7
ಆಕಾನನ ಪಾಪ
ಇಸ್ರೇಲರು ಯೆಹೋವನ ಆಜ್ಞೆಗೆ ವಿಧೇಯರಾಗಲಿಲ್ಲ. ಯೆಹೂದ ಕುಲದವನೂ ಕರ್ಮೀಯ ಮಗನೂ ಜಬ್ದೀಯ ಮೊಮ್ಮಗನೂ ಜೆರಹನ ಗೋತ್ರದವನೂ ಆದ ಆಕಾನ ಎಂಬವನು ನಾಶಮಾಡಬೇಕಾದ ವಸ್ತುಗಳಲ್ಲಿ ಕೆಲವನ್ನು ಇಟ್ಟುಕೊಂಡಿದ್ದನು. ಅದಕ್ಕಾಗಿ ಯೆಹೋವನು ಇಸ್ರೇಲಿನವರ ಮೇಲೆ ತುಂಬಾ ಕೋಪಗೊಂಡನು.
ಜೆರಿಕೊವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಯೆಹೋಶುವನು ಕೆಲವು ಜನರನ್ನು “ಆಯಿ” ಎಂಬ ಪಟ್ಟಣಕ್ಕೆ ಕಳುಹಿಸಿದನು. “ಆಯಿ” ಬೇತಾವೆನಿನ ಸಮೀಪಕ್ಕೂ ಬೇತೇಲಿನ ಪೂರ್ವಕ್ಕೂ ಇತ್ತು. ಯೆಹೋಶುವನು “ ‘ಆಯಿ’ಗೆ ಹೋಗಿರಿ ಮತ್ತು ಆ ಪ್ರಾಂತ್ಯದ ದುರ್ಬಲತೆಗಳನ್ನು ಕಂಡುಹಿಡಿಯಿರಿ” ಎಂದು ಹೇಳಿದನು. ಆಗ ಅವರು ಆ ಪ್ರದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ಹೋದರು.
ತರುವಾಯ ಆ ಜನರು ಯೆಹೋಶುವನಲ್ಲಿಗೆ ಬಂದು, “ಆಯಿ ಒಂದು ದುರ್ಬಲ ಪ್ರದೇಶವಾಗಿದೆ, ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಮ್ಮ ಎಲ್ಲ ಜನರು ಬೇಕಾಗುವುದಿಲ್ಲ. ಅಲ್ಲಿ ಯುದ್ಧ ಮಾಡಲು ಎರಡು ಅಥವಾ ಮೂರುಸಾವಿರ ಜನರನ್ನು ಕಳುಹಿಸಿದರೆ ಸಾಕು, ಇಡೀ ಸೈನ್ಯವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಅಲ್ಲಿ ನಮ್ಮ ವಿರುದ್ಧ ಹೋರಾಡಬಲ್ಲ ಕೆಲವೇ ಜನರು ಇದ್ದಾರೆ” ಎಂದು ಹೇಳಿದರು.
4-5 ಸುಮಾರು ಮೂರು ಸಾವಿರ ಜನರು ‘ಆಯಿ’ಗೆ ಹೋದರು. ಆದರೆ “ಆಯಿ”ಯ ಜನರು ಇಸ್ರೇಲಿನ ಸುಮಾರು ಮೂವತ್ತಾರು ಜನರನ್ನು ಕೊಂದು ಹಾಕಿದರು. ಆದ್ದರಿಂದ ಇಸ್ರೇಲಿನ ಜನರು ಓಡಿಹೋದರು. “ಆಯಿ”ಯ ಜನರು ಅವರನ್ನು ಪಟ್ಟಣದ ದ್ವಾರದಿಂದ ಕಲ್ಲುಗಣಿಗಳವರೆಗೆ ಬೆನ್ನಟ್ಟಿಕೊಂಡು ಬಂದರು. “ಆಯಿ”ಯ ಜನರು ಅವರನ್ನು ಚೆನ್ನಾಗಿ ಥಳಿಸಿದರು.
