32
ಯೊರ್ದನ್ ನದಿಯ ಮೂಡಣ ದಿಕ್ಕಿನ ಕುಲಗಳು
ರೂಬೇನ್ ಕುಲದವರಿಗೂ, ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶವನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು. ಗಾದ್ ಮತ್ತು ರೂಬೇನ್ ಸಂತತಿಯವರು ಮೋಶೆ ಮತ್ತು ಮಹಾಯಾಜಕನಾದ ಎಲ್ಲಾಜಾರನು ಬಳಿಗೂ, ಸಮೂಹದ ಪ್ರಧಾನರ ಬಳಿಗೂ ಬಂದು ಹೇಳಿದ್ದೇನೆಂದರೆ, “ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್, ಇವು ಯೆಹೋವನು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪಟ್ಟಣಗಳು. ದನಕುರಿಗಳ ಮೇವಿಗೆ ತಕ್ಕ ಪ್ರದೇಶವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ದನ ಕುರಿಗಳುಂಟು. ಆದಕಾರಣ ನೀವು, ದಾಸರಾದ ನಮ್ಮ ಮೇಲೆ ದಯೆ ಇಟ್ಟು ನಮ್ಮನ್ನು ಯೊರ್ದನ್ ನದಿಯ ಆಚೆಗೆ ಬರಮಾಡಿದ ಈ ಪ್ರದೇಶವನ್ನೇ ಸ್ವತ್ತಾಗಿ ಕೊಡಬೇಕು” ಎಂದು ಕೇಳಿಕೊಂಡರು.
ಮೋಶೆಯು ಗಾದ್ ಮತ್ತು ರೂಬೇನ್ ಸಂತಾನದವರಿಗೆ, “ನಿಮ್ಮ ಸಹೋದರರು ಯದ್ಧಕ್ಕೆ ಹೋಗುವಾಗ ನೀವು ಅಲ್ಲೇ ಕುಳಿತುಕೊಂಡಿರಬೇಕೇನು? ಯೆಹೋವನು ಇಸ್ರಾಯೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಏಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ? ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ತಂದೆಯರನ್ನು ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರು. ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರಾಯೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರಾಯೇಲರು ತಮಗೆ ಯೆಹೋವನು ವಾಗ್ದಾನಮಾಡಿದ ದೇಶಕ್ಕೆ ಹೋಗಲು ಆಗಲಿಲ್ಲ. 10 ಆ ಕಾಲದಲ್ಲಿ ಯೆಹೋವನು ಕೋಪಗೊಂಡವನಾಗಿ ಪ್ರಮಾಣಮಾಡಿ, 11 ‘ಐಗುಪ್ತ ದೇಶದೊಳಗಿಂದ ಬಂದ ಈ ಜನರೊಳಗೆ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದುದರಿಂದ ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಪೂರ್ವಕವಾಗಿ ಕೊಟ್ಟ ದೇಶವನ್ನು, ಅವರೊಳಗೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರಲ್ಲಿ 12 ಕೆನಿಜ್ಜೀಯನಾದ ಯೆಫುನ್ನೆಯ ಮಗನಾದ ಕಾಲೇಬನೂ ಮತ್ತು ನೂನನ ಮಗನಾದ ಯೆಹೋಶುವನೂ ಇವರಿಬ್ಬರೇ ಹೊರತು ಯಾರೂ ನೋಡುವುದೇ ಇಲ್ಲ’ ” ಎಂದು ಖಂಡಿತವಾಗಿ ಹೇಳಿದನು.
