6
ಬೇರೆ ಪಾಪಗಳಿಗಾಗಿ ದೋಷಪರಿಹಾರಕ ಯಜ್ಞಗಳು
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಅಡವು ಇಟ್ಟ ವಸ್ತುವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳುವಿನ ವಿಷಯದಲ್ಲಾಗಲಿ ಸುಳ್ಳಾಡುವುದರಿಂದಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದಾಗಲಿ ಮತ್ತೊಬ್ಬನು ಕಳೆದುಕೊಂಡದ್ದನ್ನು ಕಂಡುಕೊಂಡು ಅದರ ಬಗ್ಗೆ ಸುಳ್ಳು ಹೇಳುವುದರಿಂದಾಗಲಿ ಮಾಡಿದ ಪ್ರಮಾಣವನ್ನು ಉಲ್ಲಂಘಿಸುವುದರಿಂದಾಗಲಿ ಪಾಪಮಾಡಿ ಯೆಹೋವನಿಗೆ ದ್ರೋಹಮಾಡಿದರೆ, ಅವನು ತಾನು ಕದ್ದದ್ದನ್ನಾಗಲಿ ಮೋಸದಿಂದ ತೆಗೆದುಕೊಂಡದ್ದನ್ನಾಗಲಿ ಅಡವು ಇಟ್ಟುಕೊಂಡದ್ದನ್ನಾಗಲಿ ಕಂಡುಕೊಂಡ ಅಥವಾ ಕಳೆದುಹೋದ ವಸ್ತುವನ್ನಾಗಲಿ ಸುಳ್ಳಾಣೆ ಇಟ್ಟುಕೊಂಡ ವಸ್ತುವನ್ನಾಗಲಿ ಸಂಪೂರ್ಣವಾಗಿ ತಂದುಕೊಡಬೇಕು. ಅದರೊಂದಿಗೆ ಅದರ ಐದನೆಯ ಒಂದಂಶವನ್ನು ಹೆಚ್ಚಾಗಿ ತಂದುಕೊಡಬೇಕು. ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ದಿನದಲ್ಲಿಯೇ ನಿಜವಾದ ಯಜಮಾನನಿಗೆ ಇದನ್ನು ತಂದುಕೊಡಬೇಕು. ಆ ವ್ಯಕ್ತಿ ದೋಷಪರಿಹಾರಕ ಯಜ್ಞವನ್ನು ಯಾಜಕನ ಬಳಿಗೆ ತರಬೇಕು. ಅದು ಮಂದೆಯಿಂದ ತಂದ ಟಗರಾಗಿರಬೇಕು. ಟಗರಿನಲ್ಲಿ ಯಾವ ದೋಷವೂ ಇರಬಾರದು. ಅದು ಯಾಜಕನು ಹೇಳುವ ಬೆಲೆಯುಳ್ಳದ್ದಾಗಿರಬೇಕು. ಅದು ಯೆಹೋವನಿಗೆ ಸಮರ್ಪಿಸುವ ದೋಷಪರಿಹಾರಕ ಯಜ್ಞವಾಗಿರುವುದು. ಬಳಿಕ ಯಾಜಕನು ಯೆಹೋವನ ಸನ್ನಿಧಿಗೆ ಹೋಗಿ ಅವನನ್ನು ಶುದ್ಧಿಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು.”