ಆಗ ಇಸ್ರೇಲರು ತುಂಬ ಭಯಗೊಂಡು ಧೈರ್ಯವನ್ನು ಕಳೆದುಕೊಂಡರು. ಇದನ್ನು ಕೇಳಿ ಯೆಹೋಶುವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ನೆಲದ ಮೇಲೆ ಬೋರಲಾಗಿ ಬಿದ್ದುಕೊಂಡನು. ಸಾಯಂಕಾಲದವರೆಗೂ ಯೆಹೋಶುವನು ಹಾಗೆಯೇ ಇದ್ದನು. ಇಸ್ರೇಲಿನ ಹಿರಿಯರೂ ಹಾಗೆಯೇ ಮಾಡಿದರು. ಅವರು ದುಃಖದಿಂದ ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡರು.
ಯೆಹೋಶುವನು, “ಯೆಹೋವನೇ ನನ್ನ ಒಡೆಯನೇ, ನಮ್ಮ ಜನರನ್ನು ನೀನು ಜೋರ್ಡನ್ ನದಿ ದಾಟಿಸಿ ಕರೆದುಕೊಂಡು ಬಂದೆ. ನಮ್ಮನ್ನು ಇಲ್ಲಿಯವರೆಗೆ ಕರೆದು ತಂದು ಅಮೋರಿಯರಿಂದ ನಾಶವಾಗಲು ನಮ್ಮನ್ನು ಬಿಟ್ಟು ಕೊಡುವುದೇಕೆ? ನಾವು ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಜೋರ್ಡನ್ ನದಿಯ ಆಚೆಯಲ್ಲಿಯೇ ಇರಬೇಕಾಗಿತ್ತು. ಯೆಹೋವನೇ, ಇಸ್ರೇಲರು ವೈರಿಗಳ ಮುಂದೆ ಸೋತು ಹೋಗಿದ್ದಾರಲ್ಲಾ! ಈಗ ನಾನೇನು ಹೇಳಲಿ? ಈ ವಿಷಯವು ಕಾನಾನ್ಯರಿಗೂ ದೇಶದ ಉಳಿದ ಎಲ್ಲಾ ಜನರಿಗೂ ತಿಳಿಯುವುದು. ಆಗ ಅವರು ನಮ್ಮ ಮೇಲೆ ಧಾಳಿಮಾಡಿ ನಮ್ಮೆಲ್ಲರನ್ನು ಕೊಂದು ಹಾಕುತ್ತಾರೆ. ಆಗ ನೀನು ನಿನ್ನ ಕೀರ್ತಿಯನ್ನು ಉಳಿಸಿಕೊಳ್ಳಲು ಏನು ಮಾಡುವೆ?” ಎಂದು ಪ್ರಲಾಪಿಸಿದನು.
10 ಯೆಹೋವನು ಯೆಹೋಶುವನಿಗೆ, “ಮೇಲಕ್ಕೆ ಏಳು, ನೀನು ಹೀಗೆ ಬೋರಲು ಬಿದ್ದಿರುವುದೇಕೆ? 11 ಇಸ್ರೇಲರು ಪಾಪಮಾಡಿದ್ದಾರೆ. ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ. ನಾನು ನಾಶಪಡಿಸಲು ಹೇಳಿದ ವಸ್ತುಗಳಲ್ಲಿ ಕೆಲವನ್ನು ಅವರು ತೆಗೆದುಕೊಂಡಿದ್ದಾರೆ; ಅವರು ನನ್ನಿಂದ ಕದ್ದಿದ್ದಾರೆ; ಸುಳ್ಳು ಹೇಳಿದ್ದಾರೆ. ಅವರು ಆ ವಸ್ತುಗಳನ್ನು ತಮಗಾಗಿ ತೆಗೆದುಕೊಂಡಿದ್ದಾರೆ. 12 ಅದಕ್ಕಾಗಿಯೇ ಇಸ್ರೇಲಿನ ಸೈನ್ಯವು ಯುದ್ಧದಿಂದ ವಿಮುಖವಾಗಿ ಓಡಿಬಂತು. ಅವರು ತಪ್ಪನ್ನು ಮಾಡಿದ್ದರಿಂದಲೇ ಶಾಪಕ್ಕೆ ಗುರಿಯಾಗಿದ್ದಾರೆ. ಆ ಪಾಪವನ್ನು ನಿಮ್ಮಿಂದ ತೆಗೆದುಹಾಕಬೇಕು, ಅಲ್ಲಿಯವರೆಗೆ ನಾನು ನಿಮಗೆ ಸಹಾಯ ಮಾಡುವುದಿಲ್ಲ, ನಾನು ನಿಮ್ಮ ಸಂಗಡ ಬರುವುದೇ ಇಲ್ಲ.
