18
ಯಾಜಕರಿಗೆ ಸಲ್ಲಬೇಕಾದ ಕಾಣಿಕೆಗಳ ವಿಷಯ
ಯಾಜಕಸೇವೆ ಮಾಡುವ ಲೇವಿಯರಿಗಾಗಲಿ ಅಥವಾ ಲೇವಿಯ ಕುಲದವರಲ್ಲಿ ಯಾರಿಗೇ ಆಗಲಿ ಇತರ ಇಸ್ರಾಯೇಲರೊಡನೆ ಸ್ವಂತಕ್ಕಾಗಿ ಪಾಲಾಗಲಿ ಅಥವಾ ಸ್ವಾಸ್ತ್ಯವಾಗಲಿ ದೊರೆಯುವುದಿಲ್ಲ. ಯೆಹೋವನಿಗೆ ಸಮರ್ಪಿಸಲ್ಪಡುವ ಹೋಮದ್ರವ್ಯಗಳೂ ಆತನಿಗೋಸ್ಕರ ಪ್ರತ್ಯೇಕಿಸಲ್ಪಟ್ಟದ್ದೆಲ್ಲವೂ ಅವರಿಗೆ ಜೀವನಾಧಾರ. ಸ್ವದೇಶಸ್ಥರೊಂದಿಗೂ ಅವರಿಗೆ ಸ್ವತ್ತು ದೊರೆಯುವುದಿಲ್ಲ; ಯೆಹೋವನು ಅವರಿಗೆ ಹೇಳಿದಂತೆ ತಾನೇ ಅವರಿಗೆ ಸ್ವತ್ತಾಗಿರುವನು.
ಜನರ ಕಡೆಯಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ: ದನಗಳಲ್ಲಿಯಾಗಲಿ, ಆಡು ಮತ್ತು ಕುರಿಗಳಲ್ಲಿಯಾಗಲಿ ಪಶುವನ್ನು ಕೊಯಿದು ಯಜ್ಞಮಾಡುವವರೆಲ್ಲರೂ ಅದರ ಮುಂದೊಡೆಯನ್ನೂ, ಎರಡು ದವಡೆಗಳನ್ನೂ, ಕೋಷ್ಠವನ್ನೂ (ಒಳಭಾಗವನ್ನು) ಯಾಜಕರಿಗೆ ಕೊಡಬೇಕು. ಧಾನ್ಯ, ದ್ರಾಕ್ಷಾರಸ ಮತ್ತು ಎಣ್ಣೆ ಇವುಗಳ ಪ್ರಥಮಫಲಗಳನ್ನು ಹಾಗೂ ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನೂ ಅವರಿಗೆ ಕೊಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕುಲಗಳಲ್ಲಿ ಇವರನ್ನೂ ಮತ್ತು ಇವರ ತರುವಾಯ ಇವರ ಸಂತತಿಯವರನ್ನೂ ತನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆ ಮಾಡುವುದಕ್ಕೆ ತಾನೇ ನೇಮಿಸಿಕೊಂಡನಲ್ಲಾ.
ಇಸ್ರಾಯೇಲರ ಯಾವುದಾದರೂ ಒಂದು ಊರಲ್ಲಿ ಇಳಿದುಕೊಂಡಿರುವ ಲೇವಿಯನು ಸ್ವಂತ ಮನಸ್ಸಿನಿಂದ ಆ ಊರನ್ನು ಬಿಟ್ಟು, ಯೆಹೋವನು ಆರಿಸಿಕೊಂಡ ಪವಿತ್ರ ಸ್ಥಳಕ್ಕೆ ಬಂದು, ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುವ ತನ್ನ ಸ್ವಕುಲದವರಂತೆ ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ತಾನೂ ಸೇವೆ ನಡಿಸಿದರೆ, ಅವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ, ಇತರ ಲೇವಿಯರೊಂದಿಗೆ ಸಮವಾಗಿ ಭೋಗಿಸುವುದಕ್ಕೆ ಬಾಧ್ಯನಾಗಿರುವನು.
