2 ಪೂರ್ವಕಾಲವೃತ್ತಾಂತ
ಗ್ರಂಥಕರ್ತೃತ್ವ
ಯೆಹೂದ್ಯ ಸಂಪ್ರದಾಯವು ಶಾಸ್ತ್ರಿಯಾದ ಎಜ್ರನಿಗೆ ಗ್ರಂಥಕರ್ತನ ಮನ್ನಣೆಯನ್ನು ನೀಡುತ್ತದೆ. 2 ಪೂರ್ವಕಾಲವೃತ್ತಾಂತವು ಸೊಲೊಮೋನನ ಆಡಳಿತದ ವೃತ್ತಾಂತದೊಂದಿಗೆ ಪ್ರಾರಂಭವಾಗುತ್ತದೆ. ಸೊಲೊಮೋನನ ಮರಣದ ನಂತರ ಸಾಮ್ರಾಜ್ಯವು ವಿಭಜನೆಯಾಯಿತು. ಎರಡನೇ ಪೂರ್ವಕಾಲವೃತ್ತಾಂತವು, 1 ಪೂರ್ವಕಾಲವೃತ್ತಾಂತಕ್ಕೆ ಸಹಪುಸ್ತಕವಾಗಿದ್ದು, ಇಬ್ರಿಯ ಜನರ ಚರಿತ್ರೆಯನ್ನು ಅರಸನಾದ ಸೊಲೊಮೋನನ ಆಳ್ವಿಕೆಯಿಂದ ಬಾಬೆಲಿನ ಸೆರೆವಾಸದವರೆಗೂ ಮುಂದುವರಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 450-425 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬೆಲಿನ ಸೆರೆವಾಸದಿಂದ ಬಂದ ಇಸ್ರಾಯೇಲಿನ ಹಿಂದಿರುಗಿರುವಿಕೆಯ ನಂತರವಿರುವಂಥದ್ದು ಎಂಬುದು ಸ್ಪಷ್ಟವಾಗಿದ್ದರು, ಪೂರ್ವಕಾಲವೃತ್ತಾಂತದ ದಿನಾಂಕವನ್ನು ನಿಗದಿಪಡಿಸುವುದು ಕಷ್ಟಸಾಧ್ಯವಾಗಿದೆ.
ಸ್ವೀಕೃತದಾರರು
ಪ್ರಾಚೀನ ಯೆಹೂದ್ಯ ಜನರು ಮತ್ತು ಸತ್ಯವೇದದ ನಂತರದ ಓದುಗಾರರು.
ಉದ್ದೇಶ
2 ಪೂರ್ವಕಾಲವೃತ್ತಾಂತ ಪುಸ್ತಕವು ಬಹುತೇಕ 2 ಸಮುವೇಲನ ಮತ್ತು 2 ಅರಸುಗಳ ಅದೇ ಮಾಹಿತಿಯನ್ನು ಒಳಗೊಂಡಿದೆ. 2 ಪೂರ್ವಕಾಲವೃತ್ತಾಂತ ಪುಸ್ತಕವು ಆ ಕಾಲಾವಧಿಯ ಯಾಜಕತ್ವದ ಅಂಶಕ್ಕೆ ಹೆಚ್ಚು ಗಮನಹರಿಸುತ್ತದೆ. 2 ಪೂರ್ವಕಾಲವೃತ್ತಾಂತವು ಮುಖ್ಯವಾಗಿ ದೇಶದ ಧಾರ್ಮಿಕ ಚರಿತ್ರೆಯ ಮೌಲ್ಯಮಾಪನವಾಗಿದೆ.
