5
ಅನನೀಯ ಮತ್ತು ಸಪ್ಫೈರಳು
ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಒಂದು ಭೂಮಿಯನ್ನು ಮಾರಿ ಹೆಂಡತಿಯ ಸಮ್ಮತಿಯಿಂದ ಅದರ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಉಳಿದ ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. ಆಗ ಪೇತ್ರನು; “ಅನನೀಯನೇ, ನೀನು ಆ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸುವಂತೆ ಸೈತಾನನು ನಿನ್ನ ಹೃದಯದಲ್ಲಿ ಏಕೆ ತುಂಬಿಸಿಕೊಂಡಿ? ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು. ಈ ಮಾತುಗಳನ್ನು ಅನನೀಯನು ಕೇಳಿದ ತಕ್ಷಣವೇ ಬಿದ್ದು ಪ್ರಾಣಬಿಟ್ಟನು; ಕೇಳಿದವರೆಲ್ಲರಿಗೂ ಮಹಾ ಭಯ ಉಂಟಾಯಿತು. ಆಗ ಯೌವನಸ್ಥರು ಎದ್ದು ಅವನ ಶವವನ್ನು ವಸ್ತ್ರದಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು.
ಇದಾದ ಸುಮಾರು ಮೂರು ಗಂಟೆಗಳ ನಂತರ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು. ಪೇತ್ರನು ಆಕೆಯನ್ನು ನೋಡಿ, “ನೀವು ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ? ನನಗೆ ಹೇಳು” ಎಂದು ಕೇಳಲು ಆಕೆಯು, “ಹೌದು, ಇಷ್ಟಕ್ಕೇ” ಅಂದಳು. ಆಗ ಪೇತ್ರನು ಆಕೆಗೆ, “ನೀವಿಬ್ಬರೂ ಕರ್ತನ ಆತ್ಮನನ್ನು ಪರೀಕ್ಷಿಸುವುದಕ್ಕೆ ಏಕೆ ಒಡಂಬಟ್ಟಿರಿ? ಅಗೋ, ನಿನ್ನ ಗಂಡನನ್ನು ಸಮಾಧಿಮಾಡಿದವರು ಬಂದು ಬಾಗಿಲಿನಲ್ಲಿ ಕಾಲಿಟ್ಟಿದ್ದಾರೆ, ನಿನ್ನನ್ನೂ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. 10 ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣಬಿಟ್ಟಳು. ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿರುವುದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಗಂಡನ ಮಗ್ಗುಲಲ್ಲಿ ಹೂಣಿಟ್ಟರು. 11 ಮತ್ತು ಸರ್ವ ಸಭೆಯವರೂ ಈ ಸಂಗತಿಗಳನ್ನು ಕೇಳಿದವರೆಲ್ಲರೂ ಭಯ ಭ್ರಾಂತರಾದರು.
ಸೂಚಕಕಾರ್ಯಗಳು ಮತ್ತು ಅದ್ಭುತಕಾರ್ಯಗಳು
12 ಇದಲ್ಲದೆ ಅಪೊಸ್ತಲರ ಕೈಯಿಂದ ಅನೇಕ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜನರೊಳಗೆ ನಡೆಯುತ್ತಾ ಇದ್ದವು. ಮತ್ತು ಎಲ್ಲರು ಒಗ್ಗಟ್ಟಾಗಿ ಸೊಲೊಮೋನನ ಮಂಟಪದಲ್ಲಿ ಸೇರಿಬರುತ್ತಿದ್ದರು. 13 ಅವರ ಜೊತೆಯಲ್ಲಿರುವುದಕ್ಕೆ ಉಳಿದವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ. ಆದರೂ ಜನರು ಅವರನ್ನು ಬಹಳವಾಗಿ ಕೊಂಡಾಡುತ್ತಿದ್ದರು. 14 ಮತ್ತು ಇನ್ನು ಎಷ್ಟೋ ಮಂದಿ ಸ್ತ್ರೀಪುರುಷರು ಕರ್ತನಲ್ಲಿ ನಂಬಿಕೆಯಿಟ್ಟು ಅವರ ಮಂಡಳಿಯಲ್ಲಿ ಸೇರಿಕೊಳ್ಳುತ್ತಿದ್ದರು. 15 ಹೀಗಿರುವುದರಿಂದ ಜನರು ರೋಗಿಗಳನ್ನು ದೋಲಿಗಳ ಮೇಲೆಯೂ, ಹಾಸಿಗೆಗಳ ಮೇಲೆಯೂ ಇಟ್ಟು ಪೇತ್ರನು ಹಾದು ಹೋಗುವಾಗ, ಅವನ ನೆರಳಾದರೂ ಕೆಲವರ ಮೇಲಾದರೂ ಬೀಳಲಿ ಎಂದು ಅವರನ್ನು ಬೀದಿಗೆ ತೆಗೆದುಕೊಂಡು ಬರುತ್ತಿದ್ದರು. 16 ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳ ಜನರು ಸಹ ರೋಗಿಗಳನ್ನೂ, ದೆವ್ವ ಪೀಡಿತರನ್ನು ಹೊತ್ತುಕೊಂಡು ಗುಂಪುಗುಂಪಾಗಿ ಬರುತ್ತಿದ್ದರು; ಅವರೆಲ್ಲರೂ ಗುಣಮುಖರಾಗುತ್ತಿದ್ದರು.
