31
ಇಸ್ರೇಲಿನ ನವನಿರ್ಮಾಣ
ಯೆಹೋವನು ಈ ವಿಷಯಗಳನ್ನು ಹೇಳಿದನು: “ಆ ಸಮಯದಲ್ಲಿ ನಾನು ಇಸ್ರೇಲಿನ ಎಲ್ಲಾ ಗೋತ್ರಗಳ ದೇವರಾಗಿರುವೆನು; ಅವರು ನನ್ನ ಪ್ರಜೆಗಳಾಗಿರುವರು.”
 
ಯೆಹೋವನು ಹೀಗೆನ್ನುತ್ತಾನೆ:
“ಶತ್ರುವಿನ ಖಡ್ಗಕ್ಕೆ ಕೆಲವು ಜನರು ಆಹುತಿಯಾಗಿಲ್ಲ. ಅವರಿಗೆ ಮರುಭೂಮಿಯಲ್ಲಿ ನೆಮ್ಮದಿ ದೊರೆಯುವುದು.
ಇಸ್ರೇಲು ವಿಶ್ರಾಂತಿಯನ್ನು ಬಯಸಿ ಬರುವುದು.”
ದೂರದಿಂದ ಯೆಹೋವನು
ತನ್ನ ಜನರಿಗೆ ದರ್ಶನವನ್ನು ಕೊಡುವನು.
 
ಯೆಹೋವನು ಹೀಗೆನ್ನುವನು, “ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನ ಪ್ರೇಮವು ಶಾಶ್ವತವಾದದ್ದು.
ನಾನು ಎಂದೆಂದಿಗೂ
ನಿಮ್ಮ ಹಿತೈಷಿಯಾಗಿರುವೆನು.
ನನ್ನ ವಧುವಾದ ಇಸ್ರೇಲೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು,
ಆಗ ನೀನು ಮತ್ತೆ ಒಂದು ಜನಾಂಗವಾಗುವೆ.
ನೀನು ಮೊದಲಿನಂತೆ ನಿನ್ನ ದಮ್ಮಡಿಯನ್ನು ತೆಗೆದುಕೊಂಡು
ಸಂತೋಷದಿಂದ ನೃತ್ಯ ಮಾಡುವವರೊಡನೆ ನೃತ್ಯ ಮಾಡುವೆ.
ಇಸ್ರೇಲಿನ ರೈತರಾದ ನೀವು ಮತ್ತೆ ದ್ರಾಕ್ಷಿತೋಟಗಳನ್ನು ಬೆಳೆಸುವಿರಿ.
ನೀವು ಸಮಾರ್ಯ ನಗರದ ಸುತ್ತಮುತ್ತಲಿನ
ಬೆಟ್ಟಗಳಲ್ಲಿ ಆ ದ್ರಾಕ್ಷಿತೋಟವನ್ನು ಬೆಳೆಸುವಿರಿ.
ರೈತರಾದ ನೀವು
ಅದರ ಫಲವನ್ನು ಅನುಭವಿಸುವಿರಿ.
ಒಂದು ಕಾಲ ಬರುವುದು,
ಆಗ ಕಾವಲುಗಾರರು,
‘ಬನ್ನಿ, ನಮ್ಮ ದೇವರಾದ ಯೆಹೋವನನ್ನು ಆರಾಧಿಸಲು
ಚೀಯೋನಿಗೆ ಹೋಗೋಣ’ ಎಂದು ಕೂಗುವರು.
ಎಫ್ರಾಯೀಮಿನ ಬೆಟ್ಟಪ್ರದೇಶದ ಕಾವಲುಗಾರರು ಸಹ ಹೀಗೆಯೇ ಕೂಗುವರು.”
 
