51
ಯೆಹೋವನು ಹೀಗೆನ್ನುತ್ತಾನೆ:
“ನಾನು ಭಯಂಕರವಾದ ಬಿರುಗಾಳಿ ಬೀಸುವಂತೆ ಮಾಡುವೆನು.
ಅದು ಬಾಬಿಲೋನಿನ ಮೇಲೂ ಬಾಬಿಲೋನಿನ ಜನರ ಮೇಲೂ ಬೀಸುವಂತೆ ಮಾಡುವೆನು.
ಬಾಬಿಲೋನನ್ನು ತೂರುವದಕ್ಕಾಗಿ ನಾನು ವಿದೇಶಿಯರನ್ನು ಕಳಿಸುವೆನು.
ಅವರು ಬಾಬಿಲೋನನ್ನು ತೂರುವರು.
ಆ ಜನರು ಬಾಬಿಲೋನನ್ನು ಬರಿದುಗೊಳಿಸುವರು.
ಸೈನಿಕರು ನಗರವನ್ನು ಮುತ್ತುವರು; ಅಪಾರ ವಿನಾಶ ಸಂಭವಿಸುವದು.
ಬಾಬಿಲೋನಿನ ಸೈನಿಕರು ತಮ್ಮ ಬಿಲ್ಲುಬಾಣಗಳನ್ನು ಉಪಯೋಗಿಸಲಾರರು.
ಅವರು ತಮ್ಮ ಕವಚಗಳನ್ನು ಧರಿಸಲಾರರು.
ಬಾಬಿಲೋನಿನ ಯೋಧರಿಗೆ ಮರುಕ ತೋರಿಸಬೇಡಿ.
ಅದರ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿರಿ.
ಕಸ್ದೀಯರ ಪ್ರದೇಶದಲ್ಲಿಯೇ ಬಾಬಿಲೋನಿನ ಸೈನಿಕರನ್ನು ಕೊಲ್ಲಲಾಗುವುದು.
ಬಾಬಿಲೋನಿನ ಬೀದಿಗಳಲ್ಲಿಯೇ ಅವರು ಗಾಯಗೊಳ್ಳುವರು.”
 
ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ಮತ್ತು ಯೆಹೂದವನ್ನು ವಿಧವೆಯಾಗಿ ಮಾಡಿಲ್ಲ.
ಆತನು ಅವರ ಕೈಬಿಟ್ಟಿಲ್ಲ.ಅವರು ಇಸ್ರೇಲಿನ ಪರಿಶುದ್ಧನನ್ನು ತೊರೆದು ಅಪರಾಧ ಮಾಡಿದರು.
ಅವರು ಆತನನ್ನು ತ್ಯಜಿಸಿದರು.
ಆದರೆ ಆತನು ಅವರನ್ನು ತ್ಯಜಿಸಲಿಲ್ಲ.
 
ಬಾಬಿಲೋನಿನಿಂದ ದೂರ ಓಡಿಹೋಗಿರಿ.
ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಓಡಿಹೋಗಿರಿ.
ಇಲ್ಲವಾದರೆ ಬಾಬಿಲೋನಿನ ಪಾಪದಿಂದ ನೀವೂ ಮರಣಕ್ಕೆ ಗುರಿಯಾಗುವಿರಿ.
ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದೇವರು ಬಾಬಿಲೋನಿನ ಜನರನ್ನು ಶಿಕ್ಷಿಸುವ ಕಾಲವಿದು.
ಅದು ತಕ್ಕ ಶಿಕ್ಷೆಯನ್ನು ಪಡೆಯುವುದು.
ಬಾಬಿಲೋನ್ ಯೆಹೋವನ ಕೈಯಲ್ಲಿನ ಬಂಗಾರದ ಪಾತ್ರೆಯಂತಿತ್ತು.
ಲೋಕವೆಲ್ಲವೂ ಮದ್ಯಪಾನ ಮಾಡುವಂತೆ ಬಾಬಿಲೋನ್ ಮಾಡಿತು.
ಜನಾಂಗಗಳು ಬಾಬಿಲೋನಿನ ದ್ರಾಕ್ಷಾರಸವನ್ನು
ಕುಡಿದು ಹುಚ್ಚಾದವು.
ಬಾಬಿಲೋನ್ ಬೀಳುವುದು; ಬೇಗನೆ ಮುರಿದುಹೋಗುವುದು.
ಅದರ ಸಲುವಾಗಿ ಗೋಳಾಡಿರಿ.
ಅದರ ನೋವಿಗಾಗಿ ಔಷಧಿಯನ್ನು ತೆಗೆದುಕೊಂಡು ಬನ್ನಿ,
ಒಂದುವೇಳೆ ಅದು ಗುಣಹೊಂದಬಹುದು.
 
ನಾವು ಬಾಬಿಲೋನನ್ನು ವಾಸಿಮಾಡುವ ಪ್ರಯತ್ನ ಮಾಡಿದೆವು.
ಆದರೆ ಅದನ್ನು ವಾಸಿಮಾಡಲು ಆಗುವದಿಲ್ಲ.
ಆದ್ದರಿಂದ ಅದನ್ನು ಬಿಟ್ಟುಬಿಡೋಣ.
ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ.
ಪರಲೋಕದ ದೇವರು ಬಾಬಿಲೋನಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವನು.
ಬಾಬಿಲೋನಿಗೆ ಏನಾಗಬೇಕೆಂಬುದನ್ನು ಆತನು ನಿರ್ಧರಿಸುವನು.
10 ನಮ್ಮ ಬಗ್ಗೆಯೂ ಯೆಹೋವನು ನಿರ್ಧಾರ ಕೈಗೊಂಡಿದ್ದಾನೆ.
ಬನ್ನಿ, ಅದರ ಬಗ್ಗೆ ನಾವು ಚೀಯೋನಿನಲ್ಲಿ ಹೇಳೋಣ.
ನಮ್ಮ ದೇವರಾದ ಯೆಹೋವನು ಮಾಡಿದ್ದನ್ನು ನಾವು ಹೇಳೋಣ.
 
