9
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಮತ್ತಾ 10:5-14; ಮಾರ್ಕ 6:7-13
ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಮತ್ತು ಅಧಿಕಾರಗಳನ್ನು ಕೊಟ್ಟು, ದೇವರ ರಾಜ್ಯದ ವಿಷಯವನ್ನು ಸಾರುವುದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವುದಕ್ಕೂ ಅವರನ್ನು ಕಳುಹಿಸಿದನು. ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು. ಇದಲ್ಲದೆ ಆ ಊರಿನಿಂದ ಹೊರಡುವ ತನಕ ನೀವು ಯಾವ ಮನೆಯಲ್ಲಿ ಇಳಿದುಕೊಂಡಿರುವಿರೋ, ಆ ಮನೆಯಲ್ಲೇ ಉಳಿದುಕೊಳ್ಳಿರಿ. ಮತ್ತು ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದೆ ಹೋದರೆ ಆ ಊರನ್ನು ನೀವು ಬಿಟ್ಟುಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಅಂದನು. ಆಗ ಅವರು ಹೊರಟು ಗ್ರಾಮಗಳಿಗೆ ಹೋಗಿ, ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿಯೂ ರೋಗಿಗಳನ್ನು ವಾಸಿಮಾಡುತ್ತಿದ್ದರು.
ಹೆರೋದನ ಕಳವಳ
ಮತ್ತಾ 14:1-12; ಮಾರ್ಕ 6:14-29
ಹೀಗಿರಲಾಗಿ ಉಪರಾಜನಾದ ಹೆರೋದನು ನಡೆದ ಸಂಗತಿಗಳನ್ನೆಲ್ಲಾ ಕೇಳಿ ಬಹಳವಾಗಿ ಕಳವಳಗೊಂಡನು, ಏಕೆಂದರೆ ಸತ್ತಿದ್ದ ಯೋಹಾನನು ತಿರುಗಿ ಬದುಕಿಬಂದಿದ್ದಾನೆಂದು ಕೆಲವರೂ, ಎಲೀಯನು ಕಾಣಿಸಿಕೊಂಡನೆಂದು ಕೆಲವರೂ, ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆಂದು ಮತ್ತೆ ಕೆಲವರೂ ಹೇಳಿಕೊಳ್ಳುತ್ತಿದ್ದರು. ಆದರೆ ಹೆರೋದನು, “ಯೋಹಾನನನ್ನು ನಾನೇ ಶಿರಚ್ಛೇದನಮಾಡಿಸಿದೆನಷ್ಟೆ. ಹಾಗಿದ್ದಲಿ ಇವನಾರು? ಇವನ ವಿಷಯವಾಗಿ ಆಶ್ಚರ್ಯಕರವಾದ ಸಂಗತಿಗಳನ್ನು ಕೇಳುತ್ತೇನಲ್ಲಾ” ಎಂದು ಹೇಳಿ ಅವನನ್ನು ನೋಡಬೇಕೆಂದು ಪ್ರಯತ್ನಿಸಿದನು.
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
ಮತ್ತಾ 14:13-21; ಮಾರ್ಕ 6:30-44; ಯೋಹಾ 6:1-14
10 ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಿದರು. ಆತನು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೇತ್ಸಾಯಿದವೆಂಬ ಊರಿಗೆ ಹೋದರು. 11 ಜನರ ಗುಂಪು ಇದನ್ನು ತಿಳಿದು ಯೇಸುವಿನ ಹಿಂದೆ ಬರಲು ಆತನು ಅವರನ್ನು ಪ್ರೀತಿಯಿಂದ ಸೇರಿಸಿಕೊಂಡು ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಅಗತ್ಯವಿದ್ದವರನ್ನು ಗುಣಪಡಿಸಿದನು.
12 ಸಂಜೆಯಾಗುತ್ತಿರಲು, ಆ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೋಸ್ಕರ ಊಟವಸತಿಗಳನ್ನು ಏರ್ಪಡಿಸಿಕೊಳ್ಳಲಿ; ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಲಾಗಿ, 13 ಆತನು, “ನೀವೇ ಅವರಿಗೆ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು. 14 ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು, 15 ಅವರು ಅದರಂತೆ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು. 16 ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು. 17 ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.
ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆಮಾಡಿದ್ದು
ಮತ್ತಾ 16:13-19; ಮಾರ್ಕ 8:27-29
18 ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು, 19 ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು. 20 ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
ಯೇಸು ತನ್ನ ಮರಣವನ್ನು ಮುಂತಿಳಿಸಿದ್ದು
ಮತ್ತಾ 16:20-28; ಮಾರ್ಕ 8:30-9:1
21 ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು. 22 ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು. 23 ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 24  ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. 25  ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು? 26  ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ, ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು. 27  ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
ಯೇಸು ಪ್ರಕಾಶರೂಪದಿಂದ ಕಾಣಿಸಿಕೊಂಡದ್ದು
ಮತ್ತಾ 17:1-8; ಮಾರ್ಕ 9:2-8
28 ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು. 29 ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು. 30 ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತನಾಡುತ್ತಿದ್ದರು. ಅವರು ಯಾರೆಂದರೆ ಮೋಶೆಯೂ ಎಲೀಯನೂ. 31 ಅವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ಹೊಂದಬೇಕಾಗಿದ್ದ ಮರಣದ ವಿಷಯವಾಗಿ ಮಾತನಾಡುತ್ತಿದ್ದರು. 32 ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು. 33 ಅವರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ, “ಗುರುವೇ ನಾವು ಇಲ್ಲೇ ಇರುವುದು ಒಳ್ಳೆಯದು, ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಎಲೀಯನಿಗೊಂದು ಹಾಗೂ ಮೋಶೆಗೊಂದು” ಎಂದು ಹೇಳಿದನು. ತಾನು ಏನು ಹೇಳುತ್ತಿದ್ದೇನೆಂದು ತನಗೇ ಗೊತ್ತಾಗಲಿಲ್ಲ. 34 ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಮೋಡವು ಅವರನ್ನು ಆವರಿಸಿಕೊಂಡಾಗ ಅವರು ಹೆದರಿದರು. 35 ಆಗ ಆ ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು, ಈತನ ಮಾತನ್ನು ಕೇಳಿರಿ” ಎಂಬ ವಾಣಿ ಆಯಿತು. 36 ಆ ವಾಣಿ ಆದ ಮೇಲೆ ಯೇಸುವನ್ನು ಮಾತ್ರ ಕಂಡರು. ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿನಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
ಯೇಸು ಮೂರ್ಛೆ ರೋಗಿಯನ್ನು ಸ್ವಸ್ಥಮಾಡಿದ್ದು
ಮತ್ತಾ 17:14-18; ಮಾರ್ಕ 9:14-27
37 ಮರುದಿನ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪೊಂದು ಆತನನ್ನು ಎದುರುಗೊಂಡಿತು. 38 ಆಗ ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು. 39 ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಟ್ಟುಬಿಡುವುದಿಲ್ಲ. 40 ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು” ಎಂದು ಹೇಳಿದನು. 41 ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿದನು. ಮತ್ತು ಆ ಮನುಷ್ಯನಿಗೆ “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು. 42 ಆ ಹುಡುಗನು ಇನ್ನೂ ಬರುತ್ತಿರುವಾಗಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಗೆ ಒಪ್ಪಿಸಿದನು. 43 ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು.
ಯೇಸು ತನ್ನ ಮರಣವನ್ನು ಎರಡನೆಯ ಸಾರಿ ಮುಂತಿಳಿಸಿದ್ದು
ಮತ್ತಾ 17:22,23; ಮಾರ್ಕ 9:30-32
ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ, ಆತನು ತನ್ನ ಶಿಷ್ಯರಿಗೆ, 44  “ನೀವಂತೂ ಈ ಮಾತುಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ, ಏಕೆಂದರೆ ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು” ಎಂದು ಹೇಳಿದನು. 45 ಅವರು ಈ ಮಾತನ್ನು ಗ್ರಹಿಸಲಿಲ್ಲ. ಅದು ಅವರಿಗೆ ಮರೆಯಾಗಿದ್ದುದರಿಂದ ಅದರ ಅರ್ಥವನ್ನು ಅವರು ತಿಳಿಯದೆ ಹೋದರು. ಆ ಮಾತಿನ ವಿಷಯದಲ್ಲಿ ಅವರು ಆತನನ್ನು ಕೇಳುವುದಕ್ಕೆ ಅಂಜಿದರು.
ದೊಡ್ಡವನು ಯಾರು?