13 “ಈಗ ಹೋಗಿ ಜನರನ್ನು ಶುದ್ಧಗೊಳಿಸು, ನೀನು ಜನರಿಗೆ, ‘ನೀವು ನಿಮ್ಮನ್ನು ಶುದ್ಧಿಗೊಳಿಸಿಕೊಳ್ಳಿರಿ, ನಾಳೆಗಾಗಿ ಸಿದ್ಧರಾಗಿರಿ, ಇಸ್ರೇಲಿನ ದೇವರಾದ ಯೆಹೋವನು ನಾಶಪಡಿಸಬೇಕೆಂದು ಆಜ್ಞಾಪಿಸಿದ ವಸ್ತುಗಳನ್ನು ಕೆಲ ಜನರು ಇಟ್ಟುಕೊಂಡಿದ್ದಾರೆಂದು ಹೇಳುತ್ತಾನೆ. ನೀವು ಆ ವಸ್ತುಗಳನ್ನು ಬಿಸಾಡುವವರೆಗೆ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.
14 “ ‘ನಾಳೆ ಬೆಳಿಗ್ಗೆ ನೀವೆಲ್ಲರು ಯೆಹೋವನ ಮುಂದೆ ಬಂದು ನಿಲ್ಲಬೇಕು. ಎಲ್ಲಾ ಕುಲಗಳು ಯೆಹೋವನ ಮುಂದೆ ಬಂದು ನಿಲ್ಲಬೇಕು. ಯೆಹೋವನು ಒಂದು ಕುಲವನ್ನು ಸೂಚಿಸುತ್ತಾನೆ. ಆಗ ಆ ಕುಲ ಮಾತ್ರ ಮುಂದೆ ನಿಲ್ಲಬೇಕು. ಆಗ ಯೆಹೋವನು ಒಂದು ಗೋತ್ರವನ್ನು ಸೂಚಿಸುತ್ತಾನೆ. ಆಗ ಆ ಗೋತ್ರದವರು ಮಾತ್ರ ಯೆಹೋವನ ಮುಂದೆ ನಿಲ್ಲಬೇಕು. ಆಗ ಯೆಹೋವನು ಆ ಗೋತ್ರದ ಪ್ರತಿಯೊಂದು ಕುಟುಂಬವನ್ನು ನೋಡಿ, ಒಂದು ಕುಟುಂಬವನ್ನು ಸೂಚಿಸುತ್ತಾನೆ. ಬಳಿಕ ಯೆಹೋವನು ಆ ಕುಟುಂಬದ ಪ್ರತಿಯೊಬ್ಬ ಮನುಷ್ಯನನ್ನು ನೋಡುತ್ತಾನೆ. 15 ಆಗ ನಾವು ನಾಶಪಡಿಸಬೇಕಾಗಿದ್ದ ವಸ್ತುಗಳನ್ನು ಇಟ್ಟುಕೊಂಡ ಮನುಷ್ಯನು ಸಿಕ್ಕಿಬೀಳುತ್ತಾನೆ. ಬಳಿಕ ಆ ಮನುಷ್ಯನು ಬೆಂಕಿಯಿಂದ ನಾಶವಾಗುವನು. ಅವನ ಎಲ್ಲಾ ಸ್ವತ್ತು ಅವನೊಂದಿಗೆ ನಾಶವಾಗುವುದು. ಆ ಮನುಷ್ಯನು ಯೆಹೋವನ ಆಜ್ಞೆಯನ್ನು ಮೀರಿದ್ದಾನೆ. ಇಸ್ರೇಲರಿಗೆ ಕೇಡನ್ನು ಬರಮಾಡಿದ್ದಾನೆ’ ” ಎಂದನು.