11 ನಿಮ್ಮ ಬಾಣಗಳನ್ನು ಮಸೆಯಿರಿ.
ನಿಮ್ಮ ಕವಚಗಳನ್ನು ಧರಿಸಿರಿ.
ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ.
ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ.
ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ.
ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು.
ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
12 ಬಾಬಿಲೋನಿನ ಕೋಟೆಗೋಡೆಯ ವಿರುದ್ಧ ಧ್ವಜವನ್ನು ಎತ್ತಿ ಹಾರಿಸಿರಿ.
ಹೆಚ್ಚಿನ ಸಂಖ್ಯೆಯಲ್ಲಿ ಕಾವಲುಗಾರರನ್ನು ಕರೆದುತನ್ನಿರಿ.
ಯೋಧರನ್ನು ಅವರವರ ಸ್ಥಾನಗಳಲ್ಲಿ ನಿಲ್ಲಿಸಿರಿ.
ಗುಪ್ತವಾಗಿ ಧಾಳಿ ಮಾಡುವುದಕ್ಕೆ ಸಿದ್ಧರಾಗಿರಿ.
ಯೆಹೋವನು ತನ್ನ ಯೋಜನೆಗಳಂತೆ ಕಾರ್ಯ ನೆರವೇರಿಸುವನು.
ಯೆಹೋವನು ಬಾಬಿಲೋನಿನ ಜನರ ವಿರುದ್ಧ ಹೇಳಿರುವಂತೆಯೇ ಮಾಡುವನು.
13 ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ.
ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ.
ಆದರೆ ಒಂದು ಜನಾಂಗವಾಗಿ ನೀನು ಬಹಳ ಕಾಲ ಮುಂದುವರೆಯಲಾರೆ.
ನಿನ್ನ ವಿನಾಶ ಕಾಲ ಸಮೀಪಿಸಿದೆ.
14 ಸರ್ವಶಕ್ತನಾದ ಯೆಹೋವನು ತನ್ನ ಮೇಲೆ ಆಣೆ ಇಟ್ಟುಕೊಂಡು ಹೀಗೆ ಹೇಳಿದ್ದಾನೆ:
“ಬಾಬಿಲೋನೇ, ನಾನು ಖಂಡಿತವಾಗಿ ನಿನ್ನನ್ನು ವೈರಿ ಸೈನಿಕರಿಂದ ತುಂಬಿಸಿಬಿಡುವೆನು. ಅವರು ಮಿಡತೆಗಳ ಸಮೂಹದಂತೆ ವ್ಯಾಪಿಸುವರು.
ಆ ಸೈನಿಕರು ನಿನ್ನ ವಿರುದ್ಧ ಯುದ್ಧದಲ್ಲಿ ಜಯಗಳಿಸುವರು.
ಅವರು ನಿನ್ನ ಮೇಲೆ ನಿಂತುಕೊಂಡು ಜಯಘೋಷ ಮಾಡುವರು.”
 
15 ಯೆಹೋವನು ತನ್ನ ಅಪಾರ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದನು.
ತನ್ನ ಜ್ಞಾನದಿಂದ ಈ ಲೋಕವನ್ನು ನಿರ್ಮಿಸಿದನು.
ತನ್ನ ವಿವೇಕದಿಂದ ಆಕಾಶವನ್ನು ಹರಡಿದನು.
16 ಆತನು ಗರ್ಜಿಸಿದಾಗ ಸಮುದ್ರದ ನೀರು ಭೋರ್ಗರೆಯುತ್ತದೆ.
ಆತನು ಇಡೀ ಭೂಮಂಡಲದಿಂದ ಮೋಡಗಳು ಮೇಲೆ ಹೋಗುವಂತೆ ಮಾಡುತ್ತಾನೆ.
ಆತನು ಮಳೆಯ ಜೊತೆ ಮಿಂಚನ್ನು ಕಳುಹಿಸುತ್ತಾನೆ.
ತನ್ನ ಭಂಡಾರದಿಂದ ಗಾಳಿಯನ್ನು ಹೊರಗೆ ಬಿಡುತ್ತಾನೆ.
17 ಆದರೆ ಜನರು ಬುದ್ಧಿಹೀನರಾಗಿ
ದೇವರ ಕಾರ್ಯವನ್ನು ತಿಳಿಯದವರಾಗಿದ್ದಾರೆ.
ಕುಶಲಕೆಲಸಗಾರರು ಸುಳ್ಳುದೇವರುಗಳ ಪ್ರತಿಮೆಗಳನ್ನು ಮಾಡುತ್ತಾರೆ.
ಆ ಪ್ರತಿಮೆಗಳು ಕೇವಲ ಸುಳ್ಳುದೇವರುಗಳೇ.
ಆ ಕೆಲಸಗಾರರು ಎಷ್ಟು ಮೂರ್ಖರೆಂಬುದನ್ನು ಅವು ತೋರಿಸುತ್ತವೆ.
ಆ ಪ್ರತಿಮೆಗಳು ಜೀವಂತವಾಗಿರುವದಿಲ್ಲ.
18 ಆ ವಿಗ್ರಹಗಳು ನಿಷ್ಪ್ರಯೋಜಕವಾದವುಗಳೇ.
ಆ ವಿಗ್ರಹಗಳನ್ನು ಮಾಡಿದವರು ಜನರೇ. ಅವುಗಳು ಕೇವಲ ಹಾಸ್ಯಾಸ್ಪದ ವಸ್ತುಗಳಲ್ಲದೆ ಮತ್ತೇನೂ ಅಲ್ಲ.
ಅವುಗಳ ಬಗ್ಗೆ ತೀರ್ಪುಕೊಡುವ ಕಾಲ ಬರುವದು;
ಆ ವಿಗ್ರಹಗಳನ್ನು ನಾಶಮಾಡಲಾಗುವುದು.
19 ಆದರೆ ಯಾಕೋಬ್ಯರ ಸಾಬಸ್ತ್ಯವಾದಾತನು ಆ ನಿಷ್ಪ್ರಯೋಜಕ ವಿಗ್ರಹಗಳಂತಲ್ಲ.
ಜನರು ದೇವರನ್ನು ಸೃಷ್ಟಿಸಲಿಲ್ಲ.
ದೇವರು ತನ್ನ ಜನರನ್ನು ಸೃಷ್ಟಿಸಿದನು.
ದೇವರು ಎಲ್ಲವನ್ನು ಸೃಷ್ಟಿಸಿದನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
 
