2
ಜೆರಿಕೊದಲ್ಲಿ ಗೂಢಚಾರರು
ನೂನನ ಮಗನಾದ ಯೆಹೋಶುವನು ಮತ್ತು ಎಲ್ಲಾ ಜನರು ಆಕಾಶಿಯಾದಲ್ಲಿ ಬಿಡಾರ ಮಾಡಿದ್ದರು. ಯೆಹೋಶುವನು ಇಬ್ಬರು ಗೂಢಚಾರರನ್ನು ಜೆರಿಕೊ ಪಟ್ಟಣದ ಬಗ್ಗೆ ತಿಳಿದುಕೊಳ್ಳಲು ಕಳುಹಿಸಿದನು. ಈ ಜನರನ್ನು ಯೆಹೋಶುವನು ಕಳುಹಿಸಿದ ಸಂಗತಿ ಬೇರೆ ಯಾರಿಗೂ ತಿಳಿದಿರಲಿಲ್ಲ.
“ಹೋಗಿ ಆ ಜೆರಿಕೊ ನಗರವನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷಿಸಿರಿ” ಎಂದು ಯೆಹೋಶುವನು ಆ ಗೂಢಚಾರರಿಗೆ ಹೇಳಿದ್ದನು.
ಅವರಿಬ್ಬರು ಜೆರಿಕೊ ನಗರಕ್ಕೆ ಹೋಗಿ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು. ಆ ಹೆಂಗಸಿನ ಹೆಸರು “ರಾಹಾಬ.”
ಆಗ ಯಾರೋ ಒಬ್ಬರು ಜೆರಿಕೊ ನಗರದ ರಾಜನಿಗೆ, “ನಿನ್ನೆ ರಾತ್ರಿ ಇಸ್ರೇಲರ ಕಡೆಯ ಕೆಲವರು ನಮ್ಮ ದೇಶದ ದೌರ್ಬಲ್ಯಗಳನ್ನು ಕಂಡುಹಿಡಿಯುವುದಕ್ಕಾಗಿ ಬಂದಿದ್ದಾರೆ” ಎಂದು ಹೇಳಿದರು.
ಆಗ ಜೆರಿಕೊ ನಗರದ ಅರಸನು ರಾಹಾಬಳಿಗೆ, “ನಿನ್ನ ಮನೆಗೆ ಬಂದು ಇಳಿದುಕೊಂಡ ಆ ಜನರನ್ನು ಬಚ್ಚಿಡಬೇಡ. ಅವರನ್ನು ಹೊರಗೆ ಕರೆದುಕೊಂಡು ಬಾ. ಅವರು ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಂದಿದ್ದಾರೆ” ಎಂದು ಹೇಳಿ ಕಳುಹಿಸಿದನು.
ರಾಹಾಬಳು ಈ ಇಬ್ಬರನ್ನು ಅಡಗಿಸಿಟ್ಟಿದ್ದಳು. ಆದರೆ ಆಕೆಯು ಕೇಳಬಂದವರಿಗೆ, “ಇಬ್ಬರು ಮನುಷ್ಯರು ಇಲ್ಲಿಗೆ ಬಂದಿದ್ದರು, ಆದರೆ ಅವರು ಎಲ್ಲಿಂದ ಬಂದಿದ್ದರೆಂಬುದು ನನಗೆ ಗೊತ್ತಿರಲಿಲ್ಲ. ಸಾಯಂಕಾಲ ನಗರದ ದ್ವಾರವನ್ನು ಮುಚ್ಚುವ ಸಮಯವಾದಾಗ ಅವರು ಹೊರಟುಹೋದರು. ಅವರು ಎಲ್ಲಿಗೆ ಹೋದರೆಂಬುದು ನನಗೆ ತಿಳಿಯದು. ಆದರೂ ನೀವು ಬೇಗ ಹೋದರೆ ಅವರನ್ನು ಹಿಡಿಯಬಹುದು” ಎಂದಳು. ಆದರೆ ಅವಳು ನಿಜವಾಗಿ ಆ ಗೂಢಚಾರರನ್ನು ಮಾಳಿಗೆಯ* ಮೇಲೆ ಕರೆದುಕೊಂಡು ಹೋಗಿ ಒಟ್ಟಿದ ಹುಲ್ಲಿನಲ್ಲಿ ಅವರನ್ನು ಅಡಗಿಸಿಟ್ಟಿದ್ದಳು.
