6
ಶತ್ರುಗಳು ಜೆರುಸಲೇಮ್ ನಗರವನ್ನು ಮುತ್ತಿದರು
ಬೆನ್ಯಾಮೀನನ ಕುಲದವರೇ, ನಿಮ್ಮ ಪ್ರಾಣ ರಕ್ಷಣೆಗಾಗಿ ಓಡಿಹೋಗಿರಿ;
ಜೆರುಸಲೇಮ್ ನಗರದಿಂದ ಓಡಿಹೋಗಿರಿ.
ತೆಕೋವ ನಗರದಲ್ಲಿ ಯುದ್ಧದ ತುತ್ತೂರಿಗಳನ್ನು ಊದಿರಿ;
ಬೇತ್‌ಹಕ್ಕೆರೆಮಿನಲ್ಲಿ ಎಚ್ಚರಿಕೆಯ ಧ್ವಜಗಳನ್ನು ಹಾರಿಸಿರಿ.
ಉತ್ತರದಿಕ್ಕಿನಿಂದ ವಿಪತ್ತು ಬರುತ್ತಿರುವುದರಿಂದ ಇವೆಲ್ಲವನ್ನು ಮಾಡಿರಿ.
ಭಯಂಕರವಾದ ವಿನಾಶವು ನಿಮಗೆ ಬರುತ್ತಿದೆ.
ಚೀಯೋನ್ ಕುಮಾರಿಯೇ,* ನೀನು ಬಹು ಸುಂದರವಾಗಿಯೂ ಮೃದುವಾಗಿಯೂ ಇರುವೆ.
ಕುರುಬರು ಜೆರುಸಲೇಮಿಗೆ ಬರುತ್ತಾರೆ.
ಮತ್ತು ಕುರಿಮಂದೆಗಳನ್ನು ತರುತ್ತಾರೆ.
ಅದರ ಸುತ್ತಲೂ ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಾರೆ.
ಪ್ರತಿಯೊಬ್ಬ ಕುರುಬನು ತನ್ನ ಕುರಿಹಿಂಡನ್ನು ನೋಡಿಕೊಳ್ಳುತ್ತಾನೆ.
 
“ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ.
ಏಳಿರಿ, ನಾವು ನಗರವನ್ನು ಮಧ್ಯಾಹ್ನದಲ್ಲಿಯೇ ಮುತ್ತೋಣ.
ಆದರೆ ಈಗಾಗಲೇ ಹೊತ್ತಾಗಿದೆ.
ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
ಏಳಿರಿ, ನಾವು ರಾತ್ರಿಯಲ್ಲಿ ನಗರದ ಮೇಲೆ ಧಾಳಿ ಮಾಡೋಣ.
ನಾವು ಜೆರುಸಲೇಮಿನ ಭದ್ರವಾದ ರಕ್ಷಣಾಸ್ಥಳಗಳನ್ನು ನಾಶಮಾಡೋಣ.”
 
ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು:
“ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ;
ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ.
ನಗರವನ್ನು ದಂಡಿಸಬೇಕು.
ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.
ಬಾವಿಯಲ್ಲಿ ಹೊಸ ನೀರು ಬರುವಂತೆ
ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ.
ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ.
ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು.
ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ.
ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ.
ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
 
ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ದೇಶದಲ್ಲಿ ಅಳಿದುಳಿದ ಇಸ್ರೇಲಿಯರನ್ನು
ಒಟ್ಟಾಗಿ ಸೇರಿಸಿರಿ.
ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನ್ನು ಕೀಳುವಂತೆ
ಅವರನ್ನು ಒಟ್ಟಾಗಿ ಸೇರಿಸಿ.
ಕೊಯ್ಲುಗಾರನು ಪ್ರತಿಯೊಂದು ಬಳ್ಳಿಯನ್ನು ನೋಡಿ ದ್ರಾಕ್ಷಿಕೀಳುವಂತೆ
ನೀವು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಒಟ್ಟಾಗಿ ಸೇರಿಸಿರಿ.”
10 ನಾನು ಯಾರೊಂದಿಗೆ ಮಾತನಾಡಲಿ?
ನಾನು ಯಾರಿಗೆ ಎಚ್ಚರಿಕೆಯ ನುಡಿಗಳನ್ನು ಹೇಳಲಿ?
ನನ್ನ ಮಾತನ್ನು ಯಾರು ಕೇಳುತ್ತಾರೆ?
ಇಸ್ರೇಲಿನ ಜನರು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.
ಅವರು ನನ್ನ ಎಚ್ಚರಿಕೆಯ ನುಡಿಗಳನ್ನು ಕೇಳಲಾರರು.
ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ.
ಅವರು ಯೆಹೋವನ ನುಡಿಗಳನ್ನು ಕೇಳಬಯಸುವದಿಲ್ಲ.
11 ಯೆಹೋವನ ರೋಷವು ನನ್ನಲ್ಲಿ ತುಂಬಿತುಳುಕುತ್ತಿದೆ,
ತಡೆದುತಡೆದು ನನಗೆ ಸಾಕಾಗಿದೆ.
“ಬೀದಿಯಲ್ಲಾಡುವ ಮಕ್ಕಳ ಮೇಲೆ ಅದನ್ನು ಹೊಯ್ದುಬಿಡಬೇಕು.
ಒಂದೆಡೆ ಸೇರುವ ತರುಣರ ಮೇಲೆ ಅದನ್ನು ಹೊಯ್ದುಬಿಡಬೇಕು.
ಗಂಡಹೆಂಡತಿಯರಿಬ್ಬರನ್ನು ಅಪಹರಿಸಲಾಗುವುದು. ಮುದುಕರನ್ನೂ ಮುಪ್ಪಿನ ಮುದುಕರನ್ನೂ ಅಪಹರಿಸಲಾಗುವುದು.
12 ಅವರ ಮನೆಗಳನ್ನು ಬೇರೆಯವರಿಗೆ ಕೊಡಲಾಗುವುದು.
ಅವರ ಹೊಲಗಳನ್ನೂ ಅವರ ಹೆಂಡಂದಿರನ್ನೂ ಬೇರೆಯವರಿಗೆ ಕೊಡಲಾಗುವುದು.
ನಾನು ನನ್ನ ಕೈ ಎತ್ತಿ ಯೆಹೂದದ ಜನರನ್ನು ದಂಡಿಸುವೆನು.”
ಇದು ಯೆಹೋವನ ಸಂದೇಶ.
 
13 “ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಲಾಭಕ್ಕಾಗಿ ಆಸೆಪಡುತ್ತಾರೆ.
ಪ್ರವಾದಿಗಳು ಮತ್ತು ಯಾಜಕರು ಸಹ ಮೋಸಗಾರರಾಗಿದ್ದಾರೆ.
14 ಪ್ರವಾದಿಗಳು ಮತ್ತು ಯಾಜಕರು
ನನ್ನ ಜನರಿಗಾದ ದೊಡ್ಡ ಗಾಯಗಳಿಗೆ ಚಿಕ್ಕಗಾಯಗಳಿಗೋ ಎಂಬಂತೆ ಚಿಕಿತ್ಸೆ ಮಾಡುತ್ತಾರೆ.
ವಾಸಿಯಾಗಿಲ್ಲದಿದ್ದರೂ ‘ವಾಸಿಯಾಗಿದೆ’ ಎನ್ನುತ್ತಾರೆ.
15 ಪ್ರವಾದಿಗಳು ಮತ್ತು ಯಾಜಕರು ತಾವು ಮಾಡುವ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ನಾಚಿಕೆಪಡುವದೇ ಇಲ್ಲ.
ತಮ್ಮ ಪಾಪಕಾರ್ಯಗಳಿಗಾಗಿ ಸಂಕೋಚಪಡುವುದು ಸಹ ಅವರಿಗೆ ಗೊತ್ತಿಲ್ಲ.
ಆದ್ದರಿಂದ ಬೇರೆಯವರಂತೆ ಅವರನ್ನೂ ಶಿಕ್ಷಿಸಲಾಗುವುದು.
ನಾನು ಅವರನ್ನು ಶಿಕ್ಷಿಸಿದಾಗ ಅವರನ್ನು ನೆಲಕ್ಕೆ ಎಸೆಯಲಾಗುವದು”
ಎಂದು ಯೆಹೋವನು ಅನ್ನುತ್ತಾನೆ.
 