20 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನೇ, ನೀನು ನನ್ನ ಗದೆ.
ಜನಾಂಗಗಳನ್ನು ಜಜ್ಜಿಹಾಕಲೂ
ರಾಜ್ಯಗಳನ್ನು ಧ್ವಂಸ ಮಾಡಲೂ ನಾನು ನಿನ್ನನ್ನು ಬಳಸುತ್ತೇನೆ.
21 ಕುದುರೆಗಳನ್ನೂ ಅದರ ಸವಾರರನ್ನೂ ಜಜ್ಜಿಹಾಕಲು ನಾನು ನಿನ್ನನ್ನು ಬಳಸುತ್ತೇನೆ.
ರಥಗಳನ್ನೂ ಸಾರಥಿಗಳನ್ನೂ ಪುಡಿಪುಡಿ ಮಾಡಲು ನಾನು ನಿನ್ನನ್ನು ಬಳಸುತ್ತೇನೆ.
22 ಗಂಡಸರನ್ನೂ ಹೆಂಗಸರನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ವೃದ್ಧರನ್ನೂ ತರುಣರನ್ನೂ ನಾಶಪಡಿಸಲು ನಾನು ನಿನ್ನನ್ನು ಬಳಸುತ್ತೇನೆ.
ತರುಣರನ್ನೂ ತರುಣಿಯರನ್ನೂ ಧ್ವಂಸ ಮಾಡಲು ನಾನು ನಿನ್ನನ್ನು ಬಳಸುತ್ತೇನೆ.
23 ಕುರುಬರನ್ನೂ ಕುರಿಹಿಂಡನ್ನೂ ನಾಶಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ರೈತರನ್ನೂ ಮತ್ತು ಹಸುಗಳನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ಅಧಿಪತಿಗಳನ್ನೂ ಪ್ರಮುಖ ಅಧಿಕಾರಿಗಳನ್ನೂ ನುಚ್ಚುನೂರು ಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
24 ಆದರೆ ನಾನು ಬಾಬಿಲೋನಿಗೆ ಮುಯ್ಯಿತೀರಿಸುವೆನು. ನಾನು ಬಾಬಿಲೋನಿನ ಎಲ್ಲಾ ಜನರಿಗೆ ಮುಯ್ಯಿತೀರಿಸುವೆನು. ಅವರು ಚೀಯೋನಿಗೆ ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಮುಯ್ಯಿತೀರಿಸುವೆನು.
ಯೆಹೂದವೇ, ನಿನ್ನ ಎದುರಿನಲ್ಲಿಯೇ ಅವರಿಗೆ ಮುಯ್ಯಿತೀರಿಸುವೆನು.”
ಇದು ಯೆಹೋವನ ನುಡಿ.
 
25 ಯೆಹೋವನು ಹೀಗೆನ್ನುತ್ತಾನೆ:
“ಬಾಬಿಲೋನೇ, ನೀನು ಇಡೀ ದೇಶವನ್ನು
ನಾಶಪಡಿಸುವ ಜ್ವಾಲಾಮುಖಿಯಂತಿರುವೆ.
ಆದರೆ ನಾನು ನಿನಗೆ ವಿರುದ್ಧವಾಗಿ ತಿರುಗಿದ್ದೇನೆ.
ನಾನು ನಿನ್ನನ್ನು ಸುಟ್ಟುಹೋದ ಪರ್ವತವನ್ನಾಗಿ ಮಾಡುವೆನು.
26 ನಿಮ್ಮಿಂದ ಜನರಿಗೆ ಮೂಲೆಗಲ್ಲಾಗುವಷ್ಟು ದೊಡ್ಡ ಕಲ್ಲು ಸಹ ಸಿಗಲಾರದು.
ಜನರು ತಮ್ಮ ಕಟ್ಟಡದ ಅಸ್ತಿವಾರಕ್ಕಾಗಿ ಒಂದು ಕಲ್ಲುಬಂಡೆಯನ್ನು ಬಾಬಿಲೋನಿನಿಂದ ತೆಗೆದುಕೊಂಡು ಹೋಗಲಾರರು.
ಏಕೆಂದರೆ ಶಾಶ್ವತವಾಗಿ ನಿಮ್ಮ ನಗರವು ಒಡೆದ ಕಲ್ಲುಗಳ ಗುಡ್ಡೆಯಾಗುವುದು.”
ಯೆಹೋವನು ಹೀಗೆನ್ನುತ್ತಾನೆ:
 