13 ಯೆಹೋವನು ಇಸ್ರಾಯೇಲರ ಮೇಲೆ ಕೋಪಗೊಂಡವನಾಗಿ ತನ್ನ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳ ಆ ಸಂತತಿಯವರೆಲ್ಲರೂ ನಾಶವಾಗುವ ತನಕ ನಲ್ವತ್ತು ವರ್ಷ, ಇಸ್ರಾಯೇಲರನ್ನು ಮರುಭೂಮಿಯಲ್ಲೇ ತಿರುಗಾಡುವಂತೆ ಮಾಡಿದನು. 14 “ಈ ದುಷ್ಟ ಸಂತತಿಯವರಾದ ನೀವು ನಿಮ್ಮ ತಂದೆಗಳಿಗೆ ಬದಲಾಗಿ ಬಂದು ಇಸ್ರಾಯೇಲರ ಮೇಲಿದ್ದ ಯೆಹೋವನ ರೋಷಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತೀರಿ. 15 ನೀವು ಆತನನ್ನು ಹಿಂಬಾಲಿಸದೆ ಇರುವ ಕಾರಣ ಆತನು ಆ ಜನರನ್ನು ಮರುಭೂಮಿಯಲ್ಲಿ ಇರಿಸಿದರೆ, ಈ ಸಮಸ್ತ ಜನಾಂಗವನ್ನು ನೀವೇ ನಾಶ ಮಾಡುವಿರಿ” ಎಂದು ಹೇಳಿದನು.
16 ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ, ನಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನು ಕಟ್ಟಿಕೊಳ್ಳುವೆವು. 17 ನಾವಾದರೋ ಇಸ್ರಾಯೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೂ ಯುದ್ಧಕ್ಕೆ ಸನ್ನದ್ಧರಾಗಿ ಅವರ ಮುಂದೆ ನಡೆಯುವೆವು. ಅಷ್ಟರಲ್ಲಿ ನಮ್ಮ ಕುಟುಂಬಗಳವರು ಈ ದೇಶದ ನಿವಾಸಿಗಳ ಭಯದ ದೆಸೆಯಿಂದ ಕೋಟೆಕೋತ್ತಲುಗಳುಳ್ಳ ಊರುಗಳಲ್ಲಿ ವಾಸಿಸಲಿ. 18 ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಸ್ವತ್ತುಗಳನ್ನು ಸ್ವತಂತ್ರಿಸಿಕೊಳ್ಳುವ ವರೆಗೂ ನಾವು ನಮ್ಮ ಮನೆಗಳಿಗೆ ತಿರುಗಿ ಹೋಗುವುದಿಲ್ಲ. 19 ನಮಗೆ ಯೊರ್ದನ್ ನದಿಯ ಆಚೆ ಪೂರ್ವ ದಿಕ್ಕಿನಲ್ಲಿ ಸ್ವತ್ತನ್ನು ಅಪೇಕ್ಷಿಸುವುದಿಲ್ಲ” ಎಂದರು.
20 ಅದಕ್ಕೆ ಮೋಶೆ ಅವರಿಗೆ, “ನೀವು ಯೆಹೋವನ ಮಾತಿನಂತೆ ನಡೆದರೆ ನಿಮ್ಮಲ್ಲಿರುವ ಭಟರೆಲ್ಲರೂ ಯುದ್ಧಸನ್ನದ್ಧರಾಗಿ, 21 ಯೊರ್ದನ್ ನದಿಯ ಆಚೆಗೆ ಹೋಗಿ ಯೆಹೋವನು ತನ್ನ ವೈರಿಗಳನ್ನು ಹೊರಡಿಸಿಬಿಟ್ಟು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವ ತನಕ ಆತನ ಮುಂದೆ 22 ಯುದ್ಧಮಾಡಿ ತರುವಾಯ ನೀವು ತಿರುಗಿ ಬಂದು ಆತನ ದೃಷ್ಟಿಯಲ್ಲೂ, ಇಸ್ರಾಯೇಲರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ ಮತ್ತು ಈ ದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವತ್ತಾಗಿರುವುದು.