ಯೆಹೋವನು ಹೀಗೆಂದನು:
“ಸಂತೋಷದಿಂದಿರಿ, ಯಾಕೋಬಿಗೋಸ್ಕರ ಹಾಡಿರಿ.
ಮಹಾ ಜನಾಂಗವಾದ ಇಸ್ರೇಲಿಗೋಸ್ಕರ ಹರ್ಷಧ್ವನಿ ಮಾಡಿರಿ.
ಸ್ತೋತ್ರಗೀತೆಗಳನ್ನು ಹಾಡಿರಿ.
‘ಯೆಹೋವನು ತನ್ನ ಜನರನ್ನು ರಕ್ಷಿಸಿದನು.
ಇಸ್ರೇಲ್ ಜನಾಂಗದಲ್ಲಿ ಅಳಿದುಳಿದ ಜನರನ್ನು ಆತನು ರಕ್ಷಿಸಿದನು’ ಎಂದು ಕೂಗಿರಿ.
ನಾನು ಇಸ್ರೇಲರನ್ನು
ಉತ್ತರದ ದೇಶದಿಂದ ತರುವೆನು.
ನಾನು ಜಗತ್ತಿನ ದೂರದೂರದ ಸ್ಥಳಗಳಿಂದ
ಇಸ್ರೇಲರನ್ನು ಒಟ್ಟುಗೂಡಿಸುವೆನೆಂದು ತಿಳಿದುಕೊಳ್ಳಿರಿ.
ಅವರಲ್ಲಿ ಕೆಲವರು ಕುರುಡರಾಗಿರುವರು; ಕುಂಟರಾಗಿರುವರು,
ಕೆಲವು ಸ್ತ್ರೀಯರು ಗರ್ಭಿಣಿಯರಾಗಿದ್ದು ಹೆರಿಗೆಯ ದಿನಗಳು ತುಂಬಿದವರಾಗಿರುತ್ತಾರೆ.
ಬಹಳಷ್ಟು ಜನರು ಹಿಂತಿರುಗಿಬರುತ್ತಾರೆ.
ಆ ಜನರು ಹಿಂತಿರುಗಿ ಬರುವಾಗ ಅಳುತ್ತಿರುವರು.
ಆದರೆ ನಾನು ಅವರಿಗೆ ದಾರಿತೋರಿಸುವೆನು, ಸಮಾಧಾನಪಡಿಸುವೆನು.
ನಾನು ಅವರನ್ನು ನದಿ ದಾಟಿಸಿಕೊಂಡು ಬರುವೆನು.
ಅವರು ಎಡವದಂತೆ ಸಮವಾದ ಮಾರ್ಗದಲ್ಲಿ
ನಡೆಸಿಕೊಂಡು ಬರುವೆನು.
ನಾನು ಇಸ್ರೇಲಿನ ತಂದೆ;
ಎಫ್ರಾಯೀಮ್ ನನ್ನ ಚೊಚ್ಚಲ ಮಗ.
ಆದ್ದರಿಂದಲೇ ನಾನು ಅವರನ್ನು ನಡೆಸಿಕೊಂಡು ಬರುವೆನು.
 