27 “ಎಲ್ಲಾ ದೇಶಗಳಲ್ಲಿ ಯುದ್ಧದ ಧ್ವಜವನ್ನು ಹಾರಿಸಿರಿ.
ಎಲ್ಲಾ ರಾಷ್ಟ್ರಗಳಲ್ಲಿ ತುತ್ತೂರಿಗಳನ್ನು ಊದಿರಿ.
ಬಾಬಿಲೋನಿನ ವಿರುದ್ಧ ಹೋರಾಡಲು ಎಲ್ಲಾ ಜನಾಂಗಗಳನ್ನು ಸಿದ್ಧಗೊಳಿಸಿರಿ.
ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಜ್ಯಗಳನ್ನು ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಕರೆಯಿರಿ.
ಸೈನ್ಯದ ಮುಂದಾಳಾಗಿರಲು ಒಬ್ಬ ಸೇನಾಧಿಪತಿಯನ್ನು ಆರಿಸಿರಿ.
ಮಿಡತೆಯ ದಂಡಿನಂತೆ ಅಪಾರವಾಗಿರುವ ಅಶಬಬಲವನ್ನು ಕಳುಹಿಸಿರಿ.
28 ಅದರ ವಿರುದ್ಧ ಯುದ್ಧಕ್ಕಾಗಿ ಜನಾಂಗಗಳನ್ನು ಸಿದ್ಧಮಾಡಿರಿ.
ಮೇದ್ಯರ ರಾಜರನ್ನು ಸಿದ್ಧಮಾಡಿರಿ.
ಅವರ ಅಧಿಪತಿಗಳನ್ನು ಮತ್ತು ಎಲ್ಲಾ ಮುಖ್ಯ ಅಧಿಕಾರಿಗಳನ್ನು ಸಿದ್ಧಗೊಳಿಸಿರಿ.
ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಅವರು ಆಳುವ ಎಲ್ಲಾ ದೇಶಗಳನ್ನು ಸನ್ನದ್ಧಗೊಳಿಸಿರಿ.
29 ನೋವಿನಿಂದಲೋ ಎಂಬಂತೆ ಭೂಮಿಯು ನಡುಗುತ್ತದೆ ಮತ್ತು ಹೊರಳಾಡುತ್ತದೆ.
ಯೆಹೋವನು ತಾನು ಯೋಚಿಸಿದಂತೆ ಬಾಬಿಲೋನಿಗೆ ಮಾಡಿದಾಗ ಅದು ನಡುಗುತ್ತದೆ.
ಬಾಬಿಲೋನನ್ನು ಯಾರೂ ವಾಸಮಾಡದ ಮರುಭೂಮಿಯನ್ನಾಗಿ
ಮಾಡಬೇಕೆಂಬುದು ಯೆಹೋವನ ಯೋಜನೆ.
30 ಬಾಬಿಲೋನಿನ ಸೈನಿಕರು ಕಾದಾಡುವದನ್ನು ನಿಲ್ಲಿಸಿದ್ದಾರೆ.
ಅವರು ತಮ್ಮ ಕೋಟೆಗಳಲ್ಲಿದ್ದಾರೆ.
ಅವರ ಬಲ ನಷ್ಟವಾಗಿದೆ.
ಅವರು ಭಯಪಟ್ಟ ಹೆಂಗಸಿನಂತಾಗಿದ್ದಾರೆ.
ಬಾಬಿಲೋನಿನ ಮನೆಗಳು ಉರಿಯುತ್ತಿವೆ.
ಅದರ ಬಾಗಿಲಿನ ಅಗುಳಿಗಳು ಮುರಿದುಹೋಗಿವೆ.
31 ಒಬ್ಬ ಸಂದೇಶಕನ ನಂತರ ಇನ್ನೊಬ್ಬ ಸಂದೇಶಕನು ಬರುವನು.
ಸಂದೇಶಕರ ಮೇಲೆ ಸಂದೇಶಕರು ಬಂದು,
ಇಡೀ ನಗರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು
ಅವರು ಬಾಬಿಲೋನಿನ ರಾಜನಿಗೆ ತಿಳಿಸುತ್ತಾರೆ.
32 ಹಾಯ್ಗಡಗಳನ್ನು ವಶಪಡಿಸಿಕೊಂಡಿದ್ದಾರೆ;
ಜವುಗು ನೆಲವು ಉರಿಯುತ್ತಿದೆ.
ಬಾಬಿಲೋನಿನ ಎಲ್ಲಾ ಸೈನಿಕರು ಅಂಜಿಕೊಂಡಿದ್ದಾರೆ.”
 
