17
ದಾವೀದನಿಗೆ ದೇವರ ವಾಗ್ದಾನ
ದಾವೀದನು ತನ್ನ ಮನೆಗೆ ಹಿಂತಿರುಗಿದ ಬಳಿಕ ಪ್ರವಾದಿಯಾದ ನಾತಾನನಿಗೆ, “ನಾನು ದೇವದಾರು ಮರಗಳಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿರುವಾಗ ದೇವರ ಒಡಂಬಡಿಕೆಯ ಪೆಟ್ಟಿಗೆಯು ಗುಡಾರದೊಳಗೆ ಇಡಲ್ಪಟ್ಟಿದೆ. ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿರುವೆ” ಎಂದನು.
ಅದಕ್ಕೆ ನಾತಾನನು, “ನಿನ್ನ ಮನಸ್ಸಿಗೆ ಬಂದಂತೆ ಮಾಡು. ದೇವರು ನಿನ್ನೊಂದಿಗಿದ್ದಾನೆ” ಎಂದನು.
ಆದರೆ ಆ ರಾತ್ರಿ ದೇವರ ಮಾತು ನಾತಾನನಿಗೆ ಬಂತು. ದೇವರು ಅವನಿಗೆ,
 
“ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ನನಗೋಸ್ಕರ ಆಲಯವನ್ನು ಕಟ್ಟುವವನು ನೀನಲ್ಲ. 5-6 ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿದಂದಿನಿಂದ ಈ ದಿವಸದ ತನಕ ನಾನು ಮನೆಯಲ್ಲಿ ವಾಸವಾಗಿರಲಿಲ್ಲ. ನಾನು ಗುಡಾರದಲ್ಲಿಯೇ ಇದ್ದುಕೊಂಡು ಸಂಚರಿಸುತ್ತಿದ್ದೆನು. ಇಸ್ರೇಲರ ನಾಯಕರಾಗುವದಕ್ಕೆ ನಾನು ಕೆಲವರನ್ನು ಆರಿಸಿಕೊಂಡಿದ್ದೇನೆ. ಆ ನಾಯಕರು ನನ್ನ ಜನರಿಗೆ ಕುರುಬರಂತಿದ್ದಾರೆ. ಅವರೊಂದಿಗೆ ನಾನು ಬೇರೆಬೇರೆ ಸ್ಥಳಗಳಿಗೆ ಸಂಚರಿಸುತ್ತಿದ್ದಾಗ ನಾನೆಂದೂ ನನಗೊಂದು ಆಲಯವನ್ನು ದೇವದಾರು ಮರದಿಂದ ಕಟ್ಟಲು ಕೇಳಿಕೊಂಡಿರಲಿಲ್ಲ.’
“ನನ್ನ ಸೇವಕನಾದ ದಾವೀದನಿಗೆ ಹೇಳು: ಸರ್ವಶಕ್ತನಾದ ದೇವರು ಹೀಗೆನ್ನುತ್ತಾನೆ: ‘ಕುರಿಗಳನ್ನು ಮೇಯಿಸುತ್ತಿದ್ದ ನಿನ್ನನ್ನು ನಾನು ಆರಿಸಿಕೊಂಡೆನು; ನನ್ನ ಜನರಾದ ಇಸ್ರೇಲರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನು. ನೀನು ಹೋದಲ್ಲೆಲ್ಲಾ ನಿನ್ನೊಂದಿಗೆ ನಾನಿದ್ದೆನು; ನಿನ್ನ ಮುಂದೆ ಹೋಗಿ ನಿನ್ನ ವೈರಿಗಳನ್ನು ಸಾಯಿಸಿದೆನು. ಈಗ ನಾನು ನಿನ್ನನ್ನು ಲೋಕದಲ್ಲಿ ಎಲ್ಲರಿಗಿಂತಲೂ ಪ್ರಸಿದ್ಧಿ ಹೊಂದುವಂತೆ ಮಾಡುವೆನು. ನಾನು ಈ ದೇಶವನ್ನು ನನ್ನ ಜನರಾದ ಇಸ್ರೇಲರಿಗೆ ಕೊಡುವೆನು; ಅವರು ಮರಗಳನ್ನು ನೆಟ್ಟು ಅದರ ನೆರಳಡಿಯಲ್ಲಿ ಸಮಾಧಾನದಿಂದ ವಾಸಿಸುವರು; ಅವರನ್ನು ಯಾರೂ ಬಾಧಿಸರು. ದುಷ್ಟರು ಮುಂಚಿನಂತೆ ಅವರಿಗೆ ಕೇಡುಮಾಡರು. 10 ಅವರನ್ನು ಸಂರಕ್ಷಿಸಲು ನಾನು ನಾಯಕರನ್ನು ಎಬ್ಬಿಸುವೆನು; ನಾನು ನಿನ್ನ ವೈರಿಗಳನ್ನೆಲ್ಲಾ ಸೋಲಿಸಿಬಿಡುವೆನು.
