11
ನೀರಿನ ಮೇಲೆ ರೊಟ್ಟಿ
ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು,
ಬಹಳ ದಿನಗಳ ನಂತರ ಅದು ನಿನಗೆ ಸಿಕ್ಕುವುದು.
ನೀನು ಅದನ್ನು ಏಳು ಮತ್ತು ಎಂಟು ಮಂದಿಗೆ ಹಂಚಿಬಿಡು.
ಲೋಕದಲ್ಲಿ ಮುಂದೆ ಸಂಭವಿಸುವ ಕೇಡು ನಿನಗೆ ಗೊತ್ತಿಲ್ಲ.
ಮಳೆ ತುಂಬಿದ ಮೋಡಗಳು,
ತಾವಾಗಿಯೇ ಭೂಮಿಯ ಮೇಲೆ ಸುರಿದುಬಿಡುವವು,
ಮರವು ಉತ್ತರಕ್ಕಾಗಲಿ, ದಕ್ಷಿಣಕ್ಕಾಗಲಿ,
ಬಿದ್ದರೆ ಬಿದ್ದ ಸ್ಥಳದಲ್ಲಿಯೇ ಇರುವುದು.
ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ,
ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯುವುದಿಲ್ಲ.
ಗಾಳಿಯ ಮಾರ್ಗವನ್ನೂ,
ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ,
ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ,
ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ.
ಮುಂಜಾನೆ ಬೀಜ ಬಿತ್ತು;
ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ,
ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ,
ಇಲ್ಲವೇ ಒಂದು ವೇಳೆ ಎರಡೂ
ಒಳ್ಳೆಯದಾಗುವುದೋ ನಿನಗೆ ತಿಳಿಯದು.
ಯೌವನದಲ್ಲಿ ಸೃಷ್ಟಿಕರ್ತನನ್ನು ಸ್ಮರಿಸು
ನಿಜವಾಗಿ ಬೆಳಕು ಇಂಪಾಗಿಯೂ,
ಮತ್ತು ಸೂರ್ಯನನ್ನು ಕಾಣುವುದು ಕಣ್ಣಿಗೆ ಹಿತವಾಗಿಯೂ ಇರುವುದು.
ಬಹಳ ವರ್ಷ ಬದುಕುವವನು,
ಅವುಗಳಲ್ಲೆಲ್ಲಾ ಆನಂದಿಸಲಿ,
ಆದರೆ ಅಂಧಕಾರದ ದಿನಗಳನ್ನು ನೆನಪಿಗೆ ತರಲಿ,
ಏಕೆಂದರೆ ಅವು ಬಹಳವಾಗಿರುವವು.
ಮುಂದಾಗುವುದೆಲ್ಲ ವ್ಯರ್ಥವೇ.
ಯೌವನಸ್ಥನೇ, ಯೌವನಪ್ರಾಯದಲ್ಲಿ ಆನಂದಿಸು,
ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ.
ಮನಸ್ಸಿಗೆ ತಕ್ಕಂತೆಯೂ,
ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.
ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.
10 ನಿನ್ನ ಹೃದಯದಿಂದ ದುಃಖವನ್ನೂ,
ದೇಹದಿಂದ ಶ್ರಮೆಯನ್ನೂ ತೊಲಗಿಸು,
ಏಕೆಂದರೆ ಬಾಲ್ಯವೂ, ಯೌವನವೂ ವ್ಯರ್ಥವಷ್ಟೆ.