33 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ನಗರವು ಒಂದು ಕಣದಂತೆ ಇದೆ.
ಸುಗ್ಗಿಕಾಲದಲ್ಲಿ ಜನರು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸುವದಕ್ಕಾಗಿ ಅದನ್ನು ಬಡಿಯುತ್ತಾರೆ.
ಬಾಬಿಲೋನಿನ ಸುಗ್ಗಿಕಾಲ (ವಿನಾಶ ಕಾಲ) ಹತ್ತಿರವಾಗುತ್ತಲಿದೆ.
 
34 “ಹಿಂದಿನ ಕಾಲದಲ್ಲಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮ್ಮನ್ನು ಹಾಳುಮಾಡಿದನು;
ನಮ್ಮನ್ನು ಹಿಂಸಿಸಿದನು;
ನಮ್ಮ ಜನರನ್ನು ಸೆರೆ ಒಯ್ದನು.
ಆಗ ನಾವು ಒಂದು ಬರಿದಾದ ಪಾತ್ರೆಯಂತಾದೆವು.
ಅವನು ನಮ್ಮ ಎಲ್ಲಾ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಹೋದನು.
ತನಗೆ ತೃಪ್ತಿಯಾಗುವವರೆಗೆ ಎಲ್ಲವನ್ನು ತಿಂದು ತೇಗಿದ ರಾಕ್ಷಸನಂತಿದ್ದನು.
ಅವನು ನಮ್ಮೆಲ್ಲ ಉತ್ಕೃಷ್ಟ ವಸ್ತುಗಳನ್ನು
ಕಿತ್ತುಕೊಂಡು ನಮ್ಮನ್ನು ದೂರ ಎಸೆದನು.
35 ನಮ್ಮನ್ನು ನೋಯಿಸಲು ಬಾಬಿಲೋನ್ ಭಯಂಕರ ಕೆಲಸವನ್ನು ಮಾಡಿತು.
ಈಗ ಬಾಬಿಲೋನಿಗೂ ಅಂಥಾ ಸ್ಥಿತಿ ಬರಲೆಂದು ನನ್ನ ಆಶೆ.”
 
ಚೀಯೋನ್ ನಿವಾಸಿಗಳು ಹೀಗೆಂದರು:
“ಬಾಬಿಲೋನಿನ ಜನರು ನಮ್ಮ ಜನರನ್ನು ಕೊಲ್ಲುವ ಪಾಪವನ್ನು ಮಾಡಿದ್ದಾರೆ.
ಈಗ ಅವರು ಮಾಡಿದ ದುಷ್ಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ”
ಎಂದು ಜೆರುಸಲೇಮ್ ನಗರ ಹೇಳುವುದು.
36 ಯೆಹೋವನು ಹೀಗೆನ್ನುವನು:
“ಯೆಹೂದವೇ, ನಾನು ನಿನ್ನನ್ನು ರಕ್ಷಿಸುವೆನು.
ನಿಶ್ಚಿತವಾಗಿ ಬಾಬಿಲೋನಿಗೆ ಶಿಕ್ಷೆ ಆಗುವಂತೆ ನಾನು ನೋಡಿಕೊಳ್ಳುತ್ತೇನೆ.
ನಾನು ಬಾಬಿಲೋನಿನ ಸಮುದ್ರವನ್ನು ಒಣಗಿಸಿಬಿಡುವೆನು.
ಅದರ ನೀರಿನ ಚಿಲುಮೆಗಳು ಬತ್ತುವಂತೆ ಮಾಡುತ್ತೇನೆ.
37 ಬಾಬಿಲೋನು ನಾಶವಾದ ಕಟ್ಟಡಗಳ ಗುಡ್ಡೆಯಾಗುವುದು.
ಬಾಬಿಲೋನು ಕಾಡುನಾಯಿಗಳ ನಿವಾಸವಾಗುವುದು.
ಜನರು ಕಲ್ಲುಬಂಡೆಗಳ ಗುಡ್ಡೆಯನ್ನು ನೋಡಿ ಆಶ್ಚರ್ಯಪಡುವರು. ಬಾಬಿಲೋನಿನ ಬಗ್ಗೆ ಜನರು ತಲೆಯಾಡಿಸುವರು.
ಬಾಬಿಲೋನು ನಿರ್ಜನ ಪ್ರದೇಶವಾಗುವುದು.
 
38 “ಬಾಬಿಲೋನಿನ ಜನರು ಗರ್ಜಿಸುವ ಪ್ರಾಯದ ಸಿಂಹಗಳಂತಿದ್ದಾರೆ.
ಅವರು ಮರಿಸಿಂಹಗಳಂತೆ ಗುರುಗುಟ್ಟುವರು.
39 ಆ ಜನರು ಬಲಶಾಲಿಗಳಾದ ಸಿಂಹಗಳಂತೆ ವರ್ತಿಸುತ್ತಿದ್ದಾರೆ.
ನಾನು ಅವರಿಗೊಂದು ಔತಣವನ್ನೇರ್ಪಡಿಸುವೆನು.
ಅವರಿಗೆ ಮತ್ತೇರುವಂತೆ ಕುಡಿಸುವೆನು.
ಅವರು ನಗುನಗುತ್ತಾ ಸಂತೋಷದಿಂದ ಕಾಲ ಕಳೆಯುವರು.
ಆಮೇಲೆ ಅವರು ಶಾಶ್ವತವಾಗಿ ಮಲಗುವರು.
ಅವರು ಮತ್ತೆ ಏಳಲಾರರು.”
 
