11
ಯೆಹೋವನು ಮೋಸದ ತಕ್ಕಡಿಗಳನ್ನು ದ್ವೇಷಿಸುತ್ತಾನೆ. ನ್ಯಾಯವಾದ ತಕ್ಕಡಿಗಳಾದರೋ ಆತನನ್ನು ಸಂತೋಷಗೊಳಿಸುತ್ತವೆ.
ದುರಾಭಿಮಾನಿಗಳು ನಾಚಿಕೆಗೀಡಾಗುವರು; ದೀನರು ಜ್ಞಾನಿಗಳಾಗಿದ್ದಾರೆ.
ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ. ಕೆಡುಕರು ತಮ್ಮ ಮೋಸಕೃತ್ಯಗಳ ಮೂಲಕ ತಮ್ಮನ್ನೇ ನಾಶಮಾಡಿಕೊಳ್ಳುತ್ತಾರೆ.
ದೇವರು ಜನರಿಗೆ ನ್ಯಾಯತೀರ್ಪು ಮಾಡುವ ದಿನದಲ್ಲಿ, ಹಣದಿಂದ ಯಾವ ಲಾಭವೂ ಇಲ್ಲ. ಆದರೆ ನೀತಿಯು ಜನರನ್ನು ಮರಣದಿಂದ ಕಾಪಾಡುತ್ತದೆ.
ನೀತಿವಂತನು ಯಥಾರ್ಥವಾಗಿದ್ದರೆ ಅವನ ಜೀವನವು ಸರಾಗವಾಗಿರುವುದು. ಆದರೆ ಕೆಡುಕನು ತನ್ನ ಕೆಟ್ಟಕಾರ್ಯಗಳಿಂದ ನಾಶವಾಗುವನು.
ನೀತಿಯು ಯಥಾರ್ಥವಂತರನ್ನು ಕಾಪಾಡುತ್ತದೆ. ಆದರೆ ವಂಚಕರು ತಮ್ಮ ಆಸೆಗಳಿಂದಲೇ ಸಿಕ್ಕಿಬೀಳುವರು.
ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳೆಲ್ಲಾ ನಾಶವಾಗುತ್ತವೆ. ಅವನ ಅಪೇಕ್ಷೆಗಳೆಲ್ಲಾ ಕೊನೆಗೊಳ್ಳುತ್ತವೆ.
ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. ಅವನ ಬದಲಾಗಿ ದುಷ್ಟನು ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವನು.
ಕೆಡುಕನು ತನ್ನ ಮಾತಿನಿಂದಲೇ ಬೇರೆಯವರನ್ನು ನಾಶಪಡಿಸುತ್ತಾನೆ. ಸಜ್ಜನರಿಗಾದರೋ ಅವರ ತಿಳುವಳಿಕೆಯೇ ರಕ್ಷಣೆ ನೀಡುವುದು.
10 ಸಜ್ಜನರಿಗೆ ಜಯವಾದರೆ ನಗರಕ್ಕೆಲ್ಲ ಸಂತಸ. ಕೆಡುಕರು ನಾಶವಾದರೆ ಜನರು ಜಯಘೋಷ ಮಾಡುವರು.
11 ಪಟ್ಟಣವು ತನ್ನಲ್ಲಿ ವಾಸವಾಗಿರುವ ಯಥಾರ್ಥವಂತರ ಆಶೀರ್ವಾದದಿಂದ ಏಳಿಗೆ ಹೊಂದುವುದು. ಕೆಡುಕರ ಮಾತುಗಳು ಪಟ್ಟಣವನ್ನು ನಾಶಮಾಡುತ್ತವೆ.
12 ಬುದ್ಧಿಹೀನನು ಇತರರನ್ನು ಹೀನೈಸುತ್ತಾನೆ. ಆದರೆ ಬುದ್ಧಿವಂತನು ಮೌನವಾಗಿರುತ್ತಾನೆ.
13 ಗುಟ್ಟು ರಟ್ಟುಮಾಡುವವನನ್ನು ನಂಬಲಾಗದು. ಆದರೆ ನಂಬಿಗಸ್ತನು ವಿಷಯಗಳನ್ನು ರಹಸ್ಯವಾಗಿಡುವನು.
14 ಜ್ಞಾನದ ಮಾರ್ಗದರ್ಶನವಿಲ್ಲದೆ ದೇಶವು ಬಿದ್ದು ಹೋಗುವುದು. ಆದರೆ ಒಳ್ಳೆಯ ಸಲಹೆಗಾರರನ್ನು ಹೊಂದಿರುವ ದೇಶವು ಕ್ಷೇಮವಾಗಿರುವುದು.
15 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾಗಿದ್ದರೆ ಕಷ್ಟಕ್ಕೀಡಾಗಿರುವೆ; ನೀನು ಜಾಮೀನಾಗಿಲ್ಲದಿದ್ದರೆ ಕ್ಷೇಮವಾಗಿರುವೆ.
16 ದಯೆಯುಳ್ಳ ಸ್ತ್ರೀಯು ಗೌರವವನ್ನು ಪಡೆಯುವಳು. ಬಲಾತ್ಕಾರಿಗಳಾದ ಗಂಡಸರು ಕೇವಲ ಹಣವನ್ನು ಗಳಿಸುವರು.
