2
ಮಿಡತೆ ದಂಡಿನ ವರ್ಣನೆ
ಚೀಯೋನಿನಲ್ಲಿ ಕೊಂಬೂದಿರಿ,
ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ದಿನ ಮೊಳಗಲಿ.
ಸಮಸ್ತ ದೇಶದ ನಿವಾಸಿಗಳು ನಡುಗಲಿ,
ಏಕೆಂದರೆ ಯೆಹೋವನ ದಿನವು ಬರುತ್ತದೆ;
ಅದು ಸಮೀಪವಾಗಿದೆ.
ಅದು ಕತ್ತಲೆಯ ಮತ್ತು ಮೊಬ್ಬಿನ ದಿನವೂ,
ಕಾರ್ಮುಗಿಲಿನ ಕಗ್ಗತ್ತಲ ದಿನವೂ ಆಗಿದೆ.
ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ,
ಪ್ರಬಲವಾದ ದೊಡ್ಡ ಸೈನ್ಯವು ಬರುತ್ತದೆ.
ಅದರ ಹಾಗೆ ಹಿಂದೆಂದೂ ಬಂದಿಲ್ಲ,
ಇನ್ನು ಮುಂದೆಯೂ ಬರುವುದಿಲ್ಲ,
ತಲತಲಾಂತರಗಳ ವರ್ಷಗಳವರೆಗೂ ಬರುವುದಿಲ್ಲ.
ಅವುಗಳ ಮುಂದೆ ಬೆಂಕಿಯು ದಹಿಸುತ್ತದೆ,
ಹಿಂದೆ ಜ್ವಾಲೆಯು ಧಗಧಗಿಸುತ್ತದೆ.
ಅವು ಬರುವುದಕ್ಕೆ ಮೊದಲು ದೇಶವು ಏದೆನ್ ಉದ್ಯಾನದಂತೆ ಇತ್ತು,
ಅವು ದಾಟಿಹೋದ ಮೇಲೆ ಬೆಗ್ಗಾಡಾಯಿತು.
ಹೌದು, ಅವುಗಳಿಂದ ಯಾವುದೂ ತಪ್ಪಿಸಿಕೊಳ್ಳಲಾರದು.
ಆ ಸೈನ್ಯಗಳ ಆಕಾರವು ಕುದುರೆಗಳ ಆಕಾರದ ಹಾಗೆ ಕಾಣಿಸುತ್ತದೆ;
ಅವು ಸವಾರರಂತೆ ಓಡುತ್ತವೆ.
ಬೆಟ್ಟಗಳ ತುದಿಯಲ್ಲಿ ಅವು ಹಾರಾಡುತ್ತ ರಥಗಳಂತೆ ಚೀತ್ಕಾರ ಮಾಡುತ್ತವೆ;
ಕೂಳೆಯನ್ನು ದಹಿಸುವ ಬೆಂಕಿಯ ಜ್ವಾಲೆಯ ಶಬ್ದದ ಹಾಗೆಯೂ,
ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ.
ಅವುಗಳ ದೆಸೆಯಿಂದ ರಾಷ್ಟ್ರಗಳಿಗೆ ಪ್ರಾಣ ಸಂಕಟ;
ಎಲ್ಲರ ಮುಖಗಳು ಕಳೆಗುಂದುತ್ತವೆ.
ಅವು ಶೂರರಂತೆ ಓಡಾಡುತ್ತವೆ;
ಯೋಧರ ಹಾಗೆ ಗೋಡೆ ಏರುತ್ತವೆ;
ನೂಕುನುಗ್ಗಲ್ಲಿಲ್ಲದೆ ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ;
ಆಯುಧಗಳ ನಡುವೆ ನುಗ್ಗುತ್ತವೆ.
ಪಟ್ಟಣದಲ್ಲೆಲ್ಲಾ ತ್ವರೆಪಡುತ್ತವೆ,
ಗೋಡೆಯ ಮೇಲೆ ಓಡಾಡುತ್ತವೆ,
ಮನೆಗಳನ್ನು ಹತ್ತುತ್ತವೆ,
ಕಿಟಕಿಗಳಿಂದ ಕಳ್ಳರಂತೆ ಪ್ರವೇಶಿಸುತ್ತವೆ.
10 ಅವುಗಳ ಆಗಮನದಿಂದ ಭೂಮಿಯು ಕಂಪಿಸುತ್ತದೆ,
ಆಕಾಶಮಂಡಲವು ನಡಗುತ್ತದೆ,
ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ,
ಮತ್ತು ನಕ್ಷತ್ರಗಳು ಕಾಂತಿಗುಂದುತ್ತವೆ.
11 ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ,
ಆತನ ಸೈನ್ಯ ಬಹಳ ದೊಡ್ಡದಾಗಿದೆ;
ಆತನ ಆಜ್ಞೆಯನ್ನು ಪಾಲಿಸುವವನು ಬಲಿಷ್ಠನಾಗಿದ್ದಾನೆ.
