23
ತೂರಿನ ಬಗ್ಗೆ ಪ್ರವಾದನೆ
ತೂರಿನ ವಿಷಯವಾದ ದೈವೋಕ್ತಿ.
ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯವು ಹಾಳಾಯಿತು, ನಿಮಗೆ ನೆಲೆಯಿಲ್ಲ, ರೇವಿಲ್ಲ.
ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು.
ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ಹಾದು ಹೋಗುವ,
ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನವಾಗಿರಿ!
ವಿಶಾಲವಾದ ಸಾಗರದ ಮೇಲೆ ತಂದ ಶೀಹೋರಿನ ಧಾನ್ಯದಿಂದಲೂ,
ನೈಲ್ ನದಿಯ ಬೆಳೆಯಿಂದಲೂ ಆದಾಯಹೊಂದಿದ ನಿಮ್ಮ ನಗರವು ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು.
ಚೀದೋನೇ, ನಾಚಿಕೆಪಡು. ಏಕೆಂದರೆ ಸಮುದ್ರವೂ, ಸಮುದ್ರದ ದುರ್ಗವೂ,
“ನಾವು ವೇದನೆ ಪಡಲಿಲ್ಲ, ಪ್ರಸವಿಸಲಿಲ್ಲ,
ಯುವತಿ ಯುವಕರನ್ನು ಸಾಕಿ ಸಲಹಲಿಲ್ಲ” ಎಂದು ನುಡಿದಿದೆಯಷ್ಟೆ.
ತೂರಿನ ಸಮಾಚಾರವು ಐಗುಪ್ತ್ಯರಿಗೆ ಮುಟ್ಟಿದಾಗ ಅದಕ್ಕಾಗಿ ಸಂಕಟಪಡುವರು.
ತಾರ್ಷೀಷಿಗೆ ಸಮುದ್ರದ ಮೇಲೆ ಹಾದುಹೋಗಿರಿ, ದ್ವೀಪ ನಿವಾಸಿಗಳೇ, ಗೋಳಾಡಿರಿ!
ನಿಮ್ಮ ಉಲ್ಲಾಸದ ಪಟ್ಟಣವು ಇದೇನೋ? ಅದರ ಉತ್ಪತ್ತಿಯು ಪುರಾತನವಾದದ್ದೇ ಸರಿ;
ಅವರ ಕಾಲುಗಳು ಅವರನ್ನು ದೂರ ದೇಶದಲ್ಲಿ ವಾಸಿಸುವುದಕ್ಕೆ ಕರೆದುಕೊಂಡು ಹೋಗುವವು.
ಅದು ಕಿರೀಟದಾಯಕವಾದ ಪಟ್ಟಣವು. ಅದರ ವರ್ತಕರು ಪ್ರಭುಗಳು,
ಅದರ ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಸಂಕಲ್ಪವನ್ನು ಮಾಡಿದವನು ಯಾರು?
ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇಕೆಂತಲೂ,
ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವಮಾನಪಡಿಸಬೇಕೆಂತಲೂ ಸೇನಾಧೀಶ್ವರನಾದ ಯೆಹೋವನೇ ಹೀಗೆ ಸಂಕಲ್ಪಿಸಿದ್ದಾನೆ.
10 ತಾರ್ಷೀಷ್ ನಗರಿಯೇ, ನೈಲ್ ನದಿಯಂತೆ ನಿನ್ನ ಭೂಮಿಯನ್ನು ಬಿತ್ತು. ತೂರ್ ಪಟ್ಟಣದಲ್ಲಿ ಇನ್ನು ಮುಂದೆ ವ್ಯಾಪಾರ ಸ್ಥಳವು ಇರುವುದಿಲ್ಲ.
11 ಯೆಹೋವನು ಸಮುದ್ರದ ಮೇಲೆ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ.
ಕಾನಾನಿನ* ದುರ್ಗಗಳನ್ನು ನಾಶಮಾಡಲು ಅದರ ವಿಷಯವಾಗಿ ಯೆಹೋವನು ಅಪ್ಪಣೆಕೊಟ್ಟಿದ್ದಾನೆ.
12 ಆತನು, “ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ;
ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿ ಇರದು” ಎಂದು ಹೇಳಿದ್ದಾನೆ.
13 ಇಗೋ, ಕಸ್ದೀಯರ ದೇಶವು! ಈ ಜನಾಂಗವು ನಿರ್ನಾಮವಾಯಿತು. ಅಶ್ಶೂರ್ಯರು ಈ ದೇಶವನ್ನು ಕಾಡುಮೃಗಗಳಿಗೆ ಈಡುಮಾಡಿದರು.
ಗೋಪುರಗಳನ್ನು ಕಟ್ಟಿಕೊಂಡು ಅದರ ಕೋಟೆಗಳನ್ನು ಕೆಡವಿ ಅದನ್ನು ನಾಶಪಡಿಸಿದರು.
14 ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯವು ಹಾಳಾಯಿತು.
15 ಆ ದಿನದಲ್ಲಿ ತೂರ್ ಪಟ್ಟಣವು ಒಬ್ಬ ಅರಸನ ಆಡಳಿತದ ಎಪ್ಪತ್ತು ವರ್ಷಗಳ ತನಕ ಜ್ಞಾಪಕಕ್ಕೆ ಬಾರದೇ ಇರುವುದು; ಎಪ್ಪತ್ತು ವರ್ಷದ ಮೇಲೆ ವ್ಯಭಿಚಾರಿ ವಿಷಯವಾದ ಗೀತೆಯಂತೆ ಆಗುವುದು.
16 ಅದೇನೆಂದರೆ, “ಎಲ್ಲರೂ ಮರೆತುಹೋದ ವ್ಯಭಿಚಾರಿಯೇ, ಕಿನ್ನರಿಯನ್ನು ತೆಗೆದುಕೊಂಡು ಪಟ್ಟಣದಲ್ಲಿ ಅಲೆಯುತ್ತಾ,
ಜನರು ನಿನ್ನನ್ನು ಜ್ಞಾಪಿಸಿಕೊಳ್ಳುವಂತೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು” ಎಂಬುದೇ.
17 ಎಪ್ಪತ್ತು ವರ್ಷಗಳ ಮೇಲೆ ಯೆಹೋವನು ತೂರ್ ಪಟ್ಟಣವನ್ನು ಪರಾಂಬರಿಸುವನು. ಅವಳು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕದಲ್ಲಿರುವ ಸಕಲ ಅರಸರೊಂದಿಗೆ ಸೇರಿ ವ್ಯಾಪಾರ ಮಾಡುವಳು. 18 ಅವಳ ವ್ಯಾಪಾರವೂ ಮತ್ತು ಅವಳ ಆದಾಯವೂ ಅವಳಿಗೆ ನಿಧಿನಿಕ್ಷೇಪವಾಗದೆ ಯೆಹೋವನಿಗೇ ಮೀಸಲಾಗುವುದು. ಆ ವ್ಯಾಪಾರವು ಯೆಹೋವನ ಸನ್ನಿಧಾನದಲ್ಲಿ ವಾಸಿಸುವವರಿಗೆ ಬೇಕಾದಷ್ಟು ಅನ್ನವನ್ನೂ, ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲವಾಗುವುದು.
* 23:11 23:11 ಕಾನಾನಿನ ಪೊಯಿನಿಕೆಯ. 23:13 23:13 ಕಸ್ದೀಯರ ಬಾಬೆಲಿನವರು.