31
ಇಸ್ರೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು
ಯೆಹೋವನು ಮೋಶೆಯೊಡನೆ ಮಾತಾಡಿ ಹೀಗೆಂದನು: “ನೀನು ಇಸ್ರೇಲರಿಗೋಸ್ಕರ ಮಿದ್ಯಾನ್ಯರ ಮೇಲೆ ಆಕ್ರಮಣಮಾಡಿ ಸೇಡು ತೀರಿಸಿಕೊ. ಇದಾದ ನಂತರ ನೀನು ಸಾಯುವಿ.”
ಆಗ ಮೋಶೆ ಇಸ್ರೇಲರಿಗೆ, “ಮಿದ್ಯಾನ್ಯರು ಯೆಹೋವನಿಗೆ ವಿರೋಧವಾಗಿ ಮಾಡಿದ ಕೃತ್ಯಗಳಿಗಾಗಿ ಅವರ ಮೇಲೆ ಆಕ್ರಮಣ ಮಾಡಿ ದಂಡಿಸಲು ನಿಮ್ಮಲ್ಲಿರುವ ಗಂಡಸರಲ್ಲಿ ಕೆಲವರನ್ನು ದಂಡೆಯಾತ್ರೆಗೆ ಆರಿಸಿಕೊಳ್ಳಬೇಕು. ಇಸ್ರೇಲಿನ ಕುಲಗಳವರಲ್ಲಿ ಪ್ರತಿಯೊಂದು ಕುಲದಿಂದ ಒಂದು ಸಾವಿರ ಗಂಡಸರನ್ನು ದಂಡೆಯಾತ್ರೆಗೆ ಕಳುಹಿಸಬೇಕು. ಆದ್ದರಿಂದ ಇಸ್ರೇಲರ ಕುಲಗಳಿಂದ ಪ್ರತಿಯೊಂದು ಕುಲಕ್ಕೆ ಒಂದು ಸಾವಿರ ಗಂಡಸರ ಪ್ರಕಾರ ಹನ್ನೆರಡು ಸಾವಿರ ಗಂಡಸರನ್ನು ಯುದ್ಧಕ್ಕೆ ಆರಿಸಿಕೊಳ್ಳಬೇಕು” ಅಂದನು.
ಮೋಶೆಯು ಅವರನ್ನು ಯುದ್ಧಕ್ಕೆ ಕಳುಹಿಸಿದನು. ಅವರ ಸಂಗಡ ಎಲ್ಲಾಜಾರನ ಮಗನಾದ ಫೀನೆಹಾಸನನ್ನೂ ಕಳುಹಿಸಿದನು. ಫೀನೆಹಾಸನು ಪವಿತ್ರವಸ್ತುಗಳನ್ನು ತೆಗೆದುಕೊಂಡನು ಮತ್ತು ಸೂಚನೆ ಕೊಡುವುದಕ್ಕಾಗಿ ತುತ್ತೂರಿಗಳನ್ನು ತೆಗೆದುಕೊಂಡನು. ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರೇಲರು ಮಿದ್ಯಾನ್ಯರೊಡನೆ ಯುದ್ಧಮಾಡಿದರು. ಅವರು ಮಿದ್ಯಾನ್ಯರ ಗಂಡಸರೆಲ್ಲರನ್ನು ಕೊಂದರು. ಅವರು ಕೊಂದವರಲ್ಲಿ ಎವೀ, ರೆಕೆಮ್, ಜೂರ್, ಹೂರ್ ಮತ್ತು ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಸೇರಿದ್ದರು. ಅವರು ಕತ್ತಿಯಿಂದ ಬೆಯೋರನ ಮಗನಾದ ಬಿಳಾಮನನ್ನೂ ಕೊಂದರು.