ಇದು ಯೆಹೋವನ ನುಡಿ.
40 “ನಾನು ಬಾಬಿಲೋನಿನ ಜನರನ್ನು ವಧೆಗಾಗಿ ತೆಗೆದುಕೊಂಡು ಹೋಗುವೆನು.
ಬಾಬಿಲೋನಿನ ಗತಿ ವಧೆಗಾಗಿ ತಂದ
ಕುರಿ, ಟಗರು ಮತ್ತು ಹೋತಗಳಂತೆ ಆಗುವುದು.
 
41 “ಶೇಷಕನು”* ಶತ್ರುಗಳ ವಶವಾಗುವನು.
ಲೋಕದಲ್ಲಿಯೇ ಅತ್ಯುತ್ತಮವಾದ ಮತ್ತು ಹೆಮ್ಮೆಪಡುವ ದೇಶವು ವೈರಿಗಳ ಕೈವಶವಾಗುವುದು.
ಬೇರೆ ಜನಾಂಗದ ಜನರು ಬಾಬಿಲೋನಿನ ಕಡೆಗೆ ನೋಡಿದಾಗ
ಅಲ್ಲಿನ ಸ್ಥಿತಿಗತಿಗಳನ್ನು ಕಂಡು ಭಯಪಡುವರು.
42 ಸಮುದ್ರವು ಬಾಬಿಲೋನಿನ ಮೇಲೆ ನುಗ್ಗುವುದು.
ಅದರ ಆರ್ಭಟಿಸುವ ತೆರೆಗಳು ಅದನ್ನು ಮುಚ್ಚಿಬಿಡುವವು.
43 ಬಾಬಿಲೋನಿನ ಪಟ್ಟಣಗಳು ಬರಿದಾದ ಊರುಗಳಾಗುವವು.
ಬಾಬಿಲೋನು ಮರುಭೂಮಿಯಾಗುವುದು.
ಅದು ನಿರ್ಜನವಾದ ನೆಲವಾಗುವುದು.
ಜನರು ಬಾಬಿಲೋನಿನ ಮೂಲಕ ಪ್ರಯಾಣ ಮಾಡಲಾಗದು.
44 ನಾನು ಬಾಬಿಲೋನಿನ ಬೇಲ್ ದೇವರನ್ನು ದಂಡಿಸುವೆನು.
ಅವನು ನುಂಗಿದ ಜನರನ್ನು ಅವನು ಕಕ್ಕುವಂತೆ ಮಾಡುವೆನು.
ಬೇರೆ ಜನಾಂಗಗಳು ಬಾಬಿಲೋನಿಗೆ ಬರಲಾರವು.
ಬಾಬಿಲೋನಿನ ಸುತ್ತಲಿನ ಗೋಡೆಯು ಬೀಳುವುದು.
45 ನನ್ನ ಜನರೇ, ಬಾಬಿಲೋನ್ ನಗರದಿಂದ ಹೊರಗೆ ಬನ್ನಿ.
ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲು ಓಡಿಹೋಗಿರಿ.
ಯೆಹೋವನ ಭಯಂಕರ ಕೋಪದಿಂದ ತಪ್ಪಿಸಿಕೊಳ್ಳಲು ಓಡಿಹೋಗಿರಿ.
 
46 “ನನ್ನ ಜನರೇ, ದುಃಖಿಸಬೇಡಿ,
ಸುದ್ದಿಗಳು ಹಬ್ಬುತ್ತವೆ. ಆದರೆ ಹೆದರಬೇಡಿ.
ಒಂದು ಸುದ್ದಿ ಈ ವರ್ಷ ಬರುವುದು.
ಮುಂದಿನ ವರ್ಷ ಮತ್ತೊಂದು ಸುದ್ದಿ ಬರಬಹುದು.
ದೇಶದಲ್ಲಿ ಭಯಂಕರವಾದ ಯುದ್ಧದ ಬಗ್ಗೆ ಸುದ್ದಿಗಳು ಕೇಳಿಬರುವವು.
ರಾಜರುಗಳು ಬೇರೆ ರಾಜರುಗಳೊಂದಿಗೆ ಯುದ್ಧ ಮಾಡುತ್ತಿರುವ ವದಂತಿಗಳು ಕೇಳಿಬರುವವು.
47 ನಾನು ಬಾಬಿಲೋನಿನ ಸುಳ್ಳುದೇವತೆಗಳನ್ನು ದಂಡಿಸುವ ಸಮಯ ಖಂಡಿತವಾಗಿ ಬರುವುದು.
ಬಾಬಿಲೋನಿನ ಇಡೀ ಪ್ರದೇಶವು ನಾಚಿಕೆಪಡುವುದು.
ನಗರದ ಬೀದಿಗಳಲ್ಲಿ
ಅನೇಕಾನೇಕ ಶವಗಳು ಬಿದ್ದಿರುವವು.
48 ಆಗ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸಮಸ್ತ ವಸ್ತುಗಳು
ಬಾಬಿಲೋನಿನ ಬಗ್ಗೆ ಹರ್ಷಧ್ವನಿ ಮಾಡುವವು.
ಏಕೆಂದರೆ ಸೈನ್ಯವು ಉತ್ತರದಿಂದ ಬಂದಿತು,
ಬಾಬಿಲೋನಿನ ವಿರುದ್ಧ ಯುದ್ಧಮಾಡಿತು”
ಇದು ಯೆಹೋವನ ನುಡಿ.
 