ರಾಜಭಟರು ನಗರದ ಹೊರಗೆ ಹೋಗಿ ನಗರದ ದ್ವಾರಗಳನ್ನು ಮುಚ್ಚಿ ಇಸ್ರೇಲಿನಿಂದ ಬಂದ ಆ ಇಬ್ಬರನ್ನು ಹುಡುಕಿಕೊಂಡು ಹೋದರು. ಅವರು ಜೋರ್ಡನ್ ನದಿಯವರೆಗೆ ಹೋಗಿ ಜನರು ನದಿದಾಟುವ ಎಲ್ಲ ಸ್ಥಳಗಳಲ್ಲಿ ಹುಡುಕಿದರು.
ಆ ಇಬ್ಬರು ಗೂಢಚಾರರು ಆ ರಾತ್ರಿ ಅಲ್ಲಿಯೇ ಮಲಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾಹಾಬಳು ಮಾಳಿಗೆಯ ಮೇಲೆ ಹೋಗಿ ಅವರೊಂದಿಗೆ ಮಾತನಾಡಿ, “ಯೆಹೋವನು ಈ ದೇಶವನ್ನು ನಿಮ್ಮ ಜನರಿಗೆ ಕೊಟ್ಟಿದ್ದಾನೆಂದು ನಾನು ಬಲ್ಲೆ. ನಿಮ್ಮ ವಿಷಯ ಕೇಳಿ ನಮಗೆ ಭಯ ಉಂಟಾಗಿದೆ. ಈ ದೇಶದಲ್ಲಿರುವ ಎಲ್ಲಾ ಜನರು ನಿಮ್ಮಿಂದ ಭಯಭೀತರಾಗಿದ್ದಾರೆ. 10 ಯೆಹೋವನು ನಿಮಗೆ ಸಹಾಯ ಮಾಡಿದ ರೀತಿಯ ಬಗ್ಗೆ ನಾವು ಕೇಳಿ ಭಯಗೊಂಡಿದ್ದೇವೆ. ನೀವು ಈಜಿಪ್ಟಿನಿಂದ ಹೊರಬಂದ ಮೇಲೆ ಆತನು ಕೆಂಪುಸಮುದ್ರದ ನೀರನ್ನು ಬತ್ತಿಸಿದ್ದನ್ನು ನಾವು ಕೇಳಿದ್ದೇವೆ. ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿದ್ದ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನೀವು ಹೇಗೆ ನಾಶಮಾಡಿದಿರೆಂಬುದನ್ನೂ ಕೇಳಿದ್ದೇವೆ. 11 ಇವೆಲ್ಲವುಗಳ ಬಗ್ಗೆ ಕೇಳಿ ನಮಗೆ ಅತೀವ ಭಯವಾಗಿದೆ; ನಮ್ಮಲ್ಲಿ ಯಾರಿಗೂ ನಿಮ್ಮೊಂದಿಗೆ ಯುದ್ಧ ಮಾಡಲು ಧೈರ್ಯವಿಲ್ಲ. ಏಕೆಂದರೆ ನಿಮ್ಮ ದೇವರಾದ ಯೆಹೋವನು, ಭೂಪರಲೋಕಗಳನ್ನು ಆಳುವವನಾಗಿದ್ದಾನೆ. 12 ಈಗ ನೀವು ನನಗೊಂದು ಪ್ರಮಾಣ ಮಾಡಬೇಕು. ನಾನು ನಿಮಗೆ ದಯೆತೋರಿ ಸಹಾಯ ಮಾಡಿದೆ. ಆದ್ದರಿಂದ ನೀವು ಸಹ ನನ್ನ ಕುಟುಂಬದವರಿಗೆ ದಯೆತೋರುವಿರೆಂಬುದಕ್ಕೆ ಒಂದು ಗುರುತನ್ನು ಕೊಡಿರಿ. 13 ನನ್ನ ಕುಟುಂಬದವರನ್ನು ಅಂದರೆ ನನ್ನ ತಂದೆತಾಯಿಗಳನ್ನು, ಸಹೋದರ ಸಹೋದರಿಯರನ್ನು ಮತ್ತು ಅವರೆಲ್ಲರ ಕುಟುಂಬ ವರ್ಗದವರನ್ನು ಜೀವಂತವಾಗಿ ಉಳಿಸುವುದಾಗಿ ಪ್ರಮಾಣ ಮಾಡಿರಿ” ಎಂದು ಬೇಡಿಕೊಂಡಳು.