ಇಸ್ರೇಲರು ಮಿದ್ಯಾನ್ಯರ ಹೆಂಗಸರನ್ನು ಮತ್ತು ಮಕ್ಕಳನ್ನು ಸೆರೆಹಿಡಿದರು. ಅವರು ಮಿದ್ಯಾನ್ಯರ ಎಲ್ಲಾ ಪಶುಗಳನ್ನು ಮತ್ತು ಇತರ ಅಮೂಲ್ಯವಾದ ವಸ್ತುಗಳನ್ನು ತೆಗೆದುಕೊಂಡರು. 10 ಅವರು ನೆಲೆಸಿದ್ದ ಊರುಗಳನ್ನೂ ಪಾಳೆಯಗಳನ್ನೂ ಸುಟ್ಟುಹಾಕಿದರು. 11 ಎಲ್ಲಾ ಜನರನ್ನೂ ಪಶುಗಳನ್ನೂ ಹಿಡಿದು, 12 ತಾವು ಸೆರೆಹಿಡಿದವರನ್ನೂ ಪಶುಗಳನ್ನೂ ಆಸ್ತಿಯನ್ನೂ ತೆಗೆದುಕೊಂಡು ಜೆರಿಕೊ ಪಟ್ಟಣದ ಆಚೆ ಜೋರ್ಡನ್ ಹೊಳೆಯ ತೀರದಲ್ಲಿ ಮೋವಾಬ್ಯರ ಬಯಲಿನಲ್ಲಿದ್ದ ಪಾಳೆಯಕ್ಕೆ ಅಂದರೆ ಮೋಶೆ, ಯಾಜಕನಾದ ಎಲ್ಲಾಜಾರ್ ಮತ್ತು ಇಸ್ರೇಲರ ಸರ್ವಸಮೂಹದವರು ಇದ್ದಲ್ಲಿಗೆ ಬಂದರು. 13 ಮೋಶೆಯೂ ಯಾಜಕನಾದ ಎಲ್ಲಾಜಾರನೂ ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಬಂದು ಸೈನಿಕರನ್ನು ಎದುರುಗೊಂಡರು.
14 ಮೋಶೆಯು ಯುದ್ಧದಿಂದ ಹಿಂತಿರುಗಿ ಬರುತ್ತಿದ್ದ ಸೈನ್ಯಾಧಿಕಾರಿಗಳ ಮೇಲೆ ಅಂದರೆ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು. 15 ಅವನು ಅವರಿಗೆ, “ನೀವು ಎಲ್ಲಾ ಹೆಂಗಸರನ್ನು ಉಳಿಸಿದ್ದೇಕೆ? 16 ಬಿಳಾಮನ ಸಲಹೆಯನ್ನು ಅನುಸರಿಸಿ, ಯೆಹೋವನಿಗೆ ವಿರೋಧವಾಗಿ ಇಸ್ರೇಲರು ಪಾಪಮಾಡುವಂತೆ ಮಾಡಿ ಪೆಗೋರದ ಬಾಳನ ಸಂಗತಿಗೆ ಕಾರಣರಾದವರು ಇವರೇ ಅಲ್ಲವೇ? ಅದರ ಫಲವಾಗಿ ಭಯಂಕರವಾದ ಕಾಯಿಲೆಯು ಜನರಿಗೆ ಬಂದಿತು. 17 ಆದ್ದರಿಂದ ಈ ಗುಂಪಿನಲ್ಲಿರುವ ಎಲ್ಲಾ ಗಂಡುಮಕ್ಕಳನ್ನೂ ಪುರುಷಸಂಗಮ ಮಾಡಿದ ಎಲ್ಲಾ ಮಿದ್ಯಾನ್ ಹೆಂಗಸರನ್ನೂ ಕೊಲ್ಲಬೇಕು. 18 ಪುರುಷಸಂಗಮ ಮಾಡದಿರುವ ಕನ್ಯೆಯರನ್ನು ನಿಮಗಾಗಿ ಉಳಿಸಿರಿ. 19 ನೀವಾದರೋ ಏಳು ದಿನಗಳವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯರನ್ನು ಕೊಂದವರೂ ಶವಸೋಂಕಿದವರೂ ನಿಮ್ಮವರಾಗಿರಲಿ ಸೆರೆಯವರಾಗಿರಲಿ ಮೂರನೆಯ ಮತ್ತು ಏಳನೆಯ ದಿನದಲ್ಲಿ ನಿಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು. 20 ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತುಗಳನ್ನೂ ಮರದ ಸಾಮಾನನ್ನೂ ಶುದ್ಧ ಮಾಡಬೇಕು.”