ಸರ್ವಾಂಗಹೋಮಗಳು
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನಿಗೂ ಅವನ ಪುತ್ರರಿಗೂ ಈ ಅಪ್ಪಣೆಯನ್ನು ಕೊಡು: ಸರ್ವಾಂಗಹೋಮದ ನಿಯಮ ಇದಾಗಿದೆ. ಸರ್ವಾಂಗಹೋಮವು ವೇದಿಕೆಯ ಒಲೆಯಲ್ಲಿ* ರಾತ್ರಿಯೆಲ್ಲಾ ಮರುದಿನ ಮುಂಜಾನೆಯವರೆಗೆ ಉರಿಯುತ್ತಿರಬೇಕು. ವೇದಿಕೆಯಲ್ಲಿ ಬೆಂಕಿಯು ಉರಿಯುತ್ತಿರಬೇಕು. 10 ಯಾಜಕನು ತನ್ನ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಳ್ಳಬೇಕು. ಯಾಜಕನು ಸರ್ವಾಂಗಹೋಮ ಮಾಡಿದಾಗ ಬೆಂಕಿಯಿಂದ ಉಂಟಾದ ಬೂದಿಯನ್ನು ತೆಗೆದು ವೇದಿಕೆಯ ಬಳಿಯಲ್ಲಿಡಬೇಕು. 11 ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ತೆಗೆದುಹಾಕಿ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ಬೂದಿಯನ್ನು ಪಾಳೆಯದ ಹೊರಗೆ ಒಂದು ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 12 ಆದರೆ ವೇದಿಕೆಯ ಮೇಲೆ ಬೆಂಕಿ ಉರಿಯುತ್ತಲೇ ಇರಬೇಕು. ಅದನ್ನು ಆರಿ ಹೋಗುವುದಕ್ಕೆ ಬಿಡಬಾರದು, ಯಾಜಕನು ಪ್ರತಿ ಮುಂಜಾನೆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಸಿದ್ಧಪಡಿಸಿ, ಸಮಾಧಾನಯಜ್ಞದ ಕೊಬ್ಬನ್ನು ಸುಡಬೇಕು. 13 ಬೆಂಕಿಯು ವೇದಿಕೆಯ ಮೇಲೆ ಉರಿಯುತ್ತಲೇ ಇರಬೇಕು; ಆರಿಹೋಗಬಾರದು.
ಧಾನ್ಯಸಮರ್ಪಣೆಗಳು
14 “ಇದು ಧಾನ್ಯಸಮರ್ಪಣೆಯ ನಿಯಮವಾಗಿದೆ: ಆರೋನನ ಪುತ್ರರು ಅದನ್ನು ಸಮರ್ಪಿಸಲು ಯಜ್ಞವೇದಿಕೆಯ ಮುಂಭಾಗದಲ್ಲಿ ಯೆಹೋವನ ಬಳಿಗೆ ತರಬೇಕು. 15 ಯಾಜಕನು ಧಾನ್ಯನೈವೇದ್ಯದಿಂದ ಒಂದು ಹಿಡಿ ಶ್ರೇಷ್ಠ ಹಿಟ್ಟನ್ನು ಮತ್ತು ಎಣ್ಣೆಯನ್ನು ಮತ್ತು ಎಲ್ಲಾ ಧೂಪವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಅದನ್ನು ವೇದಿಕೆಯ ಮೇಲೆ ಸುಡಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
16 “ಆರೋನನ ಮತ್ತು ಅವನ ಪುತ್ರರು ಧಾನ್ಯನೈವೇದ್ಯದಲ್ಲಿ ಉಳಿದದ್ದನ್ನು ತಿನ್ನಬೇಕು. ಅವರು ಆ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 17 ಹುಳಿ ಕಲಸಿ ರೊಟ್ಟಿ ಸುಡಬಾರದು. ನನಗೆ ಅಗ್ನಿಯ ಮೂಲಕ ಹೋಮವಾಗಿ ಅರ್ಪಿಸಿದ ಸಮರ್ಪಣೆಗಳಲ್ಲಿ ನಾನು ಅದನ್ನು ಯಾಜಕರ ಪಾಲನ್ನಾಗಿ ಕೊಟ್ಟಿದ್ದೇನೆ. ಅದು ಪಾಪಪರಿಹಾರಕ ಯಜ್ಞದಂತೆಯೂ ದೋಷಪರಿಹಾರಕ ಯಜ್ಞದಂತೆಯೂ ಮಹಾ ಪವಿತ್ರವಾಗಿದೆ. 18 ಆರೋನನ ವಂಶದವರಾದ ಗಂಡಸರೆಲ್ಲರೂ ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳನ್ನು ತಿನ್ನಬಹುದು. ಇದು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿದೆ. ಈ ಕಾಣಿಕೆಗಳಿಗೆ ತಗಲಿದ್ದೆಲ್ಲಾ ಪವಿತ್ರವಾಗುತ್ತವೆ.”