49 “ಬಾಬಿಲೋನ್ ಇಸ್ರೇಲರನ್ನು ಕೊಂದಿತು.
ಬಾಬಿಲೋನ್ ಭೂಮಂಡಲದ ಎಲ್ಲೆಡೆಯ ಜನರನ್ನು ಕೊಂದಿತು.
ಅದಕ್ಕಾಗಿ ಬಾಬಿಲೋನ್ ಪತನವಾಗಲೇಬೇಕು.
50 ನೀವು ಖಡ್ಗಗಳಿಂದ ತಪ್ಪಿಸಿಕೊಂಡಿರಿ.
ನೀವು ಅವಸರ ಮಾಡಿ ಬಾಬಿಲೋನನ್ನು ಬಿಡಬೇಕು.
ತಡೆಯಬೇಡಿ,
ನೀವು ಬಹಳ ದೂರಪ್ರದೇಶದಲ್ಲಿ ಇದ್ದೀರಿ.
ಆದರೆ ನೀವು ಇರುವಲ್ಲಿಯೇ ಯೆಹೋವನನ್ನು ಸ್ಮರಿಸಿರಿ; ಜೆರುಸಲೇಮನ್ನೂ ಸ್ಮರಿಸಿಕೊಳ್ಳಿರಿ.
 
51 “ಯೆಹೂದದ ಜನರಾದ ನಾವು ನಾಚಿಕೆಪಟ್ಟೆವು.
ಜನರು ನಮ್ಮನ್ನು ಅಪಮಾನಗೊಳಿಸಿದ್ದರಿಂದ ನಾವು ನಾಚಿಕೆಪಟ್ಟಿದ್ದೇವೆ.
ಏಕೆಂದರೆ ಯೆಹೋವನ ಆಲಯದ
ಪವಿತ್ರ ಸ್ಥಳಗಳಲ್ಲಿ ಅಪರಿಚಿತರು ಪ್ರವೇಶಗೈದಿದ್ದಾರೆ.”
 
52 ಯೆಹೋವನು ಹೀಗೆನ್ನುವನು: “ಬಾಬಿಲೋನಿನ ವಿಗ್ರಹಗಳನ್ನು
ನಾನು ದಂಡಿಸುವ ಕಾಲ ಬರುತ್ತಿದೆ.
ಆಗ ಆ ದೇಶದಲ್ಲೆಲ್ಲಾ ಗಾಯಗೊಂಡ ಜನರು
ನೋವಿನಿಂದ ಗೋಳಾಡುವರು.
53 ಬಾಬಿಲೋನ್ ನಗರವು ಗಗನ ಚುಂಬಿಯಾಗಿ ಬೆಳೆಯಬಹುದು.
ಅದು ತನ್ನ ಕೋಟೆಗಳನ್ನು ಭದ್ರಪಡಿಸಿಕೊಳ್ಳಬಹುದು.
ಆದರೆ ಆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
ಆ ಜನರು ಅದನ್ನು ನಾಶಮಾಡುವರು.”
ಇದು ಯೆಹೋವನ ನುಡಿ.
 
54 “ಬಾಬಿಲೋನಿನಲ್ಲಿ ಜನರು ರೋಧಿಸುವದನ್ನು ನಾವು ಕೇಳುವೆವು.
ಬಾಬಿಲೋನ್ ಪ್ರದೇಶದಲ್ಲಿ ವಸ್ತುಗಳನ್ನು ನಾಶಮಾಡುವ ಜನರ ಧ್ವನಿಯನ್ನು ನಾವು ಕೇಳುವೆವು.
55 ಯೆಹೋವನು ಬಾಬಿಲೋನನ್ನು ಬಹುಬೇಗನೆ ನಾಶಮಾಡುವನು.
ಆ ನಗರದ ದೊಡ್ಡ ಧ್ವನಿಗಳು ಶಾಂತವಾಗುವಂತೆ ಆತನು ಮಾಡುವನು.
ವೈರಿಗಳು ಸಾಗರದ ತರಂಗಮಾಲೆಗಳಂತೆ ಗರ್ಜಿಸುತ್ತಾ ಬರುವರು.
ಸುತ್ತಮುತ್ತಲಿನ ಜನರೆಲ್ಲರು ಆ ಗರ್ಜನೆಯನ್ನು ಕೇಳುವರು.
56 ಸೈನ್ಯವು ಬಂದು ಬಾಬಿಲೋನನ್ನು ನಾಶಮಾಡುವುದು.
ಬಾಬಿಲೋನಿನ ಸೈನಿಕರನ್ನು ವಶಪಡಿಸಿಕೊಳ್ಳಲಾಗುವುದು. ಅವರ ಬಿಲ್ಲುಗಳನ್ನು ಮುರಿಯಲಾಗುವುದು.
ಏಕೆಂದರೆ ಯೆಹೋವನು ಜನರನ್ನು ಅವರು ಮಾಡುವ ದುಷ್ಕೃತ್ಯಗಳಿಗಾಗಿ ಶಿಕ್ಷಿಸುತ್ತಾನೆ.
ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಸಂಪೂರ್ಣವಾಗಿ ಕೊಡುತ್ತಾನೆ.
57 ಬಾಬಿಲೋನಿನ ಮುಖ್ಯ ಅಧಿಕಾರಿಗಳಿಗೂ
ಪಂಡಿತರಿಗೂ ದ್ರಾಕ್ಷಾರಸ ಕುಡಿಯುವಂತೆ ಮಾಡುತ್ತೇನೆ.
ಅಲ್ಲಿಯ ಅಧಿಪತಿಗಳಿಗೂ ಅಧಿಕಾರಿಗಳಿಗೂ ಸೈನಿಕರಿಗೂ ದ್ರಾಕ್ಷಾರಸ ಕುಡಿಸುತ್ತೇನೆ.
ಆಮೇಲೆ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ.
ಅವರು ಎಚ್ಚರಗೊಳ್ಳುವುದೇ ಇಲ್ಲ.”
ಸರ್ವಶಕ್ತನಾದ ಯೆಹೋವನೆಂಬ
ನಾಮಧೇಯದ ರಾಜಾಧಿರಾಜನ ನುಡಿಯಿದು.
 