ಅಪೊಸ್ತಲರಿಗೆ ಆದ ಹಿಂಸೆ
17 ಹೀಗಿರುವಲ್ಲಿ ಮಹಾಯಾಜಕನೂ, ಸದ್ದುಕಾಯರ ಮತಕ್ಕೆ ಸೇರಿದವರಾದ ಅವನ ಜೊತೆಯಲ್ಲಿದ್ದವರೆಲ್ಲರೂ ಎದ್ದು, 18 ಅಸೂಯೆ ತುಂಬಿದವರಾಗಿ ಅಪೊಸ್ತಲರನ್ನು ಹಿಡಿದು ಸೆರೆಯಲ್ಲಿಟ್ಟರು. 19 ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು, 20 “ನೀವು ಹೋಗಿ, ದೇವಾಲಯದಲ್ಲಿ ನಿಂತುಕೊಂಡು ಈ ಜೀವ ವಾಕ್ಯಗಳನ್ನು ಜನರಿಗೆಲ್ಲಾ ತಿಳಿಸಿರಿ” ಅಂದನು.
21 ಅದನ್ನು ಕೇಳಿದ ಅವರು ಬೆಳಗಿನ ಜಾವದಲ್ಲಿಯೇ ದೇವಾಲಯದೊಳಗೆ ಹೋಗಿ ಸುವಾರ್ತೆಯನ್ನು ಸಾರಿದರು. ಇತ್ತ ಮಹಾಯಾಜಕನೂ, ಅವನ ಜೊತೆಯಲ್ಲಿದ್ದವರೂ ಬಂದು ಹಿರೀಸಭೆಯನ್ನೂ, ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ ಕೂಡಿಸಿ, ಅವರನ್ನು ಕರತರುವುದಕ್ಕೆ ಓಲೇಕಾರರನ್ನು ಸೆರೆಮನೆಗೆ ಕಳುಹಿಸಿದರು. 22 ಓಲೇಕಾರರು ಹೋಗಿ ಅವರನ್ನು ಸೆರೆಮನೆಯಲ್ಲಿ ಕಾಣದೆ ಹಿಂತಿರುಗಿ ಬಂದು, 23 “ಸೆರೆಮನೆಯು ಭದ್ರವಾಗಿ ಮುಚ್ಚಿರುವುದನ್ನೂ, ಕಾವಲುಗಾರರು ಬಾಗಿಲುಗಳಲ್ಲಿ ನಿಂತಿರುವುದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ” ಎಂದು ತಿಳಿಸಿದರು. 24 ದೇವಾಲಯದ ಅಧಿಪತಿಯೂ, ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತೋ ಎಂದು ಕಳವಳಗೊಂಡರು.
25 ಅಷ್ಟರಲ್ಲಿ ಒಬ್ಬನು ಬಂದು; “ಅಗೋ, ನೀವು ಸೆರೆಮನೆಯಲ್ಲಿಟ್ಟಿದ್ದ ಆ ಮನುಷ್ಯರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಉಪದೇಶಮಾಡುತ್ತಿದ್ದಾರೆಂದು” ಅವರಿಗೆ ತಿಳಿಸಿದನು. 26 ಆಗ ಸೈನ್ಯದ ಅಧಿಕಾರಿಯು ಓಲೇಕಾರರ ಸಂಗಡ ಹೋಗಿ ಅವರನ್ನು ಕರೆದುಕೊಂಡು ಬಂದನು. ಆದರೆ ತಮಗೆ ಜನರು ಕಲ್ಲೆಸೆದಾರೆಂದು ಹೆದರಿ ಅವರನ್ನು ಹಿಂಸಿಸಲಿಲ್ಲ. 27 ಅಪೊಸ್ತಲರನ್ನು ಕರತಂದು ಹಿರೀಸಭೆಯ ಮುಂದೆ ನಿಲ್ಲಿಸಲು ಮಹಾಯಾಜಕನು ಅವರನ್ನು ವಿಚಾರಣೆಮಾಡುತ್ತಾ, 28 “ನೀವು ಈ ಹೆಸರಿನಲ್ಲಿ ಉಪದೇಶಮಾಡಲೇ ಬಾರದೆಂದು ನಾವು ನಿಮಗೆ ಕಟ್ಟಪ್ಪಣೆ ಕೊಡಲಿಲ್ಲವೇ? ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ, ಮತ್ತು ಆ ವ್ಯಕ್ತಿಯ ರಕ್ತಕ್ಕೆ ನಾವೇ ಹೊಣೆಗಾರರು ಎಂದು ನಮ್ಮನ್ನು ಜವಾಬ್ಧಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದು ಹೇಳಿದನು. 29 ಪೇತ್ರನೂ ಉಳಿದ ಅಪೊಸ್ತಲರೂ ಅವರಿಗೆ, “ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ. 30 ನೀವು ಮರದ ಕಂಬಕ್ಕೆ ತೂಗಹಾಕಿ ಕೊಂದ ಯೇಸುವನ್ನು ನಮ್ಮ ಪೂರ್ವಿಕರ ದೇವರು ಎಬ್ಬಿಸಿದನು. 31 ದೇವರು ಆತನನ್ನೇ ಇಸ್ರಾಯೇಲ್ ಜನರಿಗೆ ಮಾನಸಾಂತರವನ್ನೂ, ಪಾಪಕ್ಷಮಾಪಣೆಯನ್ನೂ ದಯಪಾಲಿಸುವುದಕ್ಕಾಗಿ ಅವನನ್ನು ಪ್ರಭುವನ್ನಾಗಿಯೂ,* ರಕ್ಷಕನಾಗಿಯೂ ತನ್ನ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಿದನು. 32 ಈ ಕಾರ್ಯಗಳಿಗೆ ನಾವು ಸಾಕ್ಷಿ ಹಾಗೂ ದೇವರು ತನಗೆ ವಿಧೇಯರಾಗಿರುವವರಿಗೆ ದಯಪಾಲಿಸಿರುವ ಪವಿತ್ರಾತ್ಮನು ಸಾಕ್ಷಿ” ಎಂದು ಹೇಳಿದರು.