16 ಮಾರನೆಯ ದಿನ, ಬೆಳಿಗ್ಗೆ ಯೆಹೋಶುವನು ಇಸ್ರೇಲಿನ ಎಲ್ಲ ಜನರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದನು. ಎಲ್ಲ ಕುಲಗಳು ಯೆಹೋವನ ಮುಂದೆ ನಿಂತುಕೊಂಡವು. ಯೆಹೋವನು ಯೆಹೂದ ಕುಲವನ್ನು ಸೂಚಿಸಿದನು. 17 ಆದ್ದರಿಂದ ಯೆಹೂದ ಕುಲದ ಎಲ್ಲ ಗೋತ್ರಗಳು ಯೆಹೋವನ ಮುಂದೆ ಬಂದು ನಿಂತವು. ಯೆಹೋವನು ಜೆರಹನ ಗೋತ್ರವನ್ನು ಸೂಚಿಸಿದನು. ಆಗ ಜೆರಹನ ಗೋತ್ರದ ಎಲ್ಲ ಕುಟುಂಬಗಳು ಯೆಹೋವನ ಎದುರಿಗೆ ಬಂದು ನಿಂತವು. ಆಗ ಜಬ್ದೀಯ ಕುಟುಂಬವನ್ನು ಸೂಚಿಸಲಾಯಿತು. 18 ಆಗ ಯೆಹೋಶುವನು ಆ ಕುಟುಂಬದ ಎಲ್ಲ ಗಂಡಸರನ್ನು ಯೆಹೋವನ ಮುಂದೆ ಬರಲು ಹೇಳಿದನು. ಯೆಹೋವನು ಆಗ ಕರ್ಮೀಯ ಮಗನಾದ ಆಕಾನನನ್ನು ಸೂಚಿಸಿದನು. ಕರ್ಮೀಯು ಜಬ್ದೀಯ ಮಗನಾಗಿದ್ದನು, ಜಬ್ದೀಯು ಜೆರಹನ ಮಗನಾಗಿದ್ದನು.
19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ಇಸ್ರೇಲಿನ ದೇವರಾದ ಯೆಹೋವನನ್ನು ಸನ್ಮಾನಿಸು; ಆತನಿಗೆ ಸ್ತೋತ್ರಸಲ್ಲಿಸು. ನಿನ್ನ ಪಾಪಗಳನ್ನು ಆತನಿಗೆ ಅರಿಕೆಮಾಡು. ನೀನು ಮಾಡಿದ್ದನ್ನು ನನಗೆ ಹೇಳು; ನನ್ನಿಂದ ಏನನ್ನೂ ಮುಚ್ಚಿಡಬೇಡ” ಎಂದನು.
