22
ಯೋಷೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು
ಯೋಷೀಯನು ಆಳಲಾರಂಭಿಸಿದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಅವನು ಮೂವತ್ತೊಂದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಯದೀದಾ. ಇವಳು ಬೊಚ್ಕತ್ ಎಂಬ ಸ್ಥಳದ ಅದಾಯ ಎಂಬವನ ಮಗಳು. ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಯೋಷೀಯನು ಮಾಡಿದನು. ಯೋಷೀಯನು ತನ್ನ ಪೂರ್ವಿಕನಾದ ದಾವೀದನಂತೆ ದೇವರನ್ನು ಅನುಸರಿಸಿದನು. ಯೋಷೀಯನು ದೇವರ ಬೋಧನೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಅವುಗಳನ್ನು ಅನುಸರಿಸಿದನು.
ಯೋಷೀಯನು ದೇವಾಲಯದ ದುರಸ್ತಿಗೆ ಆಜ್ಞಾಪಿಸುವನು
ಯೋಷೀಯನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಕಾರ್ಯದರ್ಶಿಯೂ ಆದ ಶಾಫಾನನನ್ನು ದೇವಾಲಯಕ್ಕೆ ಕಳುಹಿಸಿದನು. ಯೋಷೀಯನು, “ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ದ್ವಾರಪಾಲಕರು ಜನರಿಂದ ಒಟ್ಟುಗೂಡಿಸಿರುವ ಹಣವನ್ನು ಅವನು ಲೆಕ್ಕಿಸಲಿ. ಜನರು ದೇವಾಲಯಕ್ಕೆ ತೆಗೆದುಕೊಂಡು ಬಂದು ಕೊಟ್ಟ ಹಣವೇ ಇದು. ನಂತರ ಯಾಜಕರು ದೇವಾಲಯದಲ್ಲಿ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಸ್ಥರಿಗೆ ಕೊಡಲಿ. ಯಾಜಕರು ದೇವಾಲಯವನ್ನು ದುರಸ್ತಿ ಮಾಡುವ ಕೆಲಸಗಾರರಿಗೆ ಈ ಹಣವನ್ನು ವಿನಿಯೋಗಿಸಲಿ. ಅಲ್ಲಿ ಬಡಗಿಗಳು, ಶಿಲ್ಪಿಗಳು ಮತ್ತು ಕಲ್ಲುಕುಟಿಕರಿದ್ದಾರೆ. ಮರವನ್ನು ಕೊಳ್ಳಲು ಮತ್ತು ಕಲ್ಲುಗಳನ್ನು ಕೆತ್ತಿಸಲು ಈ ಹಣವನ್ನು ಬಳಸಿ. ನೀವು ಕೆಲಸಗಾರರಿಗೆ ಕೊಡುವ ಹಣವನ್ನು ಲೆಕ್ಕಹಾಕಬೇಡಿ. ಯಾಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದಾರೆ” ಎಂದು ಹೇಳಿದನು.
ದೇವಾಲಯದಲ್ಲಿ ಧರ್ಮಶಾಸ್ತ್ರವು ಸಿಕ್ಕಿತು
ಪ್ರಧಾನಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿದನು. ಹಿಲ್ಕೀಯನು ಅದನ್ನು ಶಾಫಾನನಿಗೆ ನೀಡಿದನು. ಶಾಫಾನನು ಅದನ್ನು ಓದಿದನು.
ಕಾರ್ಯದರ್ಶಿಯಾದ ಶಾಫಾನನು ರಾಜನಾದ ಯೋಷಿಯನ ಬಳಿಗೆ ಬಂದು ಅವನಿಗೆ, “ನಿನ್ನ ಸೇವಕರು ದೇವಾಲಯದಲ್ಲಿದ್ದ ಹಣವನ್ನು ವ್ಯಯಮಾಡಿದರು. ಅವರು ಆ ಹಣವನ್ನು ದೇವಾಲಯದಲ್ಲಿ ಕೆಲಸ ಮಾಡಿಸುವ ಮೇಲ್ವಿಚಾರಕರಿಗೆ ಒಪ್ಪಿಸಿದರು” ಎಂದು ಹೇಳಿದನು. 10 ನಂತರ ಕಾರ್ಯದರ್ಶಿಯಾದ ಶಾಫಾನನು ರಾಜನಿಗೆ, “ಯಾಜಕನಾದ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟನು” ಎಂದು ಹೇಳಿದನು. ಶಾಫಾನನು ರಾಜನಿಗೆ ಆ ಗ್ರಂಥವನ್ನು ಓದಿದನು.