16 ಯೆಹೋವನು ಹೀಗೆ ಹೇಳುತ್ತಾನೆ:
“ಎರಡು ರಸ್ತೆಗಳು ಕೂಡುವಲ್ಲಿ ನಿಂತು ನೋಡಿರಿ.
‘ಒಳ್ಳೆಯ ರಸ್ತೆ ಎಲ್ಲಿದೆ?’ ಎಂದು ಕೇಳಿರಿ.
ಆ ರಸ್ತೆಯನ್ನು ಹಿಡಿದು ನಡೆಯಿರಿ.
ಹಾಗೆ ಮಾಡಿದರೆ ನಿಮಗೆ ವಿಶ್ರಾಂತಿ ಸಿಕ್ಕುವದು.
ಆದರೆ ‘ನಾವು ಒಳ್ಳೆಯ ಹಾದಿಯ ಮೇಲೆ ನಡೆಯುವುದಿಲ್ಲ’ ಎಂದು ನೀವು ಹೇಳಿದ್ದೀರಿ.
17 ನಾನು ನಿಮ್ಮನ್ನು ನೋಡಿಕೊಳ್ಳುವುದಕ್ಕೆ ಕಾವಲುಗಾರರನ್ನು ನೇಮಿಸಿದೆ.
ನಾನು ಅವರಿಗೆ ‘ಯುದ್ಧದ ತುತ್ತೂರಿಯ ನಾದವನ್ನು ಕೇಳಿರಿ’ ಎಂದು ಹೇಳಿದೆ.
ಆದರೆ ಅವರು ‘ನಾವು ಕೇಳುವುದಿಲ್ಲ’ ಅಂದರು.
18 ಆದಕಾರಣ ಸರ್ವಜನಾಂಗಗಳೇ ಕೇಳಿರಿ,
ಜನಸಮೂಹಗಳೇ ಗಮನಿಸಿರಿ. ಯೆಹೂದದ ಜನರಿಗೆ ನಾನು ಮಾಡುವುದನ್ನು ಕೇಳಿರಿ.
19 ಭೂಲೋಕದ ಜನರೇ, ಕೇಳಿರಿ,
ಆ ಜನರು ಮಾಡಿದ ಎಲ್ಲಾ ಕುಯುಕ್ತಿಗಳಿಗಾಗಿ ನಾನು ಯೆಹೂದ ಜನರಿಗೆ ವಿನಾಶವನ್ನು ತರುವೆನು.
ಅವರು ನನ್ನ ಸಂದೇಶಗಳಿಗೆ ಗಮನ ಕೊಡದೆ ಇದ್ದುದರಿಂದ,
ಅವರು ನನ್ನ ಧರ್ಮಶಾಸ್ತ್ರವನ್ನು ಅಸಡ್ಡೆ ಮಾಡಿದ್ದರಿಂದ ಇದೆಲ್ಲ ನಡೆಯುವುದು.”
 
20 ಯೆಹೋವನು ಹೇಳುವುದೇನೆಂದರೆ, “ನೀವು ನನ್ನ ಸಲುವಾಗಿ ಶೆಬ ದೇಶದಿಂದ ಧೂಪವನ್ನು ಏಕೆ ತರುವಿರಿ?
ನೀವು ದೂರದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವದರಿಂದ ಪ್ರಯೋಜನವೇನು?
ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ.
ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”
 
21 “ನಾನು ಯೆಹೂದದ ಜನರೆದುರಿಗೆ ಸಮಸ್ಯೆಗಳನ್ನು ಒಡ್ಡುವೆನು.
ಅವುಗಳು ಜನರು ಎಡವಿಬೀಳುವ ಕಲ್ಲುಗಳಂತಾಗುವವು.
ತಂದೆಗಳೂ ಮಕ್ಕಳೂ ಅವುಗಳಿಂದ ಎಡವಿಬೀಳುವರು.
ಸ್ನೇಹಿತರು ಮತ್ತು ನೆರೆಹೊರೆಯವರು ಅವುಗಳಿಂದ ನಾಶವಾಗುವರು” ಅಂದನು.
 
22 ಯೆಹೋವನು ಹೇಳುವುದೇನೆಂದರೆ:
“ಉತ್ತರ ದಿಕ್ಕಿನಿಂದ ಒಂದು ಸೈನ್ಯವು ಬರಲಿದೆ.
ಭೂಮಿಯ ಬಹುದೂರದ ಸ್ಥಳಗಳಿಂದ ಒಂದು ಮಹಾಜನಾಂಗವು ಬರಲಿದೆ.
23 ಆ ಸೈನಿಕರು ಬಿಲ್ಲುಗಳನ್ನು ಮತ್ತು ಈಟಿಗಳನ್ನು ಹಿಡಿದುಕೊಂಡಿದ್ದಾರೆ.
ಅವರು ಕ್ರೂರಿಗಳಾಗಿದ್ದಾರೆ. ಅವರು ನಿಷ್ಕರುಣಿಗಳಾಗಿದ್ದಾರೆ.
ಅವರು ಬಲಶಾಲಿಗಳಾಗಿದ್ದಾರೆ.
ಅವರು ತಮ್ಮ ಕುದುರೆ ಹತ್ತಿ ಬರುವಾಗ ಸಮುದ್ರದ ಗರ್ಜನೆಯಂತೆ ಶಬ್ದ ಕೇಳಿಬರುತ್ತದೆ.
ಚೀಯೋನ್ ಕುಮಾರಿಯೇ, ಆ ಸೈನ್ಯವು ಯುದ್ಧಕ್ಕಾಗಿ ಬರುತ್ತಿದೆ.
ಆ ಸೈನ್ಯವು ನಿನ್ನ ಮೇಲೆ ಧಾಳಿಮಾಡಲು ಬರುತ್ತಿದೆ.”
24 ಆ ಸೈನ್ಯದ ಬಗ್ಗೆ ಸಮಾಚಾರವನ್ನು ನಾವು ಕೇಳಿದ್ದೇವೆ.
ಭಯದಿಂದ ನಾವು ಅಸಹಾಯಕರಾಗಿದ್ದೇವೆ.
ಕಷ್ಟಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ.
ಸ್ತ್ರೀಯರ ಪ್ರಸವವೇದನೆಯಂತಿರುವ ಯಾತನೆಯಿಂದ ನಾವು ಬಳಲುತ್ತಿದ್ದೇವೆ.
25 ಊರ ಹೊರಗೆ ಹೋಗಬೇಡಿರಿ.
ರಸ್ತೆಗಳ ಮೇಲೆ ಹೋಗಬೇಡಿರಿ.
ಏಕೆಂದರೆ ಶತ್ರುವಿನ ಕೈಯಲ್ಲಿ ಖಡ್ಗವಿದೆ.
ಎಲ್ಲಾ ಕಡೆಗೂ ಅಪಾಯವಿದೆ.
26 ಅಯ್ಯೋ ನನ್ನ ಜನರೇ,
ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಹೊರಳಾಡಿರಿ.
ಸತ್ತವರಿಗಾಗಿ ದೊಡ್ಡ ಧ್ವನಿಯಲ್ಲಿ ರೋದಿಸಿರಿ.
ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ಬೋರ ಪ್ರಲಾಪ ಮಾಡಿರಿ.
ವಿನಾಶಕನು ತಕ್ಷಣ ನಮ್ಮ ಮೇಲೆರಗುವನು.
 
