3
ಶತ್ರುಬಾಧಿತನಾದ ದೈವಭಕ್ತನ ಉದಯಗೀತೆ
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ ಕೀರ್ತನೆ.
ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ;
ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.
ಅನೇಕರು ನನ್ನ ವಿಷಯದಲ್ಲಿ, “ಅವನಿಗೆ ದೇವರಿಂದ *ಸಹಾಯವು ಆಗುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ.
ಸೆಲಾ
ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ;
ನೀನು ನನ್ನ ಗೌರವಕ್ಕೆ ಆಧಾರನೂ,
ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.
ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ,
ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ.
ಸೆಲಾ.
ಯೆಹೋವನು ನನ್ನನ್ನು ಕಾಪಾಡುವವನು,
ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.
ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ
ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.
ಯೆಹೋವನೇ, ನನ್ನ ದೇವರೇ,
ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ,
ಎದ್ದು ಬಂದು ನನ್ನನ್ನು ರಕ್ಷಿಸು.
ಜಯವು ಯೆಹೋವನಿಂದಲೇ ಉಂಟಾಗುವುದು.
ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ.
ಸೆಲಾ.
* 3:2 3:2 ಅಥವಾ ರಕ್ಷಣೆಯುಂಟಾಗುವುದಿಲ್ಲ. 3:8 3:8 ಅಥವಾ ರಕ್ಷಣೆಯು.