40
ಯೆರೆಮೀಯನ ಬಿಡುಗಡೆ
ರಾಮನಗರದ ಹತ್ತಿರ ಅವನ ಬಿಡುಗಡೆಯಾದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನ ವಿಶೇಷ ರಕ್ಷಕ ದಳದ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ರಾಮದಲ್ಲಿ ನೋಡಿದನು. ಯೆರೆಮೀಯನನ್ನು ಸಂಕೋಲೆಗಳಿಂದ ಬಿಗಿಯಲಾಗಿತ್ತು. ಅವನು ಜೆರುಸಲೇಮ್ ಮತ್ತು ಯೆಹೂದದ ಎಲ್ಲಾ ಸೆರೆಯಾಳುಗಳ ಜೊತೆಗಿದ್ದನು. ಆ ಸೆರೆಯಾಳುಗಳನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಕಂಡಾಗ ಅವನನ್ನು ಮಾತನಾಡಿಸಿ ಹೀಗೆಂದನು: “ಯೆರೆಮೀಯನೇ, ನಿಮ್ಮ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥಾ ದುಸ್ಥಿತಿ ಬರುವದೆಂದು ಸಾರಿದ್ದನು. ಏನೇನು ಮಾಡುವೆನೆಂದು ಯೆಹೋವನು ಹೇಳಿದ್ದನೊ ಅದೆಲ್ಲವನ್ನು ಹೇಳಿದ್ದಂತೆಯೇ ಮಾಡಿದ್ದಾನೆ. ಯೆಹೂದದ ಜನರಾದ ನೀವುಗಳು ಯೆಹೋವನ ವಿರುದ್ಧ ಪಾಪ ಮಾಡಿದ್ದರಿಂದ ಈ ಕೇಡು ಸಂಭವಿಸಿತು. ನೀವು ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. ಯೆರೆಮೀಯನೇ, ನಾನು ಈಗ ನಿನ್ನನ್ನು ಬಿಡುಗಡೆ ಮಾಡುವೆನು. ನಾನು ನಿನ್ನ ಕೈಗಳಿಂದ ಸಂಕೋಲೆಗಳನ್ನು ಬಿಚ್ಚುವೆನು. ನೀನು ಇಷ್ಟಪಟ್ಟರೆ ನನ್ನ ಸಂಗಡ ಬಾಬಿಲೋನಿಗೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ನನ್ನ ಸಂಗಡ ಬರುವ ಇಷ್ಟವಿಲ್ಲದಿದ್ದರೆ ಬರಬೇಡ. ಇಡೀ ದೇಶದಲ್ಲಿ ನಿನಗೆ ಎಲ್ಲಿ ಇಷ್ಟವೋ ಅಲ್ಲಿಗೆ ಹೋಗು. ಅಥವಾ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನಲ್ಲಿಗೆ ಹಿಂತಿರುಗಿಹೋಗು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯಾಗಿ ನೇಮಿಸಿದ್ದಾನೆ. ಗೆದಲ್ಯನಲ್ಲಿಗೆ ಹೋಗಿ ಜನರೊಂದಿಗೆ ವಾಸಿಸು; ಅಥವಾ ನಿನ್ನ ಮನಸ್ಸು ಬಂದಲ್ಲಿಗೆ ಹೋಗು.”
ತರುವಾಯ ನೆಬೂಜರದಾನನು ಯೆರೆಮೀಯನಿಗೆ ಊಟವನ್ನೂ ಕಾಣಿಕೆಯನ್ನೂ ಕೊಟ್ಟು ಕಳುಹಿಸಿದನು. ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಫಕ್ಕೆ ಹೋದನು. ಯೆರೆಮೀಯನು ಗೆದಲ್ಯನ ಸಂಗಡ ದೇಶದಲ್ಲಿ ಉಳಿದ ಜನರ ಮಧ್ಯೆ ವಾಸಮಾಡಿದನು.