21 ಆಗ ಯಾಜಕನಾದ ಎಲ್ಲಾಜಾರನು ಸೈನಿಕರೊಡನೆ ಮಾತಾಡಿ ಇಂತೆಂದೆನು: “ಯೆಹೋವನು ಮೋಶೆಗೆ ಯುದ್ಧದಿಂದ ಮರಳಿಬರುವ ಸೈನಿಕರ ಬಗ್ಗೆ ಆ ನಿಯಮಗಳನ್ನು ಕೊಟ್ಟನು: 22-23 ಬೆಂಕಿಯನ್ನು ಸಹಿಸಬಲ್ಲ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿಯಲ್ಲಿ ಹಾಯಿಸಿ ಶುದ್ಧಮಾಡಬೇಕು. ಬಳಿಕ ಶುದ್ಧೀಕರಣದ ನೀರಿನಿಂದ ಅವುಗಳನ್ನು ಶುದ್ಧೀಕರಿಸಬೇಕು. ಬೆಂಕಿಯನ್ನು ಸಹಿಸಲಾರದ ವಸ್ತುಗಳನ್ನು ನೀರಿನಿಂದ ಮಾತ್ರ ತೊಳೆಯಬೇಕು. 24 ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ನೀವು ಶುದ್ಧರಾಗುವಿರಿ. ಆಮೇಲೆ ನೀವು ಪಾಳೆಯದೊಳಗೆ ಬರಬಹುದು.”
25 ತರುವಾಯ ಯೆಹೋವನು ಮೋಶೆಗೆ, 26 “ನೀನೂ ಯಾಜಕನಾದ ಎಲ್ಲಾಜಾರನೂ ಸಮುದಾಯದ ಎಲ್ಲಾ ಕುಲಪ್ರಧಾನರೂ ಸೆರೆಸಿಕ್ಕಿದ ಮನುಷ್ಯರನ್ನು ಮತ್ತು ಪಶುಗಳನ್ನು ಲೆಕ್ಕಿಸಿ ಪಟ್ಟಿಮಾಡಬೇಕು. 27 ಅವುಗಳನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಸೈನಿಕರಿಗೆ ಅರ್ಧವನ್ನು ಮಿಕ್ಕ ಸಮೂಹದವರಿಗೆ ಅರ್ಧವನ್ನು ಹಂಚಿಕೊಡಬೇಕು. 28 ಯುದ್ಧಕ್ಕೆ ಹೋದ ಸೈನಿಕರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು ಮತ್ತು ಕುರಿಗಳನ್ನು 29 ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೋಸ್ಕರ ಕಪ್ಪಕಾಣಿಕೆಯನ್ನು ತೆಗೆದುಕೊಂಡು, ಅದನ್ನು ಪ್ರತ್ಯೇಕಿಸಿ ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು. 30 ಮಿಕ್ಕ ಇಸ್ರೇಲರಿಗೆ ಬರುವ ಭಾಗದಿಂದ ಮನುಷ್ಯರನ್ನು, ದನಕರುಗಳನ್ನು, ಕತ್ತೆಗಳನ್ನು, ಕುರಿಗಳನ್ನು ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಳ್ಳಬೇಕು. ಅದನ್ನು ಯೆಹೋವನ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು.
31 ಯೆಹೋವನು ಆಜ್ಞಾಪಿಸಿದ್ದಂತೆಯೇ ಮೋಶೆ ಮತ್ತು ಎಲ್ಲಾಜಾರನು ಮಾಡಿದರು. 32 ಸೈನಿಕರು ಆರು ಲಕ್ಷದ ಎಪ್ಪತ್ತೈದು ಸಾವಿರ ಕುರಿಗಳನ್ನು, 33 ಎಪ್ಪತ್ತೆರಡು ಸಾವಿರ ದನಕರುಗಳನ್ನು, 34 ಅರವತ್ತೊಂದು ಸಾವಿರ ಕತ್ತೆಗಳನ್ನು, 35 ಮೂವತ್ತೆರಡು ಸಾವಿರ ಕನ್ನಿಕೆಯರನ್ನು ಪಡೆದುಕೊಂಡರು. 36 ಯುದ್ಧಕ್ಕೆ ಹೋದ ಸೈನಿಕರು ಅರ್ಧಭಾಗವನ್ನು ಅಂದರೆ ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳನ್ನು ಪಡೆದುಕೊಂಡರು. 37 ಅವರು ಆರುನೂರ ಐವತ್ತೇಳು ಕುರಿಗಳನ್ನು ಯೆಹೋವನಿಗೆ ಕೊಟ್ಟರು. 38 ಸೈನಿಕರು ಮೂವತ್ತಾರು ಸಾವಿರ ದನಕರುಗಳನ್ನು ಪಡೆದುಕೊಂಡರು. ಅವುಗಳಲ್ಲಿ ಎಪ್ಪತ್ತೆರಡು ದನಕರುಗಳನ್ನು ಯೆಹೋವನಿಗೆ ಕೊಟ್ಟರು. 39 ಸೈನಿಕರು ಮೂವತ್ತು ಸಾವಿರದ ಐನೂರು ಕತ್ತೆಗಳನ್ನು ಪಡೆದುಕೊಂಡರು. ಅವರು ಅರವತ್ತೊಂದು ಕತ್ತೆಗಳನ್ನು ಯೆಹೋವನಿಗೆ ಕೊಟ್ಟರು. 40 ಸೈನಿಕರು ಹದಿನಾರು ಸಾವಿರ ಮಂದಿ ಕನ್ನಿಕೆಯರನ್ನು ಪಡೆದುಕೊಂಡರು. ಅವರು ಮೂವತ್ತೆರಡು ಮಂದಿ ಕನ್ನಿಕೆಯರನ್ನು ಯೆಹೋವನಿಗೆ ಕೊಟ್ಟರು. 41 ಮೋಶೆಯು ಯೆಹೋವನ ಅಪ್ಪಣೆಯ ಮೇರೆಗೆ ಆ ಕಪ್ಪವನ್ನೆಲ್ಲ ಯೆಹೋವನಿಗೆ ಕೊಡುಗೆಯಾಗಿ ಯಾಜಕನಾದ ಎಲ್ಲಾಜಾರನಿಗೆ ಕೊಟ್ಟನು.
