28
ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡಿ ಹೋಗುವನು. ಆದರೆ ಒಳ್ಳೆಯವನು ಸಿಂಹದಂತೆ ಧೀರನಾಗಿರುವನು.
ದೇಶದಲ್ಲಿ ದಂಗೆಯೇಳುತ್ತಲೇ ಇದ್ದರೆ ಅಧಿಪತಿಗಳು ಬದಲಾಗುತ್ತಲೇ ಇರುವರು. ಜ್ಞಾನಿಯೂ ಅನುಭವಸ್ಥನೂ ಆಗಿರುವ ಅಧಿಪತಿಯ ದೇಶ ಸ್ಥಿರವಾಗಿರುವುದು.
ಬಡಜನರನ್ನು ದರೋಡೆಮಾಡುವ ಬಡವನು ಬೆಳೆಯನ್ನು ನಾಶಮಾಡುವ ಬಿರುಸಾದ ಮಳೆಯಂತಿರುವನು.
ನೀನು ನ್ಯಾಯಪ್ರಮಾಣಕ್ಕೆ ವಿಧೇಯನಾಗದಿದ್ದರೆ ಕೆಡುಕರ ಪರವಾಗಿರುವೆ. ನೀನು ನ್ಯಾಯಪ್ರಮಾಣಕ್ಕೆ ವಿಧೇಯನಾಗಿದ್ದರೆ ಕೆಡುಕರಿಗೆ ವಿರೋಧವಾಗಿರುವೆ.
ಕೆಡುಕರು ನ್ಯಾಯವನ್ನು ಅರ್ಥಮಾಡಿಕೊಳ್ಳಲಾರರು; ಯೆಹೋವನನ್ನು ಪ್ರೀತಿಸುವ ಜನರಾದರೋ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವರು.
ಮೋಸದಿಂದ ಐಶ್ವರ್ಯವಂತರಾಗುವುದಕ್ಕಿಂತ ಯಥಾರ್ಥವಾಗಿದ್ದು ಬಡವರಾಗಿರುವುದೇ ಮೇಲು.
ನ್ಯಾಯಪ್ರಮಾಣಕ್ಕೆ ವಿಧೇಯನಾಗುವವನು ಜಾಣ. ಅಯೋಗ್ಯರ ಸ್ನೇಹಿತನು ತನ್ನ ತಂದೆಗೇ ಅವಮಾನ ತರುವನು.
ಬಡವರಿಗೆ ಮೋಸಮಾಡಿ ಗಳಿಸಿದ ಐಶ್ವರ್ಯ ಕಳೆದು ಹೋಗುವುದು; ಬಡವರಿಗೆ ದಯೆ ತೋರುವವನಿಗೆ ಅದು ದೊರೆಯುವುದು.
ದೇವರ ಉಪದೇಶವನ್ನು ತಿರಸ್ಕರಿಸುವವನ ಪ್ರಾರ್ಥನೆಯನ್ನು ದೇವರೂ ತಿರಸ್ಕರಿಸುವನು.
10 ಯಥಾರ್ಥವಂತರನ್ನು ದಾರಿತಪ್ಪಿಸಿ ಅಪಾಯದ ಮಾರ್ಗದಲ್ಲಿ ನಡೆಸುವವನು ತಾನು ತೋಡಿದ ಗುಂಡಿಗೆ ತಾನೇ ಬೀಳುವನು.
11 ಐಶ್ವರ್ಯವಂತನು ತಾನೇ ಬುದ್ಧಿವಂತನೆಂದು ಭಾವಿಸುತ್ತಾನೆ. ವಿವೇಕಿಯಾದ ಬಡವನಾದರೊ ಸತ್ಯವನ್ನು ಕಾಣಬಲ್ಲನು.
12 ಒಳ್ಳೆಯವರು ನಾಯಕರಾದಾಗ ಎಲ್ಲರಿಗೂ ಸಂತೋಷ. ಆದರೆ ಕೆಡುಕನು ಅಧಿಪತಿಯಾದಾಗ ಎಲ್ಲರೂ ಅಡಗಿಕೊಳ್ಳುವರು.
13 ಪಾಪಗಳನ್ನು ಅಡಗಿಸಿಕೊಳ್ಳುವವನಿಗೆ ಯಶಸ್ಸು ಇಲ್ಲವೇ ಇಲ್ಲ. ತನ್ನ ಪಾಪವನ್ನು ಅರಿಕೆಮಾಡಿ ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.
14 ಕೇಡನ್ನು ಮಾಡಲು ಭಯಪಡುವವನು ಆಶೀರ್ವಾದ ಹೊಂದುವನು. ಆದರೆ ಮೊಂಡನು ಆಪತ್ತಿಗೆ ಸಿಕ್ಕಿಬೀಳುವನು.
15 ಬಲಹೀನರನ್ನು ಆಳುವ ಕೆಡುಕನು ಗರ್ಜಿಸುವ ಸಿಂಹದಂತಿರುವನು; ಮೇಲೆರಗಲಿರುವ ಕರಡಿಯಂತಿರುವನು.