ಯಾಜಕರ ಧಾನ್ಯನೈವೇದ್ಯ
19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 20 “ಆರೋನನು ಮತ್ತು ಅವನ ಪುತ್ರರು ಆರೋನನ ನಂತರ ಯೆಹೋವನ ಸನ್ನಿಧಿಗೆ ತರಬೇಕಾದ ಧಾನ್ಯಸಮರ್ಪಣೆ ಇದಾಗಿದೆ. ಅವರು ಮಹಾಯಾಜಕರಾಗಿ ಅಭಿಷೇಕಿಸಲ್ಪಡುವ ದಿನದಲ್ಲಿ ಇದನ್ನು ಮಾಡಬೇಕು. ಅವರು ಎಂಟು ಬಟ್ಟಲು ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯನೈವೇದ್ಯಕ್ಕಾಗಿ ತರಬೇಕು. (ದಿನನಿತ್ಯದ ನೈವೇದ್ಯಗಳ ಸಮಯಗಳಲ್ಲಿ ಇದನ್ನು ಅರ್ಪಿಸಬೇಕು.) ಅವರು ಇದರಲ್ಲಿ ಅರ್ಧದಷ್ಟನ್ನು ಮುಂಜಾನೆಯಲ್ಲಿ ಮತ್ತು ಉಳಿದರ್ಧವನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು. 21 ಶ್ರೇಷ್ಠವಾದ ಗೋಧಿಹಿಟ್ಟಿಗೆ ಎಣ್ಣೆಯನ್ನು ಬೆರೆಸಿ ಕಬ್ಬಿಣದ ಹಂಚಿನ ಮೇಲೆ ರೊಟ್ಟಿ ಸುಡಬೇಕು. ಅದನ್ನು ಬೇಯಿಸಿದ ಮೇಲೆ ನೀವು ಅದನ್ನು ಒಳಗೆ ತರಬೇಕು. ನೀವು ಈ ಸಮರ್ಪಣೆಯನ್ನು ತುಂಡುತುಂಡಾಗಿ ಮುರಿದು ಸಮರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
22 “ಆರೋನನ ಸ್ಥಾನವನ್ನು ಹೊಂದುವುದಕ್ಕಾಗಿ ಆರೋನನ ಸಂತತಿಯವರಲ್ಲಿ ಆರಿಸಲ್ಪಟ್ಟು ಅಭಿಷೇಕಿಸಲ್ಪಟ್ಟ ಯಾಜಕನು ಯೆಹೋವನಿಗೆ ಈ ಧಾನ್ಯಸಮರ್ಪಣೆಯನ್ನು ಮಾಡಬೇಕು. ಈ ನಿಯಮ ಶಾಶ್ವತವಾದದ್ದು. ಧಾನ್ಯಸಮರ್ಪಣೆಯು ಸಂಪೂರ್ಣವಾಗಿ ಹೋಮವಾಗಬೇಕು. 23 ಯಾಜಕನ ಪ್ರತಿಯೊಂದು ಧಾನ್ಯಸಮರ್ಪಣೆಯು ಸಂಪೂರ್ಣವಾಗಿ ಹೋಮವಾಗಬೇಕು. ಅದನ್ನು ತಿನ್ನಲೇಬಾರದು.”
