11
ಭವಿಷ್ಯತ್ತನ್ನು ಧೈರ್ಯವಾಗಿ ಎದುರಿಸಿ
ನೀನು ಹೋದಲ್ಲೆಲ್ಲಾ ಒಳ್ಳೆಯದನ್ನೇ ಮಾಡು. ಸ್ವಲ್ಪಕಾಲದ ಮೇಲೆ, ನಿನ್ನ ಸತ್ಕ್ರಿಯೆಗಳ ಫಲವನ್ನು ಹೊಂದಿಕೊಳ್ಳುವೆ.
ನಿನ್ನಲ್ಲಿರುವುದನ್ನೆಲ್ಲ ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸು; ಲೋಕಕ್ಕೆ ಮುಂದೆ ಸಂಭವಿಸುವ ಕೇಡು ನಿನಗೆ ತಿಳಿಯದು.
ಮೋಡಗಳು ನೀರಿನಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತವೆ. ಮರವು ದಕ್ಷಿಣಕ್ಕಾಗಲಿ ಉತ್ತರಕ್ಕಾಗಲಿ ಬಿದ್ದರೆ, ಅದು ತಾನು ಬಿದ್ದಲ್ಲಿಯೇ ಇರುವುದು.
ಒಳ್ಳೆಯ ಹವಾಮಾನಕ್ಕಾಗಿ ಕಾದುಕೊಂಡಿರುವವನು ಬೀಜ ಬಿತ್ತುವುದಿಲ್ಲ; ಮಳೆ ಬರಬಹುದೆಂದು ಮೋಡವನ್ನು ನೋಡುತ್ತಿರುವವನು ಪೈರು ಕೊಯ್ಯನು.
ಗಾಳಿಯ ಬೀಸುವಿಕೆಯನ್ನೂ ತನ್ನ ತಾಯಿಯ ಗರ್ಭದಲ್ಲಿ ಮಗುವಿನ ಎಲುಬು ಬೆಳೆಯುವ ರೀತಿಯನ್ನೂ ನೀನು ಹೇಗೆ ತಿಳಿದಿಲ್ಲವೋ ಅದೇರೀತಿಯಲ್ಲಿ ಸೃಷ್ಟಿಕರ್ತನ ಕಾರ್ಯಗಳನ್ನು ನೀನು ಅರಿತುಕೊಳ್ಳಲಾರೆ.
ಆದ್ದರಿಂದ ಮುಂಜಾನೆಯಲ್ಲಿ ಬೀಜಬಿತ್ತಲು ಆರಂಭಿಸು; ಸಾಯಂಕಾಲದ ತನಕ ಕೆಲಸಮಾಡುವುದನ್ನು ನಿಲ್ಲಿಸಬೇಡ, ಯಾಕೆಂದರೆ ಇದು ಸಫಲವಾಗುವುದೋ ಅದು ಸಫಲವಾಗುವುದೋ ಒಂದುವೇಳೆ ಎರಡೂ ಸಫಲವಾಗುವುದೋ ನಿನಗೆ ತಿಳಿಯದು.
ಬೆಳಕು ಹಿತ! ಸೂರ್ಯನ ಬೆಳಕು ನೋಡಲು ಚೆಂದ. ನಿನ್ನ ಜೀವನದ ಪ್ರತಿಯೊಂದು ದಿನದಲ್ಲಿಯೂ ಆನಂದಿಸು. ನೀನು ಎಷ್ಟುಕಾಲ ಬದುಕುವೆ ಎಂಬುದು ಮುಖ್ಯವಲ್ಲ. ಆದರೆ ಕತ್ತಲೆಯ ದಿನಗಳು ಬಹಳವೆಂದು ಜ್ಞಾಪಕದಲ್ಲಿಟ್ಟುಕೊ. ಮುಂದೆ ಸಂಭವಿಸುವುದೆಲ್ಲಾ ವ್ಯರ್ಥವೇ.
ಯೌವನದಲ್ಲಿ ದೇವರ ಸೇವೆ ಮಾಡಿ
ಆದ್ದರಿಂದ ಯೌವನಸ್ಥರೇ, ನಿಮ್ಮ ಯೌವನ ಕಾಲದಲ್ಲಿ ಆನಂದಿಸಿರಿ! ಸಂತೋಷವಾಗಿರಿ! ನಿಮ್ಮ ಹೃದಯವು ನಿಮ್ಮನ್ನು ನಡೆಸಿದಂತೆ ಮಾಡಿರಿ. ನೀವು ಬಯಸುವುದನ್ನೆಲ್ಲಾ ಮಾಡಿರಿ. ಆದರೆ ನೀವು ಮಾಡುವ ಪ್ರತಿಯೊಂದಕ್ಕೂ ದೇವರು ನಿಮಗೆ ನ್ಯಾಯತೀರಿಸುವನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. 10 ನಿಮ್ಮ ಕೋಪವು ನಿಮ್ಮನ್ನು ಹತೋಟಿಯಲ್ಲಿಡದಂತೆ ನೋಡಿಕೊಳ್ಳಿರಿ. ನಿಮ್ಮ ದೇಹವು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿರಿ. ಜನರು ಯೌವನಪ್ರಾಯದಲ್ಲಿರುವಾಗ, ಜೀವನದ ಆರಂಭದಲ್ಲಿಯೇ ಮೂಢಕಾರ್ಯಗಳನ್ನು ಮಾಡುವರು.