23 “ಆದರೆ ನೀವು ಹಾಗೆ ಮಾಡದೆ ಹೋದರೆ, ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವರಾಗುವಿರಿ ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ತಿಳಿದುಕೊಳ್ಳಿರಿ. 24 ನೀವು ನಿಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನೂ, ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ ಕಟ್ಟಿಕೊಂಡ ತರುವಾಯ ನಿಮ್ಮ ಮಾತಿನ ಪ್ರಕಾರ ಮಾಡಿರಿ” ಎಂದನು. 25 ಅದಕ್ಕೆ ಗಾದ್ಯರೂ ಮತ್ತು ರೂಬೇನ್ಯರೂ ಮೋಶೆಗೆ, “ಸ್ವಾಮಿಯವರ ಅಪ್ಪಣೆಯ ಪ್ರಕಾರ ದಾಸರಾದ ನಾವು ಮಾಡುತ್ತೇವೆ ಎಂದರು. 26 ನಮ್ಮ ಮಕ್ಕಳು, ಹೆಂಡತಿಯರೂ, ದನಕುರಿಗಳು ನಮ್ಮ ಸಂಪತ್ತು ಇಲ್ಲೇ ಗಿಲ್ಯಾದ್ ದೇಶದ ಊರುಗಳಲ್ಲಿ ಇರಲಿ. 27 ನಿನ್ನ ದಾಸರಾದ ನಮ್ಮಲ್ಲಿ ಯುದ್ಧಸನ್ನದ್ಧರೆಲ್ಲರೂ ಸ್ವಾಮಿಯವರ ಅಪ್ಪಣೆಯ ಪ್ರಕಾರ ಯೆಹೋವನ ಮುಂದುಗಡೆಯಲ್ಲಿ ಹೊರಟು ನದಿಯನ್ನು ದಾಟಿ ಯುದ್ಧಮಾಡುವೆವು” ಎಂದು ಉತ್ತರ ಕೊಟ್ಟರು.
28 ಆದಕಾರಣ ಮೋಶೆ ಅವರ ವಿಷಯವಾಗಿ ಮಹಾಯಾಜಕ ಎಲ್ಲಾಜಾರನಿಗೂ, ನೂನನ ಮಗನಾದ ಯೆಹೋಶುವನಿಗೂ ಇಸ್ರಾಯೇಲರ ಮತ್ತು ಗೋತ್ರಗಳ ಕುಲಾಧಿಪತಿಗಳಿಗೂ ಆಜ್ಞೆಮಾಡಿದನು. 29 ಮೋಶೆಯು ಅವರಿಗೆ, “ಗಾದ್ಯರಲ್ಲಿಯೂ, ರೂಬೇನ್ಯರಲ್ಲಿಯೂ ಯುದ್ಧಸನ್ನದ್ಧರಾದವರೆಲ್ಲರೂ ನಿಮ್ಮೊಡನೆ ಯೊರ್ದನ್ ನದಿಯನ್ನು ದಾಟಿ ಯೆಹೋವನ ಮುಂದೆ ಯುದ್ಧಮಾಡಿದರೆ ಕಾನಾನ್ ದೇಶವನ್ನು ನೀವು ಸ್ವಾಧೀನಮಾಡಿಕೊಂಡಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸ್ವಾಸ್ತ್ಯವಾಗುವುದಕ್ಕೆ ಕೊಡಬೇಕು. 30 ಆದರೆ ಅವರು ನಿಮ್ಮೊಡನೆ ಯುದ್ಧಕ್ಕೆ ಹೋಗದಿದ್ದರೆ ಕಾನಾನ್ ದೇಶದಲ್ಲಿಯೇ ಅವರಿಗೆ ಸ್ವಾಸ್ತ್ಯವಾಗಬೇಕು” ಎಂದು ಹೇಳಿದನು.
31 ಅದಕ್ಕೆ ಗಾದ್ಯರೂ ರೂಬೇನ್ಯರೂ ಉತ್ತರವಾಗಿ, “ಯೆಹೋವನು ನಿನ್ನ ದಾಸರಾದ ನಮಗೆ ಆಜ್ಞಾಪಿಸಿದಂತೆಯೇ ಮಾಡುವೆವು. 32 ನಾವು ಯೆಹೋವನ ಮುಂದೆ ಯುದ್ಧಸನ್ನದ್ಧರಾಗಿ ಕಾನಾನ್ ದೇಶಕ್ಕೆ ಹೊರಡುವೆವು, ಆಗ ಯೊರ್ದನ್ ನದಿಯ ಆಚೆಯೇ ನಮಗೆ ಸ್ವತ್ತು ದೊರಕಬೇಕು” ಎಂದರು.
33 ಹೀಗೆ ಮೋಶೆಯು ಗಾದ್ಯರಿಗೂ, ರೂಬೇನ್ಯರಿಗೂ, ಯೋಸೇಫನ ಮಗನಾದ ಮನಸ್ಸೆಯ ಕುಲದವರಲ್ಲಿ ಅರ್ಧಜನರಿಗೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅವುಗಳ ಎಲ್ಲಾ ಊರುಗಳನ್ನೂ ಮತ್ತು ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.
34 ಗಾದ್ಯನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್ ಊರುಗಳನ್ನು ಹೊಸದಾಗಿ ಕಟ್ಟಿಸಿದರು. 35 ಆಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, 36 ಬೇತ್‌ನಿಮ್ರಾ ಮತ್ತು ಬೇತ್ ಹಾರಾನಿನ ಸುತ್ತ ಗೋಡೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು. ತಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನು ಕಟ್ಟಿಕೊಂಡರು.
37 ರೂಬೇನ್ಯರ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್ ಊರುಗಳನ್ನು ಹೊಸದಾಗಿ ಕಟ್ಟಿಸಿದರು. 38 ಸಿಬ್ಮಾ ಎಂಬ ಊರುಗಳನ್ನೂ, ಬೇರೆ ಹೆಸರಿನಿಂದ ಉಚ್ಚರಿಸತಕ್ಕ ನೆಬೋ, ಬಾಳ್ಮೆಯೋನ್ ಎಂಬವುಗಳನ್ನೂ ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು. 39 ಮನಸ್ಸೆಯ ಮಗನಾದ ಮಾಕೀರನ ವಂಶದವರು ಗಿಲ್ಯಾದಿಗೆ ಹೋಗಿ ಅದನ್ನು ಸ್ವಾಧೀನಮಾಡಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
40 ಮೋಶೆಯು ಮನಸ್ಸೆಯ ಮಗನಾದ ಮಾಕೀರನ ಸಂತತಿಯವರಿಗೆ ಗಿಲ್ಯಾದ್ ಪ್ರದೇಶವನ್ನು ಕೊಡಲಾಗಿ ಅವರು ಅಲ್ಲೇ ವಾಸಮಾಡಿಕೊಂಡರು. 41 ಮನಸ್ಸೆಯ ವಂಶದವನಾದ ಯಾಯೀರನು ಯುದ್ಧಕ್ಕೆ ಹೊರಟು ಅಮೋರಿಯರ ಗ್ರಾಮಗಳನ್ನು ಸ್ವಾಧೀನಮಾಡಿಕೊಂಡು ಅವುಗಳಿಗೆ *ಯಾಯೀರನ ಗ್ರಾಮಗಳೆಂದು ಹೆಸರಿಟ್ಟನು. 42 ನೋಬಹನು ಯುದ್ಧಕ್ಕೆ ಹೊರಟು ಕೆನಾತ್ ಎಂಬ ಪಟ್ಟಣವನ್ನೂ ಮತ್ತು ಅದಕ್ಕೆ ಸೇರಿದ ಊರುಗಳನ್ನೂ ಜಯಿಸಿ ಅದಕ್ಕೆ ನೋಬಹ ಎಂದು ತನ್ನ ಹೆಸರನ್ನೇ ಕೊಟ್ಟನು.
* 32:41 32:41 ಇಬ್ರಿಯ ಪದ ಹವ್ವೋತ್ ಯಾಯೀರ್.