7
ಕಾನಾನ್ಯರ ಜನರನ್ನು ಮತ್ತು ದೇವತಾಪ್ರತಿಮೆಗಳನ್ನೂ ನಿರ್ಮೂಲಮಾಡಲು ಆಜ್ಞೆ
ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಅಧಿಕ ಸಂಖ್ಯೆಯಲ್ಲಿಯೂ ಮತ್ತು ಅಧಿಕ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವನು. ಯೆಹೋವನು ಅವರನ್ನು ನಿಮಗೆ ಒಪ್ಪಿಸಲು ನೀವು ಅವರನ್ನು ಸಂಪೂರ್ಣವಾಗಿ ಸಂಹರಿಸಬೇಕು. ಅವರ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು ಹಾಗು ಅವರಿಗೆ ಕನಿಕರ ತೋರಬಾರದು. ಅವರೊಡನೆ ಬೀಗತನಮಾಡಬಾರದು; ಅವರ ಗಂಡು ಮಕ್ಕಳಿಗೆ ನಿಮ್ಮ ಹೆಣ್ಣುಮಕ್ಕಳನ್ನು ಕೊಡಲೂಬಾರದು ಮತ್ತು ಅವರ ಹೆಣ್ಣುಮಕ್ಕಳನ್ನು ನಿಮ್ಮ ಗಂಡುಮಕ್ಕಳಿಗೆ ತರಲೂಬಾರದು. ಹಾಗೆ ಮಾಡಿದರೆ ಅವರು ನಿಮ್ಮ ಗಂಡು ಮಕ್ಕಳನ್ನು ಯೆಹೋವನ ಸೇವೆ ಮಾಡದಂತೆ ತಪ್ಪಿಸಿ, ಅನ್ಯ ದೇವರುಗಳನ್ನು ಪೂಜಿಸುವ ಹಾಗೆ ಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು. ಆದುದರಿಂದ ನೀವು ಹೀಗೆ ಮಾಡಬೇಕು, ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಪವಿತ್ರವಾದ ಕಲ್ಲಿನ ಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು, ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಪರಿಶುದ್ಧ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನವಾಗುವುದಕ್ಕೆ ಆರಿಸಿಕೊಂಡನು. ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಜನರು ಎಂದು ಇಷ್ಟಪಟ್ಟು ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಅಲ್ಪಸಂಖ್ಯಾತರು. ಯೆಹೋವನು ನಿಮ್ಮನ್ನು ಪ್ರೀತಿಸಿ, ತಾನು ನಿಮ್ಮ ಪೂರ್ವಿಕರಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು ಐಗುಪ್ತ್ಯರ ಅರಸನಾದ ಫರೋಹನ ಕೈಕೆಳಗೆ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ತನ್ನ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಬರಮಾಡಿದನು.
ಆದುದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ತಾನು ಮಾಡಿದ ವಾಗ್ದಾನವನ್ನೂ ಮತ್ತು ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ ಮತ್ತು 10 ತನ್ನನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವವನಾಗಿಯೂ ಇದ್ದಾನೆಂದು ತಿಳಿದುಕೊಳ್ಳಿರಿ. ಹಗೆ ಮಾಡುವವರ ವಿಷಯದಲ್ಲಿ ತಡಮಾಡದೆ ಆಗಲೇ ಮುಯ್ಯಿತೀರಿಸುವನು. 11 ಆದಕಾರಣ ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸಿ ನಡೆಯಬೇಕು.
ವಿಧೇಯತೆಯಲ್ಲಿ ಆಶೀರ್ವಾದ
12 ನೀವು ಈ ವಿಧಿಗಳನ್ನು ಲಕ್ಷ್ಯವಿಟ್ಟು ಅನುಸರಿಸಿದರೆ, ಅದಕ್ಕೆ ಪ್ರತಿಯಾಗಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ಒಡಂಬಡಿಕೆಯನ್ನು ನಂಬಿಗಸ್ತಿಕೆಯಿಂದ ನೆರವೇರಿಸುವವನಾಗಿದ್ದಾನೆ. 13 ಆತನು ನಿಮ್ಮನ್ನು ಪ್ರೀತಿಸಿ, ಅಭಿವೃದ್ಧಿಪಡಿಸಿ ಹೆಚ್ಚಿಸುವನು. ಆತನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮ ಸಂತಾನವನ್ನೂ, ವ್ಯವಸಾಯವನ್ನೂ, ನಿಮಗಿರುವ ದವಸ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ನಿಮ್ಮ ದನ ಮತ್ತು ಕುರಿಗಳಲ್ಲಿ ಹುಟ್ಟಿದ್ದನ್ನೂ ಅಭಿವೃದ್ಧಿಪಡಿಸುವನು. 14 ನೀವು ಎಲ್ಲಾ ಜನಗಳಿಗಿಂತಲೂ ಹೆಚ್ಚಾಗಿ ದೇವರ ಅನುಗ್ರಹವನ್ನು ಹೊಂದಿದವರಾಗಿರುವಿರಿ. ನಿಮ್ಮೊಳಗೆ ಸ್ತ್ರೀಪುರುಷರಲ್ಲಿಯಾಗಲಿ, ಹೆಣ್ಣುಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವುದಿಲ್ಲ. 15 ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ, ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು.