20 ಆಗ ಆಕಾನನು, “ಇದು ಸತ್ಯ. ನಾನು ಇಸ್ರೇಲಿನ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡಿದ್ದೇನೆ. 21 ನಾವು ಜೆರಿಕೊ ನಗರವನ್ನು ಮತ್ತು ಅದರಲ್ಲಿದ್ದ ಎಲ್ಲ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಕೊಳ್ಳೆ ಹೊಡೆಯುತ್ತಿದ್ದಾಗ, ಬಾಬಿಲೋನಿನ ಒಂದು ಸುಂದರವಾದ ನಿಲುವಂಗಿಯನ್ನೂ ಸುಮಾರು ಐದು ಪೌಂಡಿನಷ್ಟು ಬೆಳ್ಳಿಯನ್ನೂ ಒಂದು ಪೌಂಡಿಗಿಂತಲೂ ಹೆಚ್ಚು ಬಂಗಾರವನ್ನೂ ಕಂಡೆನು. ಈ ವಸ್ತುಗಳನ್ನು ನನಗಾಗಿ ಇಟ್ಟುಕೊಳ್ಳಬೇಕೆಂದು ತುಂಬ ಆಶೆಯಾಯಿತು. ಅದಕ್ಕಾಗಿ ನಾನು ಅವುಗಳನ್ನು ತೆಗೆದುಕೊಂಡೆ. ಅವುಗಳನ್ನು ನನ್ನ ಗುಡಾರದಲ್ಲಿ ಹುಗಿದಿಟ್ಟಿದ್ದೇನೆ. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇದೆ” ಎಂದು ಒಪ್ಪಿಕೊಂಡನು.
22 ಆಗ ಯೆಹೋಶುವನು ಕೆಲವರನ್ನು ಗುಡಾರಕ್ಕೆ ಕಳುಹಿಸಿದನು. ಅವರು ಗುಡಾರಕ್ಕೆ ಓಡಿಹೋಗಿ ಹುಗಿದಿಟ್ಟಿದ್ದ ಆ ವಸ್ತುಗಳನ್ನು ಕಂಡರು. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇತ್ತು. 23 ಜನರು ಆ ವಸ್ತುಗಳನ್ನು ಗುಡಾರದ ಹೊರಗೆ ತೆಗೆದುಕೊಂಡು ಬಂದು ಯೆಹೋಶುವನ ಮತ್ತು ಎಲ್ಲಾ ಇಸ್ರೇಲರ ಬಳಿಗೆ ಬಂದರು. ಅವರು ಯೆಹೋವನ ಮುಂದೆ ಆ ವಸ್ತುಗಳನ್ನೆಲ್ಲಾ ನೆಲದ ಮೇಲೆ ಹಾಕಿದರು.
24 ಆಗ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಸೇರಿ ಜೆರಹನ ಮಗನಾದ ಆಕಾನನನ್ನು, ಬೆಳ್ಳಿಯನ್ನು, ನಿಲುವಂಗಿಯನ್ನು, ಬಂಗಾರವನ್ನು, ಆಕಾನನ ಮಕ್ಕಳನ್ನು, ಅವನ ದನಕರುಗಳನ್ನು, ಕತ್ತೆಗಳನ್ನು, ಅವನ ಕುರಿಗಳನ್ನು, ಅವನ ಗುಡಾರವನ್ನು ಮತ್ತು ಅವನ ಎಲ್ಲ ಸ್ವತ್ತನ್ನು “ಆಕೋರ್” ಕಣಿವೆಗೆ ತೆಗೆದುಕೊಂಡು ಹೋದರು. 25 ಆಗ ಯೆಹೋಶುವನು ಅವನಿಗೆ, “ನೀನು ನಮಗೆ ಕೇಡನ್ನು ಬರಮಾಡಿರುವೆ! ಆದ್ದರಿಂದ ಯೆಹೋವನು ನಿನಗೂ ಕೇಡನ್ನು ಮಾಡಲಿ!” ಎಂದನು. ಆಗ ಜನರೆಲ್ಲರೂ ಕಲ್ಲುಗಳನ್ನು ತೂರಿ ಆಕಾನನನ್ನೂ ಅವನ ಕುಟುಂಬದವರನ್ನೂ ಕೊಂದರು ಮತ್ತು ಅವನ ಎಲ್ಲ ಸ್ವತ್ತನ್ನು ಸುಟ್ಟುಹಾಕಿದರು. 26 ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ “ಆಕೋರ್ ಕಣಿವೆ” ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.