28
ಇಸ್ರಾಯೇಲರಿಗೆ ಎಚ್ಚರಿಕೆ
ಅಯ್ಯೋ, ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟದ* ಗತಿಯೇ!
ದ್ರಾಕ್ಷಾರಸಕ್ಕೆ ಸೋತು ಹೋದವರ ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಬಾಡುತ್ತಿರುವ ಹೂವಿನ ಪಾಡೇ!
ಆಹಾ, ಕರ್ತನು ಒಬ್ಬ ಮಹಾಬಲಿಷ್ಠನನ್ನು ನೇಮಿಸಿದ್ದಾನೆ; ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ,
ನಾಶಕರವಾದ ಬಿರುಗಾಳಿಯಂತೆಯೂ, ಮುಳುಗಿಸುವ ಅತಿಧಾರಾವೃಷ್ಟಿಯಂತೆಯೂ ಬಲಾತ್ಕಾರದಿಂದ ಆ ಪಟ್ಟಣವನ್ನು ತನ್ನ ಕೈಯಿಂದ ಅಧೋಗತಿಗೆ ತರುವನು.
ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟವು ಕಾಲಿನಿಂದ ತುಳಿಯಲ್ಪಡುವುದು.
ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕೊಡುವ ಕಾಲಕ್ಕೆ,
ಮೊದಲು ಮಾಗಿದ ಅಂಜೂರಕ್ಕೆ ಸಮಾನವಾಗುವುದು; ಆ ಹಣ್ಣನ್ನು ನೋಡಿದವನು,
ಅದನ್ನು ಕಿತ್ತ ಕೂಡಲೆ ನುಂಗಿಬಿಡುವನು.
ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನೇ ತನ್ನ ಜನರಲ್ಲಿ ಉಳಿದವರಿಗೆ ಅಂದದ ಕಿರೀಟವೂ, ಸುಂದರ ಮುಕುಟವೂ ಆಗಿರುವನು.
ಆತನೇ ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯಾಗಿಯೂ, ಊರಬಾಗಿಲಲ್ಲಿ ಶತ್ರುಗಳನ್ನು ನಾಶಮಾಡುವವರಿಗೆ ಶೌರ್ಯವಾಗಿಯೂ ಪರಿಣಮಿಸುವನು.
ಯೆಶಾಯನು ಯೆರೂಸಲೇಮಿನ ಅಧಿಪತಿಗಳನ್ನು ಖಂಡಿಸಿದ್ದು
ಈ ನನ್ನ ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ;
ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ,
ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ.
ಅವರ ಮೇಜುಗಳ ಮೇಲೆಲ್ಲಾ ವಾಂತಿಯೂ, ಎಂಜಲೂ ತುಂಬಿವೆ, ಶುದ್ಧವಾದ ಸ್ಥಳವೇ ಇಲ್ಲ.
ಇವನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಇವನು ಯಾರಿಗೆ ಯೆಹೋವನ ಬೋಧನೆಯನ್ನು ತಿಳಿಸುತ್ತಾನೆ?
ಮೊಲೆಬಿಟ್ಟ ಕೂಸುಗಳಿಗೋ ಅಥವಾ ತಾಯಿಯ ಬೆಚ್ಚನೆಯ ಎದೆಬಿಟ್ಟ ಮಕ್ಕಳಿಗೋ?
10 ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ.
11 ಹೌದು, ತೊದಲು ಮಾತಿನವರು, ಅನ್ಯಭಾಷಿಗಳು ಇವರ ಮೂಲಕವಾಗಿಯೇ ಯೆಹೋವನು ಈ ಜನರೊಂದಿಗೆ ಮಾತನಾಡುವನು.
12 ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರಿಗೆ ವಿಶ್ರಾಂತಿ ನೀಡಿ,
ನಿಮಗೆ ಅನುಕೂಲವಾದ ಉಪಶಮನವು ಇದೇ” ಎಂದು ಹೇಳುವಾಗ ಇವರು ಕೇಳದೆ ಹೋದರು.
13 ಹೀಗಿರಲು ಯೆಹೋವನ ಮಾತು
ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ,
ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಎಂಬುದಾಗಿ ಇವರಿಗೆ ಪರಿಣಮಿಸುವುದು;
ಇವರು ನಡೆದು ಹಿಂದೆ ಬಿದ್ದು ಭಂಗಪಡುವರು, ಬೋನಿಗೆ ಸಿಕ್ಕಿ ವಶವಾಗುವರು.
ಯೆಹೂದಕ್ಕೆ ಎಚ್ಚರಿಕೆ
14 ಆದುದರಿಂದ ಯೆರೂಸಲೇಮಿನ ಈ ಜನರನ್ನು ಆಳುವ ಧರ್ಮನಿಂದಕರೇ,
ಯೆಹೋವನ ಮಾತನ್ನು ಕೇಳಿರಿ,
15 ನೀವು ನಿಮ್ಮೊಳಗೆ, “ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ;
ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು;
ನಾವು ಸುಳ್ಳನ್ನೇ ಆಶ್ರಯಿಸಿಕೊಂಡು ಮೋಸದಲ್ಲಿ ಮೊರೆಹೊಕ್ಕಿದ್ದೇವೆ” ಎಂದು ಅಂದುಕೊಂಡಿದ್ದೀರಿ.