ಗಮಲಿಯೇಲನ ಸಮರ್ಥನೆ
33 ಸಭಿಕರು ಈ ಮಾತನ್ನು ಕೇಳಿ ರೌದ್ರಗೊಂಡು ಅವರನ್ನು ಕೊಲ್ಲಿಸಬೇಕೆಂದು ಆಲೋಚಿಸಿದರು. 34 ಆದರೆ ಎಲ್ಲಾ ಜನರಿಂದ ಗೌರವಿಸಲ್ಪಟ್ಟ ಧರ್ಮಶಾಸ್ತ್ರಿಯಾದ ಗಮಲಿಯೇಲನೆಂಬ ಒಬ್ಬ ಫರಿಸಾಯನು ಹಿರೀಸಭೆಯಲ್ಲಿ ಎದ್ದುನಿಂತು ಈ ಮನುಷ್ಯರನ್ನು ಸ್ವಲ್ಪ ಹೊತ್ತು ಹೊರಗೆ ಕಳುಹಿಸಬೇಕೆಂದು ಅಪ್ಪಣೆಕೊಟ್ಟನು. 35 ಅನಂತರ ಸಭೆಯವರಿಗೆ, “ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಎಚ್ಚರಿಕೆಯುಳ್ಳವರಾಗಿರಿ. 36 ಇದಕ್ಕಿಂತ ಮೊದಲು ಥೈದನು ಎಂಬ ಒಬ್ಬನು ಎದ್ದು ತಾನೊಬ್ಬ ಮಹಾಪುರುಷನೆಂದು ಹೇಳಿಕೊಂಡನು. ಅವನ ಪಕ್ಷಕ್ಕೆ ಸುಮಾರು ನಾನೂರು ಜನರು ಸೇರಿಕೊಂಡರು, ಅವನು ಕೊಲ್ಲಲ್ಪಟ್ಟನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಸಲ್ಪಟ್ಟು ಇಲ್ಲವಾದರು. 37 ಅವನ ತರುವಾಯ ಜನಗಣತಿ ಕಾಲದಲ್ಲಿ ಗಲಿಲಾಯದ ಯೂದನು ತಿರುಗಿಬೀಳುವುದಕ್ಕೆ ಎದ್ದು, ಜನರನ್ನು ತನ್ನ ಪಕ್ಷ ಸೇರುವುದಕ್ಕೆ ಅನೇಕರನ್ನು ಪ್ರೇರೇಪಿಸಿದನು. ಅವನೂ ನಾಶವಾದನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಹೋದರು. 38 ಹೀಗಿರುವುದರಿಂದ ನಾನು ನಿಮಗೆ ಹೇಳುವುದೇನಂದರೆ ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ. ಏಕೆಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವುದು; 39 ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ; ನೀವು ಒಂದು ವೇಳೆ ದೇವರ ವಿರುದ್ಧ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ” ಎಂದು ಹೇಳಿದನು.
40 ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಯಿಸಿ, ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತನಾಡಲೇಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು. 41 ಅಪೊಸ್ತಲರು ತಾವು ಯೇಸುವಿನ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಪಟ್ಟರು. 42 ಹಿರೀಸಭೆಯ ಎದುರಿನಿಂದ ಹೊರಟುಹೋಗಿ, ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ, ಮನೆಮನೆಗಳಲ್ಲಿಯೂ, ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ಕುರಿತು ಶುಭವರ್ತಮಾನವನ್ನು ಸಾರುತ್ತಾ ಇದ್ದರು.
* 5:31 5:31 ಮಾನವನ ಕುಲಕ್ಕೆ ರಕ್ಷಣೆಯ ಮಾರ್ಗವನ್ನು ನಿರ್ಮಿಸಿದ ಏಕೈಕ ನಿರ್ಮಾಪಕ