14 ಅದಕ್ಕೆ ಅವರು, “ನಮ್ಮ ಪ್ರಾಣವನ್ನಾದರೂ ಕೊಟ್ಟು ನಿಮ್ಮ ಪ್ರಾಣ ಉಳಿಸುತ್ತೇವೆ. ಆದರೆ ನೀವು ಇದನ್ನು ಯಾರಿಗೂ ಹೇಳಬೇಡಿ. ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ನಿಮಗೆ ದಯೆ ತೋರುತ್ತೇವೆ. ನೀನು ನಮ್ಮನ್ನು ನಂಬಬಹುದು” ಎಂದರು.
15 ರಾಹಾಬಳ ಮನೆಯನ್ನು ಊರಗೋಡೆಗೆ ಸೇರಿಸಿ ಕಟ್ಟಲಾಗಿತ್ತು, ಆದ್ದರಿಂದ ಅವರನ್ನು ಒಂದು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿದಳು. 16 ಆಕೆ ಅವರಿಗೆ, “ನೀವು ಪಶ್ಚಿಮದಿಕ್ಕಿನ ಕಡೆಗೆ ಹೋಗಿ ಬೆಟ್ಟಗಳಲ್ಲಿ ಅಡಗಿಕೊಳ್ಳಿರಿ; ಆಗ ರಾಜಭಟರು ನಿಮ್ಮನ್ನು ಕಂಡುಹಿಡಿಯಲಾರರು; ಅಲ್ಲಿ ಮೂರು ದಿನಗಳವರೆಗೆ ಅಡಗಿಕೊಂಡಿದ್ದು ರಾಜಭಟರು ಹಿಂದಿರುಗಿದ ಮೇಲೆ ನೀವು ನಿಮ್ಮ ಸ್ಥಳಕ್ಕೆ ಹೋಗಬಹುದು” ಎಂದು ಹೇಳಿದಳು.
17 ಅವರು ಅವಳಿಗೆ, “ನಾವು ನಿನಗೊಂದು ಪ್ರಮಾಣ ಮಾಡಿದ್ದೇವೆ; ಆದರೆ ನೀನು ಒಂದು ಕೆಲಸ ಮಾಡಬೇಕು. ಇಲ್ಲವಾದರೆ ನಾವು ನಮ್ಮ ಪ್ರಮಾಣಕ್ಕೆ ಹೊಣೆಗಾರರಾಗುವುದಿಲ್ಲ. 18 ನಮ್ಮನ್ನು ಇಳಿಸುವುದಕ್ಕಾಗಿ ನೀನು ಉಪಯೋಗಿಸಿದ ಈ ಕೆಂಪು ಹಗ್ಗವನ್ನು ನಾವು ಈ ದೇಶಕ್ಕೆ ಹಿಂತಿರುಗಿ ಬರುವಾಗ ನೀನು ಕಿಟಕಿಗೆ ಕಟ್ಟಿರಬೇಕು. ನಿನ್ನ ತಂದೆತಾಯಿಗಳು, ನಿನ್ನ ಸಹೋದರ ಸಹೋದರಿಯರು ಮತ್ತು ನಿನ್ನ ಕುಟುಂಬ ವರ್ಗದವರು ನಿನ್ನ ಸಂಗಡ ಈ ಮನೆಯಲ್ಲಿರಬೇಕು. 