ಗೆದಲ್ಯನ ಸಂಕ್ಷಿಪ್ತ ಆಳ್ವಿಕೆ
ಜೆರುಸಲೇಮ್ ನಗರವನ್ನು ನಾಶಮಾಡಿದಾಗ ಯೆಹೂದದ ಕೆಲವು ಜನ ಸೈನ್ಯಾಧಿಕಾರಿಗಳು ಮತ್ತು ಅವನ ಸೈನಿಕರು ಇನ್ನೂ ಕಾಡುಮೇಡುಗಳಲ್ಲಿದ್ದರು. ಬಾಬಿಲೋನಿನ ರಾಜನು ಅಹೀಕಾಮನ ಮಗನಾದ ಗೆದಲ್ಯನನ್ನು ಅಳಿದುಳಿದ ಜನರ ಮೇಲಿಬಚಾರಕನನ್ನಾಗಿ ನೇಮಿಸಿದ್ದಾನೆಂಬ ಸಮಾಚಾರ ಕಿವಿಗೆ ಬಿತ್ತು. ಇಲ್ಲಿ ಅಳಿದುಳಿದವರು ಬಹಳ ಬಡವರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು. ಅವರನ್ನು ಬಂಧಿಗಳನ್ನಾಗಿ ಮಾಡಿಕೊಂಡು ಬಾಬಿಲೋನಿಗೆ ತೆಗೆದುಕೊಂಡು ಹೋಗಿರಲಿಲ್ಲ. ಆ ಸೈನಿಕರು ಮಿಚ್ಫದಲ್ಲಿ ವಾಸವಾಗಿದ್ದ ಗೆದಲ್ಯನಲ್ಲಿಗೆ ಬಂದರು. ಆ ಸೈನಿಕರು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಮತ್ತು ಅವನ ಸೋದರ ಯೋನಾಥಾನ, ತನ್ಹಮೆತನ ಮಗನಾದ ಸೆರಾಯ, ನೆಟೋಫದವನಾದ ಏಫಯನ ಮಕ್ಕಳು, ಮಾಕಾ ಊರಿನ ಯೆಜನ್ಯ ಮತ್ತು ಅವರ ಸಂಗಡ ಇದ್ದ ಜನರು.
ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು, ಆ ಸೈನಿಕರು ಮತ್ತು ಅವರ ಜನರು ಈಗ ಅಲ್ಲಿ ಹೆಚ್ಚು ಸುರಕ್ಷಿತರೆಂದು ನಂಬಿಕೆಹುಟ್ಟುವ ಹಾಗೆ ಆಣೆಮಾಡಿ ಹೇಳಿದನು. ಗೆದಲ್ಯನು ಹೀಗೆ ಹೇಳಿದನು. “ಸೈನಿಕರೇ, ಬಾಬಿಲೋನಿನ ಜನರ ಸೇವೆಮಾಡಲು ಭಯಪಡಬೇಡಿ. ಈ ಪ್ರದೇಶದಲ್ಲಿ ನೆಲೆಸಿ ಬಾಬಿಲೋನಿನ ರಾಜನ ಸೇವೆಮಾಡಿರಿ. ನೀವು ಹೀಗೆ ಮಾಡಿದರೆ ನಿಮಗೆಲ್ಲ ಒಳ್ಳೆಯದಾಗುವುದು. 10 ನಾನು ಸಬತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”
11 ಬಾಬಿಲೋನಿನ ರಾಜನು ಕೆಲವು ಜನ ಯೆಹೂದಿಯರನ್ನು ಆ ಪ್ರದೇಶದಲ್ಲಿ ಬಿಟ್ಟುಹೋಗಿದ್ದಾನೆ ಮತ್ತು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಅವರ ಅಧಿಪತಿಯನ್ನಾಗಿ ನೇಮಿಸಿದ್ದಾನೆ ಎಂಬ ಸಮಾಚಾರವನ್ನು ಮೋವಾಬ್, ಎದೋಮ್, ಅಮ್ಮೋನ್ ಮೊದಲಾದ ದೇಶಗಳಲ್ಲಿ ಚದುರಿಹೋಗಿದ್ದ ಯೆಹೂದಿಯರು ಕೇಳಿದರು. 12 ಯೆಹೂದದ ಆ ಜನರು ಈ ಸಮಾಚಾರವನ್ನು ಕೇಳಿದ ಕೂಡಲೆ ತಾವು ಚದುರಿಹೋಗಿದ್ದ ಎಲ್ಲಾ ದೇಶಗಳಿಂದ ಯೆಹೂದ ಪ್ರದೇಶಕ್ಕೆ ಹಿಂತಿರುಗಿ ಮಿಚ್ಫದಲ್ಲಿ ಗೆದಲ್ಯನ ಬಳಿಗೆ ಬಂದರು. ಅವರು ದ್ರಾಕ್ಷಾರಸವನ್ನು ಮತ್ತು ಹಣ್ಣುಗಳನ್ನು ಸಮೃದ್ಧಿಯಾಗಿ ಸಂಗ್ರಹಿಸಿದರು.