ಯೆಹೋವನ ದಿನವು ಮಹತ್ತರವೂ ಮತ್ತು ಅತಿಭಯಂಕರವೂ ಆಗಿದೆ.
ಅದನ್ನು ಸಹಿಸಿಕೊಳ್ಳುವವರು ಯಾರು?
ಪಶ್ಚಾತ್ತಾಪಕ್ಕೆ ಕರೆ
12 ಯೆಹೋವನು ಹೀಗೆ ಹೇಳುತ್ತಾನೆ, “ಈಗಲಾದರೂ,
ನೀವು ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.
ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ.”
13 ನಿಮ್ಮ ಉಡುಪುಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ.
ನಿಮ್ಮ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ.
ಆತನು ದಯೆಯೂ, ಕನಿಕರವೂ,
ದೀರ್ಘಶಾಂತಿಯೂ, ಮಹಾಪ್ರೀತಿಯೂ ಉಳ್ಳವನಾಗಿ
ತಾನು ವಿಧಿಸುವ ಕೇಡಿಗೆ ಮನಮರುಗುವಂಥವನು.
14 ಆತನು ಒಂದು ವೇಳೆ ಮನಸ್ಸನ್ನು ಬದಲಾಯಿಸಿ,
ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು;
ನಿಮ್ಮ ದೇವರಾದ ಯೆಹೋವನಿಗೆ ನೀವು ಅರ್ಪಿಸುವ ನೈವೇದ್ಯವನ್ನು ಸ್ವೀಕರಿಸಿ ಸುವರಗಳನ್ನು ದಯಪಾಲಿಸಬಹುದು.
15 ಚೀಯೋನ್ ಪರ್ವತದ ಮೇಲೆ ನಿಂತು ಕೊಂಬೂದಿರಿ,
ಉಪವಾಸ ದಿನವನ್ನು ಗೊತ್ತುಮಾಡಿರಿ,
ಪವಿತ್ರ ಸಭೆಯನ್ನು ಕರೆಯಿರಿ.
16 ಜನರನ್ನು ಒಟ್ಟುಗೂಡಿಸಿರಿ,
ಪವಿತ್ರ ಸಭೆಯನ್ನು ಏರ್ಪಡಿಸಿರಿ.
ಹಿರಿಯರನ್ನು ಕೂಡಿಸಿರಿ,
ಮಕ್ಕಳನ್ನು ಸೇರಿಸಿರಿ,
ಮೊಲೆಕೂಸುಗಳನ್ನು ಸೇರಿಸಿರಿ.
ಮದುಮಗನು ತನ್ನ ಕೊಠಡಿಯಿಂದ ಹೊರಟುಬರಲಿ,
ವಧುವು ತನ್ನ ಕಲ್ಯಾಣಗೃಹದಿಂದ ಹೊರಟುಬರಲಿ.
17 ಯೆಹೋವನ ಸೇವಕರಾದ ಯಾಜಕರು,
ದ್ವಾರಮಂಟಪಕ್ಕೂ, ಯಜ್ಞವೇದಿಯ ನಡುವೆ ಅಳುತ್ತಾ
ಹೀಗೆ ಹೇಳಲಿ, “ಯೆಹೋವನೇ, ನಿನ್ನ ಜನರನ್ನು ಕರುಣಿಸು,
ಅನ್ಯಜನಾಂಗಗಳು ನಿಂದಿಸುವುದಕ್ಕೆ
ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡ.
‘ಅವರ ದೇವರು ಎಲ್ಲಿ?’ ಎಂದು
ಅವರು ಏಕೆ ನಿಂದಿಸಬೇಕು.”
ಯೆಹೋವನ ವಾಗ್ದಾನ
18 ಆಗ ಯೆಹೋವನು ತನ್ನ ದೇಶಕ್ಕೆ ಅಪಕೀರ್ತಿ ಬರಬಾರದೆಂದು
ತನ್ನ ಜನರನ್ನು ಕರುಣಿಸಿ,
19 ಅವರ ಬಿನ್ನಹವನ್ನು ಯೆಹೋವನು ಲಾಲಿಸಿ ಅವರಿಗೆ ಹೀಗೆ ಹೇಳಿದನು:
“ಇಗೋ, ನಾನು ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ.
ಅವುಗಳಿಂದ ನಿಮಗೆ ತೃಪ್ತಿಯಾಗುವುದು.
ನಿಮ್ಮನ್ನು ಅನ್ಯಜನಾಂಗಗಳ ನಿಂದೆಗೆ ಇನ್ನು ಗುರಿಮಾಡುವುದಿಲ್ಲ.