16 ವಿವೇಕವಿಲ್ಲದ ಅಧಿಪತಿ ತನ್ನ ಅಧೀನದಲ್ಲಿರುವವರಿಗೆ ಕೇಡುಮಾಡುವನು. ಅನ್ಯಾಯದ ಹಣವನ್ನು ತೆಗೆದುಕೊಳ್ಳದ ಅಧಿಪತಿ ಬಹುಕಾಲ ಆಳುವನು.
17 ಕೊಲೆಮಾಡಿದ ಅಪರಾಧಿಯು ತನ್ನ ಸಮಾಧಿಗೆ ಓಡಿಹೋಗಲಿ. ಅವನಿಗೆ ಸಹಾಯಮಾಡಬೇಡ.
18 ಒಳ್ಳೆಯವನು ಕ್ಷೇಮವಾಗಿರುವನು; ಕೆಡುಕನಾದರೋ ಇದ್ದಕ್ಕಿದ್ದಂತೆ ಹಾಳಾಗುವನು.
19 ಕಷ್ಟಪಟ್ಟು ದುಡಿಯುವವನಿಗೆ ಬೇಕಾದಷ್ಟು ಆಹಾರವಿರುವುದು. ನನಸಾಗದ ಕನಸುಗಳನ್ನೇ ಆಲೋಚಿಸಿಕೊಂಡಿರುವವನು ಬಡವನಾಗಿಯೇ ಇರುವನು.
20 ನಂಬಿಗಸ್ತನು ಬಹಳವಾಗಿ ಆಶೀರ್ವದಿಸಲ್ಪಡುವನು. ಐಶ್ವರ್ಯವಂತನಾಗುವುದಕ್ಕಾಗಿಯೇ ಪ್ರಯತ್ನಿಸುವವನು ದಂಡನೆ ಹೊಂದುವನು.
21 ಪಕ್ಷಪಾತ ತಪ್ಪು. ಕೆಲವರಾದರೋ ಒಂದು ತುಂಡು ರೊಟ್ಟಿಗಾಗಿಯೂ ತಪ್ಪು ಮಾಡುವರು.
22 ಜಿಪುಣನು ಐಶ್ವರ್ಯವಂತನಾಗಲು ಆತುರಪಡುವನು: ಆದರೆ ತಾನು ಬೇಗನೆ ಬಡವನಾಗಲಿರುವುದನ್ನು ಅವನು ಗ್ರಹಿಸಿಕೊಳ್ಳಲಾರನು.
23 ಗದರಿಸುವವನು ಸ್ವಲ್ಪಕಾಲದ ನಂತರ ಮುಖಸ್ತುತಿ ಮಾಡುವವನಿಗಿಂತಲೂ ಹೆಚ್ಚಾಗಿ ಗೌರವಿಸಲ್ಪಡುವನು.
24 ಕೆಲವರು ತಮ್ಮ ತಂದೆತಾಯಿಗಳಿಂದ ಕದ್ದುಕೊಂಡು, “ಅದು ತಪ್ಪಲ್ಲ” ಎಂದು ಹೇಳುವರು. ಆದರೆ ಆ ವ್ಯಕ್ತಿಯು ಮನೆಯೊಳಗೆ ನುಗ್ಗಿ ಸರ್ವಸ್ವವನ್ನು ನಾಶಮಾಡುವ ವ್ಯಕ್ತಿಯಂತೆಯೇ ಕೆಟ್ಟವನಾಗಿದ್ದಾನೆ.
25 ದುರಾಶೆಯುಳ್ಳವನು ಜಗಳಗಳನ್ನು ಎಬ್ಬಿಸುತ್ತಾನೆ. ಯೆಹೋವನಲ್ಲಿ ಭರವಸೆ ಇಡುವವನಾದರೋ ಅಭಿವೃದ್ಧಿ ಹೊಂದುವನು.
26 ಸ್ವಂತ ಆಲೋಚನೆಯ ಮೇಲೆ ಭರವಸೆ ಇಡುವವನು ಮೂರ್ಖನಾಗಿದ್ದಾನೆ. ಜ್ಞಾನಮಾರ್ಗದಲ್ಲಿ ನಡೆಯುವವನು ಸುರಕ್ಷಿತನಾಗಿರುವನು.
27 ಬಡವರಿಗೆ ಕೊಡುವವನು ತನಗೆ ಅಗತ್ಯವಾದ ಪ್ರತಿಯೊಂದನ್ನೂ ಹೊಂದಿಕೊಳ್ಳುವನು. ಬಡವರಿಗೆ ಸಹಾಯಮಾಡದವನಿಗೆ ಅನೇಕ ಶಾಪಗಳು ಬರುತ್ತವೆ.
28 ಕೆಡುಕನು ಅಧಿಕಾರಕ್ಕೆ ಬಂದರೆ, ಜನರೆಲ್ಲರೂ ಅಡಗಿಕೊಳ್ಳುವರು. ಕೆಡುಕನು ಸೋತುಹೋದಾಗ ಒಳ್ಳೆಯವರು ಮತ್ತೆ ಆಳುವರು.