42-43 ಮೋಶೆಯು ಜನರಿಗೆ ಸೇರಿದ ಅರ್ಧಭಾಗವನ್ನು ಎಣಿಸಿದನು. ಯುದ್ಧಕ್ಕೆ ಹೋಗಿದ್ದ ಸೈನಿಕರಿಂದ ಮೋಶೆಯು ತೆಗೆದುಕೊಂಡ ಅರ್ಧಭಾಗ: ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳು, 44 ಮೂವತ್ತಾರು ಸಾವಿರ ದನಕರುಗಳು, 45 ಮೂವತ್ತು ಸಾವಿರದ ಐನೂರು ಕತ್ತೆಗಳು 46 ಮತ್ತು ಹದಿನಾರು ಸಾವಿರ ಸ್ತ್ರೀಯರು. 47 ಇಸ್ರೇಲ್ ಜನರಿಗೆ ದೊರಕಿದ ಅರ್ಧ ಭಾಗದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಮೋಶೆ ಐವತ್ತನೆ ಒಂದು ಭಾಗವನ್ನು ತೆಗೆದುಕೊಂಡು ಯೆಹೋವನ ಪವಿತ್ರಗುಡಾರವನ್ನು ನೋಡಿಕೊಳ್ಳುತ್ತಿದ್ದ ಲೇವಿಯರಿಗೆ ಕೊಟ್ಟನು.
48 ಆಗ ದಂಡಿನ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು, 49 “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಸೈನಿಕರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ತಿಳಿಯಿತು. 50 ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ ಮುಂತಾದವುಗಳನ್ನು ನಮ್ಮ ಶುದ್ಧೀಕರಣಕ್ಕಾಗಿ ಯೆಹೋವನಿಗೆ ತಂದಿದ್ದೇವೆ” ಅಂದರು.
51 ಅವರು ಕೊಟ್ಟ ಎಲ್ಲಾ ಚಿನ್ನದ ಒಡವೆಗಳನ್ನು ಮೋಶೆಯು ಮತ್ತು ಯಾಜಕನಾದ ಎಲ್ಲಾಜಾರನು ತೆಗೆದುಕೊಂಡರು. ಅವುಗಳನ್ನು ಕುಶಲತೆಯಿಂದ ತಯಾರಿಸಿದ ಒಡವೆಗಳಾಗಿದ್ದವು. 52 ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಯೆಹೋವನಿಗೆ ಕೊಟ್ಟ ಚಿನ್ನವು ನಾನೂರಿಪ್ಪತ್ತು ಪೌಂಡು ತೂಕವಿತ್ತು. 53 ಉಳಿದದ್ದನ್ನು ಸೈನಿಕರು ತಮಗಾಗಿ ಇಟ್ಟುಕೊಂಡರು. 54 ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಕೊಟ್ಟ ಚಿನ್ನವನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ತೆಗೆದುಕೊಂಡು ದೇವದರ್ಶನಗುಡಾರದಲ್ಲಿ ಇಟ್ಟರು. ಇಸ್ರೇಲರ ವಿಷಯದಲ್ಲಿ ಜ್ಞಾಪಕಾರ್ಥವಾಗಿ ಇದು ಯೆಹೋವನ ಸನ್ನಿಧಿಯಲ್ಲಿ ಇಡಲ್ಪಟ್ಟಿತು.