58 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು.
ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು.
ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು.
ಆದರೆ ಅದು ನಿಷ್ಪ್ರಯೋಜಕವಾಗುವುದು.
ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು.
ಆದರೆ ಅವರು ಕೇವಲ ಅಗಿಐಗೆ ಆಹುತಿಯಾಗುವರು.”
ಬಾಬಿಲೋನಿಗೆ ಯೆರೆಮೀಯನ ಸಂದೇಶ
59 ಯೆರೆಮೀಯನು ಸೆರಾಯ ಎಂಬ ಅಧಿಕಾರಿಯ ಕೈಗೆ ಕೊಟ್ಟ ಸಂದೇಶವಿದು. ಸೆರಾಯನು ಯೆಹೂದದ ನೇರೀಯನ ಮಗ. ನೇರೀಯನು ಮಹ್ಸೇಯನ ಮಗನು. ಸೆರಾಯನು ಯೆಹೂದದ ರಾಜನಾದ ಚಿದ್ಕೀಯನ ಜೊತೆಗೆ ಬಾಬಿಲೋನಿಗೆ ಹೋದನು. ಈ ಸಂಗತಿ ಯೆಹೂದದಲ್ಲಿ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ನಡೆದದ್ದು. ಆ ಸಮಯದಲ್ಲಿ ಯೆರೆಮೀಯನು ಸೆರಾಯನೆಂಬ ಅಧಿಕಾರಿಯ ಕೈಗೆ ಈ ಸಂದೇಶವನ್ನು ಕೊಟ್ಟನು. 60 ಬಾಬಿಲೋನಿಗೆ ಉಂಟಾಗುವ ಎಲ್ಲಾ ಕೇಡನ್ನು ಯೆರೆಮೀಯನು ಒಂದು ಸುರಳಿಯಲ್ಲಿ ಬರೆದಿದ್ದನು. ಅವನು ಬಾಬಿಲೋನಿನ ಬಗ್ಗೆ ಈ ವಿಷಯಗಳನ್ನೆಲ್ಲ ಬರೆದಿದ್ದನು.
61 ಯೆರೆಮೀಯನು ಸೆರಾಯನಿಗೆ ಹೀಗೆ ಹೇಳಿದನು: “ಸೆರಾಯನೇ, ಬಾಬಿಲೋನಿಗೆ ಹೋಗು. ಎಲ್ಲರಿಗೂ ಕೇಳಿಸುವಂತೆ ಈ ಸಂದೇಶವನ್ನು ಖಂಡಿತವಾಗಿ ಓದು. 62 ಆಮೇಲೆ ಹೀಗೆ ಹೇಳು: ‘ಯೆಹೋವನೇ, ಬಾಬಿಲೋನ್ ನಗರವನ್ನು ನಾಶಮಾಡುವೆನೆಂದು ನೀನು ಹೇಳಿರುವೆ. ಪ್ರಾಣಿಗಳು ಅಥವಾ ಮನುಷ್ಯರು ಯಾರೂ ಇಲ್ಲಿ ವಾಸಮಾಡದಂತೆ, ಇದು ಎಂದೆಂದಿಗೂ ಹಾಳುಬಿದ್ದ ಸ್ಥಳವಾಗಿರುವಂತೆ ಇದನ್ನು ನಾಶಮಾಡುವದಾಗಿ ಹೇಳಿರುವೆ.’ 63 ಈ ಸುರುಳಿಯನ್ನು ಓದಿಮುಗಿಸಿದ ಮೇಲೆ ಅದಕ್ಕೊಂದು ಕಲ್ಲನ್ನು ಕಟ್ಟಿ ಆ ಕಾಗದದ ಸುರುಳಿಯನ್ನು ಯೂಫ್ರೇಟೀಸ್ ನದಿಯಲ್ಲಿ ಎಸೆದುಬಿಡು. 64 ಆಮೇಲೆ ‘ಇದೇ ರೀತಿಯಲ್ಲಿ ಬಾಬಿಲೋನ್ ಕೂಡ ಮುಳುಗಿಹೋಗುವುದು. ಬಾಬಿಲೋನ್ ಎಂದಿಗೂ ಮೇಲಕ್ಕೆ ಏಳುವದಿಲ್ಲ. ಅಲ್ಲಿ ನಾನು ಬರಮಾಡುವ ಅನೇಕ ವಿಪತ್ತುಗಳಿಂದಾಗಿ ಬಾಬಿಲೋನ್ ಮುಳುಗಿಹೋಗುವುದು’ ” ಎಂದು ಹೇಳು.
ಯೆರೆಮೀಯನ ಸಂದೇಶ ಇಲ್ಲಿಗೆ ಮುಗಿಯುತ್ತದೆ.
* 51:41 ಶೇಷಕನು ಇದು ಬಾಬಿಲೋನಿಗೆ ಇದ್ದ ಗುಪ್ತ ಹೆಸರು.