11 ರಾಜನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ, ಗಲಿಬಿಲಿಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು. 12 ಅನಂತರ ರಾಜನು ಯಾಜಕನಾದ ಹಿಲ್ಕೀಯನಿಗೆ, ಶಾಫಾನನ ಮಗನಾದ ಅಹೀಕಾಮನಿಗೆ, ಮೀಕಾಯನ ಮಗನಾದ ಅಕ್ಬೋರನಿಗೆ, ಕಾರ್ಯದರ್ಶಿಯಾದ ಶಾಫಾನನಿಗೆ ಮತ್ತು ರಾಜಸೇವಕನಾದ ಅಸಾಯನಿಗೆ ಒಂದು ಆಜ್ಞೆಯನ್ನು ನೀಡಿದನು. 13 ರಾಜನಾದ ಯೋಷೀಯನು, “ಈಗ ನಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಿ. ನನಗಾಗಿ, ಜನರಿಗಾಗಿ ಮತ್ತು ಎಲ್ಲಾ ಯೆಹೂದಕ್ಕಾಗಿ ಯೆಹೋವನನ್ನು ಕೇಳಿ. ಈಗ ಸಿಕ್ಕಿರುವ ಈ ಗ್ರಂಥದ ವಾಕ್ಯಗಳನ್ನು ಕುರಿತಾಗಿಯೂ ಕೇಳಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಏಕೆಂದರೆ ನಮ್ಮ ಪೂರ್ವಿಕರು ಈ ಗ್ರಂಥದ ವಾಕ್ಯಗಳಿಗೆ ಕಿವಿಗೊಡಲಿಲ್ಲ; ಅವುಗಳನ್ನು ಕೈಕೊಂಡು ನಡೆಯಲಿಲ್ಲ” ಎಂದು ಹೇಳಿದನು.
ಯೋಷೀಯನು ತನ್ನ ಜನರನ್ನು ಪ್ರವಾದಿಯಾದ ಹುಲ್ದಳ ಬಳಿಗೆ ಕಳುಹಿಸಿದನು
14 ಆದ್ದರಿಂದ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಎಂಬವರು ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋದರು. ಹುಲ್ದಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಅವನು ಯಾಜಕರ ವಸ್ತ್ರಗಳಿಗೆ ಮೇಲ್ವಿಚಾರಕನಾಗಿದ್ದನು. ಹುಲ್ದಳು ಜೆರುಸಲೇಮಿನ ಎರಡನೆಯ ಭಾಗದಲ್ಲಿ* ವಾಸಿಸುತ್ತಿದ್ದಳು. ಅವರು ಹೋಗಿ ಹುಲ್ದಳ ಜೊತೆಯಲ್ಲಿ ಮಾತನಾಡಿದರು.