19 ಈ ಮನೆಯಲ್ಲಿರುವ ಪ್ರತಿಯೊಬ್ಬರನ್ನು ನಾವು ಕಾಪಾಡುತ್ತೇವೆ. ನಿನ್ನ ಮನೆಯಲ್ಲಿ ಯಾರಿಗಾದರೂ ಪೆಟ್ಟಾದರೆ ಅದಕ್ಕೆ ನಾವು ಹೊಣೆಗಾರರಾಗುವೆವು. ಆದರೆ ಯಾರಾದರೂ ನಿನ್ನ ಮನೆಯಿಂದ ಹೊರಗೆ ಹೋದಾಗ ಕೊಲ್ಲಲ್ಪಟ್ಟರೆ ಅದಕ್ಕೆ ನಾವು ಹೊಣೆಗಾರರಲ್ಲ; ಅದಕ್ಕೆ ಅವರೇ ಹೊಣೆಗಾರರು. 20 ನಾನು ನಿನಗೆ ಈ ಪ್ರಮಾಣವನ್ನು ಮಾಡಿದ್ದೇವೆ. ಆದರೆ ಇದನ್ನು ನೀನು ಯಾರಿಗೂ ಹೇಳಕೂಡದು; ಒಂದುವೇಳೆ ಹೇಳಿದರೆ, ನಾವು ಈ ಪ್ರಮಾಣದಿಂದ ಮುಕ್ತರಾಗುತ್ತೇವೆ” ಎಂದು ಹೇಳಿದರು.
21 ಅದಕ್ಕೆ ಅವಳು, “ಹಾಗೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಳು. ಆ ಜನರು ಅವಳ ಮನೆಯಿಂದ ಹೊರಟರು. ಆಗ ಆ ಹೆಂಗಸು ಆ ಕೆಂಪು ಹಗ್ಗವನ್ನು ಕಿಟಿಕಿಗೆ ಕಟ್ಟಿದಳು.
22 ಅವರು ಅವಳ ಮನೆಯಿಂದ ಹೋಗಿ ಬೆಟ್ಟಗಳಲ್ಲಿ ಅಡಗಿಕೊಂಡು ಮೂರು ದಿನಗಳವರೆಗೆ ಅಲ್ಲೇ ಇದ್ದರು. ರಾಜಭಟರು ದಾರಿಯಲ್ಲೆಲ್ಲಾ ಹುಡುಕಾಡಿ ಕಾಣದೆ ಮೂರು ದಿನಗಳ ತರುವಾಯ ಪಟ್ಟಣಕ್ಕೆ ಹಿಂದಿರುಗಿದರು. 23 ಆಗ ಇವರಿಬ್ಬರು ಬೆಟ್ಟದಿಂದಿಳಿದು ನದಿಯನ್ನು ದಾಟಿ ಯೆಹೋಶುವನ ಬಳಿಗೆ ಹೋಗಿ ತಾವು ತಿಳಿದುಕೊಂಡ ಎಲ್ಲವನ್ನು ತಿಳಿಸಿದರು. ಅವರು ಯೆಹೋಶುವನಿಗೆ, 24 “ಯೆಹೋವನು ನಿಜವಾಗಿಯೂ ಆ ದೇಶವನ್ನೆಲ್ಲಾ ನಮಗೆ ದಯಪಾಲಿಸಿದ್ದಾನೆ. ಆ ದೇಶದ ಎಲ್ಲ ಜನರು ನಮ್ಮಿಂದ ಭಯಗೊಂಡಿದ್ದಾರೆ” ಎಂದು ತಿಳಿಸಿದರು.
* 2:6 ಮಾಳಿಗೆ ಇಸ್ರೇಲಿನಲ್ಲಿ ಮಾಳಿಗೆಗಳು ಸಮತಲವಾಗಿರುತ್ತಿದ್ದವು. ಜನರು ಪದಾರ್ಥಗಳನ್ನು ಇಡಲು ಅವುಗಳನ್ನು ಉಪಯೋಗಿಸುತ್ತಿದ್ದರು.