ಅಸಹ್ಯವಾದ ಆಚಾರವಿಚಾರಗಳು
ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದಾಗ ಅಲ್ಲಿರುವ ಜನಗಳು ಮಾಡುವ ಅಸಹ್ಯವಾದ ಕೆಲಸಗಳನ್ನು ನೀವು ಅನುಸರಿಸಲೇಬಾರದು. 10 ಮಕ್ಕಳನ್ನು ಬಲಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರ ಮಂತ್ರಗಳನ್ನು ಮಾಡುವವರು, 11 ಮಾಟಗಾರರು, ತಂತ್ರಗಾರರು, ಸತ್ತವರಲ್ಲಿ ವಿಚಾರಿಸುವವರು, ಬೇತಾಳ, ಪ್ರೇತ, ಭೂತ ಎಂದು ಪೂಜಿಸುವವರು ಯಾರೂ ನಿಮ್ಮಲ್ಲಿ ಇರಬಾರದು. 12 ಇಂಥ ಕೆಲಸಗಳನ್ನು ನಡಿಸುವವರನ್ನು ಯೆಹೋವನು ಸಹಿಸುವುದಿಲ್ಲ; ನಿಮ್ಮ ದೇವರಾದ ಯೆಹೋವನು ಇಂಥ ಹೇಯಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮಿಂದ ಹೊರ ಹೋಗುವಂತೆ ಮಾಡಿದ್ದಾನೆ. 13 ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿರ್ದೊಷಿಗಳಾಗಿರಬೇಕು. 14 ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ಶಕುನಗಳನ್ನು ನೋಡುತ್ತಾರೆ ಮತ್ತು ಯಂತ್ರ ಮಂತ್ರಗಳನ್ನು ಮಾಡುತ್ತಾರೆ. ನೀವಾದರೋ ಹಾಗೆ ಮಾಡುವುದಕ್ಕೆ ನಿಮ್ಮ ದೇವರಾದ ಯೆಹೋವನಿಂದ ಅಪ್ಪಣೆಹೊಂದಲಿಲ್ಲ.
ಪ್ರವಾದಿಯನ್ನು ಕಳುಹಿಸುವ ವಾಗ್ದಾನ
15 ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರರಲ್ಲಿ ನನ್ನಂಥ ಪ್ರವಾದಿಯನ್ನು ನಿಮಗೆ ಏರ್ಪಡಿಸುವನು; ಅವನಿಗೆ ನೀವು ಕಿವಿಗೊಡಬೇಕು. 16 ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನೀವು, “ನಮ್ಮ ದೇವರಾದ ಯೆಹೋವನ ಸ್ವರವನ್ನು ಇನ್ನು ಕೇಳುವುದಕ್ಕಾಗಲಿ ಅಥವಾ ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡವುದಕ್ಕಾಗಲಿ ನಮಗೆ ಮನಸ್ಸಿಲ್ಲ, ಹಾಗೇನಾದರು ಕೇಳಿ ನೋಡಿದರೆ ಸತ್ತು ಹೋಗುವೆವು” ಎಂದು ನೀವು ಹೇಳಿದಿರಷ್ಟೆ. 17 ಆಗ ಯೆಹೋವನು ನನಗೆ, “ಇವರು ಹೇಳಿದ ಮಾತು ಒಳ್ಳೆಯದೇ; 18 ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೋಸ್ಕರ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು. 19 ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಗೊಡುವದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು. 20 ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರಹೊಂದದೆ, ನಾನು ಪ್ರೇರಣೆಮಾಡದ ಮಾತುಗಳನ್ನು ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತನಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು. 21 ‘ಪ್ರವಾದಿಯು ಹೇಳಿದ ಮಾತು ಯೆಹೋವನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ’ ಅಂದುಕೊಳ್ಳುತ್ತೀರೋ? 22 ಪ್ರವಾದಿಯು ‘ಇದು ಯೆಹೋವನ ನುಡಿ’ ಎಂದು ಹೇಳಿ, ಆತನು ತಿಳಿಸಿದ ಸಂಗತಿಯೂ ನಡೆಯದೆ ಹೋದರೆ, ಅವನ ಮಾತು ಯೆಹೋವನದಲ್ಲವೆಂದು ನೀವು ತಿಳಿದುಕೊಳ್ಳಬೇಕು. ಅವನು ನನ್ನ ಅಪ್ಪಣೆ ಇಲ್ಲದೆ ಮಾತನಾಡಿದವನು ಮತ್ತು ನೀವು ಅವನಿಗೆ ಹೆದರಬಾರದು” ಎಂದು ಹೇಳಿದನು.