದ ಎಲ್ಲವನ್ನೂ ಅವರು ನಾಶಮಾಡಿದರು. ಅವರು ಹೋದ ಪ್ರತಿಯೊಂದು ನಗರವನ್ನು ಸುಟ್ಟುಹಾಕಿದರು.