ಮತ್ತಾ 18:1-5; ಮಾರ್ಕ 9:33-37
46 ತರುವಾಯ ಶಿಷ್ಯರೊಳಗೆ, ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಚಾರಹುಟ್ಟಿತು. 47 ಯೇಸು ಅವರ ಮನಸ್ಸಿನ ವಿಚಾರವನ್ನು ತಿಳಿದವನಾಗಿ, ಒಂದು ಚಿಕ್ಕಮಗುವನ್ನು ತನ್ನ ಪಕ್ಕದಲ್ಲಿ ನಿಲ್ಲಿಸಿ, 48 ಅವರಿಗೆ, “ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು, ಏಕೆಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು” ಎಂದು ಹೇಳಿದನು.
ವಿರುದ್ಧವಲ್ಲದವರು ನಮ್ಮ ಪಕ್ಷದವರೇ
ಮಾರ್ಕ 9:38-40
49 ಅದಕ್ಕೆ ಯೋಹಾನನು, “ಗುರುವೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವಬಿಡಿಸುವುದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು” ಅನ್ನಲು, 50 ಯೇಸು ಅವನಿಗೆ, “ಅಡ್ಡಿಮಾಡಬೇಡಿರಿ; ನಿಮಗೆ ವಿರುದ್ಧವಲ್ಲದವನು ನಿಮ್ಮ ಪಕ್ಷದವನೇ” ಎಂದು ಹೇಳಿದನು.
ಸಮಾರ್ಯದವರು ಯೇಸುವನ್ನು ಸೇರಿಸಿಕೊಳ್ಳದೆ ಹೋದದ್ದು
51 ಯೇಸು ತಾನು ಪರಲೋಕಕ್ಕೆ ಏರಿಹೋಗುವ ದಿನಗಳು ಸಮೀಪಿಸುತ್ತಿರುವಾಗ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸನ್ನು ದೃಢಮಾಡಿಕೊಂಡನು. 52 ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವುದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು. 53 ಆದರೆ ಯೇಸು ಯೆರೂಸಲೇಮಿಗೆ ಹೋಗುವವನಾದ್ದರಿಂದ, ಆ ಸಮಾರ್ಯದವರು ಆತನನ್ನು ಸೇರಿಸಿಕೊಳ್ಳಲಿಲ್ಲ. 54 ಆತನ ಶಿಷ್ಯರಾದ ಯಾಕೋಬ, ಯೋಹಾನರು ಇದನ್ನು ಕಂಡು, “ಕರ್ತನೇ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶ ಮಾಡಲಿ ಎಂದು ನಾವು ಆಜ್ಞಾಪಿಸುವುದಕ್ಕೆ ನಿನಗೆ ಮನಸ್ಸುಂಟೋ?” ಎಂದು ಕೇಳಲು, 55 ಯೇಸು ತಿರುಗಿಕೊಂಡು ಅವರನ್ನು ಗದರಿಸಿದನು*. 56 ಆಗ ಅವರೆಲ್ಲರೂ ಹೊರಟು ಬೇರೆ ಹಳ್ಳಿಗೆ ಹೋದರು.
ಯೇಸುವಿನ ಅನುಯಾಯಿಗಳು
ಮತ್ತಾ 8:19-22
57 ಅವರು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಲು, 58 ಆತನು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು.
59 ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಲು ಅವನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅಂದನು. 60 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು” ಎಂದು ಹೇಳಿದನು.
61 ಇನ್ನೊಬ್ಬನು ಸಹ, “ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುತ್ತೇನೆ, ಆದರೆ ಮೊದಲು ನನ್ನ ಮನೆಯವರಿಗೆ ಬೀಳ್ಕೊಟ್ಟು ಬರುವುದಕ್ಕೆ ನನಗೆ ಅಪ್ಪಣೆಯಾಗಬೇಕು” ಅಂದನು. 62 ಯೇಸು ಅವನಿಗೆ, “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದು ಹೇಳಿದನು.
* 9:55 9:55 ಕೆಲವು ಪ್ರತಿಗಳಲ್ಲಿ ಹೀಗೆ ಬರೆಯಲ್ಪಟ್ಟಿದೆ, “ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು. ನರಪುತ್ರನು ಬಂದಿರುವುದು ಮಾನವ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ ಅವರನ್ನು ರಕ್ಷಿಸುವುದಕ್ಕಾಗಿ ಬಂದನು.”