“ ‘ನಿನ್ನ ಮನೆತನವನ್ನು ನಾನು ಕಟ್ಟುವೆನು. 11 ನೀನು ಸತ್ತು ನಿನ್ನ ಪೂರ್ವಿಕರ ಬಳಿ ಸೇರಿದಾಗ ನಾನು ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಮಾಡುವೆನು. ನಾನು ಅವನ ರಾಜ್ಯವನ್ನು ಸ್ಥಿರಪಡಿಸುವೆನು. 12 ನಿನ್ನ ಮಗನು ನನಗೆ ಆಲಯವನ್ನು ಕಟ್ಟುವನು. ನಿನ್ನ ಮಗನ ವಂಶವು ಸದಾಕಾಲಕ್ಕೂ ಇಸ್ರೇಲ್ ಜನಾಂಗವನ್ನು ಆಳುವದು. 13 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಸೌಲನು ರಾಜನಾಗಿದ್ದನು. ಆದರೆ ನಾನು ಅವನನ್ನು ತೆಗೆದುಹಾಕಿದೆನು. ಆದರೆ ನನ್ನ ಕೃಪೆ ನಿನ್ನ ಮಗನಿಂದ ತೊಲಗಿಹೋಗುವದಿಲ್ಲ. 14 ನನ್ನ ಮನೆಗೂ ನನ್ನ ರಾಜ್ಯಕ್ಕೂ ಅವನನ್ನು ನಿತ್ಯದ ರಾಜನನ್ನಾಗಿ ಮಾಡುವೆನು; ಅವನ ಆಳ್ವಿಕೆಯು ನಿರಂತರವಾಗಿರುವುದು.’ ”
 
15 ನಾತಾನನು ದಾವೀದನಿಗೆ ತನಗೆ ದೊರೆತ ದರ್ಶನವನ್ನು ಮತ್ತು ದೇವರು ತನಗೆ ತಿಳಿಸಿದ ಎಲ್ಲಾ ಮಾತುಗಳನ್ನು ತಿಳಿಸಿದನು.
ದಾವೀದನ ಪ್ರಾರ್ಥನೆ
16 ಆಗ ದಾವೀದನು ಪವಿತ್ರಗುಡಾರಕ್ಕೆ ಹೋಗಿ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು,
 
“ದೇವರಾದ ಯೆಹೋವನೇ, ನೀನು ನನ್ನನ್ನೂ ನನ್ನ ಕುಟುಂಬವನ್ನೂ ಎಷ್ಟೋ ಆಶೀರ್ವದಿಸಿರುವೆ. ನೀನು ಯಾಕೆ ಹೀಗೆ ಮಾಡಿದಿಯೊ ನನಗೆ ತಿಳಿಯುತ್ತಿಲ್ಲ. 17 ನನ್ನ ವಂಶದವರ ವಿಷಯದಲ್ಲಿಯೂ ನೀನು ವಾಗ್ದಾನ ಮಾಡಿರುವೆ. ದೇವರೇ, ಯೆಹೋವನೇ, ನೀನು ನನ್ನನ್ನು ಒಬ್ಬ ಮಹಾವ್ಯಕ್ತಿಯೋ ಎಂಬಂತೆ ಪರಿಗಣಿಸಿರುವೆ. 18 ನೀನು ನನಗೆಷ್ಟೋ ಸಹಾಯ ಮಾಡಿರುವೆ. ನಾನು ಕೇವಲ ನಿನ್ನ ಸೇವಕನಷ್ಟೇ. 19 ಯೆಹೋವನೇ, ನಿನ್ನ ಚಿತ್ತಕ್ಕನುಸಾರವಾಗಿ ಇಂಥ ಮಹತ್ಕಾರ್ಯವನ್ನು ನೀನು ನನಗೋಸ್ಕರ ಮಾಡಿರುವೆ. 20 ಯೆಹೋವನೇ, ನಿನಗೆ ಸಮಾನರು ಬೇರೆ ಯಾರೂ ಇಲ್ಲ. ನಿನ್ನ ಹೊರತು ಬೇರೆ ದೇವರಿಲ್ಲ. ಇಂಥ ಮಹತ್ಕಾರ್ಯ ಮಾಡುವ ದೇವರ ಬಗ್ಗೆ ನಾವು ಕೇಳಿಯೇ ಇಲ್ಲ. 21 ಇಸ್ರೇಲಿಗೆ ಸಮಾನವಾದ ಜನಾಂಗ ಭೂಲೋಕದಲ್ಲಿ ಎಲ್ಲಿದೆ? ನೀನು ಇಂಥ ಅದ್ಭುತಕಾರ್ಯಗಳನ್ನು ಮಾಡಿರುವುದು ಇಸ್ರೇಲ್ ಜನಾಂಗಕ್ಕಾಗಿಯೇ. ನೀನು ನಮ್ಮನ್ನು ಈಜಿಪ್ಟಿನಿಂದ ಹೊರತಂದು ಸ್ವತಂತ್ರರನ್ನಾಗಿ ಮಾಡಿದೆ. ಹೀಗೆ ನೀನು ನಿನ್ನ ಹೆಸರನ್ನು ಪ್ರಖ್ಯಾತಿಮಾಡಿದೆ. ನೀನು ನಿನ್ನ ಜನರ ಮುಂದೆ ಹೋಗುತ್ತಾ, ಅನ್ಯಜನರು ತಮ್ಮ ದೇಶವನ್ನು ಬಿಟ್ಟುಹೋಗುವಂತೆ ಮಾಡಿದೆ. 22 ಇಸ್ರೇಲರನ್ನು ಸದಾಕಾಲಕ್ಕೂ ನಿನ್ನ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನೇ ಅವರಿಗೆ ದೇವರಾದೆ!