17 ದಯೆಯುಳ್ಳವನು ತನಗೆ ಲಾಭ ಮಾಡಿಕೊಳ್ಳುವನು. ಕ್ರೂರಿಯು ತನಗೇ ಕೇಡುಮಾಡಿಕೊಳ್ಳುವನು.
18 ಕೆಡುಕನು ತಾತ್ಕಾಲಿಕವಾದ ಲಾಭವನ್ನು ಮಾಡಿಕೊಳ್ಳುತ್ತಾನೆ. ಆದರೆ ನೀತಿವಂತನು ಯೋಗ್ಯವಾದ ಪ್ರತಿಫಲವನ್ನು ಹೊಂದಿಕೊಳ್ಳುವನು.
19 ನೀತಿವಂತನು ನಿಜವಾಗಿಯೂ ಜೀವವನ್ನು ಹೊಂದಿಕೊಳ್ಳುವನು, ಆದರೆ ಕೆಡುಕನನ್ನು ಹಿಂಬಾಲಿಸುತ್ತಾ ಹೋಗುವವನು ಸಾವಿಗೀಡಾಗುವನು.
20 ಕೆಡುಕರು ಯೆಹೋವನಿಗೆ ಅಸಹ್ಯರು. ಆದರೆ ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.
21 ದುಷ್ಟರಿಗೆ ದಂಡನೆ ಖಂಡಿತ. ಶಿಷ್ಟರಿಗೆ ಬಿಡುಗಡೆ ನಿಶ್ಚಯ.
22 ಅವಿವೇಕಳಿಗೆ ಸೌಂದರ್ಯವು ಹಂದಿಯ ಮೂಗಿನಲ್ಲಿರುವ ಸುಂದರವಾದ ಚಿನ್ನದ ಮೂಗುತಿಯಂತಿರುವುದು.
23 ಒಳ್ಳೆಯವರ ಬಯಕೆ ಅವರನ್ನು ಕ್ಷೇಮಕ್ಕೆ ನಡೆಸುತ್ತದೆ. ಆದರೆ ದುಷ್ಟರ ಆಕಾಂಕ್ಷೆ ಅವರನ್ನು ದಂಡನೆಗೆ ನಡೆಸುತ್ತದೆ.
24 ಉಚಿತವಾಗಿ ಕೊಡುವವನು ಅದಕ್ಕಿಂತಲೂ ಹೆಚ್ಚುಗಳಿಸುವನು. ಆದರೆ ಕೊಡಲೊಲ್ಲದವನು ಬಡವನಾಗುವನು.
25 ಉದಾರಿಯು ಅಭಿವೃದ್ಧಿಯಾಗುವನು. ಬೇರೆಯವರಿಗೆ ಸಹಾಯಮಾಡುವವನು ಸಹಾಯವನ್ನು ಹೊಂದಿಕೊಳ್ಳುವನು.
26 ಧಾನ್ಯವನ್ನು ಮಾರದೆ ಕೂಡಿಟ್ಟುಕೊಳ್ಳುವವನನ್ನು ಜನರು ಶಪಿಸುವರು. ಧಾನ್ಯ ಮಾರುವವನನ್ನು ಜನರು ಆಶೀರ್ವದಿಸುವರು.
27 ಒಳ್ಳೆಯದನ್ನು ಮಾಡುವವನನ್ನು ಜನರು ಗೌರವಿಸುವರು. ಕೇಡನ್ನು ಮಾಡುವವನಿಗೆ ಕೇವಲ ಕೇಡೇ ಆಗುವುದು.
28 ಐಶ್ವರ್ಯದ ಮೇಲೆ ಭರವಸೆಯಿಟ್ಟಿರುವವನು ಎಲೆಯಂತೆ ಉದುರಿಹೋಗುವನು. ಆದರೆ ಸದ್ದರ್ಮಿಯು ಚಿಗುರಿದ ಎಲೆಯಂತೆ ಬೆಳೆಯುವನು.
29 ತನ್ನ ಕುಟುಂಬಕ್ಕೆ ತೊಂದರೆ ಕೊಡುವವನಿಗೆ ಆಸ್ತಿಯು ದೊರೆಯುವುದಿಲ್ಲ. ಮೂಢನು ಬಲವಂತಕ್ಕೊಳಗಾಗಿ ಜ್ಞಾನಿಯ ಸೇವೆ ಮಾಡಬೇಕಾಗುವುದು.
30 ನೀತಿವಂತನ ಕಾರ್ಯಗಳು ಜೀವವುಳ್ಳ ಮರಗಳಂತಿವೆ. ಜ್ಞಾನಿಯು ಆತ್ಮಗಳನ್ನು ಗೆದ್ದುಕೊಳ್ಳುವನು.
31 ಶಿಷ್ಟರು ಭೂಮಿಯ ಮೇಲೆ ಪ್ರತಿಫಲವನ್ನು ಹೊಂದುವುದಾದರೆ ಕೆಡುಕರು ಸಹ ತಮಗೆ ಬರತಕ್ಕ ದಂಡನೆಯನ್ನು ಹೊಂದುವುದು ನಿಶ್ಚಯ.