10 “ಜನಾಂಗಗಳೇ, ಯೆಹೋವನ ಈ ಸಂದೇಶವನ್ನು ಕೇಳಿರಿ.
ಈ ಸಂದೇಶವನ್ನು ಸಮುದ್ರದಡದ ದೂರದೂರದ ಪ್ರದೇಶಗಳಲ್ಲಿ ತಿಳಿಸಿರಿ.
‘ಇಸ್ರೇಲರನ್ನು ಚದರಿಸಿದಾತನು
ಅವರನ್ನು ಮತ್ತೆ ಒಟ್ಟುಗೂಡಿಸುವನು.
ಆತನು ತನ್ನ ಹಿಂಡನ್ನು ಕುರುಬನಂತೆ
ನೋಡಿಕೊಳ್ಳುವನು’ ಎಂದು ಹೇಳಿರಿ.
11 ಯೆಹೋವನು ಯಾಕೋಬ್ಯರನ್ನು ಹಿಂದಕ್ಕೆ ಕರೆದುಕೊಂಡು ಬರುವನು.
ಯೆಹೋವನು ತನ್ನ ಜನರನ್ನು ಅವರಿಗಿಂತಲೂ ಬಲಿಷ್ಠರಾದ ಜನರಿಂದ ರಕ್ಷಿಸುವನು.
12 ಇಸ್ರೇಲಿನ ಜನರು ಚೀಯೋನ್ ಶಿಖರಕ್ಕೆ ಬರುವರು;
ಸಂತೋಷದಿಂದ ನಲಿದಾಡುವರು.
ದೇವರು ಅವರಿಗೆ ಅನುಗ್ರಹಿಸುವ ಎಲ್ಲಾ ಶ್ರೇಷ್ಠವಾದ ವಸ್ತುಗಳಿಂದ
ಸಂತೋಷಚಿತ್ತರಾದ ಅವರ ಮುಖಗಳು ಪ್ರಕಾಶಮಾನವಾಗುವವು.
ಯೆಹೋವನು ಅವರಿಗೆ ಧಾನ್ಯ, ಹೊಸ ದ್ರಾಕ್ಷಾರಸ,
ಎಣ್ಣೆ, ಕುರಿಮರಿಗಳು ಮತ್ತು ಹಸುಗಳನ್ನು ದಯಪಾಲಿಸುವನು.
ಅವರು ಸಾಕಷ್ಟು ನೀರಿರುವ ತೋಟದಂತೆ ಲವಲವಿಕೆಯಿಂದ ಇರುವರು.
ಇಸ್ರೇಲರು ಇನ್ನು ಯಾವ ತೊಂದರೆಗೂ ಒಳಗಾಗುವುದಿಲ್ಲ.
13 ಆಗ ಇಸ್ರೇಲಿನ ತರುಣಿಯರು
ಸಂತೋಷದಿಂದ ನರ್ತಿಸುವರು.
ತರುಣರು ಮತ್ತು ವೃದ್ಧರು
ಆ ನರ್ತನದಲ್ಲಿ ಭಾಗವಹಿಸುವರು.
ನಾನು ಅವರ ದುಃಖವನ್ನು ಸಂತೋಷವಾಗಿ ಪರಿವರ್ತಿಸುವೆನು.
ನಾನು ಇಸ್ರೇಲರನ್ನು ಸಂತೈಸುವೆನು. ಅವರ ದುಃಖವನ್ನು ಹೋಗಲಾಡಿಸಿ ಅವರನ್ನು ಸಂತೋಷಪಡಿಸುವೆನು.
14 ಯಾಜಕರು ತಮಗೆ ಬೇಕಾಗುವದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೈವೇದ್ಯಗಳನ್ನು ಪಡೆಯುವರು.
ನಾನು ಅವರಿಗೆ ಕೊಡುವ ಉತ್ತಮ ವಸ್ತುಗಳನ್ನು ಮನದಣಿಯುವ ಹಾಗೆ ಅನುಭವಿಸಿ ನನ್ನ ಜನರು ತೃಪ್ತಿಪಡುವರು.”
ಇದು ಯೆಹೋವನ ನುಡಿ.
 
15 ಯೆಹೋವನು ಹೀಗೆನ್ನುತ್ತಾನೆ:
“ರಾಮದಲ್ಲಿ ಅತಿ ದುಃಖದಿಂದ ಗೋಳಾಡುವ
ಒಂದು ಧ್ವನಿಯು ಕೇಳಿಬರುತ್ತದೆ.
ರಾಹೇಲಳು* ತನ್ನ ಮಕ್ಕಳಿಗಾಗಿ ಗೋಳಾಡುವಳು.
ಅವಳ ಮಕ್ಕಳು ಸತ್ತುಹೋದುದರಿಂದ
ರಾಹೇಲಳು ಸಮಾಧಾನ ಹೊಂದುವದಕ್ಕೆ ಒಪ್ಪಲಾರಳು.”
 
