13
ಎರಡು ಪ್ರಾಣಿಗಳು
ನಂತರ ಸಮುದ್ರದಿಂದ ಒಂದು ಮೃಗವು ಹೊರಗೆ ಬರುತ್ತಿರುವುದನ್ನು ನಾನು ನೋಡಿದೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದವು. ಅದರ ಪ್ರತಿಯೊಂದು ಕೊಂಬಿನ ಮೇಲೆ ಒಂದೊಂದು ಕಿರೀಟವಿತ್ತು. ಪ್ರತಿಯೊಂದು ತಲೆಯ ಮೇಲೂ ದೇವದೂಷಣೆ ನಾಮಗಳನ್ನು ಬರೆಯಲಾಗಿತ್ತು. ಈ ಮೃಗವು ನೋಡಲು ಚಿರತೆ ಯಂತಿತ್ತು. ಅದರ ಪಾದಗಳು ಕರಡಿಯ ಪಾದಗಳಂತಿದ್ದವು. ಅದರ ಬಾಯಿಯು ಸಿಂಹದ ಬಾಯಿಯಂತಿತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನು, ತನ್ನ ಸಿಂಹಾಸನವನ್ನು ಮತ್ತು ಅಧಿಕವಾದ ಅಧಿಕಾರವನ್ನು ನೀಡಿತು.
ಮೃಗದ ತಲೆಗಳಲ್ಲಿ ಒಂದು ತಲೆಯು ಗಾಯಗೊಂಡು ಸತ್ತಂತೆ ಕಾಣುತ್ತಿತ್ತು. ಆದರೆ ಮರಣಕರವಾದ ಈ ಗಾಯವನ್ನು ವಾಸಿಮಾಡಲಾಯಿತು. ಈ ಲೋಕದಲ್ಲಿದ್ದ ಜನರೆಲ್ಲರೂ ಆಶ್ಚರ್ಯಗೊಂಡು ಆ ಮೃಗವನ್ನು ಹಿಂಬಾಲಿಸಿದರು. ಆ ಘಟಸರ್ಪವು ತನ್ನ ಶಕ್ತಿಯನ್ನೆಲ್ಲಾ ಆ ಮೃಗಕ್ಕೆ ನೀಡಿದ್ದರಿಂದ ಜನರೆಲ್ಲರೂ ಆ ಸರ್ಪವನ್ನೂ ಆ ಮೃಗವನ್ನೂ ಆರಾಧಿಸಿ, “ಮೃಗಕ್ಕಿಂತಲೂ ಅಧಿಕ ಬಲಶಾಲಿಗಳು ಯಾರಿದ್ದಾರೆ? ಅದರ ವಿರುದ್ಧ ಯಾರು ಹೋರಾಡಬಲ್ಲರು?” ಎಂದು ಹೇಳುತ್ತಿದ್ದರು.
ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡಲು ಅವಕಾಶ ನೀಡಲಾಯಿತು. ಆ ಮೃಗಕ್ಕೆ ಅದರ ಶಕ್ತಿಯನ್ನು ನಲವತ್ತೆರಡು ತಿಂಗಳ ಕಾಲ ಬಳಸಲು ಅವಕಾಶ ನೀಡಲಾಯಿತು. ಆ ಮೃಗವು ದೇವರಿಗೆ ಅಪಮಾನ ಮಾಡಲು ತನ್ನ ಬಾಯನ್ನು ತೆರೆಯಿತು. ಅಲ್ಲದೆ ದೇವರ ಹೆಸರಿನ ವಿರುದ್ಧವಾಗಿಯೂ ದೇವರು ವಾಸಿಸುವ ಸ್ಥಳದ ವಿರುದ್ಧವಾಗಿಯೂ ಪರಲೋಕದಲ್ಲಿ ಜೀವಿಸುವ ಜನರೆಲ್ಲರ ವಿರುದ್ಧವಾಗಿಯೂ ದೂಷಣೆ ಮಾಡಿತು. ದೇವರ ಪರಿಶುದ್ಧ ಜನರ ವಿರುದ್ಧ ಯುದ್ಧಮಾಡಿ, ಅವರನ್ನು ಸೋಲಿಸುವ ಶಕ್ತಿಯನ್ನು ಮೃಗಕ್ಕೆ ನೀಡಲಾಯಿತು. ಸಕಲ ಕುಲ, ಪ್ರಜೆ, ಭಾಷೆ ಮತ್ತು ಜನಾಂಗಗಳ ಮೇಲಿನ ಅಧಿಕಾರವನ್ನು ಆ ಮೃಗಕ್ಕೆ ಕೊಡಲಾಯಿತು. ಲೋಕದಲ್ಲಿ ವಾಸಿಸುವ ಜನರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ. ಲೋಕವು ಆರಂಭಗೊಂಡಂದಿನಿಂದಲೂ ಕೊಲ್ಲಲ್ಪಟ್ಟ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿಲ್ಲವೋ ಅವರೇ ಈ ಜನರು.
ಇವುಗಳನ್ನು ಕೇಳುವವನು ಗಮನವಿಟ್ಟು ಆಲಿಸಲಿ:
 
10 ಸೆರೆ ಒಯ್ಯುವವನು
ಸೆರೆ ಒಯ್ಯಲ್ಪಡುವನು.
ಕತ್ತಿಯಿಂದ ಕೊಲ್ಲುವವನು
ಕತ್ತಿಯಿಂದಲೇ ಕೊಲ್ಲಲ್ಪಡುವನು.