ಮುಖ್ಯಾಂಶ
ಇಸ್ರಾಯೇಲಿನ ಆಧ್ಯಾತ್ಮಿಕ ಪರಂಪರೆ
ಪರಿವಿಡಿ
1. ಸೊಲೊಮೋನನ ನಾಯಕತ್ವದಲ್ಲಿ ಇಸ್ರಾಯೇಲಿನ ಚರಿತ್ರೆ — 1:1-9:31
2. ರೆಹಬ್ಬಾಮನಿಂದ ಆಹಾಜನ ವರೆಗೆ — 10:1-28:37
3. ಹಿಜ್ಕೀಯನಿಂದ ಯೆಹೂದದ ಅಂತ್ಯದವರೆಗೆ — 29:1-36:23
1
ಸೊಲೊಮೋನನಿಗೆ ಯೆಹೋವನು ಕೊಟ್ಟ ವಿಶೇಷಜ್ಞಾನ
ದಾವೀದನ ಮಗನಾದ ಸೊಲೊಮೋನನು ತನ್ನ ರಾಜ್ಯದಲ್ಲಿ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಯೆಹೋವನು ಅವನ ಸಂಗಡ ಇದ್ದು ಅವನನ್ನು ಬಲಾಢ್ಯನಾಗುವಂತೆ ಆಶೀರ್ವದಿಸಿ ನಡೆಸಿದನು. ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಗೋತ್ರ ಪ್ರಧಾನರಾದವರೊಂದಿಗೂ, ಇಸ್ರಾಯೇಲ್ ಪ್ರಭುಗಳೊಂದಿಗೂ ಮಾತನಾಡಿದನು. ಅವನ ಸಂಗಡ ಇದ್ದ ಸರ್ವಸಮೂಹದೊಡನೆ ಗಿಬ್ಯೋನಿನಲ್ಲಿರುವ ಪೂಜಾಸ್ಥಳಕ್ಕೆ ಹೋದನು. ಏಕೆಂದರೆ ಯೆಹೋವನ ಸೇವಕನಾದ ಮೋಶೆಯು ಅರಣ್ಯದಲ್ಲಿ ಮಾಡಿದ ದೇವದರ್ಶನದ ಗುಡಾರವು ಅಲ್ಲಿತ್ತು. ದಾವೀದನು ದೇವರ ಮಂಜೂಷವನ್ನು ಕಿರ್ಯತ್ಯಾರೀಮಿನಿಂದ ತಾನು ಅದನ್ನಿರಿಸಲು ಸಿದ್ಧ ಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಅವನು ಯೆರೂಸಲೇಮಿನಲ್ಲಿ ಅದಕ್ಕಾಗಿ ಗುಡಾರವನ್ನು ಮಾಡಿಸಿದ್ದನು. ಇದಲ್ಲದೆ ಹೂರನ ಮಗನಾದ ಊರಿಯ, ಈತನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಯು ಅಲ್ಲೇ ಯೆಹೋವನ ಗುಡಾರದ ಮುಂದಿತ್ತು. ಸೊಲೊಮೋನನೂ ಆ ಸಮೂಹದವರೂ ಅಲ್ಲಿಗೆ ಹೋದರು. ಆಗ ಸೊಲೊಮೋನನು ದೇವದರ್ಶನ ಗುಡಾರದ ಬಳಿಯಲ್ಲಿ ಯೆಹೋವನ ಮುಂದೆ ಇರುವ ತಾಮ್ರದ ಯಜ್ಞವೇದಿಯ ಬಳಿಗೆ ಹೋಗಿ ಅದರ ಮೇಲೆ ಸಾವಿರ ಸರ್ವಾಂಗಹೋಮಗಳನ್ನು ಸಮರ್ಪಿಸಿದನು. ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು ಅವನಿಗೆ, “ನಿನಗೆ, ಯಾವ ವರ ಬೇಕು ಕೇಳಿಕೋ” ಎಂದು ಹೇಳಲು ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನಿಗೆ ಮಹಾ ದಯೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಅರಸನಾಗುವಂತೆ ಮಾಡಿದೆ. ಈಗ ಯೆಹೋವನಾದ ದೇವರೇ, ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವು ನೆರವೇರಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯವಾದ ಜನಾಂಗದವರಿಗೆ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀ. 