16 ಆದರೆ ಯೆಹೋವನು, “ಅಳುವದನ್ನು ನಿಲ್ಲಿಸು.
ಕಣ್ಣಿನಲ್ಲಿ ನೀರು ತುಂಬಿಕೊಳ್ಳಬೇಡ.
ನಿನ್ನ ಕೆಲಸಕ್ಕಾಗಿ ನಿನಗೆ ಪ್ರತಿಫಲ ಸಿಕ್ಕುವುದು” ಎಂದು ಹೇಳುವನು.
ಇದು ಯೆಹೋವನ ನುಡಿ.
“ಇಸ್ರೇಲರು ತಮ್ಮ ಶತ್ರುಗಳ ಪ್ರದೇಶದಿಂದ ಹಿಂತಿರುಗಿ ಬರುವರು.
17 ಆದ್ದರಿಂದ ಇಸ್ರೇಲೇ, ನಿನ್ನ ಮಕ್ಕಳು
ತಮ್ಮ ದೇಶಕ್ಕೆ ಹಿಂತಿರುಗಿ ಬರುವರೆಂಬ ನಿರೀಕ್ಷೆ ನಿನಗಿರಲಿ.”
ಇದು ಯೆಹೋವನ ನುಡಿ.
18 “ಎಫ್ರಾಯೀಮ್ ಅಳುವುದನ್ನು ನಾನು ಕೇಳಿದ್ದೇನೆ.
ಎಫ್ರಾಯೀಮು ಹೀಗೆ ಹೇಳುವದನ್ನು ನಾನು ಕೇಳಿದ್ದೇನೆ.
‘ಯೆಹೋವನೇ, ನೀನು ನಿಜವಾಗಿ ನನ್ನನ್ನು ದಂಡಿಸಿದೆ. ನಾನು ಪಾಠವನ್ನು ಕಲಿತೆನು.
ನಾನು ತರಬೇತಿ ಹೊಂದದ ಒಂದು ಹೋರಿಯುಂತಿದ್ದೆನು.
ನನ್ನನ್ನು ದಂಡಿಸುವದನ್ನು ದಯವಿಟ್ಟು ನಿಲ್ಲಿಸು.
ನಾನು ನಿನ್ನಲ್ಲಿಗೆ ಹಿಂದಿರುಗಿ ಬರುತ್ತೇನೆ.
ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.
19 ಯೆಹೋವನೇ, ನಾನು ನಿನಗೆ ದೂರವಾಗಿ ಅಲೆದಾಡಿದೆನು.
ಆದರೆ ನಾನು ಮಾಡಿದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಂಡೆನು.
ಆದ್ದರಿಂದ ನಾನು ನನ್ನ ಮನಸ್ಸನ್ನೂ ಜೀವನವನ್ನೂ ಪರಿವರ್ತಿಸಿಕೊಂಡೆ.
ತಾರುಣ್ಯಾವಸ್ಥೆಯಲ್ಲಿ ನಾನು ಮಾಡಿದ ಮೂರ್ಖತನಕ್ಕಾಗಿ ಲಜ್ಜೆಗೊಂಡೆನು; ನಾಚಿಕೆಪಟ್ಟೆನು.’ ”
20 ಯೆಹೋವನು ಹೀಗೆನ್ನುತ್ತಾನೆ:
“ಎಫ್ರಾಯೀಮ್ ನನ್ನ ಪ್ರೀತಿಯ ಮಗನೆಂಬುದು ನೀನು ಬಲ್ಲೆ.
ನಾನು ಆ ಮಗುವನ್ನು ಪ್ರೀತಿಸುತ್ತೇನೆ.
ಹೌದು, ನಾನು ಹಲವು ಸಲ ಎಫ್ರಾಯೀಮನ ವಿರುದ್ಧವಾಗಿ ಮಾತನಾಡುತ್ತೇನೆ.
ಆದಾಗ್ಯೂ ನಾನು ಅವನನ್ನು ಜ್ಞಾಪಿಸಿಕೊಳ್ಳುತ್ತೇನೆ.
ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ.
ನಾನು ನಿಜವಾಗಿಯೂ ಅವನನ್ನು ಸಂತೈಸಬಯಸುತ್ತೇನೆ.”
ಇದು ಯೆಹೋವನ ನುಡಿ.
 
21 “ಇಸ್ರೇಲರೇ, ದಾರಿತೋರುವ
ಕಂಬಗಳನ್ನೂ ಕೈಮರಗಳನ್ನೂ ನೆಡಿರಿ.
ನೀವು ಪ್ರಯಾಣ ಮಾಡುತ್ತಿರುವ ರಸ್ತೆಯನ್ನು ಗಮನಿಸಿರಿ.
ನಿಮ್ಮ ಊರುಗಳಿಗೆ ಹಿಂತಿರುಗಿ ಬನ್ನಿ.
ನನ್ನ ವಧುವಾದ ಇಸ್ರೇಲೇ, ಮನೆಗೆ ಬಾ.
22 ನೀನು ಅಪನಂಬಿಗಸ್ತಳಾದ ಮಗಳಾಗಿದ್ದೆ. ಆದರೆ ನೀನು ಬದಲಾವಣೆ ಹೊಂದಿದೆ.
ಈಗ ನೀನು ಮನೆಗೆ ಹಿಂದಿರುಗಿ ಬರಲು ಎಷ್ಟು ಹೊತ್ತು ಕಾದುಕೊಂಡಿರುವೆ.
 
“ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಮಾಡಿದ್ದಾನೆ.
ಹೆಂಗಸು ಗಂಡಸನ್ನು ಕಾಪಾಡುವಳು.”
 
23 ಇಸ್ರೇಲಿನ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆನ್ನುತ್ತಾನೆ: “ನಾನು ಯೆಹೂದದ ಜನರಿಗಾಗಿ ಮತ್ತೆ ಒಳ್ಳೆಯದನ್ನು ಮಾಡುವೆನು. ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದವರನ್ನು ನಾನು ಮತ್ತೆ ಕರೆದುತರುವೆನು. ಆಗ ಅವರು ಯೆಹೂದನಾಡಿನಲ್ಲಿಯೂ ಅದರ ನಗರಗಳಲ್ಲಿಯೂ ಹೀಗೆನ್ನುವರು: ‘ನ್ಯಾಯವಾದ ನಿವಾಸವೇ, ಪವಿತ್ರ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ.’
24 “ಯೆಹೂದದ ಎಲ್ಲಾ ಊರುಗಳಲ್ಲಿ ಜನರು ಪರಸ್ಪರ ಶಾಂತಿಯಿಂದ ವಾಸಿಸುವರು. ರೈತರೂ ದನಕುರಿಗಳನ್ನು ಮೇಯಿಸುವ ಜನರೂ ಶಾಂತಿಯಿಂದ ಯೆಹೂದದಲ್ಲಿ ವಾಸಿಸುವರು. 25 ದುಬರ್ಲಗೊಂಡ ಮತ್ತು ದಣಿದ ಜನರಿಗೆ ನಾನು ಶಕ್ತಿಯನ್ನೂ ವಿಶ್ರಾಂತಿಯನ್ನೂ ಕೊಡುವೆನು.”
26 ಆಗ ನಾನು ಎಚ್ಚೆತ್ತು ಸುತ್ತಮುತ್ತಲು ನೋಡಿದೆ. ಅದೊಂದು ಬಹಳ ಹಿತಕರವಾದ ನಿದ್ರೆಯಾಗಿತ್ತು.
27 ಯೆಹೋವನು ಹೀಗೆ ನುಡಿದನು: “ಇಸ್ರೇಲ್ ಮತ್ತು ಯೆಹೂದ ವಂಶಗಳು ಬೆಳೆಯುವದಕ್ಕೆ ನಾನು ಸಹಾಯ ಮಾಡುವ ದಿನಗಳು ಬರುತ್ತಿವೆ. ಸಸಿಗಳನ್ನು ನೆಟ್ಟ ಮೇಲೆ ಅವುಗಳನ್ನು ನೋಡಿಕೊಳ್ಳುವ ಹಾಗೆ ಅವರ ಮಕ್ಕಳು ಮತ್ತು ಅವರ ಪಶುಗಳು ಬೆಳೆಯುವದಕ್ಕೂ ನಾನು ಸಹಾಯ ಮಾಡುತ್ತೇನೆ. 28 ಪೂರ್ವಕಾಲದಲ್ಲಿ, ಇಸ್ರೇಲ್ ಮತ್ತು ಯೆಹೂದಗಳ ಮೇಲೆ ನಾನು ಗಮನವಿಟ್ಟಿದ್ದೆನು. ಆದರೆ ನಾನು ಅವರನ್ನು ತೆಗೆದುಹಾಕುವ ಸಮಯಕ್ಕಾಗಿ ಕಾದುಕೊಂಡಿದ್ದೆ. ನಾನು ಅವರನ್ನು ಕೆಡವಿದೆ; ಅವರನ್ನು ಹಾಳುಮಾಡಿದೆ. ಅವರಿಗೆ ಅನೇಕ ಕಷ್ಟಗಳನ್ನು ಕೊಟ್ಟೆ. ಆದರೆ ಈಗ ಅವರನ್ನು ಅಭಿವೃದ್ಧಿಪಡಿಸುವದಕ್ಕಾಗಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲು ಅವರ ಕಡೆಗೆ ಗಮನಹರಿಸುತ್ತೇನೆ” ಇದು ಯೆಹೋವನ ನುಡಿ.
 