27 “ಯೆರೆಮೀಯನೇ, ನಾನು ನಿನ್ನನ್ನು
ಒಬ್ಬ ಲೋಹ ಪರೀಕ್ಷಕನನ್ನಾಗಿ ನೇಮಿಸಿದ್ದೇನೆ.
ನೀನು ನನ್ನ ಜನರನ್ನು ಪರೀಕ್ಷಿಸು.
ಅವರ ವ್ಯವಹಾರವನ್ನು ಅವಲೋಕಿಸು.
28 ಅವರೆಲ್ಲರು ನನಗೆ ವಿರುದ್ಧವಾಗಿ ದಂಗೆ ಎದ್ದಿದ್ದಾರೆ;
ಅವರು ಬಹಳ ಹಟಮಾರಿಗಳಾಗಿದ್ದಾರೆ.
ಅವರು ಜನರ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗಾಡುತ್ತಾರೆ.
ಅವರು ಬಣ್ಣಗುಂದಿದ, ತುಕ್ಕುಹಿಡಿದ ಕಂಚಿನಂತೆಯೂ ಕಬ್ಬಿಣದಂತೆಯೂ ಇದ್ದಾರೆ.
29  ಅವರನ್ನು ತಿದ್ದುವದು ಬೆಳ್ಳಿಯನ್ನು ಪವಿತ್ರಗೊಳಿಸಲು ಪ್ರಯತ್ನ ಮಾಡಿದ ಅಕ್ಕಸಾಲಿಗನಂತಾಗುವುದು. ತಿದಿಗಳು ಭರದಿಂದ ಬೀಸಲು ಬೆಂಕಿಯು ಧಗಧಗಿಸಿತು.
ಆದರೆ ಆ ಬೆಂಕಿಯಿಂದ ಕೇವಲ ಸೀಸವು ಹೊರಬಂದಿತು.
ಬೆಳ್ಳಿಯನ್ನು ಶುದ್ಧೀಕರಿಸಲು ಮಾಡಿದ ಪ್ರಯತ್ನ ಕೇವಲ ವ್ಯರ್ಥವಾಯಿತು.
ಅದರಂತೆಯೇ ನನ್ನ ಜನರಿಂದ ದುಷ್ಟತನವನ್ನು ತೆಗೆಯಲಾಗಲಿಲ್ಲ.
30 ನನ್ನ ಜನರನ್ನು ‘ತಿರಸ್ಕರಿಸಲಾದ ಬೆಳ್ಳಿ’
ಎಂದು ಕರೆಯಲಾಗುವದು.
ಏಕೆಂದರೆ ಯೆಹೋವನು ಅವರನ್ನು ಸ್ವಿಕರಿಸಲಿಲ್ಲ.”
 
* 6:2 ಚೀಯೋನ್ ಕುಮಾರಿಯೇ ಜೆರುಸಲೇಮ್ ಪಟ್ಟಣವೇ. 6:29 ತಿದಿ ಬೆಂಕಿಗೆ ಗಾಳಿ ಬೀಸುವಂತೆ ಮಾಡುವ ಉಪಕರಣ.