ಪಾಪಪರಿಹಾರ ಯಜ್ಞದ ಕಟ್ಟಳೆ
24 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 25 “ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಹೇಳು: ಪಾಪಪರಿಹಾರಕ ಯಜ್ಞದ ಕಟ್ಟಳೆ ಇದಾಗಿದೆ. ಸರ್ವಾಂಗಹೋಮ ಪಶುವು ವಧಿಸಲ್ಪಡುವ ಸ್ಥಳದಲ್ಲಿಯೇ ಪಾಪಪರಿಹಾರಕ ಯಜ್ಞಪಶುವು ಯೆಹೋವನ ಸನ್ನಿಧಿಯಲ್ಲಿ ವಧಿಸಲ್ಪಡಬೇಕು. ಅದು ಮಹಾ ಪವಿತ್ರವಾಗಿದೆ. 26 ಪಾಪಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದನ್ನು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 27 ಪಾಪಪರಿಹಾರಕ ಯಜ್ಞದ ಮಾಂಸವು ತಗಲಿದ ವಸ್ತುವೂ ಪವಿತ್ರವಾಗುತ್ತದೆ; ಮುಟ್ಟುವ ವ್ಯಕ್ತಿಯೂ ಪವಿತ್ರವಾಗುವನು.
“ಚಿಮಿಕಿಸಲ್ಪಟ್ಟ ರಕ್ತದಲ್ಲಿ ಸ್ವಲ್ಪ ರಕ್ತವು ಯಾರ ಬಟ್ಟೆಯ ಮೇಲಾದರೂ ಬಿದ್ದರೆ, ನೀವು ಆ ಬಟ್ಟೆಗಳನ್ನು ಪವಿತ್ರಸ್ಥಳದಲ್ಲಿ ತೊಳೆಯಬೇಕು. 28 ಪಾಪಪರಿಹಾರಕ ಯಜ್ಞವನ್ನು ಮಣ್ಣಿನ ಮಡಕೆಯಲ್ಲಿ ಬೇಯಿಸಿದರೆ, ಆ ಮಡಕೆಯನ್ನು ಒಡೆದುಹಾಕಬೇಕು. ಪಾಪಪರಿಹಾರಕ ಯಜ್ಞವನ್ನು ತಾಮ್ರದ ಪಾತ್ರೆಯಲ್ಲಿ ಬೇಯಿಸಿದರೆ, ಆ ಪಾತ್ರೆಯನ್ನು ಉಜ್ಜಿ ನೀರಿನಲ್ಲಿ ತೊಳೆಯಬೇಕು.
29 “ಯಾಜಕನ ಕುಟುಂಬದಲ್ಲಿರುವ ಯಾವ ಪುರುಷನಾದರೂ ಪಾಪಪರಿಹಾರಕ ಯಜ್ಞದ ಮಾಂಸವನ್ನು ತಿನ್ನಬಹುದು. ಅದು ಬಹಳ ಪವಿತ್ರವಾಗಿದೆ. 30 ಆದರೆ ಪಾಪಪರಿಹಾರಕ ಯಜ್ಞದ ರಕ್ತವನ್ನು ದೇವದರ್ಶನಗುಡಾರದೊಳಗೆ ತೆಗೆದುಕೊಂಡು ಹೋಗಿ, ಜನರನ್ನು ಶುದ್ಧಿಗೊಳಿಸಲು ಪವಿತ್ರಸ್ಥಳದಲ್ಲಿ ಉಪಯೋಗಿಸಿದರೆ, ಆ ಪಾಪಪರಿಹಾರಕ ಯಜ್ಞವನ್ನು ಅಗ್ನಿಯಲ್ಲಿ ಸುಟ್ಟುಬಿಡಬೇಕು. ಯಾಜಕರು ಅದರ ಮಾಂಸವನ್ನು ತಿನ್ನಲೇಬಾರದು.
* 6:9 ವೇದಿಕೆಯ ಒಲೆ ಯಜ್ಞವನ್ನು ಸುಡುವ ಸ್ಥಳ. 6:20 ಎಂಟು ಬಟ್ಟಲು ಅಕ್ಷರಶಃ, “1/10 ಏಫಾ.”