10 ನಿನ್ನ ಪ್ರಜೆಗಳಾದ ಈ ಮಹಾ ಜನಾಂಗವನ್ನು ಮುನ್ನಡೆಸುವುದಕ್ಕೂ, ಆಳುವುದಕ್ಕೂ, ನ್ಯಾಯತೀರಿಸುವುದಕ್ಕೂ ಜ್ಞಾನ ವಿವೇಕಗಳನ್ನು ಅನುಗ್ರಹಿಸು” ಎಂದು ಕೇಳಿದನು. 11 ಆಗ ದೇವರು ಸೊಲೊಮೋನನಿಗೆ, “ಇದು ನಿನ್ನ ಆಕಾಂಕ್ಷೆಯಾಗಿ ಇದ್ದುದರಿಂದಲೂ ಘನವನ್ನೂ, ಧನವನ್ನೂ, ಐಶ್ವರ್ಯವನ್ನೂ, ನಿನ್ನ ವೈರಿಗಳ ಪ್ರಾಣವನ್ನಾಗಲಿ, ದೀರ್ಘಾಯುಷ್ಯವನ್ನಾಗಲಿ ಕೇಳದೆ, ನಾನು ಯಾರನ್ನು ಮುನ್ನಡೆಸಲು ನಿನ್ನನ್ನು ಅರಸನನ್ನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನ, ವಿವೇಕಗಳನ್ನು ನೀನು ಕೇಳಿಕೊಂಡದ್ದರಿಂದಲೂ ಜ್ಞಾನವೂ, ವಿವೇಕವೂ ನಿನಗೆ ಕೊಡಲ್ಪಟ್ಟಿವೆ. 12 ಇದಲ್ಲದೆ ನಿನಗಿಂತ ಮೊದಲು ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ, ನಿನ್ನ ತರುವಾಯ ಯಾರಿಗೂ ಇರದಂಥ ಘನ, ಧನ, ಐಶ್ವರ್ಯಗಳನ್ನೂ ಅನುಗ್ರಹಿಸುವೆನು” ಎಂದನು. 13 ಆನಂತರ ಸೊಲೊಮೋನನು ದೇವದರ್ಶನದ ಗುಡಾರವನ್ನು ಬಿಟ್ಟು, ಗಿಬ್ಯೋನಿನಲ್ಲಿರುವ ಪೂಜಾಸ್ಥಳದಿಂದ ಯೆರೂಸಲೇಮಿಗೆ ಬಂದು, ಇಸ್ರಾಯೇಲ್ ರಾಜ್ಯವನ್ನು ಆಳಿದನು.
ಸೊಲೊಮೋನನ ವೈಭವ
14 ಅರಸನಾದ ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಸಾವಿರದ ನಾನೂರು ರಥಗಳೂ ಮತ್ತು ಹನ್ನೆರಡು ಸಾವಿರ ರಾಹುತರೂ ಅವನಿಗೆ ಇದ್ದರು. ಇವರನ್ನು ರಥದ ಪಟ್ಟಣಗಳಲ್ಲಿಯೂ ಕೆಲವರನ್ನು ಯೆರೂಸಲೇಮಿನಲ್ಲಿ ಅರಸನೊಂದಿಗೂ ಇರಿಸಿದನು. ಉಳಿದವುಗಳನ್ನು ರಥಗಳಿಗಾಗಿ ನೇಮಿಸಿದ ಪಟ್ಟಣದಲ್ಲಿ ಇರಿಸಿದನು. 15 ಅರಸನು ಯೆರೂಸಲೇಮಿನಲ್ಲಿ ಬೆಳ್ಳಿ ಬಂಗಾರವು ಹೇರಳವಾಗಿದ್ದು ಅವು ಕಲ್ಲಿನಂತೆಯೂ, ಹಾಗು ದೇವದಾರು ಮರಗಳು ತಗ್ಗಿನಲ್ಲಿರುವ ಅತ್ತಿಮರಗಳಂತೆ ಹೇರಳವಾಗಿರುವಂತೆ ಮಾಡಿದನು. 16 ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ್ಯ ದೇಶದವುಗಳಾಗಿದ್ದವು. ಅವನ ವರ್ತಕರು ಅವುಗಳನ್ನು ಹಿಂಡು ಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು. 17 ರಥಕ್ಕೆ ಆರುನೂರು ಬೆಳ್ಳಿ ನಾಣ್ಯಗಳಂತೆ, ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳಂತೆ ಕೊಟ್ಟು, ರಥಗಳನ್ನೂ, ಕುದುರೆಗಳನ್ನೂ ಐಗುಪ್ತ್ಯ ದೇಶದಿಂದ ತರಿಸುತ್ತಿದ್ದರು. ಇವುಗಳನ್ನು ಹಿತ್ತಿಯರ ಮತ್ತು ಅರಾಮ್ಯರ ಅರಸರ ಮುಖಾಂತರವೇ ತರಿಸುತ್ತಿದ್ದರು.