 
ಆದ್ದರಿಂದ ದೇವರ ಪರಿಶುದ್ಧ ಜನರು ತಾಳ್ಮೆಯನ್ನೂ ನಂಬಿಕೆಯನ್ನೂ ಹೊಂದಿರಬೇಕು.
11 ನಂತರ ಭೂಮಿಯಿಂದ ಹೊರಗೆ ಬರುತ್ತಿರುವ ಮತ್ತೊಂದು ಮೃಗವನ್ನು ನಾನು ನೋಡಿದೆನು. ಅದಕ್ಕೆ ಟಗರಿನಂತೆ ಎರಡು ಕೊಂಬುಗಳಿದ್ದವು. ಆದರೆ ಅದು ಘಟಸರ್ಪದಂತೆ ಮಾತಾಡುತ್ತಿತ್ತು. 12 ಈ ಮೃಗವು ಮೊದಲಿನ ಮೃಗದ ಅಧಿಕಾರವನ್ನೇ ಬಳಸುತ್ತದೆ. ಭೂಮಿಯ ಮೇಲೆ ವಾಸಿಸುವ ಜನರೆಲ್ಲರೂ ಮೊದಲಿನ ಮೃಗವನ್ನು ಆರಾಧಿಸುವಂತೆ ಮಾಡಲು ಅದು ತನ್ನ ಶಕ್ತಿಯನ್ನೆಲ್ಲಾ ಬಳಸುತ್ತದೆ. ಮರಣಕರವಾದ ಗಾಯದಿಂದ ಗುಣಮುಖವಾದದ್ದೇ ಮೊದಲನೆಯ ಮೃಗ. 13 ಈ ಎರಡನೆಯ ಮೃಗವು ಮಹಾ ಅದ್ಭುತಗಳನ್ನು ಮಾಡುತ್ತದೆ. ಅದು ಜನರ ಕಣ್ಣೆದುರಿನಲ್ಲಿಯೇ ಬೆಂಕಿಯನ್ನು ಆಕಾಶದಿಂದ ಭೂಮಿಗೆ ಸುರಿಸುತ್ತದೆ.
14 ಈ ಎರಡನೆಯ ಮೃಗವು ಅದ್ಭುತಗಳನ್ನು ಮಾಡಲು ತನಗೆ ನೀಡಿರುವ ಶಕ್ತಿಯಿಂದ ಭೂಮಿಯ ಮೇಲೆ ವಾಸಿಸುವ ಜನರನ್ನು ಮರುಳು ಗೊಳಿಸುತ್ತದೆ. ಮೊದಲನೆಯ ಮೃಗದ ಸೇವೆಯನ್ನು ಮಾಡಲು ಅದು ಈ ಅದ್ಭುತಗಳನ್ನು ಮಾಡುತ್ತದೆ. ಕತ್ತಿಯಿಂದ ಗಾಯಗೊಂಡಿದ್ದೂ ಸಾಯದೆ ಬದುಕಿದ ಮೊದಲನೆಯ ಮೃಗಕ್ಕೆ ಗೌರವ ತೋರಲು ವಿಗ್ರಹವನ್ನು ನಿರ್ಮಿಸುವಂತೆ ಅದು ಜನರಿಗೆ ಆಜ್ಞಾಪಿಸಿತು. 15 ಮೊದಲನೆಯ ಮೃಗದ ವಿಗ್ರಹಕ್ಕೆ ಜೀವ ಬರುವಂತೆ ಮಾಡುವ ಶಕ್ತಿಯನ್ನು ಎರಡನೆಯ ಮೃಗಕ್ಕೆ ಕೊಡಲಾಯಿತು. ಆಗ ಆ ವಿಗ್ರಹಕ್ಕೆ ಮಾತಾಡುವ ಶಕ್ತಿ ಬಂದಿತು. ಅದು ತನ್ನನ್ನು ಪೂಜಿಸದವರನ್ನೆಲ್ಲಾ ಕೊಲ್ಲುವುದಾಗಿ ಆಜ್ಞೆ ಹೊರಡಿಸಿತು. 16 ಎರಡನೆಯ ಮೃಗವು ಸಹ ಎಲ್ಲರನ್ನು ಅಂದರೆ ಚಿಕ್ಕವರನ್ನು, ದೊಡ್ಡವರನ್ನು, ಶ್ರೀಮಂತರನ್ನು, ಬಡವರನ್ನು, ಗುಲಾಮರನ್ನು ಮತ್ತು ಸ್ವತಂತ್ರರನ್ನು, ತಮ್ಮ ಬಲಗೈಯ ಮೇಲಾಗಲಿ ಅಥವಾ ತಮ್ಮ ಹಣೆಗಳ ಮೇಲಾಗಲಿ ಗುರುತು ಹಾಕಿಕೊಳ್ಳಬೇಕೆಂದು ಒತ್ತಾಯಪಡಿಸಿತು. 17 ಈ ಗುರುತಿಲ್ಲದೆ ಯಾರೂ ಕೊಳ್ಳುವಂತಿಲ್ಲ ಮತ್ತು ಮಾರುವಂತಿಲ್ಲ. ಈ ಗುರುತು ಏನೆಂದರೆ ಆ ಮೃಗದ ಹೆಸರು ಅಥವಾ ಅದರ ಹೆಸರಿನ ಸಂಖ್ಯೆ.
18 ತಿಳುವಳಿಕೆಯುಳ್ಳ ಮನುಷ್ಯನು ಮೃಗದ ಸಂಖ್ಯೆಯ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲಿ ಜ್ಞಾನದ ಅಗತ್ಯವಿದೆ. ಈ ಸಂಖ್ಯೆಯು ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆ 666.