23 “ಯೆಹೋವನೇ, ಈಗ ನೀನು ನನಗೂ ನನ್ನ ಸಂತತಿಗೂ ಈ ವಾಗ್ದಾನವನ್ನು ಮಾಡಿರುವೆ. ಆ ವಾಗ್ದಾನವನ್ನು ಶಾಶ್ವತಗೊಳಿಸು; ಅದು ಸದಾಕಾಲಕ್ಕೂ ಸ್ಥಿರವಾಗಿರಲಿ. 24 ನಿನ್ನ ವಾಗ್ದಾನವನ್ನು ನೆರವೇರಿಸು. ಆಗ ಜನರು, ‘ಸರ್ವಶಕ್ತನಾದ ಯೆಹೋವನು ಇಸ್ರೇಲರ ದೇವರೂ ರಕ್ಷಕನೂ ಆಗಿದ್ದಾನೆ’ ಎಂದು ಹೇಳುವರು. ನಾನು ನಿನ್ನ ಸೇವಕನಾಗಿದ್ದೇನೆ. ನನ್ನ ಕುಟುಂಬವು ಬಲಿಷ್ಠವಾಗಿದ್ದು ನಿನ್ನ ಸೇವೆಯನ್ನು ಮುಂದುವರಿಸುವಂತೆ ಕೃಪೆಯನ್ನು ಅನುಗ್ರಹಿಸು.
25 “ನನ್ನ ದೇವರೇ, ನಿನ್ನ ಸೇವಕನಾದ ನನ್ನೊಂದಿಗೆ ನೀನು ಮಾತನಾಡಿದೆ. ನೀನು ನನ್ನ ಕುಟುಂಬವನ್ನು ಸ್ಥಿರವಾಗಿ ಕಟ್ಟುವೆನೆಂದು ವಾಗ್ದಾನ ಮಾಡಿದೆ. ಆದ್ದರಿಂದ ನಾನು ಧೈರ್ಯದಿಂದ ನಿನ್ನ ಸಂಗಡ ಮಾತನಾಡುತ್ತಿದ್ದೇನೆ; ನಿನ್ನ ವಾಗ್ದಾನವನ್ನು ನೆರವೇರಿಸು ಎಂದು ಕೇಳಿಕೊಳ್ಳುತ್ತಿದ್ದೇನೆ. 26 ಯೆಹೋವನೇ, ನೀನೇ ದೇವರು. ಸ್ವತಃ ನೀನಾಗಿಯೇ ನನಗೆ ಇಂಥಾ ಒಳ್ಳೆಯ ವಾಗ್ದಾನಗಳನ್ನು ಮಾಡಿರುವೆ. 27 ನನ್ನ ಸಂತತಿಯವರನ್ನು ಆಶೀರ್ವದಿಸಿ ನಿನ್ನ ಕರುಣೆಯನ್ನು ತೋರಿಸಿದೆ. ನನ್ನ ಸಂತತಿಯವರು ಸದಾಕಾಲ ನಿನ್ನ ಸೇವೆಮಾಡುತ್ತಾರೆಂದು ನೀನು ವಾಗ್ದಾನ ಮಾಡಿರುವೆ. ಯೆಹೋವನೇ, ನೀನಾಗಿಯೇ ನನ್ನ ಸಂತತಿಯವರನ್ನು ಆಶೀರ್ವದಿಸಿದ್ದರಿಂದ ನನ್ನ ಸಂತತಿಯವರು ಸದಾಕಾಲಕ್ಕೂ ಆಶೀರ್ವಾದ ಹೊಂದಿಕೊಳ್ಳುವರು!” ಎಂದು ಪ್ರಾರ್ಥಿಸಿದನು.