16  ಆದುದರಿಂದ ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ,
“ಇಗೋ, ಪರೀಕ್ಷೆಗೆ ಒಳಗಾಗಿ, ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ,
ಸ್ಥಿರವಾದ ಆಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು.
17 ನಾನು ನ್ಯಾಯವನ್ನು ನೂಲನ್ನಾಗಿಯೂ, ಧರ್ಮವನ್ನು ಮಟ್ಟಗೋಲನ್ನಾಗಿಯೂ ಮಾಡುವೆನು,
ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು, ಜಲಪ್ರವಾಹವು ಮೋಸದ ಅಡಗು ಸ್ಥಳವನ್ನು ಮುಳುಗಿಸುವುದು.
18 ಮೃತ್ಯುವಿನಿಂದ ನೀವು ಪಡೆದುಕೊಂಡ ಒಡಂಬಡಿಕೆಯು ಸಾಗದು, ಪಾತಾಳದೊಡನೆ ನೀವು ಮಾಡಿಕೊಂಡ ಒಪ್ಪಂದವು ನಿಲ್ಲದು;
ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ನಿಮ್ಮನ್ನು ತುಳಿದುಬಿಡುವುದು.
19 ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು;
ಹೊತ್ತಾರೆಯಿಂದ ಹೊತ್ತಾರೆಗೆ ಹಗಲು ರಾತ್ರಿಯೂ ಹಾದುಹೋಗುವುದು;
ಆಗ ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವುದರಿಂದ ಭಯವಾಗುವುದು.
20 ಒಬ್ಬನು ಕಾಲುಚಾಚಿಕೊಂಡು ಮಲಗುವನೆಂದರೆ ಹಾಸಿಗೆಯ ಉದ್ದವೂ ಸಾಲುವುದಿಲ್ಲ; ಮುದುರಿಕೊಂಡು ಮಲಗುವನೆಂದರೆ ಹೊದಿಕೆಯ ಅಗಲವೂ ಸಾಲುವುದಿಲ್ಲ.”
21 ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡೆಸಬೇಕೆಂತಲೂ, ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ
ಪೆರಾಚೀಮ್ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್ ಕಣಿವೆಯಲ್ಲಿ ರೋಷಗೊಂಡಂತೆ ರೋಷಗೊಳ್ಳುವನು.
22 ಆದುದರಿಂದ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ;
ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಳಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವುದನ್ನು ಕೇಳಿದ್ದೇನೆ.
ಯೆಹೋವನ ಕಾರ್ಯಗಳ ವಿವೇಕವು
23 ನನ್ನ ಧ್ವನಿಯನ್ನು ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.
24 ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ಪ್ರತಿನಿತ್ಯವೂ ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆಯುವನೋ?
25 ಅಂತು ಭೂಮಿಯನ್ನು ಹಸನು ಮಾಡಿದ ಮೇಲೆ ಅಗಸೆಯನ್ನು, ಜೀರಿಗೆಯನ್ನು ಬಿತ್ತಿ,
ಗೋದಿಯನ್ನು ಸಾಲು ಸಾಲಾಗಿ ತಕ್ಕ ಸ್ಥಳದಲ್ಲಿಯೂ, ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೆ?
26 ಅವನ ದೇವರು ಇದನ್ನೆಲ್ಲಾ ಅವನಿಗೆ ಸರಿಯಾಗಿ ಕಲಿಸಿ, ತಿದ್ದುತ್ತಾನೆ.
27 ಆದುದರಿಂದ ಅವನು ಜೀರಿಗೆಯನ್ನು ಒಕ್ಕುವುದು ಯಂತ್ರದಿಂದಲ್ಲ ಅಥವಾ ಗಾಡಿಯ ಚಕ್ರದಿಂದಲ್ಲ ಆದರೆ ಕೋಲಿನಿಂದಲೇ;
ಅಗಸೆಯನ್ನು ಒಕ್ಕುವುದು ಕೋಲಿನಿಂದಲೇ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದಲೇ, ಕಣದ ಗುಂಡಿನಿಂದಲ್ಲ.
28 ಗೋದಿಯ ಕಾಳನ್ನು ನುಚ್ಚು ಮಾಡುವನೋ?
ತನ್ನ ಕುದುರೆಗಳ ಗಾಡಿಯ ಚಕ್ರವನ್ನು ಹೊಡೆಯುತ್ತಾ ಗುಂಡನ್ನು ಉರುಳಿಸುತ್ತಾ ಯಾವಾಗಲೂ ಒಕ್ಕುತ್ತಿರುವುದಿಲ್ಲ, ನುಚ್ಚು ಮಾಡುವುದಿಲ್ಲ.
29 ಈ ವಿವೇಕವು ಸಹ ಅತಿಶಯವಾದ ಆಲೋಚನಾಪರನೂ, ಸುಜ್ಞಾನ ಶ್ರೇಷ್ಠನೂ ಆಗಿರುವ,
ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ.
* 28:1 28:1 ಕಿರೀಟದ ಅಥವಾ ಜಯಮಾಲೆ. 28:16 28:16 ಕೀರ್ತನೆ 118:22-23; ರೋಮಾ. 9:33; 1 ಪೇತ್ರ 2:6 ನೋಡಿರಿ.