13 ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕಾಡುಮೇಡುಗಳಲ್ಲಿದ್ದ ಯೆಹೂದದ ಸೈನ್ಯಾಧಿಕಾರಿಗಳೂ ಗೆದಲ್ಯನ ಬಳಿಗೆ ಬಂದರು. ಗೆದಲ್ಯನು ಮಿಚ್ಫ ಪಟ್ಟಣದಲ್ಲಿದ್ದನು. 14 ಯೋಹಾನಾನ ಮತ್ತು ಅವನ ಸಂಗಡ ಇದ್ದ ಅಧಿಕಾರಿಗಳು ಹೀಗೆಂದರು: “ಅಮ್ಮೋನ್ಯರ ರಾಜನಾದ ಬಾಲೀಸನು ನಿನ್ನನ್ನು ಕೊಲ್ಲಬಯಸುತ್ತಾನೆ. ಅವನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆ ಎಂಬುದು ನಿನಗೆ ಗೊತ್ತಿದೆಯೇ?” ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.
15 ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಫದಲ್ಲಿ ಗೆದಲ್ಯನೊಂದಿಗೆ ರಹಸ್ಯವಾಗಿ ಮಾತನಾಡಿದನು. ಯೋಹಾನಾನನು ಗೆದಲ್ಯನಿಗೆ ಹೀಗೆ ಹೇಳಿದನು: “ನಾನು ಹೋಗಿ ನೆತನ್ಯನ ಮಗನಾದ ಇಷ್ಮಾಯೇಲನ ಕೊಲೆ ಮಾಡುವೆನು. ಯಾರಿಗೂ ಆ ವಿಷಯ ತಿಳಿಯುವುದಿಲ್ಲ. ನಾವು ಇಷ್ಮಾಯೇಲನಿಗೆ ನಿನ್ನನ್ನು ಕೊಲ್ಲುವ ಅವಕಾಶ ಕೊಡಬಾರದು. ಅದರಿಂದ ನಿನ್ನ ಆಶ್ರಯದಲ್ಲಿ ಬಂದು ನೆಲೆಸಿದ ಎಲ್ಲಾ ಯೆಹೂದ್ಯರು ಮತ್ತೆ ಬೇರೆಬೇರೆ ದೇಶಗಳಲ್ಲಿ ಚದುರಿ ಹೋಗಬೇಕಾಗುತ್ತದೆ. ಆಗ ಅಳಿದುಳಿದ ಕೆಲವೇ ಜನ ಯೆಹೂದಿಗಳು ಸಹ ಇಲ್ಲವಾಗುತ್ತಾರೆ.”
16 ಆಗ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಇಷ್ಮಾಯೇಲನನ್ನು ಕೊಲ್ಲಬೇಡ. ನೀನು ಇಷ್ಮಾಯೇಲನ ಬಗ್ಗೆ ಹೇಳಿದ ಸಂಗತಿಗಳು ನಿಜವಲ್ಲ” ಎಂದನು.