29 “ ‘ಹುಳಿದ್ರಾಕ್ಷಿ ತಿಂದವರು ತಂದೆತಾಯಿಗಳು!
ರುಚಿ ಕಂಡದ್ದು ಅವರ ಮಕ್ಕಳು!’
 
ಎಂಬ ಗಾದೆಯನ್ನು ಆಗ ಜನರು ಬಳಸುವ ಅವಶ್ಯಕತೆ ಇರುವದಿಲ್ಲ. 30 ಪ್ರತಿಯೊಬ್ಬನು ತನ್ನ ಪಾಪದ ನಿಮಿತ್ತವೇ ಸಾಯುವನು. ಹುಳಿದ್ರಾಕ್ಷಿಯನ್ನು ತಿಂದವನೇ ಅದರ ರುಚಿಯನ್ನು ಕಾಣುವನು.”
ಹೊಸ ಒಡಂಬಡಿಕೆ
31 ಯೆಹೋವನು ಹೀಗೆಂದನು: “ನಾನು ಇಸ್ರೇಲರೊಂದಿಗೂ ಮತ್ತು ಯೆಹೂದ್ಯರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಮಯ ಬರುತ್ತಿದೆ. 32 ಈ ಒಡಂಬಡಿಕೆ ನಾನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತಲ್ಲ. ನಾನು ಅವರ ಕೈಹಿಡಿದು ಈಜಿಪ್ಟಿನಿಂದ ಹೊರತಂದಾಗ ಮಾಡಿಕೊಂಡ ಒಡಂಬಡಿಕೆಯದು. ನಾನು ಅವರ ಒಡೆಯನಾಗಿದ್ದೆ. ಆದರೆ ಅವರು ಒಡಂಬಡಿಕೆಯನ್ನು ಮುರಿದರು.” ಇದು ಯೆಹೋವನ ನುಡಿ.
33 ಯೆಹೋವನು ಹೀಗೆನ್ನುತ್ತಾನೆ: “ಭವಿಷ್ಯದಲ್ಲಿ ಇಸ್ರೇಲಿನ ಜನರೊಂದಿಗೆ ನಾನು ಈ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ. ನಾನು ನನ್ನ ಉಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು; ಅವುಗಳನ್ನು ಅವರ ಹೃದಯಗಳ ಮೇಲೆ ಬರೆಯುವೆನು. ನಾನು ಅವರ ದೇವರಾಗಿರುವೆನು, ಅವರು ನನ್ನ ಜನರಾಗಿರುವರು. 34 ತಮ್ಮ ನೆರೆಮನೆಯವರಿಗೂ ತಮ್ಮ ಬಂಧುಬಳಗದವರಿಗೂ ಯಾರೂ ಯೆಹೋವನ ಬಗ್ಗೆ ಹೇಳಿಕೊಡಬೇಕಾಗಿಲ್ಲ. ಯಾಕೆಂದರೆ ಅತಿ ಕನಿಷ್ಟರಿಂದ ಅತಿ ಪ್ರಮುಖರವರೆಗೆ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು. ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಕ್ಷಮಿಸುವೆನು. ನಾನು ಅವರ ಪಾಪಗಳನ್ನು ಮರೆತುಬಿಡುವೆನು.” ಇದು ಯೆಹೋವನ ನುಡಿ.
ಯೆಹೋವನು ಇಸ್ರೇಲನ್ನು ಎಂದಿಗೂ ತ್ಯಜಿಸನು
35 ಯೆಹೋವನು ಹೀಗೆನ್ನುತ್ತಾನೆ:
“ಹಗಲಿನಲ್ಲಿ ಸೂರ್ಯನು ಪ್ರಕಾಶಿಸುವಂತೆ ಮಾಡುವಾತನೂ
ರಾತ್ರಿಯಲ್ಲಿ ಚಂದ್ರನೂ ನಕ್ಷತ್ರಗಳೂ ಪ್ರಕಾಶಿಸುವಂತೆ ಮಾಡುವಾತನೂ
ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುವಂತೆ ಸಮುದ್ರವನ್ನು ಕೆರಳಿಸುವಾತನೂ
ಸರ್ವಶಕ್ತನಾದ ಯೆಹೋವನೆಂಬ ಹೆಸರಿನಿಂದ ಪ್ರಖ್ಯಾತನೂ ಆಗಿರುವ ಯೆಹೋವನು.”
 