15 ಆಗ ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನ ಬಳಿಗೆ ಹೋಗಿ 16 ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ದೇಶದ ಮೇಲೆ ಮತ್ತು ಇಲ್ಲಿ ವಾಸಮಾಡುತ್ತಿರುವ ಜನರ ಮೇಲೆ ನಾನು ಕೇಡುಗಳನ್ನು ಬರಮಾಡುವೆನು. ಯೆಹೂದದ ರಾಜನು ಓದಿದ ಗ್ರಂಥದಲ್ಲಿ ಈ ಕೇಡುಗಳನ್ನು ತಿಳಿಸಲಾಗಿದೆ. 17 ಯೆಹೂದದ ರಾಜರು ನನ್ನನ್ನು ತ್ಯಜಿಸಿದರು ಮತ್ತು ಇತರ ದೇವರುಗಳಿಗೆ ಧೂಪವನ್ನು ಸುಟ್ಟರು. ಅವರು ನನ್ನಲ್ಲಿ ಹೆಚ್ಚು ಕೋಪವನ್ನು ಉಂಟುಮಾಡಿದರು. ಅವರು ಅನೇಕ ವಿಗ್ರಹಗಳನ್ನು ನಿರ್ಮಿಸಿದರು. ಆದಕಾರಣವೇ ನಾನು ನನ್ನ ಕೋಪವನ್ನು ಈ ಸ್ಥಳದ ವಿರುದ್ಧ ತೋರ್ಪಡಿಸುತ್ತೇನೆ. ನನ್ನ ಕೋಪವು ಆರಿಹೋಗದ ಬೆಂಕಿಯಂತಿರುತ್ತದೆ!’
18-19 “ಯೆಹೂದದ ರಾಜನಾದ ಯೋಷೀಯನು ಯೆಹೋವನ ಸಲಹೆಯನ್ನು ಕೇಳಲು ನಿಮ್ಮನ್ನು ಕಳುಹಿಸಿದನು. ಯೋಷೀಯನಿಗೆ ಈ ಸಂಗತಿಗಳನ್ನು ಹೇಳಿ: ‘ನೀನು ಕೇಳುವ ಈ ಮಾತುಗಳನ್ನು ಇಸ್ರೇಲರ ದೇವರಾದ ಯೆಹೋವನು ಹೇಳಿದನು. ಈ ದೇಶವನ್ನು ಮತ್ತು ಇಲ್ಲಿ ವಾಸಿಸುವ ಜನರನ್ನು ಕುರಿತು ನಾನು ಹೇಳಿದ ಸಂಗತಿಗಳನ್ನು ನೀನು ಕೇಳಿರುವೆ. ನಿನ್ನ ಹೃದಯವು ಮೃದುವಾಗಿರುವುದರಿಂದ, ನೀನು ಅವುಗಳನ್ನು ಕೇಳಿದಾಗ ದೈನ್ಯತೆಯುಳ್ಳವನಾದೆ. ಈ ಸ್ಥಳಕ್ಕೆ (ಜೆರುಸಲೇಮಿಗೆ) ಆ ಭೀಕರ ಸಂಗತಿಗಳಾಗುತ್ತವೆಯೆಂದು ನಾನು ಹೇಳಿದೆ. ಆಗ ನೀನು ದುಃಖದಿಂದ ನಿನ್ನ ಬಟ್ಟೆಗಳನ್ನು ಹರಿದುಕೊಂಡು ಅಳಲಾರಂಭಿಸಿದೆ. ಆದಕಾರಣವೇ ನಾನು ನಿನಗೆ ಕಿವಿಗೊಟ್ಟೆನು.’ ಯೆಹೋವನು ಹೇಳುವುದೇನೆಂದರೆ: 20 ‘ನೀನು ನಿನ್ನ ಪೂರ್ವಿಕರ ಜೊತೆ ಸೇರುವಂತೆ ನಾನು ಮಾಡುತ್ತೇನೆ. ನೀನು ಶಾಂತಿಯಿಂದ ಸತ್ತು ನಿನ್ನ ಸಮಾಧಿಯನ್ನು ಸೇರುವೆ. ಈ ದೇಶದ (ಜೆರುಸಲೇಮಿನ) ಮೇಲೆ ನಾನು ತರಲಿರುವ ಕೇಡುಗಳನ್ನು ನಿನ್ನ ಕಣ್ಣುಗಳು ನೋಡುವುದಿಲ್ಲ’ ಎಂಬುದೇ” ಎಂದು ಹೇಳಿದಳು.
ನಂತರ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಹಿಂತಿರುಗಿ ಬಂದು ರಾಜನಿಗೆ ತಿಳಿಸಿದರು.
* 22:14 ಎರಡನೆಯ ಭಾಗ ಜೆರುಸಲೇಮನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು.