11
ದಾವೀದನ ರಾಜಾಭಿಷೇಕ
ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನಗೆ ರಕ್ತಸಂಬಂಧಿಗಳಾಗಿದ್ದೇವೆ. ಸೌಲನ ಆಳ್ವಿಕೆಯಲ್ಲಿ ಇಸ್ರಾಯೇಲರ ದಳಾಧಿಪತಿಯಾಗಿ ಇದ್ದವನು ನೀನೇ. ನಿನ್ನ ಕುರಿತು ನಿನ್ನ ದೇವರಾದ ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ, ಪಾಲಕನೂ ಆಗಿರುವಿ’ ಎಂದು ವಾಗ್ದಾನ ಮಾಡಿದ್ದಾನೆ.” ಎಂದು ಹೇಳಿದರು. ಆಗ ಅರಸನಾದ ದಾವೀದನು ತನ್ನ ಜೊತೆಯಲ್ಲಿ ಹೆಬ್ರೋನಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆಮಾಡಿಕೊಂಡನು. ಅವರು ಸಮುವೇಲನಿಗೆ ಯೆಹೋವನ ವಾಕ್ಯಾನುಸಾರವಾಗಿ ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.
ದಾವೀದನು ಯೆರೂಸಲೇಮನ್ನು ಸ್ವಾಧೀನಮಾಡಿಕೊಂಡದ್ದೂ
ದಾವೀದನು ಇಸ್ರಾಯೇಲರನ್ನು ಕರೆದುಕೊಂಡು ಅಂದಿನಕಾಲದಲ್ಲಿ ಯೆಬೂಸೆನಿಸಿಕೊಂಡಿದ್ದ ಯೆರೂಸಲೇಮಿಗೆ ಮುತ್ತಿಗೆ ಹಾಕಲು ಹೊರಟನು. ಆ ಪ್ರಾಂತ್ಯದ ಮೂಲನಿವಾಸಿಗಳು ಯೆಬೂಸಿಯರು. ಯೆಬೂಸಿಯರು ದಾವೀದನಿಗೆ, “ನೀನು ಒಳಗೆ ಬರಲು ಸಾಧ್ಯವಿಲ್ಲ” ಎಂದು ಹೇಳಿದರು. ಆದರೂ ಅವನು ದಾವೀದನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು. ಆ ದಿನ ದಾವೀದನು ತನ್ನೊಂದಿಗೆ ಬಂದಿದ್ದ ಇಸ್ರಾಯೇಲರನ್ನು ಕುರಿತು “ಯಾರು ಯೆಬೂಸಿಯರನ್ನು ಮೊದಲು ಸೋಲಿಸುವನೋ ಅವನು ದಳಾಧಿಪತಿ ಆಗುವನು” ಎಂದು ಹೇಳಿದನು. ಚೆರೂಯಳ ಮಗನಾದ ಯೋವಾಬನು ಮೊದಲು ದಾಳಿ ಮಾಡಿದ್ದರಿಂದ ಅವನೇ ದಳಾಧಿಪತಿ ಆದನು. ದಾವೀದನು ಆ ಕೋಟೆಯನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರಿಂದ ಅದಕ್ಕೆ ದಾವೀದನಗರ ಎಂದು ಹೆಸರಾಯಿತು. ಅವನು ಮಿಲ್ಲೋವಿನಿಂದ ಪ್ರಾರಂಭಿಸಿ ಸುತ್ತಲೂ ಪಟ್ಟಣವನ್ನು ಭದ್ರಪಡಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಭದ್ರಪಡಿಸಿದನು. ಸೇನಾಧೀಶ್ವರನಾದ ಯೆಹೋವನು ದಾವೀದನ ಸಂಗಡ ಇದ್ದುದರಿಂದ ಅವನು ಅಭಿವೃದ್ಧಿಯಾಗುತ್ತಾ ಹೋದನು.
ದಾವೀದನ ರಣವೀರರು
10 ರಾಜ್ಯಸಂಬಂಧವಾಗಿ ದಾವೀದನಿಗೆ ವಿಶೇಷ ಸಹಾಯಕರಾಗಿದ್ದು, ಯೆಹೋವನ ವಾಕ್ಯಾನುಸಾರವಾಗಿ ಇಸ್ರಾಯೇಲರೆಲ್ಲರೊಡನೆ ಅವನನ್ನು ಅರಸನನ್ನಾಗಿ ಮಾಡಿದ ಮುಖ್ಯಸ್ಥರನ್ನು ಕುರಿತದ್ದು. 11 ದಾವೀದನ ಯುದ್ಧವೀರರ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಮೂವತ್ತು ಶೂರರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಒಂದೇ ಸಾರಿ ಮುನ್ನೂರು ಜನರನ್ನು ಕೊಂದನು. 12 ಎರಡನೆಯವನು ಅಹೋಹ್ಯನಾದ ದೋದೋ ಎಂಬುವವನ ಮಗನಾಗಿರುವ ಎಲ್ಲಾಜಾರನು. ಇವನೂ ಆ ಮೂವರು ಶೂರರಲ್ಲಿ ಒಬ್ಬನು. 13 ಫಿಲಿಷ್ಟಿಯರು ಪಸ್ದಮ್ಮೀಮಿನಲ್ಲಿ ಯುದ್ಧಕ್ಕೆ ಬಂದಾಗ ಇವನು ದಾವೀದನ ಜೊತೆಯಲ್ಲಿದ್ದನು. ಅಲ್ಲಿ ಒಂದು ಜವೆಗೋದಿಯ ಹೊಲವಿತ್ತು. ಇಸ್ರಾಯೇಲರು ಫಿಲಿಷ್ಟಿಯರಿಗೆ ಹೆದರಿ ಓಡಿಹೋಗಲು ಪ್ರಯತ್ನಿಸಿದಾಗ, 14 ಆ ವೀರರು ಹೊಲದ ಮಧ್ಯದಲ್ಲೇ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದು, ಹೊಲವನ್ನು ಕಾಪಾಡಿದರು. ಹೀಗೆ ಯೆಹೋವನು ಅವನಿಗೆ ಮಹಾ ಜಯವನ್ನುಂಟುಮಾಡಿದನು.
15 ದಾವೀದನು ಅದುಲ್ಲಾಮ್ ಗಿರಿಯ ಗವಿಯಲ್ಲಿದ್ದಾಗ ಅವನ ಮೂವತ್ತು ಜನ ಪ್ರಸಿದ್ಧಶೂರರಲ್ಲಿ ಮೂವರು ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿರುವುದನ್ನು ಕಂಡರು. 16 ಫಿಲಿಷ್ಟಿಯರು ಬೇತ್ಲೆಹೇಮಿನಲ್ಲಿ ಒಂದು ಕಾವಲು ದಂಡನ್ನು ಇಟ್ಟಿದ್ದರು. ಆಗ ದಾವೀದನು ದುರ್ಗದಲ್ಲಿದ್ದನು. 17 ದಾವೀದನು ಲವಲವಿಕೆಯಿಂದ, “ಬೇತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದು ಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದು ಹೇಳಿದನು. 18 ಕೂಡಲೆ ಆ ಮೂವರು ವೀರರು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿ ಹೋಗಿ, ಬೇತ್ಲೆಹೇಮ್ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತಂದು ಕೊಟ್ಟರು. 19 ಆದರೆ ದಾವೀದನು “ತಮ್ಮ ಜೀವವನ್ನು ಪರಿಗಣಿಸದೆ ಪರಾಕ್ರಮದಿಂದ ಈ ನೀರನ್ನು ತಂದು ಕೊಟ್ಟಿದ್ದಾರೆ. ಈ ನೀರನ್ನು ಕುಡಿದರೆ ಈ ಪರಾಕ್ರಮಶಾಲಿ ವೀರರ ರಕ್ತವನ್ನು ಕುಡಿದಂತೆ ಆಗುವುದು. ಇಂತಹ ಕಾರ್ಯವನ್ನು ನನ್ನಿಂದ ಆಗದಂತೆ ನನ್ನ ದೇವರು ತಡೆಯಲಿ” ಎಂದು ಹೇಳುತ್ತಾ, ಆ ನೀರನ್ನು ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು.
20 ಯೋವಾಬನ ತಮ್ಮನಾದ ಅಬ್ಷೈಯು ಬೇರೆ ಮೂರು ಜನರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಜನರನ್ನು ಕೊಂದದ್ದರಿಂದ ಈ ಮೂವರಲ್ಲಿ ಕೀರ್ತಿಗೊಂಡನು. 21 ಉಳಿದ ಇಬ್ಬರಿಗಿಂತ ಇವನೇ ಘನತೆಯುಳ್ಳವನಾಗಿದ್ದು ಅವರ ನಾಯಕನಾದನು. ಆದರೂ ಇವನು ಮೊದಲಿನ ಮೂರು ಜನರಿಗೆ ಸಮಾನನಾಗಿರಲಿಲ್ಲ. 22 ಅನೇಕ ಶೂರಕೃತ್ಯಗಳನ್ನು ನಡಿಸಿದ ಕಬ್ಜಯೇಲನವನಾದ ಪರಾಕ್ರಮಶಾಲಿಯ ಮೊಮ್ಮಗನೂ, ಯೆಹೋಯಾದನ ಮಗನೂ ಆದ ಬೆನಾಯನು ಇನ್ನೊಬ್ಬನು. ಇವನು ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇನ್ನೂರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು, ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು. 23 ಮತ್ತೊಮ್ಮೆ ಏಳುವರೆ ಅಡಿ ಎತ್ತರದ ಅತಿ ಬಲವಾದ ಈಟಿಯನ್ನು ಹೊಂದಿದ್ದ ಒಬ್ಬ ಐಗುಪ್ತ್ಯನನ್ನು ಕೊಂದನು. ಆ ಐಗುಪ್ತ್ಯನ ಕೈಯಲ್ಲಿದ್ದ ಈಟಿಯು ನೇಕಾರರ ಕುಂಟೆಯಂತಿತ್ತು. ಆದರೆ ಇವನ ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದ ಅವನನ್ನು ಕೊಂದನು. 24 ಈ ಪರಾಕ್ರಮ ಕೃತ್ಯದಿಂದ ಯೆಹೋಯಾದನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುವಾಸಿಯಾದನು. 25 ಮೂವತ್ತು ಜನರಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದರೂ ಮೊದಲಿನ ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ಮಾಡಿದನು.
26 ಯುದ್ಧವೀರರ ಇನ್ನೊಂದು ಪಟ್ಟಿ: ಯೋವಾಬನ ತಮ್ಮನಾದ ಅಸಾಹೇಲನು, ಬೇತ್ಲೆಹೇಮಿನ ದೋದೋವಿನ ಮಗನಾದ ಎಲ್ಖಾನಾನ್, 27 ಹರೋರಿನವನಾದ ಶಮ್ಮೋತ್, ಪೆಲೋನ್ಯನಾದ ಹೆಲೆಚ್, 28 ತೆಕೋವದ ಇಕ್ಕೇಷನ ಮಗನಾದ ಈರ, ಅನತೋತಿನವನಾದ ಅಬೀಯೆಜೆರ, 29 ಹುಷ ಊರಿನವನಾದ ಸಿಬ್ಬೆಕೈ, ಅಹೋಹಿನವನಾದ ಈಲೈ, 30 ನೆಟೋಫದವನಾದ ಮಹರೈ ಮತ್ತು ಬಾಣನ ಮಗನಾದ ಹೇಲೆದ್, 31 ಬೆನ್ಯಾಮೀನ ದೇಶದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಈತೈ. ಪಿರಾತೋನ್ಯನಾದ ಬೆನಾಯ, 32 ಹಲೇಗಾಷಿನವನಾದ ಹೂರೈ, ಅರಾಬಾ ತಗ್ಗಿನವನಾದ ಅಬೀಯೇಲ್, 33 ಬಹರೂಮ್ಯನಾದ ಅಜ್ಮಾವೆತ್, ಶಾಲ್ಬೋನ್ಯನಾದ ಎಲೆಯಖ್ಬ. 34 ಗೀಜೋನ್ಯನಾದ ಹಾಷೇಮನ ಮಕ್ಕಳು, ಹರಾರ್ಯನಾದ ಶಾಗೇಯನ ಮಗ, ಯೋನಾತಾನ, 35 ಹರಾರ್ಯನಾದ ಶಾಕಾರನ ಮಗ ಅಹೀಯಾಮ್, ಊರನ ಮಗನಾದ ಎಲೀಫಲ್, 36 ಮೆಕೆರಾತ್ಯನಾದ ಹೇಫೆರ್, ಪೆಲೋನ್ಯನಾದ ಅಹೀಯ, 37 ಕರ್ಮೆಲ್ಯನಾದ ಹಚ್ರೋ, ಎಜ್ಬೈಯ ಮಗನಾದ ನಾರೈ, 38 ನಾತಾನನ ತಮ್ಮನಾದ ಯೋವೇಲ್, ಹಗ್ರೀಯನ ಮಗನಾದ ಮಿಬ್ಹಾರ, 39 ಅಮ್ಮೋನಿಯನಾದ ಚೆಲೆಕ್ ಬೇರೋತ್ಯನೂ ಚೆರೂಯಳ ಮಗನಾದ ಯೋವಾಬನೂ ಆಯುಧ ಹೊರುವವನು ಆಗಿದ್ದ ನಹರೈ, 40 ಇತ್ರೀಯರಾದ ಈರ, ಗಾರೇಬರು, 41 ಹಿತ್ತಿಯನಾದ ಊರೀಯ, ಅಹ್ಲೈಯ ಮಗನಾದ ಜಾಬಾದ್, 42 ರೂಬೇನ್ಯನೂ ತನ್ನ ಜೊತೆಯಲ್ಲಿ ಬಂದ ಮೂವತ್ತು ಜನರು. ರೂಬೇನ್ಯರ ಮುಖ್ಯಸ್ಥನೂ ಶೀಜನ ಮಗನೂ ಆದ ಅದೀನ 43 ಮಾಕನ ಮಗನಾದ ಹಾನಾನ್, ಮೆತೆನ ಊರಿನವನಾದ ಯೋಷಾಫಾಟ್, 44 ಅಷ್ಟೆರಾತ್ಯನಾದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ ಯೆಗೀಯೇಲರು, 45 ಶಿಮ್ರಿಯ ಮಗನಾದ ಎದೀಗಯೇಲ್, ಎದೀಗೇಲನ ತಮ್ಮನೂ ತೀಚೀಯನೂ ಆದ ಯೋಹ, 46 ಎಲ್ನಾಮನ ಮಕ್ಕಳಾದ ಮಹವೀಯನಾದ ಎಲೀಯೇಲ್, ಯೆರೀಬೈ ಮತ್ತು ಯೋಷವ್ಯರು. ಮೋವಾಬ್ಯನಾದ ಇತ್ಮ, 47 ಎಲೀಯೇಲ್ ಓಬೇದರು, ಮೆಚೋಬಾಯದವನಾದ ಯಾಸೀಯೇಲನು ಇವರೇ.