20 ನಾನು ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮ ಕಡೆಯಿಂದ ದೂರಮಾಡುವೆನು,
ಅದನ್ನು ಹಾಳುಬಿದ್ದ ಬಂಜರು ಭೂಮಿಗೂ ಓಡಿಸುವೆನು.
ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ,
ಅದರ ಹಿಂಭಾಗವನ್ನು ಪಶ್ಚಿಮ ಸಮುದ್ರಕ್ಕೂ ತಳ್ಳಿಬಿಡುವೆನು.
ಅದರ ದುರ್ವಾಸನೆಯು ಏರುವುದು.
ಏಕೆಂದರೆ ಆತನು ಮಹತ್ಕಾರ್ಯಗಳನ್ನು ಮಾಡುತ್ತಾನೆ.
21 ಭೂಮಿಯೇ, ಹೆದರಬೇಡ, ಹರ್ಷಿಸು, ಉಲ್ಲಾಸಿಸು,
ಯೆಹೋವನು ಮಹತ್ಕಾರ್ಯಗಳನ್ನು ಮಾಡಿದ್ದಾನೆ.
22 ಕಾಡುಮೃಗಗಳೇ ಅಂಜಬೇಡಿರಿ,
ಕಾಡುಗಾವಲಲ್ಲಿ ಹುಲ್ಲು ಮೊಳೆಯುವುದು,
ಮರವು ಹಣ್ಣು ಬಿಡುವುದು.
ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು.
23 ಚೀಯೋನಿನ ಜನರೇ ಹರ್ಷಿಸಿರಿ,
ನಿಮ್ಮ ದೇವರಾದ ಯೆಹೋವನಲ್ಲಿ ಉಲ್ಲಾಸಿಸಿರಿ.
ಆತನು ತನ್ನ ನೀತಿಯಿಂದ* ಮುಂಗಾರು ಮಳೆಯನ್ನು ನಿಮಗೆ ಕೊಡುವನು.
ಮುಂಗಾರು, ಹಿಂಗಾರು ಮಳೆಗಳನ್ನು
ಮೊದಲಿನಂತೆ ನಿಮಗಾಗಿ ಸುರಿಸುವನು.
24 ಕಣಜಗಳಲ್ಲಿ ಗೋದಿಯು ರಾಶಿರಾಶಿಯಾಗಿರುವುದು,
ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು.
25 ಗುಂಪು ಮಿಡತೆಗಳು, ಸಣ್ಣ ಮಿಡತೆಗಳು, ದೊಡ್ಡ ಮಿಡತೆಗಳು, ಚೂರಿ ಮಿಡತೆಗಳು,
ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ
ವರ್ಷಗಳನ್ನು ನಾನು ನಿಮಗೆ ತಿರುಗಿಕೊಡುವೆನು.
26 ನೀವು ಹೊಟ್ಟೆ ತುಂಬಾ ಊಟಮಾಡಿ ತೃಪ್ತಿಗೊಂಡು,
ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ
ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ.
ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
27 ನಾನು ಇಸ್ರಾಯೇಲಿನ ಮಧ್ಯದಲ್ಲಿ ನೆಲೆಯಾಗಿ ಇರುವವನು,
ನಾನೇ ನಿಮ್ಮ ದೇವರಾದ ಯೆಹೋವನು,
ನಾನಲ್ಲದೆ ಬೇರೆ ದೇವರು ನಿಮಗಿಲ್ಲ.
ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
ಯೆಹೋವನ ದಿನ
28 ತರುವಾಯ ನಾನು
ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು.
ನಿಮ್ಮ ಪುತ್ರಪುತ್ರಿಯರು ಪ್ರವಾದಿಸುವರು.
ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು.
ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು.
29 ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ
ನನ್ನ ಆತ್ಮವನ್ನು ಸುರಿಸುವೆನು.
30 ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು ಮಾಡುವೆನು.
ರಕ್ತ, ಬೆಂಕಿ, ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು.
31 ಯೆಹೋವನ ಮಹಾ ಭಯಂಕರವಾದ ದಿನವು ಬರುವುದಕ್ಕಿಂತ ಮೊದಲು,
ಸೂರ್ಯನು ಕತ್ತಲಾಗುವನು,
ಚಂದ್ರನು ರಕ್ತವಾಗುವನು.
32 ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು.
ಯೆಹೋವನು ತಿಳಿಸಿದಂತೆ ಚೀಯೋನಿನ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ
ಅನೇಕರು ಉಳಿಯುವರು.
ಯೆಹೋವನು ಹೇಳಿದಂತೆಯೇ,
ಉಳಿದವರಲ್ಲಿ ಯೆಹೋವನಿಂದ ಕರೆಯಲ್ಪಟ್ಟವರು ಬದುಕುವರು.”
* 2:23 2:23 ನೀತಿಯಿಂದ ನೀತಿಯ ಬೋಧಕರಿಂದ.