16 ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯ ಹೊಂದುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮ್ಮ ಜೀವಕ್ಕೆ ಉರುಲಾಗುವವು.
17 ಆ ಜನಗಳು ನಮಗಿಂತ ಹೆಚ್ಚಾಗಿದ್ದಾರೆ; ಅವರನ್ನು ಹೊರಡಿಸುವುದು ನಮ್ಮಿಂದ ಹೇಗಾದೀತು ಅಂದುಕೊಳ್ಳುತ್ತೀರೋ? ಅವರಿಗೆ ಹೆದರಬೇಡಿರಿ. 18 ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಮತ್ತು ಐಗುಪ್ತ್ಯರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19 ಆಗ ನೀವು ಕಣ್ಣಾರೆ ನೋಡಿದ ಪ್ರಕಾರ ಆತನು ವಿಶೇಷ ಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಭುಜಪರಾಕ್ರಮ, ಶಿಕ್ಷೆ ಇವುಗಳನ್ನು ಪ್ರಯೋಗಿಸಿ ನಿಮ್ಮನ್ನು ಬಿಡುಗಡೆಮಾಡಿದನಲ್ಲಾ. ನೀವು ಹೆದರಿಕೊಳ್ಳುವ ಆ ಎಲ್ಲಾ ಜನಾಂಗಗಳಿಗೂ ಆತನು ಹಾಗೆಯೇ ಮಾಡುವನು. 20 ಅದು ಮಾತ್ರವಲ್ಲದೆ ನಿಮ್ಮ ದೇವರಾದ ಯೆಹೋವನು *ಕಣಜದ ಹುಳಗಳನ್ನು ಅವರ ನಡುವೆ ಕಳುಹಿಸುವನು. ಮರೆಯಾಗಿದ್ದು ಉಳಿದವರು ಆ ಹುಳಗಳ ದೆಸೆಯಿಂದ ನಾಶವಾಗಿ ನಿಮಗೆ ಕಾಣದೆ ಹೋಗುವರು. 21 ನೀವು ಅವರಿಗೆ ಹೆದರಿಕೊಳ್ಳಬೇಡಿರಿ; ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿದ್ದಾನೆ; ಆತನು ನಮ್ಮ ಭಕ್ತಿಗೆ ಪ್ರತಿಕಾರವಾಗಿ ವಿಸ್ಮಯ ಹುಟ್ಟಿಸುವ ದೇವರಾಗಿದ್ದಾನೆ. 22 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮ್ಮ ಮುಂದೆಯೇ ಸ್ವಲ್ಪಸ್ವಲ್ಪವಾಗಿ ಹೊರಟು ಹೋಗುವಂತೆ ಮಾಡುವನು. ನೀವು ಅವರನ್ನು ಒಂದೇ ಬಾರಿಗೆ ನಿರ್ಮೂಲಮಾಡಬಾರದು. ಹಾಗೆ ಮಾಡಿದರೆ ಕಾಡುಮೃಗಗಳು ಹೆಚ್ಚಿ ಅವು ನಿಮಗೆ ತೊಂದರೆಯನ್ನು ಉಂಟುಮಾಡುತ್ತವೆ. 23 ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮಿಂದ ಸೋಲಿಸಿ, ಬಹಳವಾಗಿ ಗಲಿಬಿಲಿಮಾಡಿ ಕಡೆಗೆ ಅವರನ್ನು ಇಲ್ಲದಂತೆ ಮಾಡುವನು. 24 ಆತನು ಅವರ ಅರಸರನ್ನು ನಿಮ್ಮ ಕೈಗೆ ಸಿಗುವಂತೆ ಮಾಡಿ, ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ; ನೀವು ಎಲ್ಲರನ್ನೂ ನಾಶಮಾಡುವಿರಿ.
25 ಅವರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿಬಂಗಾರವನ್ನು ನೀವು ಆಶಿಸಬಾರದು; ಅದನ್ನು ತೆಗೆದುಕೊಂಡರೆ ಅದು ನಿಮಗೆ ಉರುಲಾಗುವುದು. ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯವಾದುದು. 26 ಅದು ಕೇವಲ ಯೆಹೋವನಿಂದ ನಾಶವಾಗತಕ್ಕದ್ದು. ಆದುದರಿಂದ ನೀವು ಅಂತಹ ವಸ್ತುವನ್ನು ಮನೆಯೊಳಕ್ಕೆ ತಂದು ಅದರಂತೆಯೇ ನಾಶಕ್ಕೆ ಗುರಿಯಾಗಬಾರದು. ನೀವು ಅದನ್ನು ಅಸಹ್ಯಪಟ್ಟು ಮುಟ್ಟಲೂ ಬಾರದು.
* 7:20 7:20 ಬಾಧೆ.