36 ಯೆಹೋವನು ಹೀಗೆನ್ನುತ್ತಾನೆ:
“ಸೂರ್ಯ, ಚಂದ್ರ, ನಕ್ಷತ್ರ ಮತ್ತು ಸಮುದ್ರಗಳ ಮೇಲಿನ ಹತೋಟಿಯನ್ನು ನಾನು ಕಳೆದುಕೊಂಡಾಗ ಮಾತ್ರ
ಇಸ್ರೇಲಿನ ಪೀಳಿಗೆಯು ಒಂದು ಜನಾಂಗವಾಗಿ ನಿಂತುಹೋಗುವುದು.”
 
37 ಯೆಹೋವನು ಹೀಗೆನ್ನುತ್ತಾನೆ: “ನಾನು ಇಸ್ರೇಲ್ ಸಂತತಿಯವರನ್ನು ತಿರಸ್ಕರಿಸುವುದೇ ಇಲ್ಲ.
ಜನರಿಗೆ ಆಕಾಶಮಂಡಲವನ್ನು ಅಳೆಯಲೂ
ಭೂಗರ್ಭದ ಪರಿಪೂರ್ಣ ರಹಸ್ಯವನ್ನು ಅರಿಯಲೂ ಸಾಧ್ಯವೇ?
ಒಂದುವೇಳೆ ಸಾಧ್ಯವಾದರೆ, ಇಸ್ರೇಲರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಇಸ್ರೇಲರನ್ನು ನಿರಾಕರಿಸಿದರೂ ನಿರಾಕರಿಸಬಹುದು.”
ಇದು ಯೆಹೋವನ ಸಂದೇಶ.
ಹೊಸ ಜೆರುಸಲೇಮ್
38 ಇದು ಯೆಹೋವನ ನುಡಿ: “ಯೆಹೋವನಿಗಾಗಿ ಜೆರುಸಲೇಮ್ ನಗರವನ್ನು ಮತ್ತೆ ಕಟ್ಟುವ ಕಾಲ ಬರುತ್ತಿದೆ. ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಇಡೀ ಪಟ್ಟಣವನ್ನು ಮತ್ತೊಮ್ಮೆ ಕಟ್ಟಲಾಗುವುದು. 39 ಅಳತೆಯ ನೂಲು ಮೂಲೆಯ ಬಾಗಿಲಿನಿಂದ ಗಾರೇಬ್ ಗುಡ್ಡದ ನೇರವಾಗಿ ನೆಟ್ಟಗೆ ಎಳೆಯಲ್ಪಟ್ಟು ಗೋಯದ ಕಡೆಗೆ ತಿರುಗುವುದು. 40 ಹೆಣಗಳನ್ನು ಮತ್ತು ಬೂದಿಯನ್ನು ಚೆಲ್ಲುವ ಇಡೀ ಕಣಿವೆ ಪ್ರದೇಶ ಯೆಹೋವನಿಗೆ ಪವಿತ್ರಸ್ಥಳವಾಗುವುದು. ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆಬಾಗಿಲಿನ ಮೂಲೆ, ಇವುಗಳವರೆಗಿರುವ ಬೆಟ್ಟಪ್ರದೇಶ ಅದರಲ್ಲಿ ಸೇರುವುದು. ಆ ಪ್ರದೇಶವೆಲ್ಲ ಯೆಹೋವನಿಗೆ ಪವಿತ್ರಸ್ಥಳವಾಗುವುದು. ಜೆರುಸಲೇಮ್ ನಗರವು ಇನ್ನುಮೇಲೆ ಎಂದಿಗೂ ಕೆಡವಲ್ಪಡದು; ಹಾಳಾಗದು!”
* 31:15 ರಾಹೇಲಳು ಯಾಕೋಬನ ಹೆಂಡತಿ. ಇಲ್ಲಿ ಬಾಬಿಲೋನಿನ ಸೈನಿಕರ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಕಳೆದುಕೊಂಡ ಎಲ್ಲಾ ಹೆಂಗಸರು ಎಂದು ಅರ್ಥ.